Home / ಕವನ / ಕವಿತೆ / ‘ಶಾರ್ ಕಣಿವೆ’ಯಲ್ಲಿ

‘ಶಾರ್ ಕಣಿವೆ’ಯಲ್ಲಿ

ಇಕ್ಕಟ್ಟು ‘ಶಾರ್ ಕಣಿವೆ’ ಮಾರ್ಗ
ಧೂಳು ತುಂಬಿದ ಭಯಾನಕ ಪೊದೆಗಳು
ಕಣಿವೆ ಎದೆಗೆ ತಬ್ಬಿದ್ದ
ಮುಳ್ಳು ಗೋರಂಟಿಗಳ
ಹಳದಿ ಹೂವುಗಳ ತುಂಬ
ಜೇಡರ ಬಲೆಗಳು
ಹಾರಾಡುತ್ತಿವೆ ಹುಳು ಹುಪ್ಪಡಿಗಳು
ಚಿರ್ ಚಿರ್ ಚಿಪ್ ಚಿಪ್‌ಗೂಡುತ್ತ
ಕಂದಕದಾಳಕ್ಕೆ ಬೈನಾಕ್ಯುಲರ್ ಸ್ಪರ್ಶಿಸದೆ
ಪಕ್ಷಿಗಳ ಕೀಟಗಳ
ಒಂದಕ್ಕೊಂದರ ಬೇಟೆಯಾಟ
ಕಪ್ಪು ಪತಂಗಗಳ, ರಣಹದ್ದುಗಳ
ಕಿಚ್ ಕಿಚ್ ಶಬ್ದ
ಹರಿದಾಡುವ ಪೆಟ್ರೋ ವಾಹನಗಳಲ್ಲಿ
ಹೆಪ್ಪುಗಟ್ಟಿವೆ ಪುರಾತನ
ಅರೇಬಿಯ ವ್ಯಾಪಾರಿ ಮಾರ್ಗಗಳು
ಆದರೂ ಕಾಣುತ್ತೇನೆ ಅಲ್ಲಲ್ಲಿ
ಕಾಲ್ನಡಿಗೆಯಿಂದಲೇ
ಹಾದಿಕೊಂದ ಜನರನ್ನು
ಸೊಂಟಕ್ಕೆ ಬಿಗಿದ ಖಡ್ಗಗಳನ್ನು
ತಲೆಗೆ ಸುತ್ತಿದ ‘ಘೋತ್ರಾ’ ಗಳನ್ನು
ನನ್ನದು ನಿನ್ನದು ಎಂದು
ಕಾದಾಡಿದ ಜನರನ್ನು
ಕೊಳ್ಳೆ ಹೊಡೆದ ಕೊಲೆಗಡುಕರನ್ನು
ಕೊಳ್ಳಕ್ಕೆ ಹರಿದ ನೆತ್ತರನ್ನು
ಮರುಭೂಮಿಯಲ್ಲಿ ಹೂತು ಹೋದ
ಎಲುಬುಗಳನ್ನು, ಅವುಗಳೆದೆಯ ಮೇಲೆ
ಬೆಳೆದ ಪೊದೆಗಳನ್ನು.
ಇಂದು ಒಂಟೆಗಳು
ಸ್ವತಂತ್ರತೆಯ ಖುಷಿಯಲ್ಲಿ
ಧ್ವನಿ ಕಳೆದುಕೊಂಡಿವೆ.
ಬುರ್ಕಾದ ಕಾಲು ತೊಡೆತಕ್ಕೆ ಬಿದ್ದೇಳುವ
ಕುರಿ ಕಾಯುವ ತುಂಟು ಹುಡುಗಿಯರು
ಕೆಂಡ ಸಂಪಿಗೆಯಂತೆ
ತುಂಬು ಗುಲಾಬಿಗಳಂತೆ
ಅರಳುತ್ತಿದ್ದಾರೆ, ಅಷ್ಟೇ
ಕನಸು ಕಾಣದ ಕೋಮಲೆಯರು
ಸುಡುತ್ತಲೂ ಇದ್ದಾರೆ.
ಈಗ ಎಲ್ಲವೂ ನಿಶ್ಶಬ್ದ
ಶತ ಶತಮಾನಗಳ
ಪರಿಪೂರ್ಣತೆಗೆ ಕೃತಜ್ಞತೆಗಳು ಎಂದು
ಸೂರ್ಯ ತೆಪ್ಪಗಾಗುತ್ತಿದ್ದಾನೆ.
ಹೊಸ ಶತಮಾನದ ಉಬ್ಬರಕ್ಕೆ
ಸ್ವಾಗತದ ಹೆಜ್ಜೆಗಳು
ಪುಟಿ ಪುಟಿದು ಓಡಾಡುತ್ತಿವೆ.

(ಅರೇಬಿಯದ ದಕ್ಷಿಣ ಭಾಗದಲ್ಲಿ ಆಳವಾದ ‘ಶಾರ್ ಕಣಿವೆ’ ಮಾರ್ಗಗಳಲ್ಲಿ ಪ್ರವಾಸ ಕೈಗೊಂಡಾಗ ನೋಡಿದ ದೃಶ್ಯ)
*****

ಪುಸ್ತಕ: ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...