Home / ಕವನ / ಕವಿತೆ / ‘ಶಾರ್ ಕಣಿವೆ’ಯಲ್ಲಿ

‘ಶಾರ್ ಕಣಿವೆ’ಯಲ್ಲಿ

ಇಕ್ಕಟ್ಟು ‘ಶಾರ್ ಕಣಿವೆ’ ಮಾರ್ಗ
ಧೂಳು ತುಂಬಿದ ಭಯಾನಕ ಪೊದೆಗಳು
ಕಣಿವೆ ಎದೆಗೆ ತಬ್ಬಿದ್ದ
ಮುಳ್ಳು ಗೋರಂಟಿಗಳ
ಹಳದಿ ಹೂವುಗಳ ತುಂಬ
ಜೇಡರ ಬಲೆಗಳು
ಹಾರಾಡುತ್ತಿವೆ ಹುಳು ಹುಪ್ಪಡಿಗಳು
ಚಿರ್ ಚಿರ್ ಚಿಪ್ ಚಿಪ್‌ಗೂಡುತ್ತ
ಕಂದಕದಾಳಕ್ಕೆ ಬೈನಾಕ್ಯುಲರ್ ಸ್ಪರ್ಶಿಸದೆ
ಪಕ್ಷಿಗಳ ಕೀಟಗಳ
ಒಂದಕ್ಕೊಂದರ ಬೇಟೆಯಾಟ
ಕಪ್ಪು ಪತಂಗಗಳ, ರಣಹದ್ದುಗಳ
ಕಿಚ್ ಕಿಚ್ ಶಬ್ದ
ಹರಿದಾಡುವ ಪೆಟ್ರೋ ವಾಹನಗಳಲ್ಲಿ
ಹೆಪ್ಪುಗಟ್ಟಿವೆ ಪುರಾತನ
ಅರೇಬಿಯ ವ್ಯಾಪಾರಿ ಮಾರ್ಗಗಳು
ಆದರೂ ಕಾಣುತ್ತೇನೆ ಅಲ್ಲಲ್ಲಿ
ಕಾಲ್ನಡಿಗೆಯಿಂದಲೇ
ಹಾದಿಕೊಂದ ಜನರನ್ನು
ಸೊಂಟಕ್ಕೆ ಬಿಗಿದ ಖಡ್ಗಗಳನ್ನು
ತಲೆಗೆ ಸುತ್ತಿದ ‘ಘೋತ್ರಾ’ ಗಳನ್ನು
ನನ್ನದು ನಿನ್ನದು ಎಂದು
ಕಾದಾಡಿದ ಜನರನ್ನು
ಕೊಳ್ಳೆ ಹೊಡೆದ ಕೊಲೆಗಡುಕರನ್ನು
ಕೊಳ್ಳಕ್ಕೆ ಹರಿದ ನೆತ್ತರನ್ನು
ಮರುಭೂಮಿಯಲ್ಲಿ ಹೂತು ಹೋದ
ಎಲುಬುಗಳನ್ನು, ಅವುಗಳೆದೆಯ ಮೇಲೆ
ಬೆಳೆದ ಪೊದೆಗಳನ್ನು.
ಇಂದು ಒಂಟೆಗಳು
ಸ್ವತಂತ್ರತೆಯ ಖುಷಿಯಲ್ಲಿ
ಧ್ವನಿ ಕಳೆದುಕೊಂಡಿವೆ.
ಬುರ್ಕಾದ ಕಾಲು ತೊಡೆತಕ್ಕೆ ಬಿದ್ದೇಳುವ
ಕುರಿ ಕಾಯುವ ತುಂಟು ಹುಡುಗಿಯರು
ಕೆಂಡ ಸಂಪಿಗೆಯಂತೆ
ತುಂಬು ಗುಲಾಬಿಗಳಂತೆ
ಅರಳುತ್ತಿದ್ದಾರೆ, ಅಷ್ಟೇ
ಕನಸು ಕಾಣದ ಕೋಮಲೆಯರು
ಸುಡುತ್ತಲೂ ಇದ್ದಾರೆ.
ಈಗ ಎಲ್ಲವೂ ನಿಶ್ಶಬ್ದ
ಶತ ಶತಮಾನಗಳ
ಪರಿಪೂರ್ಣತೆಗೆ ಕೃತಜ್ಞತೆಗಳು ಎಂದು
ಸೂರ್ಯ ತೆಪ್ಪಗಾಗುತ್ತಿದ್ದಾನೆ.
ಹೊಸ ಶತಮಾನದ ಉಬ್ಬರಕ್ಕೆ
ಸ್ವಾಗತದ ಹೆಜ್ಜೆಗಳು
ಪುಟಿ ಪುಟಿದು ಓಡಾಡುತ್ತಿವೆ.

(ಅರೇಬಿಯದ ದಕ್ಷಿಣ ಭಾಗದಲ್ಲಿ ಆಳವಾದ ‘ಶಾರ್ ಕಣಿವೆ’ ಮಾರ್ಗಗಳಲ್ಲಿ ಪ್ರವಾಸ ಕೈಗೊಂಡಾಗ ನೋಡಿದ ದೃಶ್ಯ)
*****

ಪುಸ್ತಕ: ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...