ಒಬ್ಬ ಸಂಸಾರಿ, ತಾಪತ್ರಯಗಳಲ್ಲಿ ಸಿಲುಕಿ, ನಾಲಿಗೆ ತುದಿಯಲ್ಲಿ “ಈಶ್ವರ! ಈಶ್ವರ! ಎನ್ನುತ್ತಿದ್ದ. ಇಪ್ಪತ್ತು ನಾಲ್ಕು ಘಂಟೆ ಅವನಿಗೆ ಸಂಸಾರದ ಗೋಳು. ಹೆಂಡತಿ ಮಕ್ಕಳ ಕಾಟ, ಭವದ ಬವಣೆ, ಬಾಯಲಿ ಮಾತ್ರ ಈಶ್ವರ ಭಕ್ತಿ, ಕರ್ಮಗಳನ್ನು ಮಾಡುತ್ತ ಫಲಾಪೇಕ್ಷೆಗಾಗಿ ಪರಿತಪಿಸುತ್ತಿದ್ದ. ಕರ್ಮಮಾಡುವಾಗ ಗೋಳಿಡುತ್ತಿದ್ದ. ಇದರೊಡನೆ ಈಶ್ವರ ಧ್ಯಾನ ಮಾಡಿದ್ದರು ಅವನ ಮನವು ಕರ್ಮಗಳ ಬಂಧನದಲ್ಲಿ ಸುತ್ತಿಕೊಂಡಿತ್ತು. ಅವನಿಗೆ ಯಾವ ರೀತಿಯ ನೆಮ್ಮದಿ, ಶಾಂತಿ ದೊರೆಯಲಿಲ್ಲ. ಸದಾ ಭವಸಾಗರದಿಂದ ಪಾರುಮಾಡು ಈಶ್ವರ ಎನ್ನುತ್ತಿದ್ದ. ಆದರೆ ಸಂಸಾರ ಕೂಪದಿಂದ ಮೇಲೆ ಏಳಲಾಗುತ್ತಿರಲಿಲ್ಲ.
ಅವನು ತನ್ನ ಮಿತ್ರನನ್ನು ನೋಡಿ ಯಾವಾಗಲೂ ಅಸೂಯೆ ಪಡುತ್ತಿದ್ದ. ಮಿತ್ರನಿಗೆ ಧ್ಯಾನ, ಧಾರಣ, ಸಮಾಧಿ ಯಾವುದೆಂದು ತಿಳಿಯದಿದ್ದರು ಅವನು ಝೆನ್ ಹೆಜ್ಜೆಯಿಟ್ಟು ನಡೆದಿದ್ದ. ಅತ್ಯಂತ ಸರಳ ಸಹಜತೆಯಲ್ಲಿ ದೈವಾರ್ಪಣದಲ್ಲಿ ಫಲಾಪೇಕ್ಷೆ ತೊರದಿದ್ದ. ಕರ್ಮ ವಿಮುಕ್ತನಾಗಿದ್ದ. ಈಶ್ವರ ಪ್ರಣಿಧಾನದಲ್ಲಿ ಶಾಂತಿ ಪಡೆದಿದ್ದ. ಸೂರ್ಯನ ಬೆಳಕಿನಲ್ಲಿ ಅರಳುವ ಹೂವಿನಂತೆ ಅವನ ಮನವು ಸಹಜತೆಗೆ ತೆರೆದುಕೊಂಡಿತ್ತು.
ಸಂಸಾರಿಗೆ ಮಿತ್ರನ ಬಾಳು, ದಾರಿ ತೋರಿತು. ಕೆಸರಿನಿಂದ ಕಮಲದಂತೆ ಮೇಲೆದ್ದಿತು. ಅವನ ಹೃದಯಿ, ಸಹಜತೆಯ ಗುಟ್ಟು ಸತ್ಯಕ್ಕೆ ದರ್ಶನ ಮಾಡಿಸಿತು.
*****

















