ವಸಂತಮಾಸದ ವೈಭವದಲ್ಲಿ ಒಂದು ಮಾಮರದ ಕೊಂಬೆಯಲ್ಲಿ ಕೋಗಿಲೆ ಒಂಟಿಯಾಗಿ ಕುಳಿತು ಹಾಡಿಕೊಳ್ಳುತಿತ್ತು. ಮಾವಿನ ಮರಕ್ಕೆ ಭೇಟಿಕೊಟ್ಟಿದ್ದ ಇತರ ಪಕ್ಷಿಗಳಾದ ಗೊರವಂಕ, ಮೀಂಚುಳ್ಳಿ, ಮರಕುಟುಕಗಳು ಮಾವಿನ ಹಣ್ಣಿನ ರಸಾಸ್ವಾದನೆ ಮಾಡುತ್ತಿದ್ದವು. ಕೋಗಿಲೆ ಘಮಘಮಿಸುವ ಮಾವಿನ ಹಣ್ಣಿನ ಪರಿಮೆಯಿಲ್ಲದೆ ಹಾಡುತ್ತ ಧ್ಯಾನ ಮಗ್ನವಾಗಿತ್ತು. ಅಲ್ಲಿಗೆ ಒಬ್ಬ ಬೇಡ ಬಾಣವನ್ನು ಬಿಲ್ಲಿಗೇರಿಸಿ ಪಕ್ಷಿಗೆ ಗುರಿಯಿಟ್ಟ. ಅದೇ ಸಮಯದಲ್ಲಿ ಕೋಗಿಲೆ ಹಾಡು ಅವನ ಕಿವಿ ಮುಟ್ಟಿತು. ಮನವು ಕಿವಿಯಾಯಿತು. ಕಣ್ಣು ಕಿವಿಯಾಯಿತು. ಬುದ್ದಿ ಕಿವಿಯಾಯಿತು. ಮೈಯೆಲ್ಲಾ ಕಿವಿಯಾಗಿ ಹಾಡು, ನಾದ ಕಿವಿಯಲ್ಲಿ ಇಳಿಯಿತು. ಝೆನ್ ಝೇಂಕಾರ ಸುಳಿಯಲ್ಲಿ ಅವನು ಸೆರೆಯಾದ. ಕೈಯ ಬಿಲ್ಲು ಬಾಣ ಕೆಳಗೆ ಬಿದ್ದಿತು. ಅವನು ಮೂರ್ತಿಮತ್ತಾಗಿ ಕೋಗಿಲೆ ಹಾಡನ್ನು ಕೇಳುತ್ತ ನಿಂತ. ಹಣ್ಣು ತಿಂದು ಹಕ್ಕಿಗಳು ಹಾಯಾಗಿ ಹಾರಿ ಹೋದವು.
ಅದರೊಡನೆ ಬಿಲ್ಲು ಬಾಣದ ಪರಿವೆ ಇಲ್ಲದೆ ಬೇಡ ಝೆನ್ ಹೆಜ್ಜೆ ಇಡುತ್ತ ಅನಂತದತ್ತ ನಡೆದ.
*****

















