Home / ಕವನ / ಕವಿತೆ / ಚೆಂದನೆಯ ಚಂದಿರನ ಚಲನದಾ ಮಾತು

ಚೆಂದನೆಯ ಚಂದಿರನ ಚಲನದಾ ಮಾತು

ಈಗೀಗ ನನ್ನ ಡೈರಿಪುಟಗಳು
ಅಲ್ಲಲ್ಲಿ ಮಸಿ ಉರುಳಿ
ಹಿರಿಕಿರಿದು ಕಲೆಗಳಾಗುತಲೇ ಹೋಗುತಿವೆ
ಆದರೂ ಹೊರಡಲೇಬೇಕು
ಸರಿಯಾದ ಸಮಯಕೆ
ಬಿಳಿಯಂಗಿ ತೊಟ್ಟು ಇಂಚಿಂಚೇ ನಗುತ


ಇಡೀ ರಾತ್ರಿಗಳೆಲ್ಲ ನನ್ನವೇ
ಬಾಚಿಕೊಳ್ಳುವ ನಶೆಗಳಲಿ ತೇಲಿ
ಪ್ರೇಮಿಗಳ ಸ್ವರ್ಗ ಸುಖದ ಕನಸುಗಳಿಗೆ
ಕಚಗುಳಿಯ ನೋವು ಕೊಟ್ಟು
ಮಕ್ಕಳಿಗೆ ದಂತಕಥೆಯಾಗಿ ಉಬ್ಬುಬ್ಬುತ
ಕತ್ತಲೆಯೊಳಗೆ ಕಟ್ಟುಮಸ್ತಾಗಿ
ಅಡ್ಡಾಡುವವ ನಾನು ಆಹಾ !


ಅದೇಕೋ ಈಗ ರಾತ್ರಿಯಾದರೆ ಹೆದರಿಕೆ ಹೊರಬೀಳಲು
ಹಾದಿ ಬೀದಿಯಲಿ ಏನೇನನು ನೋಡುವೆನೋ ನಡುಕ ಭಯ
ನಾನೆಂದೋ ಬಂದಿದ್ದರಿಲ್ಲಿ
ಭರತವರ್ಷಕಾಲದಿಂದಲೂ
ಬರೆಯುತಿದ್ದುದು ನಿಜ,
ಮಹಾಭಾರತ ಯುದ್ಧ, ರಾಜಪಟ್ಟಕ್ಕೆ ಹಣಾಹಣಿ
ಭ್ರಾತೃಪ್ರೇಮದ ಕರಳುಬಳ್ಳಿಗಳೆಲ್ಲ
ಚಿಲ್ಲಾಪಿಲ್ಲಿ ನರಳಾಟ ಚೀತ್ಕಾರ
ನೋಡಿದ್ದಕ್ಕೊ, ಗೀತೋಪದೇಶಕ್ಕೊ ಇರಲೆಂದು
ನಾಲ್ಕಕ್ಷರ ಧಾಖಲಿಸಿಕೊಂಡು
ಬಿಳಿಪುಟಕೆ ಚುಕ್ಕೆ ಅಕ್ಷರಗಳಿಟ್ಟು ಹೊರಟಿದ್ದೆ


ಬೆಟ್ಟಗುಡ್ಡ ದೇಶಗಳ ಗಡಿದಾಟುತ
ಸಮುದ್ರ ಏರುಬ್ಬರಿಸಿ ತಾರೆಗಳ ಗುಂಪಿನಲಿ
ಚಕ್ಕಂದವಾಡುತ ತಂಪುಗಾಳಿಗೆ
ಎದೆಯೊಡ್ಡಿ ನಡದದ್ದೇನು ಸಂಭ್ರಮ
ಏನೂ ನೆನಪಿಸಿಕೊಳ್ಳಬಾರದೆನುತ
ಯಾತಕ್ಕೂ ದುಃಖಿಸಬಾರದೆನ್ನುವ
ಛಲ ತೊಟ್ಟಿದ್ದೆ.
ನನ್ನ ಡೈರಿ ಪುಟಗಳು ಖಾಲಿ ಉಳಿದಿದ್ದಕ್ಕೆ
ಅಣಿಕಿಸುತಿವೆ ಬೇಸರ ಬಗೆಹರಿಸಲು ಕರೆದವೊ !
ನೋವುಗಳು ಚುಚ್ಚುವಾಗ
ತಾರಾ ಸಖಿಯರು ಇರುವುದೇ ಇಲ್ಲ
ಗೆಳೆತನಕೆ ಬಯಸಿದ ಮನ
ಪುಟಗಳನು ಅಪ್ಪಿಬಿಡುವವು


ಕಂಡದ್ದು ಕಂಡಂತೆ ಹೇಳಲೇ ಬೇಕಾದರೆ-
ಎಂಥ ಸುಂದರ ಬ್ರಹ್ಮಾಂಡ
ಆಹಾ ನಯನ ಮನೋಹರ ಸೆಳೆತ
ಹಿಮಾಚ್ಛಾದಿತ ಪರ್ವತಗಳ ಬಿಗಿದಪ್ಪುಗೆ
ಜೀವಸಂಕುಲದಾಧಾರ ಸರೋವರ ಮದವೇರಿದ
ಸಮುದ್ರ ತರುಲತೆ ಬೃಂಗಗಳ
ಬೆನ್ನೇರಿದ ಮನಕಿನ್ನೇನು –
ಕಪ್ಪು ನೀಲಿ ಕಣ್ಣುಗಳೊಳಗಿನ ಚಿತ್ರಗಳಿಗೆಲ್ಲ
ಬಂಗಾರ ಚೌಕಟ್ಟು ನನ್ನ ಪುಟಗಳಿಗೆಲ್ಲ
ಪ್ರೀತಿಯ ಚೌಕಟ್ಟು
ಜೇನು ಹರಿಯುವ ಸಂಭ್ರಮ
ಕ್ಷಣ ಕ್ಷಣಗಳಿಗೆಲ್ಲ ಹೊಳಪು ಸ್ಪಟಿಕ


ಯಾಕೋ ಎದೆಭಾರ
ಭೂಮಿಗೆ ಯಾಕಿಷ್ಟೊಂದು ನೋವು ವೇದನೆ
ಎಂತಹ ಮಕ್ಕಳಿವರೆಲ್ಲ
ಎಷ್ಟೊಂದು ದುರಹಂಕಾರ
ಮಾಡಬೇಕಾದುದು ಮಾಡಿಯೇ ತೀರುವ
ಮಾತು ಕೇಳದವರ ಶಿಕ್ಷಿಸುವ ಹಿಂಸಿಸುವ
ಸಂತೋಷಿ ಚಕ್ರವರ್ತಿಗಳ ಪಟ್ಟಿ….
ಅಬ್ಬಾ ! ಸಾಕಾಗಿತ್ತು ತೆಪ್ಪಗೆ ಬೀಳಬೇಕಾಗಿತ್ತು
ಆದರೂ ಮತ್ತೆ ಎದ್ದೆ ಯಾಕೋ !
ಸುಸಂಸ್ಕೃತರ ಕುಸಂಸ್ಕೃತಿ
ಚುಚ್ಚಿ ಚುಚ್ಚಿ ಬಡಿದೆಬ್ಬಿಸಿತೆ?


ಯಜಮಾನ ದರ್ಪದ ತಪ್ಪು ಹೆಜ್ಜೆಗಳ
ದುರಂತನಾಯಕರ ಪ್ರೀತಿಯ
ಅಣುಬಾಂಬ್ ಶಸ್ತ್ರಾಸ್ತ್ರಗಳ ಪೈಪೋಟಿ
ಅಮೆರಿಕದ ದಬ್ಬಾಳಿಕೆ
ಭಯೋತ್ಪಾದಕರ ದಾಳಿ, ಬಾಣಕ್ಕೆ ಬಾಣ
ತಿರುಗುಬಾಣ
ಮಾನವ ಹಕ್ಕುಗಳ ದಮನ
ಪ್ರೀತಿ ಬೆಳೆಸುವುದೇ?
ಹಸಿವು ಹಿಂಗಿಸುವುದೆ?


ಕೈಗಾರಿಕಾ ಕ್ರಾಂತಿ
ಜಾಗತೀಕರಣದ ನೋಟ್ಸಿಗೆ
ಸಾಕಷ್ಟು ಪುಟಗಳು
ಕಂಪ್ಯೂಟರ್, ಟಿ.ವಿ. ಮೊಬೈಲ್‌ಗಳ

ಸಂಶೋಧನಾ ಮುಖಾಮುಖಿ ಪ್ರಜ್ಞೆ
ಈ ಪಯಣಿಗೆ ಸುಸ್ತಾಗಿಲ್ಲ ವಯಸ್ಸಾಗಿಲ್ಲ
ದೇವನಾಜ್ಞೆ, ಜಗತ್ತನು ಸುತ್ತು ಹೊಡೆಯಲೇಬೇಕು
ರಿಪೋರ್ಟ್ ಕೊಡಲೇಬೇಕು.


ಆದರೂ ಈಗೀಗ ಅದಾವುದರಲಿ
ಕರಗುತಿರುವೆನೊ, ಬೆರಗುಗೊಳುತಿಹೆನೊ
ಅಳುತಿಹೆನೊ ಹಿಂಸೆ ಪಡುತಿಹೆನೊ
ಉತ್ತರಗಳಿಲ್ಲದೆ ಒಳಗೊಳಗಿನ
ಚಡಪಡಿಕೆಗಳಿಗೆ ಮೋಡಿನ ಚದ್ದಾರ
ಒಮ್ಮೊಮ್ಮೆ ಎಳೆದು ತೆಪ್ಪಗೆ ಬಿದ್ದರೆ
ನಿಸರ್ಗದ ತಂತಿಮೀಟಿನ ಸೆಳೆತ ಮತ್ತೆ
ಹೊಸ ಪಯಣದ ಪುಟಕೆ ಕರೆಯುವುದು
ಕೆಂಪು ಹಳದಿ ನೀಲಿ ಗುಲಾಬಿ
ಬಣ್ಣಗಳಲಿ ಮಸಿಕಲೆಗಳ ನೊರಸುತ
ಮಂದಹಾಸವ ಬೆರೆಸಿ ಮತ್ತೆ ಹೊರಡುವೆ
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...