Home / ಕಥೆ / ಸಣ್ಣ ಕಥೆ / ಕೊಲೆ ಮಾಡಲು ಬಂದ ಕಳ್ಳರು

ಕೊಲೆ ಮಾಡಲು ಬಂದ ಕಳ್ಳರು

ಕೆಲವು ಕಾಲದ ಮೇಲೆ ತಿರುಚನಾಪಳ್ಳಿಯ ಅರಸನು ತನ್ನ ಜಟ್ಟಿಯನ್ನು ಕಾಳಗದಲ್ಲಿ ಕೊಂದವನೇ ಶ್ರೀರಂಗಪಟ್ಟಣದ ಒಡೆತನಕ್ಕೆ ಬಂದನೆಂಬುದನ್ನು ತಿಳಿದು ಭಯಭ್ರಾಂತನಾದನು. ಇಷ್ಟು ಪೌರುಷಸಾಹಸಗಳುಳ್ಳ ಒಡೆಯರು ತಮ್ಮ ರಾಜ್ಯದಮೇಲೆ ಕೈ ಮಾಡಿದರೇನುಗತಿಯೆಂದು ಚಿಂತಿಸುತ್ತ ಆ ಅರಸನು ಕಡೆಗೆ ರಹಸ್ಯವಾಗಿ ಒಡೆಯರನ್ನು ಕೊಲ್ಲಿಸುವುದೇ ಸರಿಯೆಂದು ನಿಶ್ಚಯಮಾಡಿ, ೨೫ ಮಂದಿ ಕಳ್ಳರಿಗೆ ಹಣವನ್ನು ಕೊಟ್ಟು ಕಂಠೀರವ ಒಡೆಯರ ತಲೆಯನ್ನು ತೆಗೆದುಕೊಂಡು ಬರುವುದೆಂದು ಅಪ್ಪಣೆ ಮಾಡಿದನು. ಆ ಕಳ್ಳರು ಬೇರೆ ಬೇರೆ ವೇಷಗಳನ್ನು ಧರಿಸಿ ಶ್ರೀರಂಗಪಟ್ಟಣಕ್ಕೆ ಬಂದು, ಅಲ್ಲಿನ ಮರ್ಮಗಳನ್ನು ತಿಳಿದುಕೊಳ್ಳುತ್ತಾ ಸಮಯವನ್ನು ನಿರೀಕ್ಷಿಸುತ್ತಲಿದ್ದರು. ಕಡೆಗೊಂದು ದಿನ ಈ ಕಳ್ಳರು ಕನ್ನ ತೆಗೆದುಕೊಂಡೇ ಅರಮನೆಯನ್ನು ಪ್ರವೇಶಮಾಡಿ ಅವಿತುಕೊಂಡಿದ್ದರು. ಅಂತಃಪುರದಲ್ಲಿ ದೊರೆಗಳು ಒಬ್ಬರೇ ಮಂಚದ ಮೇಲೆ ಕುಳಿತು ತಾಂಬೂಲವನ್ನು ಸವಿಯುತ್ತಿದ್ದ ಸಮಯದಲ್ಲಿ ನಿದ್ರೆಯ ಮಾಳಿಗೆಯು ಮುಂದಣ ಹಜಾರದ ಕಂಬಗಳ ಮನೆಯಲ್ಲಿ ಬೇರೆ ಬೇರೆಯಾಗಿ ನಿಂತಿದ್ದ ಈ ೨೫ ಜನರ ನೆರಳುಗಳನ್ನು ನೋಡಿ “ಯಾರೋ ವಂಚನೆಯಿಂದ ನಮ್ಮ ಪ್ರಾಣವನ್ನಪಹರಿಸುವುದಕ್ಕೆ ಬಂದಿರುತ್ತಾರೆ” ಎಂದು ತಿಳಿದು ಹಾಗೆಯೇ ಸಮೀಪದಲ್ಲಿದ್ದ ವಿಜಯ ನಾರಸಿಂಹವೆಂಬ ತಮ್ಮ ಕತ್ತಿಯನ್ನು ಕೈಗೆ ತೆಗೆದುಕೊಂಡರು. ಹೊಂಚು ಹಾಕುತ್ತಲಿದ್ದ ಆ ಕಳ್ಳರು ಅದನ್ನು ಕಂಡು, ಎಲ್ಲರೂ ಗುಂಪುಗೂಡಿ ದೊರೆಗಳನ್ನು ಸುತ್ತಿಕೊಂಡರು. ಆಗ ದೊರೆಗಳು ತಮ್ಮ ಸಾಧಕದ ಚಾತುರ್ಯದಿಂದ ಪಟ್ಟವನ್ನು ತಿರುಹಿ, ತಲೆಗಳನ್ನು ಹೊಡೆದು, ಈ ಪೆಟ್ಟನ್ನು ತಪ್ಪಿಸಿಕೊಂಡು ಸಮೀಪಕ್ಕೆ ನುಸುಳಿಕೊಂಡು ಬಂದ ಕೆಲವರು ತಮ್ಮ ಭುಜಬಲದಿಂದ ಎರಡು ಕಂಕಳುಗಳಲ್ಲಿಯೂ ಇರುಕಿಸಿಕೊಂಡು ಕತ್ತುಗಳನ್ನು ಮುರಿದು, ಮತ್ತೆ ಕೆಲವರನ್ನು ಕಾಲಿನಿಂದ ಒದ್ದು ನಿರ್ಜಿವವಾಗುವಂತೆ ಕೆಡಹಿದರು. ಉಳಿದ ಹಲಕೆಲವು ಓಡಿಹೋಗುವುದಕ್ಕೆ ಅವಕಾಶವಿಲ್ಲದೆ ಆಯುಧಗಳನ್ನು ಕೆಳಕ್ಕೆ ಹಾಕಿ ವಾದಾಕ್ರಾಂತರಾದರು. ಒಡೆಯರು ಅವರನ್ನು ಜೀವಂತ ಬಿಟ್ಟು, ಬಾಗಿಲನ್ನು ಮುದ್ರೆ ಮಾಡಿ ಹೊರಗೆ ಕಾದಿದ್ದ ಗೊಲ್ಲರು ಮುಂತಾದವರನ್ನು ಕೂಗಿ ಕರೆದು, ಸತ್ತವರ ಹೆಣಗಳನ್ನು ಹೊರಕ್ಕೆ ಸಾಗಿಸಿ, ಉಳಿದವರನ್ನು ಮರುದಿನ ಸಭೆಗೆ ಕರತರುವಂತೆ ಆಜ್ಞಾಪಿಸಿದರು.

ಮಾರನೆ ದಿನ ಸಭೆಯಲ್ಲಿ ವಿಚಾರಿಸಿದಾಗ, ಅವರು ತಿರುಚನಾಪಳ್ಳಿಯ ಅರಸನಿಂದ ಪ್ರೇರೇಪಿತರಾಗಿ ಬಂದರೆಂದು ತಿಳಿಯಿತು. ಆಗ ದೊರೆಗಳು “ನೀವು ತಿರುಚನಾಪಳ್ಳಿಗೆ ಹೋಗಿ ಇಲ್ಲಿ ನಡೆದದ್ದನ್ನು ನಿಮ್ಮ ದೊರೆಗೆ ತಿಳಿಸಿ, ಹೋಗಿ” ಎಂದು ಕಳುಹಿಸಿಬಿಟ್ಟರು.
*****
[ವಂಶರತ್ನಾಕರ ಪುಟ ೮೧; ವಂಶಾವಳಿ ಪುಟ ೭೭-೭೮]

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...