Home / ಕವನ / ಅನುವಾದ / ಕಲ್ಕತ್ತಾ

ಕಲ್ಕತ್ತಾ

ಮೂಲ: ತಾರಾಪದ ರಾಯ್

ಹೇಳು ಕಲ್ಕತ್ತಾ,
ನನ್ನ ಬಳಿಯಿದ್ದ ಹಸಿರಂಗಿ, ಪಾಸ್‌ ಪೋರ್ಟುಗಳ
ನೆನಪಿದೆಯೆ ನಿನಗೆ?
ಪೂರ್ವ ಪಾಕಿಸ್ತಾನದಿಂದ ಓಡುತ್ತ ಬಂದ ರೈಲಿಂದ ಇಳಿದು
ಸಿಯಾಲ್ದಾ ನಿಲ್ದಾಣದ ಹೆಬ್ಬಾಗಿಲನ್ನು ದಾಟಿ ಬಂದೆ ಸುರಿಮಳೆಯಲ್ಲಿ.
ನನ್ನ ಜೀವನದಲ್ಲೆ ಮೊದಲ ಸಲ ಕಂಡೆ
ಷೂ ಪಾಲಿಷ್ ಮಾಡುವ ಹುಡುಗನನ್ನು;
ನೋಡಿ ರೋಮಾಂಚಗೊಂಡೆ,
ನನ್ನ ಕನಸಿನ ನಗರ ಕಂಡುಕೊಂಡೆ.
ಮೊದಲ ಬಾರಿಗೆ ಒಂದು ಟ್ರಾಮ್‌ಕಾರು ಕಂಡದ್ದು ನಿನ್ನಲ್ಲೆ,
ಮೊದಲ ದರ್ಜೆಯ ಸೀಟು ಕೂಡ ಇತ್ತು ಅದಕ್ಕೆ.
ಮೊದಲ ದರ್ಜೆಯೆ ನೀನೂ ಕಲ್ಕತ್ತಾ.
ಒಂದೊಂದು ಮನೆಯನ್ನೂ ಮುಗಿಲು ಕವಿದಿತ್ತು
ಒಂದೊಂದು ಮನೆಗೂ ನಿಗೂಢ ಕಿಟಕಿ ಇತ್ತು
ಆಟವಾಡುತ್ತಿತ್ತು ಅವುಗಳ ಮುಖದ ಮೇಲೆ
ಮಬ್ಬುಗತ್ತಲೆ ಬೆಳಕು.

ಹಸಿರು ಷರಟನ್ನು
ಹರಿದ ಬೂಟನ್ನು
ತೊಟ್ಟು ತಿರುಗಿದೆ ಇಡೀ ಕಲ್ಕತ್ತೆಯನ್ನು.
ತಿರುಕರನ್ನು ಮತ್ತು ಹುಚ್ಚರನ್ನು
ಹುಚ್ಚಾಗಿ ಕುಡಿದು ಅಮಲೇರಿದವರನ್ನು
ದಿಕ್ಕಿಂದ ದಿಕ್ಕಿಗೆ ಕಾಮನಬಿಲ್ಲಿನ ಹಾಗೆ
ಬಾಗಿ ಸಾಗಿದ್ದ ಮೆರವಣಿಗೆ ಸಾಲನ್ನು
ಜನ ಮುಸುರುತ್ತಿದ್ದ ಚಾ ಅಂಗಡಿಗಳನ್ನು
ದಾರಿ ಮೂಲೆಗಳಲ್ಲಿ ಹರಟೆಕೊಚ್ಚುತ್ತಿದ್ದ
ಸೋಮಾರಿ ಗುಂಪನ್ನು.

ಮಧ್ಯಾಹ್ನಕ್ಕೆ ಮುಂಚೆ ಗಾಳಿ ಬಡಿತಕ್ಕೆ ಕಳಚಿ
ಚೆಲ್ಲಾಪಿಲ್ಲಿ ಬಿದ್ದ ತರಗೆಲೆಗಳನ್ನು
ಬಯಲ ಬಿಸಿಲಲ್ಲಿ ಚಾಚಿ ಬೆಳೆದಿದ್ದರೂ
ಯಾರನ್ನೂ ಎಲ್ಲಿಗೂ ಒಯ್ದು ಮುಟ್ಟಿಸದ
ಆನೆದಂತದ ಹಾಗೆ ಬಾಗಿ ಸಾಗಿದ್ದ ಟ್ರಾಮ್ ಕಾರು ಹಳಿಯನ್ನು-
ಕಂಡೆ ನಿನ್ನನ್ನು.

ಏಕೋ ಒಮ್ಮೊಮ್ಮೆ ಅನ್ನಿಸುವುದು ನಾ ನಿನ್ನ
ತೆಕ್ಕೆಯೊಳಗಿಲ್ಲವೆಂದು.
ನನ್ನ ಆ ನಗರ ಎಲ್ಲಿ ಹೋಯಿತು ಈಗ?
ಹಿಂದೊಮ್ಮೆ ಎರಡು ಲೈಟ್‌ ಕಂಬಗಳ ನಡುವೆ
ಪೆನಾಲ್ಟಿ ಕಿಕ್ ಸಿಕ್ಕ ಫುಟ್‌ಬಾಲ್ ಆಟಗಾರ
ಚಂದ್ರನನ್ನ ನಡು ಅತರಿಕ್ಷಕ್ಕೆ ಒದ್ದದ್ದು,
ಗ್ಯಾಲರಿಗಳನ್ನೇರಿ ಕುಳಿತ ಜನ ಒಟ್ಟಾಗಿ
‘ಗೋಲ್’ ಎಂದು ಕಿರುಚಿದ್ದು ಎಲ್ಲ ನೆನಪೀಗ.

ಕಳೆದ ಇಪ್ಪತ್ತು ವರುಷ ನಮ್ಮ ನಡುವೆ ಏಕೋ
ಹೊಂದಿ ಬರಲಿಲ್ಲ. ನನ್ನ
ಮುರಿದ ಕನಸುಗಳು ಹರಿದೆಸೆದ ಕವನಗಳು
ಚಿಂದಿ ಆಯುವ ಜನರ ಚೀಲದಲ್ಲಿದ್ದಾವೆ.
ಇಪ್ಪತ್ತು ವರುಷವಿಡೀ ಅವನ್ನು ಆಯ್ದಿದ್ದಾರೆ.
ತೂಕಕ್ಕೆ ಹಾಕಿ, ಬೆಲೆಕಟ್ಟಿ ಕನಸುಗಳನ್ನು
ಗೇಲಿ ಮಾಡಿದ್ದಾರೆ.
ಒಂದೇ ರಹಸ್ಯ ಕಿಟಕಿ ನನಗಾಗಿ ಎಂದೂ
ಇಲ್ಲಿ ತೆರೆದದ್ದಿಲ್ಲ.
ನನ್ನ ಛಾವಣಿ ಬಿಟ್ಟು ಮೇಲೇರಿ ಮುಗಿಲುಗಳ ಕಡೆಗೆ ಸಾಗಿದ್ದಿಲ್ಲ.
ಅಂದಮೇಲೆ ನನ್ನ ಷರಟಿನ ಬಣ್ಣವನ್ನು
ಬೂಟಿನ ಅಳತೆಯನ್ನು
ಬದಲಿಸಲು ನನಗೆ ಕಾರಣವೆ ಕಂಡಿಲ್ಲ.
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...