Home / ಕವನ / ಅನುವಾದ / ಕಲ್ಕತ್ತಾ

ಕಲ್ಕತ್ತಾ

ಮೂಲ: ತಾರಾಪದ ರಾಯ್

ಹೇಳು ಕಲ್ಕತ್ತಾ,
ನನ್ನ ಬಳಿಯಿದ್ದ ಹಸಿರಂಗಿ, ಪಾಸ್‌ ಪೋರ್ಟುಗಳ
ನೆನಪಿದೆಯೆ ನಿನಗೆ?
ಪೂರ್ವ ಪಾಕಿಸ್ತಾನದಿಂದ ಓಡುತ್ತ ಬಂದ ರೈಲಿಂದ ಇಳಿದು
ಸಿಯಾಲ್ದಾ ನಿಲ್ದಾಣದ ಹೆಬ್ಬಾಗಿಲನ್ನು ದಾಟಿ ಬಂದೆ ಸುರಿಮಳೆಯಲ್ಲಿ.
ನನ್ನ ಜೀವನದಲ್ಲೆ ಮೊದಲ ಸಲ ಕಂಡೆ
ಷೂ ಪಾಲಿಷ್ ಮಾಡುವ ಹುಡುಗನನ್ನು;
ನೋಡಿ ರೋಮಾಂಚಗೊಂಡೆ,
ನನ್ನ ಕನಸಿನ ನಗರ ಕಂಡುಕೊಂಡೆ.
ಮೊದಲ ಬಾರಿಗೆ ಒಂದು ಟ್ರಾಮ್‌ಕಾರು ಕಂಡದ್ದು ನಿನ್ನಲ್ಲೆ,
ಮೊದಲ ದರ್ಜೆಯ ಸೀಟು ಕೂಡ ಇತ್ತು ಅದಕ್ಕೆ.
ಮೊದಲ ದರ್ಜೆಯೆ ನೀನೂ ಕಲ್ಕತ್ತಾ.
ಒಂದೊಂದು ಮನೆಯನ್ನೂ ಮುಗಿಲು ಕವಿದಿತ್ತು
ಒಂದೊಂದು ಮನೆಗೂ ನಿಗೂಢ ಕಿಟಕಿ ಇತ್ತು
ಆಟವಾಡುತ್ತಿತ್ತು ಅವುಗಳ ಮುಖದ ಮೇಲೆ
ಮಬ್ಬುಗತ್ತಲೆ ಬೆಳಕು.

ಹಸಿರು ಷರಟನ್ನು
ಹರಿದ ಬೂಟನ್ನು
ತೊಟ್ಟು ತಿರುಗಿದೆ ಇಡೀ ಕಲ್ಕತ್ತೆಯನ್ನು.
ತಿರುಕರನ್ನು ಮತ್ತು ಹುಚ್ಚರನ್ನು
ಹುಚ್ಚಾಗಿ ಕುಡಿದು ಅಮಲೇರಿದವರನ್ನು
ದಿಕ್ಕಿಂದ ದಿಕ್ಕಿಗೆ ಕಾಮನಬಿಲ್ಲಿನ ಹಾಗೆ
ಬಾಗಿ ಸಾಗಿದ್ದ ಮೆರವಣಿಗೆ ಸಾಲನ್ನು
ಜನ ಮುಸುರುತ್ತಿದ್ದ ಚಾ ಅಂಗಡಿಗಳನ್ನು
ದಾರಿ ಮೂಲೆಗಳಲ್ಲಿ ಹರಟೆಕೊಚ್ಚುತ್ತಿದ್ದ
ಸೋಮಾರಿ ಗುಂಪನ್ನು.

ಮಧ್ಯಾಹ್ನಕ್ಕೆ ಮುಂಚೆ ಗಾಳಿ ಬಡಿತಕ್ಕೆ ಕಳಚಿ
ಚೆಲ್ಲಾಪಿಲ್ಲಿ ಬಿದ್ದ ತರಗೆಲೆಗಳನ್ನು
ಬಯಲ ಬಿಸಿಲಲ್ಲಿ ಚಾಚಿ ಬೆಳೆದಿದ್ದರೂ
ಯಾರನ್ನೂ ಎಲ್ಲಿಗೂ ಒಯ್ದು ಮುಟ್ಟಿಸದ
ಆನೆದಂತದ ಹಾಗೆ ಬಾಗಿ ಸಾಗಿದ್ದ ಟ್ರಾಮ್ ಕಾರು ಹಳಿಯನ್ನು-
ಕಂಡೆ ನಿನ್ನನ್ನು.

ಏಕೋ ಒಮ್ಮೊಮ್ಮೆ ಅನ್ನಿಸುವುದು ನಾ ನಿನ್ನ
ತೆಕ್ಕೆಯೊಳಗಿಲ್ಲವೆಂದು.
ನನ್ನ ಆ ನಗರ ಎಲ್ಲಿ ಹೋಯಿತು ಈಗ?
ಹಿಂದೊಮ್ಮೆ ಎರಡು ಲೈಟ್‌ ಕಂಬಗಳ ನಡುವೆ
ಪೆನಾಲ್ಟಿ ಕಿಕ್ ಸಿಕ್ಕ ಫುಟ್‌ಬಾಲ್ ಆಟಗಾರ
ಚಂದ್ರನನ್ನ ನಡು ಅತರಿಕ್ಷಕ್ಕೆ ಒದ್ದದ್ದು,
ಗ್ಯಾಲರಿಗಳನ್ನೇರಿ ಕುಳಿತ ಜನ ಒಟ್ಟಾಗಿ
‘ಗೋಲ್’ ಎಂದು ಕಿರುಚಿದ್ದು ಎಲ್ಲ ನೆನಪೀಗ.

ಕಳೆದ ಇಪ್ಪತ್ತು ವರುಷ ನಮ್ಮ ನಡುವೆ ಏಕೋ
ಹೊಂದಿ ಬರಲಿಲ್ಲ. ನನ್ನ
ಮುರಿದ ಕನಸುಗಳು ಹರಿದೆಸೆದ ಕವನಗಳು
ಚಿಂದಿ ಆಯುವ ಜನರ ಚೀಲದಲ್ಲಿದ್ದಾವೆ.
ಇಪ್ಪತ್ತು ವರುಷವಿಡೀ ಅವನ್ನು ಆಯ್ದಿದ್ದಾರೆ.
ತೂಕಕ್ಕೆ ಹಾಕಿ, ಬೆಲೆಕಟ್ಟಿ ಕನಸುಗಳನ್ನು
ಗೇಲಿ ಮಾಡಿದ್ದಾರೆ.
ಒಂದೇ ರಹಸ್ಯ ಕಿಟಕಿ ನನಗಾಗಿ ಎಂದೂ
ಇಲ್ಲಿ ತೆರೆದದ್ದಿಲ್ಲ.
ನನ್ನ ಛಾವಣಿ ಬಿಟ್ಟು ಮೇಲೇರಿ ಮುಗಿಲುಗಳ ಕಡೆಗೆ ಸಾಗಿದ್ದಿಲ್ಲ.
ಅಂದಮೇಲೆ ನನ್ನ ಷರಟಿನ ಬಣ್ಣವನ್ನು
ಬೂಟಿನ ಅಳತೆಯನ್ನು
ಬದಲಿಸಲು ನನಗೆ ಕಾರಣವೆ ಕಂಡಿಲ್ಲ.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...