Home / ಕವನ / ಅನುವಾದ / ಕಲ್ಕತ್ತಾ

ಕಲ್ಕತ್ತಾ

ಮೂಲ: ತಾರಾಪದ ರಾಯ್

ಹೇಳು ಕಲ್ಕತ್ತಾ,
ನನ್ನ ಬಳಿಯಿದ್ದ ಹಸಿರಂಗಿ, ಪಾಸ್‌ ಪೋರ್ಟುಗಳ
ನೆನಪಿದೆಯೆ ನಿನಗೆ?
ಪೂರ್ವ ಪಾಕಿಸ್ತಾನದಿಂದ ಓಡುತ್ತ ಬಂದ ರೈಲಿಂದ ಇಳಿದು
ಸಿಯಾಲ್ದಾ ನಿಲ್ದಾಣದ ಹೆಬ್ಬಾಗಿಲನ್ನು ದಾಟಿ ಬಂದೆ ಸುರಿಮಳೆಯಲ್ಲಿ.
ನನ್ನ ಜೀವನದಲ್ಲೆ ಮೊದಲ ಸಲ ಕಂಡೆ
ಷೂ ಪಾಲಿಷ್ ಮಾಡುವ ಹುಡುಗನನ್ನು;
ನೋಡಿ ರೋಮಾಂಚಗೊಂಡೆ,
ನನ್ನ ಕನಸಿನ ನಗರ ಕಂಡುಕೊಂಡೆ.
ಮೊದಲ ಬಾರಿಗೆ ಒಂದು ಟ್ರಾಮ್‌ಕಾರು ಕಂಡದ್ದು ನಿನ್ನಲ್ಲೆ,
ಮೊದಲ ದರ್ಜೆಯ ಸೀಟು ಕೂಡ ಇತ್ತು ಅದಕ್ಕೆ.
ಮೊದಲ ದರ್ಜೆಯೆ ನೀನೂ ಕಲ್ಕತ್ತಾ.
ಒಂದೊಂದು ಮನೆಯನ್ನೂ ಮುಗಿಲು ಕವಿದಿತ್ತು
ಒಂದೊಂದು ಮನೆಗೂ ನಿಗೂಢ ಕಿಟಕಿ ಇತ್ತು
ಆಟವಾಡುತ್ತಿತ್ತು ಅವುಗಳ ಮುಖದ ಮೇಲೆ
ಮಬ್ಬುಗತ್ತಲೆ ಬೆಳಕು.

ಹಸಿರು ಷರಟನ್ನು
ಹರಿದ ಬೂಟನ್ನು
ತೊಟ್ಟು ತಿರುಗಿದೆ ಇಡೀ ಕಲ್ಕತ್ತೆಯನ್ನು.
ತಿರುಕರನ್ನು ಮತ್ತು ಹುಚ್ಚರನ್ನು
ಹುಚ್ಚಾಗಿ ಕುಡಿದು ಅಮಲೇರಿದವರನ್ನು
ದಿಕ್ಕಿಂದ ದಿಕ್ಕಿಗೆ ಕಾಮನಬಿಲ್ಲಿನ ಹಾಗೆ
ಬಾಗಿ ಸಾಗಿದ್ದ ಮೆರವಣಿಗೆ ಸಾಲನ್ನು
ಜನ ಮುಸುರುತ್ತಿದ್ದ ಚಾ ಅಂಗಡಿಗಳನ್ನು
ದಾರಿ ಮೂಲೆಗಳಲ್ಲಿ ಹರಟೆಕೊಚ್ಚುತ್ತಿದ್ದ
ಸೋಮಾರಿ ಗುಂಪನ್ನು.

ಮಧ್ಯಾಹ್ನಕ್ಕೆ ಮುಂಚೆ ಗಾಳಿ ಬಡಿತಕ್ಕೆ ಕಳಚಿ
ಚೆಲ್ಲಾಪಿಲ್ಲಿ ಬಿದ್ದ ತರಗೆಲೆಗಳನ್ನು
ಬಯಲ ಬಿಸಿಲಲ್ಲಿ ಚಾಚಿ ಬೆಳೆದಿದ್ದರೂ
ಯಾರನ್ನೂ ಎಲ್ಲಿಗೂ ಒಯ್ದು ಮುಟ್ಟಿಸದ
ಆನೆದಂತದ ಹಾಗೆ ಬಾಗಿ ಸಾಗಿದ್ದ ಟ್ರಾಮ್ ಕಾರು ಹಳಿಯನ್ನು-
ಕಂಡೆ ನಿನ್ನನ್ನು.

ಏಕೋ ಒಮ್ಮೊಮ್ಮೆ ಅನ್ನಿಸುವುದು ನಾ ನಿನ್ನ
ತೆಕ್ಕೆಯೊಳಗಿಲ್ಲವೆಂದು.
ನನ್ನ ಆ ನಗರ ಎಲ್ಲಿ ಹೋಯಿತು ಈಗ?
ಹಿಂದೊಮ್ಮೆ ಎರಡು ಲೈಟ್‌ ಕಂಬಗಳ ನಡುವೆ
ಪೆನಾಲ್ಟಿ ಕಿಕ್ ಸಿಕ್ಕ ಫುಟ್‌ಬಾಲ್ ಆಟಗಾರ
ಚಂದ್ರನನ್ನ ನಡು ಅತರಿಕ್ಷಕ್ಕೆ ಒದ್ದದ್ದು,
ಗ್ಯಾಲರಿಗಳನ್ನೇರಿ ಕುಳಿತ ಜನ ಒಟ್ಟಾಗಿ
‘ಗೋಲ್’ ಎಂದು ಕಿರುಚಿದ್ದು ಎಲ್ಲ ನೆನಪೀಗ.

ಕಳೆದ ಇಪ್ಪತ್ತು ವರುಷ ನಮ್ಮ ನಡುವೆ ಏಕೋ
ಹೊಂದಿ ಬರಲಿಲ್ಲ. ನನ್ನ
ಮುರಿದ ಕನಸುಗಳು ಹರಿದೆಸೆದ ಕವನಗಳು
ಚಿಂದಿ ಆಯುವ ಜನರ ಚೀಲದಲ್ಲಿದ್ದಾವೆ.
ಇಪ್ಪತ್ತು ವರುಷವಿಡೀ ಅವನ್ನು ಆಯ್ದಿದ್ದಾರೆ.
ತೂಕಕ್ಕೆ ಹಾಕಿ, ಬೆಲೆಕಟ್ಟಿ ಕನಸುಗಳನ್ನು
ಗೇಲಿ ಮಾಡಿದ್ದಾರೆ.
ಒಂದೇ ರಹಸ್ಯ ಕಿಟಕಿ ನನಗಾಗಿ ಎಂದೂ
ಇಲ್ಲಿ ತೆರೆದದ್ದಿಲ್ಲ.
ನನ್ನ ಛಾವಣಿ ಬಿಟ್ಟು ಮೇಲೇರಿ ಮುಗಿಲುಗಳ ಕಡೆಗೆ ಸಾಗಿದ್ದಿಲ್ಲ.
ಅಂದಮೇಲೆ ನನ್ನ ಷರಟಿನ ಬಣ್ಣವನ್ನು
ಬೂಟಿನ ಅಳತೆಯನ್ನು
ಬದಲಿಸಲು ನನಗೆ ಕಾರಣವೆ ಕಂಡಿಲ್ಲ.
*****

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...