Home / ಕವನ / ಕವಿತೆ / ಒಂದಿರುಳು

ಒಂದಿರುಳು

ತಿರೆಯೊಳೆಲ್ಲೆಡೆ ಕರಿಯ ಮಸಿಯನು
ನಿಶೆಯ ಭೂತವು ಎರಚಿತು
ತರುಗಳೊಳು ತಮ ತೂಕಡಿಸುತಿರೆ
ಮಿಂಚು ಗಗನವ ಪರಚಿತು.

ಮಿಂಚ ಚಾವಟಿಯೇಟ ತಡೆಯದೆ
ತಮದ ತೇಜಿಯು ಭರದಲಿ
ಓಡಲೆದ್ದಿಹ ಧೂಳ ತೆರದಲಿ
ಮೋಡ ಹಬ್ಬಿದೆ ನಭದಲಿ.

ಬಾನ ಕಳಶವು ಮಿಂಚಿನೇಟಿಗೆ
ಬಿರಿದು ಅಮೃತದ ಕಣಕಣ
ಸೋರುತಿಹವೊಲು ಕಾಂಬುದೆನಗೀ
ನಭದಿ ರಾಜಿಪ ಉಡುಗಣ!

ಇರದು; ನಭದುಪ್ಪರಿಗೆಯೇರುತ
ಬಗ್ಗಿ ತಿರೆಯೆನು ಬೆರಗೊಳು
ನಿಟ್ಟಿಸುತ್ತಲಿ ಮಿಂಚುತಿರುವುವು
ಅಪ್ಸರಸಿಯರ ಕಂಗಳು!

ದಿಶೆಯು ಬೆಳಗಲು, ನಿಶೆಯು ಬೆದರುತ
ಬಿಳಿಚುಗೊಳ್ಳಲು, ಚಂದ್ರನು
ಉದಿಸುತಿರುಳಿನ ಸೆರೆಯ ಹರಿದನು
ಅದೆಕೊ ತಾರೆಗಳಿಂದ್ರನು!

ಕಸವು ಬೆರೆತರು, ಪುಟಕೆ ಹಾಕಿದ
ಹೊನ್ನಿನುಂಡೆಯ ತೆರದಲಿ
ಕಾಂತಿಗುಂದದೆ ಇರುಳ ಸಂಗದಿ
ಏರುತಿಹನದೊ ಭರದಲಿ!

ಪ್ರಿಯನ ಬರವಿಗೆ ನಾಚಿ ಮರೆಯಹ
ಮುಗ್ಧ ಚಿಲುವೆಯ ತೆರದೊಳು
ಮುಗಿಲ ಸೆರಗೊಳು ಹೊಕ್ಕವೆಷ್ಟೋ
ತಾರೆಗಳು ಬಹು ಭರದೊಳು!

ಇಂತು ವರ್ಧಿಸುತಿರಲು ಎಲ್ಲೆಡೆ
ಜ್ಯೋತ್ಸ್ನೆ-ನಿಶೆಗಳ ಕೇಳಿಯು
“ಮರುಳೆ ಎಚ್ಚರು” ಎಂದು ನಗುತಲಿ
ಬೀಸಿತಹ ತಂಗಾಳಿಯು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...