Home / ಕವನ / ಕವಿತೆ / ಬುದ್ಧ ಮತ್ತು ವೈಶಾಲಿ ನಗರವಧು

ಬುದ್ಧ ಮತ್ತು ವೈಶಾಲಿ ನಗರವಧು

‘ಆಸೆಯೇ ದುಃಖಕ್ಕೆ ಕಾರಣ’ ತಿಳಿಸಿದ
ಬುದ್ಧ ಬೋಧಿಯಾಗಿ ಆಗಾಗ
ಅಲ್ಲಲ್ಲಿ ಅವರವರ ಮನಸಿನಲಿ
ಚಿಗುರೊಡೆವ ಜೀವ
ಕಣ್ತೆರೆಸುವ ದೇವದೂತ.

ಸುಂದರ ನಗರಿ ವೈಶಾಲಿ
ಸಸ್ಯ ಶ್ಯಾಮಲೆಯ ನಾಡು ಬೀಡು
ಅಂಬವನದ ನಿಶ್ಶಬ್ದ ಹಗಲುರಾತ್ರಿಗೆ
ಹೂ ಬಳ್ಳಿಗಳ ಪಿಸುಪಿಸು ಮಾತು ಅದೇ
ಬುದ್ಧನ ಆಗಮನ ತೋರಣಕೆ
ಪಾವನಕೆ ಮನದ ನಿರಾಳತೆಯ
ಸಮರ್ಪಿಕೆಯ ಭಾವನೆಗೆ ತೇವಗಣ್ಣು.

ಮಳೆಯೊಳು ಮಿಂದ ಮಣ್ಣು ಹಸನಾಗಿ
ಹದವಾಗಿ ಕಾಯ್ದಿತು ಬುದ್ಧನ ಪಾದಸ್ಪರ್ಶ
ಅದೋ ಬಂದೇ ಬಿಟ್ಟಿತು ಬಿಕ್ಖುಗಳ ಗುಂಪು
ನಡುವೆ ಅರವಿಂದವದನ
ಸಾಕ್ಷಾತ್ ತೇಜಪುಂಜ ಕಾಯಕಲ್ಪ.

ವೈಶಾಲಿಗೆ ಸಂಭ್ರಮ ಮನೆ ಮನೆ
ಬೀದಿ ಬೀದಿ ಸುತ್ತಲಿನ ಹಳ್ಳಿಪಳ್ಳಿಗೆ
ಪಸರಿಸತೊಡಗಿತು ’ಧಮ್ಮದೇಸನ’
ತುಂಬಿಕೊಳ್ಳುತ ಜನರ ಚಿಗುರೊಡೆಯಿತು ಅಂಬವನ.

ನೆಲಮುಟ್ಟುವ ಕ್ಷಣ ಹೊನ್ನಕಿರಣಗಳು
ಆಹಾ ! ‘ಅಂಬಪಾಲಿ’ ಅದೇನೋ ಮಾಂತ್ರಿಕತೆ

ಮೀಸೆಯೊಡೆದ ಪಡ್ಡೆಗಳ ಕನಸಿನೊಳಗೆಲ್ಲ ವಧು
ಕಣ್ಣು ಕೋರೈಸುವ ಸುಂದರಿ ಎದೆ ಝಲ್‌ಗುಡುವ
ಹರೆಯ ಮೋಹಕಮಾತಿನ ಬೆಡಗಿಯ
ತೋಳತೆಕ್ಕೆಗೆ ಬೀಳದವರಾರಲ್ಲಿ
ವೈಶಾಲಿಗೇ ವಧುವಾಗಿ ಕಿರುಬೆರಳಮೇಲೆ
ಕುಣಿಸುವ ಮಾಟಗಾತಿ ಮಲ್ಲಿಗೆಯ
ಮೊಗ್ಗುಗಳು ಅರಳುವ ಕಾತುರ
ಅವರವರ ಭಾವದ ಎದೆಗೂಡಲಿ.

ಬರುವುದೆಂದರೆ ಧರ್ಮೋಪದೇಶ ಕೇಳಲು
ಇರಬಹುದೆ ಹುನ್ನಾರ ಬಿಕ್ಖುಗಳ
ಮನವನಾವರಿಸುವ, ಭಗ್ನಗೊಳಿಸುವ
ದಿನಕೊಂದೊಂದು ಅಲಂಕಾರ ಆದರೂ
ಶಾಂತಚಿತ್ತ ಮನಸು ಗಂಭೀರೆ
ಆಲಿಸುವ ಅಂಬನೋಡಿ ಮನಕದಡಿಸಿಕೊಂಡದ್ದು
ಗಂಡುಜಾತಿ ತಮಗಿನ್ನೆಲ್ಲಿ ಕೈಜಾರುತ್ತೊ ಎನ್ನುವ ಭಯ.

ಧಮ್ಮದೇಸನ ಮುಗಿದು ಇನ್ನೇನು ಬಿಡಾರ
ಬಿಡಬೇಕು ಹೊರಡಬೇಕು ಮುಂದಿನೂರಿಗೆ
ಬಿಕ್ಖುಗಳ ನಡುವೆ ಹೆದರಿ ಅಂಜಿಕೆಯಿಂದಲೇ
ಬುದ್ಧನ ಕಾಲಿಗೆರಗಿ
‘ನೂರಾರು ಸಂಸಾರಗಳ ದುಃಖಕ್ಕೆ ಕಾರಣಳು ನಾನು
ದುಃಖಿಸಿದೆ ಗುರುವರ್ಯಾ ಈಗ
ನಿಮ್ಮ ಮಾತು ಕೇಳಿ, ತೋರಿಸಿದಿರೆನಗೆ
ಸತ್ಯದ ಬೆಳಕು ಅನಂತದೆಡೆಗೆ
ಗುರುಗಳೇ, ಬರಬೇಕೆನ್ನ ಮನೆಗೆ
ಬಿಕ್ಖುಗಳನೊಡಗೂಡಿ ಸ್ವೀಕರಿಸಬೇಕೆನ್ನ ಆತಿಥ್ಯ
ಪಾವನಳಾಗಿ ಮಾಡಿ ಹಾರೈಸು ತಂದೆ’.

ಆಗಬಹುದೆಂದಾ ಬುದ್ಧನ ಮಾತಿಗೆ ಬಿಕ್ಖುಗಳ
ಬಿಡಾರದೊಳಗೆ ಕದಡಿತು ಶಾಂತಿ
‘ಗುರುಗಳೇ ಇದೇನು ಮಾತುಕೊಟ್ಟಿರಿ
ಈ ನಗರಿಗರೆಲ್ಲರ ವಧು ಆಕೆ ಅದೇ ಅದೇs
ನೂರಾರು ಧನಿಕರ, ಯುವಕರ, ರಾಜರ ಮನ
ಕದ್ದು ಬುಟ್ಟಿಗೆ ಹಾಕಿಕೊಂಡ ನರ್ತಕಿ
ಹರೆಯಹಾಸಿ ಕಾಂಚಾಣ ಹೊದೆಯುವ ವೇಶ್ಯೆ
ಮಾನ ಕಳೆದುಕೊಂಡ ಸಂಸಾರಿಗರದೆಷ್ಟೊ
ಮೌಲ್ಯಬರಿದುಗೊಳಿಸಿಕೊಂಡ ಸನ್ಯಾಸಿಗಳೋ,
ಅಂಬಪಾಲಿಯ ಆತಿಥ್ಯ ಪಡೆಯುವ
ಬಿಕ್ಖುಗಳಾದ ನಮಗೆ’ …….. ಕಳವಳ.

‘ವೇಶ್ಯಯಾಗಿ ಕಂಡಳೇ ಅವಳು ನಿಮಗೆ?
ಅದೊಂದು ಹೆಣ್ಣುಜೀವ, ಕಣ್ಣು ಕುರುಡಾಯಿತೆ
ಬಿಕ್ಖುವಾದ ನಿಮಗೂ ಮನಚಂಚಲಿಸಿತೆ?
ಅವರವರ ಭಾವಕ್ಕೆ ಕಾಣುವ ಪರಿ
ತೆಗೆತೆಗೆದುಬಿಡಿ ಚೀವರ
ಬಿಕ್ಖುಯೋಗ್ಯತೆ ನಿಮಗಿಲ್ಲ’ ಬುದ್ಧ
ನಡದೇಬಿಟ್ಟ ಅಮೃಪಾಲಿಯ ಆತಿಥ್ಯಕ್ಕೆ.
*****
ಬಿಕ್ಖು = ಭಿಕ್ಷು
ಧಮ್ಮದೇಸನ = ಧರ್ಮೋಪದೇಶ
ಚೀವರ = ಬೌದ್ಧಭಿಕ್ಷುಗಳು ಹೊದೆಯುವ ಬಟ್ಟೆ
ಅಂಬಪಾಲಿ = ಅಮೃಪಾಲಿ
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...