
೧
ಒಂದು ತಿಂಗಳು ಇಂದು ಪೂರ್ಣವಾಯಿತು ಕವಿತೆ
ನಾವೀರ್ವರಾ ಇರುಳು ಅಗಲಿದಂದು;
ಮೌನ ಮೈತಳೆದಿತ್ತು ಮೊಗಬಾಡಿ ಹೋಗಿತ್ತು
ಕಣ್ಣ ಕೊನೆಯಂಚಿನಲಿ ಅಶ್ರುಬಿಂದು.
೨
ಎದೆಗೆದೆಯ ಹೊಂದಿರಿಸಿ ಕುರುಳುಗಳ ನೇವರಿಸಿ
ತುಟಿಗಳಲಿ ಜೇನಿರಿಸಿ ರಮಿಸಿ ರಮಿಸಿ;
ಕಣ್ಣೊರಿಸಿಕೋ ಕವಿತೆ ಎಂದು ನಾ ನುಡಿದಾಗ
ಅಳಲ ತೊರೆಯೇ ಬಂತು ದಡವ ಸೂಸಿ.
೩
ಕನಸಿನಲ್ಲಾದರೂ ಅಗಲಿಕೆಯು ಬರದಿರಲಿ
ಎಂದು ದಿನವೂ ಹೃದಯ ನುಡಿಯುತಿತ್ತು;
ಆದರೇನೊಂದು ದಿನ ಈ ದುಃಖ ಈ ಮೌನ
ಬರಲೆ ಬೇಕಿತ್ತಲ್ಲ – ಬಂದುದಾಯ್ತು!
೪
ಕರುಳ ಬಳ್ಳಿಯೆ ಹರಿದು ಹೋಯಿತೆನುವಂತೆಯೇ
ಹೋಗಬಾರದ ನೀನು ಹೋದೆಯೇನು!
ಆ ದಿನದ ಆ ಇರುಳು ಆ ಮಾತು ಆ ನೆನಹು
ಆಜನ್ಮಪರ್ಯಂತ ಕೊನೆಯದೇನು.
೫
ಎದೆಯಾಳ ತಳದಲ್ಲಿ ಏನೊ ತಳಮಳವಲ್ಲಿ
ದೇಹವನೆ ಸುಡುತಿಹುದು ರಕ್ತ ಹೀರಿ
ದಿನ ದಿನವು ಆ ನೆನವೆ ತಪ್ತಾಗ್ನಿ ರಸದಂತೆ
ತೂರಿ ಬರುತಿಹುದಲ್ಲ ಬೆಂಕಿ ಕಾರಿ!
೬
ನಿನ್ನ ಪ್ರೀತಿಯೆ ನನಗೆ ಊರುಗೋಲಾಗಿಹುದು
ಈ ಬಾಳಿನುದ್ದಕೂ ದಾರಿದೀಪ
ನಾವಳಿದು ಮಣ್ಣಿನಲಿ ಮಣ್ಣಾಗಿ ಹೋದರೂ
ಪ್ರೀತಿಗಾದರು ಬೇಡ ದೈವಶಾಪ.
*****
















