Home / ಕವನ / ಕವಿತೆ / ಕವನ ಕಂಬನಿ!

ಕವನ ಕಂಬನಿ!

ರಘುಪತಿ ರಾಘವ ರಾಜಾರಾಮ
ಮಹಾಜೀವನಕೆ
ಇಂದು ಬರೆದೆಯಾ
ದೇವನೆ, ಪೂರ್ಣವಿರಾಮ!
ರಘುಪತಿ ರಾಘವ ರಾಜಾರಾಮ!

ಪತಿತ ಪಾವನ!
ಪಟೇಲ ಜೀವನ
ವಾಯಿತು ದೇವನ-
ಮುರಲೀವಾದನ
ಸ್ವಾತಂತ್ರ್ಯದ ಆ ವೀರೋದಾಮನ
ಬೆಳೆಯಿತು ತಾನ ವಿತಾನ
ದೇವಾ, ಸಖ್ಯ ಸೌಖ್ಯ, ಸಂಧ
ರಘುಪತಿ ರಾಘವ ರಾಜಾರಾಮ
ಪತಿತ ಪಾವನ ಸೀತಾರಾಮ
ವಿಧಿಯ ಘಟನೆಯಲಿ
ಘೋರ ಮರಣದಲಿ
ಪಡೆದಿತು ಗಾನವಿರಾಮ
ಸುಂದರ ಮಾಧವ ಮೇಘಶ್ಯಾಮ


ಜರೆಯನು ಜರೆದನು
ಅವನೇ ನಿರ್ಜರ
ದುಡಿಮೆಗೆ ಎಂದಿಗು
ಇಲ್ಲ ಅಂತರ
ಮಿಂಚು ತೂರಿತೆನೆ
ಹರಿದು ನಿರ್ಝರ
ದೇಹದಿ ಉಕ್ಕಿತು
ಪ್ರಾಣಸಾಗರ
ನಾಡಿನ ಪುಣ್ಯದ
ಉದಿತ ಭಾಸ್ಕರ
ಅದೋ ನಮ್ಮ ಸರದಾರ
ಅವನ ದರ್ಶನ
ಉತ್ಸಾಹದ ಸಂಚಾರ
ರಘುಪತಿ ರಾಘವ ರಾಜಾರಾಮ
ಭಾರತ ಪಂಚ ಪ್ರಾಣ
ಬತ್ತಿತು
ಅಯ್ಯೋ ಮೇಫಶ್ಯಾಮ!


ಆತ್ಮ ಕವಚವದು
ವಜ್ರ ಕೇವಲ
ಒಳಗೆ ಬೆಳೆಯಿತೈ
ಕಮಲ ಕೋಮಲ
ಭಾರತ ಭಾಗ್ಯದ
ಗಂಧ ಪರಿಮಳ
ಹರಿಯಿತು ಸಾಗರ ಪಾರ
ದೇವಾ,
ಏನು ಮಹಾ ಸರದಾರ!
ಕೇಳು ದೇವನೆ
ದೇಶ ಕೂಗುತಿದೆ
ಅಣ್ಣನ ವಾರಂವಾರ
ರಘುಪತಿ ರಾಘವ ರಾಜಾರಾಮ


ಯುದ್ಧ ಭೂಮಿಯಲಿ
ಸ್ಫುರಣ ಕಾರಣ
ಕಾಡ ಸವರಿದನು
ವೈರಿ ಮರ್‍ದನ
ನಾಡ ಕಟ್ಟಿದನು
ಭೀಮ ಯೋಧನ
ಸ್ವಾತಂತ್ರ್ಯದ ಸಂಗ್ರಾಮ
ಗೆದ್ದನು,
ಅವನಿಗೆ ಪ್ರೇಮ ಪ್ರಣಾಮ
ರಘುಪತಿ ರಾಘವ ರಾಜಾರಾಮ!


ದೇಹ ಮುರಿದರೂ
ಸಾವು ಬಾರದು
ಅಮೃತ ಪುತ್ರನಾ
ಸತ್ವ ಸರಿಯದು
ಅವನ ಧೈರ್ಯದಾ
ಕವಚ ನಾಡಿಗೆ
ಅವನ ಉಕ್ಕಿನಾ
ಹುರಿಯು ಮನಸಿಗೆ
ಅವನ ಪುಣ್ಯದಾ
ರಕ್ಷೆ ಬೆನ್ನಿಗೆ
ಅವನ ಕನಸಿನಾ-
ಮಾಲೆ ಕೊರಳಿಗೆ
ಅವನ ಧ್ಯೇಯದಾ
ಮೂರ್ತಿ ಕಣ್ಣಿಗೆ
ಇರಲು ಎಲ್ಲಿಯಾ
ಸಾವು ಅವನಿಗೆ


ದುಃಖ ಸಂವೃತ
ತಾಳು ಭಾರತ
ಮೋಹ ವಿಸ್ಮೃತ
ಏಳು ಭಾರತ
ಪ್ರಗತಿ ಸುವ್ರತ
ಬಾಳು ಅಮೃತ!
ರಘುಪತಿ ರಾಘವ ರಾಜಾರಾಮ
ಪತಿತ ಪಾವನ ಸೀತಾರಾಮ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...