Home / ಕವನ / ಕವಿತೆ / ವಸಂತ ಲಕ್ಷ್ಮಿ

ವಸಂತ ಲಕ್ಷ್ಮಿ

ಇಳೆಗೆ ಬಂದಳದೋ ಲಕ್ಷ್ಮಿ
ಮಧುಮಾಸದ ಅಮೃತ ರಶ್ಮಿ!

ಮಿಂದು ಬಂತು ನೆಲಜಲ
ಸ್ವಾಗತಿಸಿತು ಭೂತಲ
ದಿಸೆ ದಿಸೆಯೂ ಹೊಳೆವ ಹವಳ
ಸ್ವಸ್ತಿ ಲಿಖಿತ ಹೊಸ್ತಿಲ!

ಗಗನ ಕರದ ನೀಲಕಮಲ
ಅರ್ಘ್ಯವೀಯೆ ಕಿರಣ ಸುಜಲ
ಕೈ ಮುಗಿಯಿತು ಜೀವಕುಲ
ಭಾವ ಪಕ್ವ ಫಲವಲ!

ಪುರೂರವನ ಎದುರು ನಿಂತ
ಇವಳಪ್ಸರೆ ಊರ್ವಶಿ!
ಬಾನ್ನೆಲದಲಿ ಬೆಳದನಂತ
ಮತ್ತಧವಳ ಸುಖಶಶಿ!

ಜನ ಬನಗಳ ಅಂತರಂಗ
ಮಥಿಸಿ ಬಂತು ಹೃತ್ತರಂಗ
ವಿಶ್ವವಾಯ್ತು ನೃತ್ಯರಂಗ
ಈ ವಸಂತ ಲಕ್ಷ್ಮಿಗೆ!

ಹಸುರಿನ ಕೊನೆ ಕೆಂಪೊಡೆಯಿತು
ಎಡೆಯೆಡೆಯಲಿ ಕಂಪಡರಿತು
ಹಸಿದೆದೆಯಲಿ ಕಂಡರಸಿತು
ಕನಸಿನ ಕಮನೀಯತೆ!

ಸುಳಿದಾಡಿತು ಗಂಧಪವನ
ಸ್ಫೂರ್ತಿಸಿರಲು ಪ್ರೇಮ ಕವನ
ತುಂಬಿತುಟಿಯು ನುಡಿಸಿಯದನ
ಬನ ಬನವನು ಕುಣಿಸಿತು!

ಅದೊ ಕೋಕಿಲ ಮತ್ತಗೀತ
ವನಮೋದದಿ ರೋಮಾಂಚಿತ
ಹೆಣ್ಣುಗಂಡು ಕಾಮವ್ಯಥಿತ
ಸುಖ ಝೇಂಕೃತ ಭಾವವು!

ವೈರಾಗ್ಯದ ಬಗೆ ಚೆದರಿತು
ಅನುರಾಗದ ತಪ ಕೊನರಿತು
ನಂಜುಂಡನ ತುಟಿ ಅದುರಿತು
ಅಶುಭದ ವಿಷ ನೆಕ್ಕಿತು!

ಯುಗ ಯುಗಗಳ ಸೃಜನಗೀತ
ಹೊಮ್ಮಿ ಬರಲು, ವಿಶ್ವ ಪ್ರೀತ
ಈ ಲೋಕವು ಪುಣ್ಯ ತೀರ್ಥ
ಹೃನ್ನದಿಗಳು ಬೆರೆಯಲು!

ಸಂಸಾರದ ಕಟು ಬಂಧನ-
ವಾಯ್ತು ಇಂದು ನವನಂದನ
ಎದೆಯೆದೆಯಲಿ ಮಧು ನರ್ತನ
ನಗೆ ಕೊನರಿತಕಾರಣ!

ಬಾರೆ ಬಾರೆ ಭಾಗ್ಯಲಕ್ಷ್ಮಿ
ನಾಕ ತೊರೆದ ಪುಣ್ಯರಶ್ಮಿ
ಜಗ ಕೋರಿದೆ ಸುಸ್ವಾಗತ
ಬಾರೊಲವಿನ ಅಭ್ಯಾಗತ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...