Home / ಕವನ / ಕವಿತೆ / ವಚನ ಸಂಪತ್ತು

ವಚನ ಸಂಪತ್ತು

ಜೀವನದ ನೆನಹುಗಳ ಮನದಿ ಮೆಲುಕಾಡಿಸಲು
ನೀನಿತ್ತ ವಚನಗಳ ನುಡಿಗೆಕುಲುಕಾಡಿಸಲು ||

ವಚನ ದೇಗುಲದಲ್ಲಿ ಕಂಗೊಳಿಸುತಿದೆ ಶಿಲ್ಪ
ವಚನವೊಂದರಲಿ ಕಂಡುಬರುತಿದೆ ಕಲ್ಪ ||

ವಚನವೆಂದರೆ ಒಂದು ಗೊಂಚಲಿನ ಸವಿದ್ರಾಕ್ಷಿ
ನುಡಿನುಡಿಗು ರಸದುಂಬಿ ಬೀಗಿನಿಂತಿದೆ ಸಾಕ್ಷಿ||

ಕನ್ನಡದ ಪುಣ್ಯವದು ಹಣ್ಣಿಬಂದಿಹ ಕಾಲ
ಕನ್ನಡ ವಾಣಿ ಮನದಿಂಬುಗೊಂಡಿಹ ಕಾಲ ||

ಮಾತಿಗೆಟುಕದ ಭಾವ ಶಬ್ದದಲಿ ತುಂಬಿಟ್ಟು
ಚಿನ್ನರನ್ನಗಳಾಸ್ತಿ ಹರಸಿರುವೆ ನಮಗಿಟ್ಟು||

ನಿನ್ನ ಬಾಯಲಿ ನುಡಿಯು ಶ್ರೀಮಂತವಾಗಿತ್ತು
ನಿನ್ನ ಸಹವಾಸದಲಿ ನುಡಿಗೆ ಮೈ ಬೀಗಿತ್ತು ||

ತಲೆದಡವಿ ತಣಿಸಿತ್ತು ವಚನಾರ್ಥ ತಂಗಾಳಿ
ಮೈದಡವಿ ಸುಖಿಸಿತ್ತು ಸ್ವಚ್ಛಂದ ಸುಳಿಗಾಳಿ ||

ವಚನಗಳ ಬಿರುಗಾಳಿ ಒಮ್ಮೆ ಹುಡಿಯೋಡಿಸಿತು
ಒಮ್ಮೆ ಸುಟ್ಟುರಿಗಾಳಿ ದುರ್ಗಂಧವಡಗಿಸಿತು ||

ಮನೆಮನವ ತಟ್ಟಿತ್ತು ಸೊಡರು ಬೆಳ್ ಬೆಳಕಾಗಿ
ಮನಮನವ ತಟ್ಟಿತ್ತು ಮುದ್ದಿಡುವ ಶಿಶುವಾಗಿ ||

ದಿವ್ಯಲೋಕದ ಭಾವ ನೆಲಕಿಳಿಸಿ ತಂದಿತ್ತು
ಭವ್ಯರೊಳು ಸಲಿಗೆ ಸಲ್ಲಾಪಗಳಿಗಿಂಬಿತ್ತು ||

ವಚನದಲಿ ಹುದುಗಿರುವ ಪರುಷಮಣಿ ಬಲಗೊಂಡು
ಕಬ್ಬುನಕೆ ತಗಲಿ ಹೊನ್ನಾಗಿಸುವ ಪರಿಯೊಂದು ||

ನಿನ್ನ ವಚನವು ಹಾಲಹೊಳೆಯಾಗಿ ಹರಿದಿತ್ತು
ತೀರದಲಿ ಸಕ್ಕರೆಯ ಮಳಲಾಗಿ ಹರಹಿತ್ತು ||

ತವರಾಜದಂಥ ಕೆಸರಾಗಿತ್ತು ತಳದಲ್ಲಿ
ಸವಿದಿನಿಸು ರಸಿಕನಿಗೆ ಹರಿದೋಡಿ ಸವಿದಲ್ಲಿ ||

ಅನುಭಾವದೆಸಕಿನಲಿ ತುಂಬಿತ್ತು ಹೆಜ್ಜೇನು
ಹದವರಿತು ಸವಿಯೆ ಸಂಜೀವ ಸುಧೆ ಹೆಚ್ಚೇನು ||

ಮಾತುರೀತಿಗಳಲ್ಲಿ ಭಾವದಲಿ ಮಿಗಿಲಾಗಿ
ಶಾಶ್ವತದ ಸಾಹಿತ್ಯವೆನಿಸಿತ್ತು ಮುಗಿಲಾಗಿ

ಕಳೆದುಹೋದವು ಇಂದು ಎಂಟು ಶತಮಾನಗಳು
ಅಚ್ಚಳಿಯದುಳಿದಿಹವು ಮೈಗೊಂಡ ಹೊನ್ನುಗಳು ||

ಚಿಕ್ಕ ಮೂರುತಿಗಿಹುದು ಬಿತ್ತರದ ಘನಕೀರ್ತಿ
ಮಾತು ಮಾತಿಗು ಮಿಂಚಿ ಕಣ್ಕುಕ್ಕಿಸುವ ರೀತಿ ||

ಸಾಹಿತ್ಯ ಶಾರದೆಯ ಸಿರಿಮುಡಿಗೆ ಹೂವಾಗಿ
ಸತ್ತಿರುವರೆದೆ ಸೇರಿ ಕಳೆಯಿಡುವಕಾವಾಗಿ ||

ಅನುದಿನವು ಹೊಗರೇರಿ ಹೊಳೆಯುವದು ಈ ವಚನ
ಚಣಚಣವು ತಣಿಸುತಿದೆ ಅನುಭಾವದೀ ರಚನ ||

ವಚನ ಸುಂದರಿಯಲ್ಲ ಮನಸೆಳೆವ ನಲ್ಗೂಸು
ಎಂತು ಮುದ್ದಿಸಲದನು ಮನಕಾಗುವದು ಲೇಸು ||

ಸವಿದು ಮೆಲುಕಾಡಿಸಲು ಅರ್ಥ ಸ್ವಾರಸ್ಯವಿದೆ
ಎಣಿಸಿ ಯೋಚಿಸಿದಲ್ಲಿ ಬುದ್ಧಿ ವೈಶಾಲ್ಯವಿದೆ ||

ಕನ್ನಾಡ ಈ ಬೆಳೆಯು ಅಕ್ಷಯದ ಸಂಪತ್ತು
ಅಟ್ಟುಣ್ಣ ಬಲ್ಲವಗೆ ನೆತ್ತಿಗನ್ನವದಾಯ್ತು ||

ಯಾವ ಮನ್ವಂತರಕು ಈ ವಚನ ಕಲ್ಪತರು
ಕಳೆಯುವದು ಮಾನವನ ಬೆಕ್ಕಸದ ನಿಟ್ಟುಸಿರು ||
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...