Home / ಕವನ / ಕವಿತೆ / ವಚನ ಸಂಪತ್ತು

ವಚನ ಸಂಪತ್ತು

ಜೀವನದ ನೆನಹುಗಳ ಮನದಿ ಮೆಲುಕಾಡಿಸಲು
ನೀನಿತ್ತ ವಚನಗಳ ನುಡಿಗೆಕುಲುಕಾಡಿಸಲು ||

ವಚನ ದೇಗುಲದಲ್ಲಿ ಕಂಗೊಳಿಸುತಿದೆ ಶಿಲ್ಪ
ವಚನವೊಂದರಲಿ ಕಂಡುಬರುತಿದೆ ಕಲ್ಪ ||

ವಚನವೆಂದರೆ ಒಂದು ಗೊಂಚಲಿನ ಸವಿದ್ರಾಕ್ಷಿ
ನುಡಿನುಡಿಗು ರಸದುಂಬಿ ಬೀಗಿನಿಂತಿದೆ ಸಾಕ್ಷಿ||

ಕನ್ನಡದ ಪುಣ್ಯವದು ಹಣ್ಣಿಬಂದಿಹ ಕಾಲ
ಕನ್ನಡ ವಾಣಿ ಮನದಿಂಬುಗೊಂಡಿಹ ಕಾಲ ||

ಮಾತಿಗೆಟುಕದ ಭಾವ ಶಬ್ದದಲಿ ತುಂಬಿಟ್ಟು
ಚಿನ್ನರನ್ನಗಳಾಸ್ತಿ ಹರಸಿರುವೆ ನಮಗಿಟ್ಟು||

ನಿನ್ನ ಬಾಯಲಿ ನುಡಿಯು ಶ್ರೀಮಂತವಾಗಿತ್ತು
ನಿನ್ನ ಸಹವಾಸದಲಿ ನುಡಿಗೆ ಮೈ ಬೀಗಿತ್ತು ||

ತಲೆದಡವಿ ತಣಿಸಿತ್ತು ವಚನಾರ್ಥ ತಂಗಾಳಿ
ಮೈದಡವಿ ಸುಖಿಸಿತ್ತು ಸ್ವಚ್ಛಂದ ಸುಳಿಗಾಳಿ ||

ವಚನಗಳ ಬಿರುಗಾಳಿ ಒಮ್ಮೆ ಹುಡಿಯೋಡಿಸಿತು
ಒಮ್ಮೆ ಸುಟ್ಟುರಿಗಾಳಿ ದುರ್ಗಂಧವಡಗಿಸಿತು ||

ಮನೆಮನವ ತಟ್ಟಿತ್ತು ಸೊಡರು ಬೆಳ್ ಬೆಳಕಾಗಿ
ಮನಮನವ ತಟ್ಟಿತ್ತು ಮುದ್ದಿಡುವ ಶಿಶುವಾಗಿ ||

ದಿವ್ಯಲೋಕದ ಭಾವ ನೆಲಕಿಳಿಸಿ ತಂದಿತ್ತು
ಭವ್ಯರೊಳು ಸಲಿಗೆ ಸಲ್ಲಾಪಗಳಿಗಿಂಬಿತ್ತು ||

ವಚನದಲಿ ಹುದುಗಿರುವ ಪರುಷಮಣಿ ಬಲಗೊಂಡು
ಕಬ್ಬುನಕೆ ತಗಲಿ ಹೊನ್ನಾಗಿಸುವ ಪರಿಯೊಂದು ||

ನಿನ್ನ ವಚನವು ಹಾಲಹೊಳೆಯಾಗಿ ಹರಿದಿತ್ತು
ತೀರದಲಿ ಸಕ್ಕರೆಯ ಮಳಲಾಗಿ ಹರಹಿತ್ತು ||

ತವರಾಜದಂಥ ಕೆಸರಾಗಿತ್ತು ತಳದಲ್ಲಿ
ಸವಿದಿನಿಸು ರಸಿಕನಿಗೆ ಹರಿದೋಡಿ ಸವಿದಲ್ಲಿ ||

ಅನುಭಾವದೆಸಕಿನಲಿ ತುಂಬಿತ್ತು ಹೆಜ್ಜೇನು
ಹದವರಿತು ಸವಿಯೆ ಸಂಜೀವ ಸುಧೆ ಹೆಚ್ಚೇನು ||

ಮಾತುರೀತಿಗಳಲ್ಲಿ ಭಾವದಲಿ ಮಿಗಿಲಾಗಿ
ಶಾಶ್ವತದ ಸಾಹಿತ್ಯವೆನಿಸಿತ್ತು ಮುಗಿಲಾಗಿ

ಕಳೆದುಹೋದವು ಇಂದು ಎಂಟು ಶತಮಾನಗಳು
ಅಚ್ಚಳಿಯದುಳಿದಿಹವು ಮೈಗೊಂಡ ಹೊನ್ನುಗಳು ||

ಚಿಕ್ಕ ಮೂರುತಿಗಿಹುದು ಬಿತ್ತರದ ಘನಕೀರ್ತಿ
ಮಾತು ಮಾತಿಗು ಮಿಂಚಿ ಕಣ್ಕುಕ್ಕಿಸುವ ರೀತಿ ||

ಸಾಹಿತ್ಯ ಶಾರದೆಯ ಸಿರಿಮುಡಿಗೆ ಹೂವಾಗಿ
ಸತ್ತಿರುವರೆದೆ ಸೇರಿ ಕಳೆಯಿಡುವಕಾವಾಗಿ ||

ಅನುದಿನವು ಹೊಗರೇರಿ ಹೊಳೆಯುವದು ಈ ವಚನ
ಚಣಚಣವು ತಣಿಸುತಿದೆ ಅನುಭಾವದೀ ರಚನ ||

ವಚನ ಸುಂದರಿಯಲ್ಲ ಮನಸೆಳೆವ ನಲ್ಗೂಸು
ಎಂತು ಮುದ್ದಿಸಲದನು ಮನಕಾಗುವದು ಲೇಸು ||

ಸವಿದು ಮೆಲುಕಾಡಿಸಲು ಅರ್ಥ ಸ್ವಾರಸ್ಯವಿದೆ
ಎಣಿಸಿ ಯೋಚಿಸಿದಲ್ಲಿ ಬುದ್ಧಿ ವೈಶಾಲ್ಯವಿದೆ ||

ಕನ್ನಾಡ ಈ ಬೆಳೆಯು ಅಕ್ಷಯದ ಸಂಪತ್ತು
ಅಟ್ಟುಣ್ಣ ಬಲ್ಲವಗೆ ನೆತ್ತಿಗನ್ನವದಾಯ್ತು ||

ಯಾವ ಮನ್ವಂತರಕು ಈ ವಚನ ಕಲ್ಪತರು
ಕಳೆಯುವದು ಮಾನವನ ಬೆಕ್ಕಸದ ನಿಟ್ಟುಸಿರು ||
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...