Home / ಕವನ / ಕವಿತೆ / ವಚನ ಸಂಪತ್ತು

ವಚನ ಸಂಪತ್ತು

ಜೀವನದ ನೆನಹುಗಳ ಮನದಿ ಮೆಲುಕಾಡಿಸಲು
ನೀನಿತ್ತ ವಚನಗಳ ನುಡಿಗೆಕುಲುಕಾಡಿಸಲು ||

ವಚನ ದೇಗುಲದಲ್ಲಿ ಕಂಗೊಳಿಸುತಿದೆ ಶಿಲ್ಪ
ವಚನವೊಂದರಲಿ ಕಂಡುಬರುತಿದೆ ಕಲ್ಪ ||

ವಚನವೆಂದರೆ ಒಂದು ಗೊಂಚಲಿನ ಸವಿದ್ರಾಕ್ಷಿ
ನುಡಿನುಡಿಗು ರಸದುಂಬಿ ಬೀಗಿನಿಂತಿದೆ ಸಾಕ್ಷಿ||

ಕನ್ನಡದ ಪುಣ್ಯವದು ಹಣ್ಣಿಬಂದಿಹ ಕಾಲ
ಕನ್ನಡ ವಾಣಿ ಮನದಿಂಬುಗೊಂಡಿಹ ಕಾಲ ||

ಮಾತಿಗೆಟುಕದ ಭಾವ ಶಬ್ದದಲಿ ತುಂಬಿಟ್ಟು
ಚಿನ್ನರನ್ನಗಳಾಸ್ತಿ ಹರಸಿರುವೆ ನಮಗಿಟ್ಟು||

ನಿನ್ನ ಬಾಯಲಿ ನುಡಿಯು ಶ್ರೀಮಂತವಾಗಿತ್ತು
ನಿನ್ನ ಸಹವಾಸದಲಿ ನುಡಿಗೆ ಮೈ ಬೀಗಿತ್ತು ||

ತಲೆದಡವಿ ತಣಿಸಿತ್ತು ವಚನಾರ್ಥ ತಂಗಾಳಿ
ಮೈದಡವಿ ಸುಖಿಸಿತ್ತು ಸ್ವಚ್ಛಂದ ಸುಳಿಗಾಳಿ ||

ವಚನಗಳ ಬಿರುಗಾಳಿ ಒಮ್ಮೆ ಹುಡಿಯೋಡಿಸಿತು
ಒಮ್ಮೆ ಸುಟ್ಟುರಿಗಾಳಿ ದುರ್ಗಂಧವಡಗಿಸಿತು ||

ಮನೆಮನವ ತಟ್ಟಿತ್ತು ಸೊಡರು ಬೆಳ್ ಬೆಳಕಾಗಿ
ಮನಮನವ ತಟ್ಟಿತ್ತು ಮುದ್ದಿಡುವ ಶಿಶುವಾಗಿ ||

ದಿವ್ಯಲೋಕದ ಭಾವ ನೆಲಕಿಳಿಸಿ ತಂದಿತ್ತು
ಭವ್ಯರೊಳು ಸಲಿಗೆ ಸಲ್ಲಾಪಗಳಿಗಿಂಬಿತ್ತು ||

ವಚನದಲಿ ಹುದುಗಿರುವ ಪರುಷಮಣಿ ಬಲಗೊಂಡು
ಕಬ್ಬುನಕೆ ತಗಲಿ ಹೊನ್ನಾಗಿಸುವ ಪರಿಯೊಂದು ||

ನಿನ್ನ ವಚನವು ಹಾಲಹೊಳೆಯಾಗಿ ಹರಿದಿತ್ತು
ತೀರದಲಿ ಸಕ್ಕರೆಯ ಮಳಲಾಗಿ ಹರಹಿತ್ತು ||

ತವರಾಜದಂಥ ಕೆಸರಾಗಿತ್ತು ತಳದಲ್ಲಿ
ಸವಿದಿನಿಸು ರಸಿಕನಿಗೆ ಹರಿದೋಡಿ ಸವಿದಲ್ಲಿ ||

ಅನುಭಾವದೆಸಕಿನಲಿ ತುಂಬಿತ್ತು ಹೆಜ್ಜೇನು
ಹದವರಿತು ಸವಿಯೆ ಸಂಜೀವ ಸುಧೆ ಹೆಚ್ಚೇನು ||

ಮಾತುರೀತಿಗಳಲ್ಲಿ ಭಾವದಲಿ ಮಿಗಿಲಾಗಿ
ಶಾಶ್ವತದ ಸಾಹಿತ್ಯವೆನಿಸಿತ್ತು ಮುಗಿಲಾಗಿ

ಕಳೆದುಹೋದವು ಇಂದು ಎಂಟು ಶತಮಾನಗಳು
ಅಚ್ಚಳಿಯದುಳಿದಿಹವು ಮೈಗೊಂಡ ಹೊನ್ನುಗಳು ||

ಚಿಕ್ಕ ಮೂರುತಿಗಿಹುದು ಬಿತ್ತರದ ಘನಕೀರ್ತಿ
ಮಾತು ಮಾತಿಗು ಮಿಂಚಿ ಕಣ್ಕುಕ್ಕಿಸುವ ರೀತಿ ||

ಸಾಹಿತ್ಯ ಶಾರದೆಯ ಸಿರಿಮುಡಿಗೆ ಹೂವಾಗಿ
ಸತ್ತಿರುವರೆದೆ ಸೇರಿ ಕಳೆಯಿಡುವಕಾವಾಗಿ ||

ಅನುದಿನವು ಹೊಗರೇರಿ ಹೊಳೆಯುವದು ಈ ವಚನ
ಚಣಚಣವು ತಣಿಸುತಿದೆ ಅನುಭಾವದೀ ರಚನ ||

ವಚನ ಸುಂದರಿಯಲ್ಲ ಮನಸೆಳೆವ ನಲ್ಗೂಸು
ಎಂತು ಮುದ್ದಿಸಲದನು ಮನಕಾಗುವದು ಲೇಸು ||

ಸವಿದು ಮೆಲುಕಾಡಿಸಲು ಅರ್ಥ ಸ್ವಾರಸ್ಯವಿದೆ
ಎಣಿಸಿ ಯೋಚಿಸಿದಲ್ಲಿ ಬುದ್ಧಿ ವೈಶಾಲ್ಯವಿದೆ ||

ಕನ್ನಾಡ ಈ ಬೆಳೆಯು ಅಕ್ಷಯದ ಸಂಪತ್ತು
ಅಟ್ಟುಣ್ಣ ಬಲ್ಲವಗೆ ನೆತ್ತಿಗನ್ನವದಾಯ್ತು ||

ಯಾವ ಮನ್ವಂತರಕು ಈ ವಚನ ಕಲ್ಪತರು
ಕಳೆಯುವದು ಮಾನವನ ಬೆಕ್ಕಸದ ನಿಟ್ಟುಸಿರು ||
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...