Home / ಕವನ / ಕವಿತೆ / ಧಾರಾವಾಹಿ

ಧಾರಾವಾಹಿ

ರಕ್ಕಸರಿನ್ನೂ ಮುಗಿದಿಲ್ಲ
ರಕ್ಕಸರಿನ್ನೂ ಬರುತಿದ್ದಾರೆ
ಬರಲೇಬೇಕು
ರಕ್ಕಸರಿನ್ನೂ ಬರದಿದ್ದರೆ
ಮುಂದುವರಿಯುವುದು ಹೇಗೆ ?
ರಕ್ಕಸರಿರ್‍ತಾರೆ ಖಳನಾಯಕರಿರ್‍ತಾರೆ
ಚೌಕಿಯಲ್ಲಿ ವೇಷ ತೊಟ್ಟುಕೊಂಡು
ಮಲಗಿರ್‍ತಾರೆ ಇಲ್ಲವೆ ಚಕ್ಕಂದ
ಆಡಿಹಾಡಿರ್‍ತಾರೆ ಹಾಡಿಕೊಂಡಿರ್‍ತಾರೆ
ಸಮಯಕ್ಕೆ ಸರಿಯಾಗಿ ಎದ್ದು ಬರುತ್ತಾರೆ
ದುಷ್ಟ ವೇಷ ಪುಂಡು ವೇಷ ಪ್ರಚಂಡ ವೇಷ
ಬಣ್ಣದ ವೇಷ
ಹಾ ಎಂಥಾವೇಶ
ರಕ್ಕಸರೂ ಕೆಲ ಛದ್ಮವೇಷ
ಬಡ ಬಡ ಬ್ರಾಹ್ಮಣ ಕಳ್ಳ ಸನ್ಯಾಸಿ
ದಾರಿಹೋಕ ಇಲ್ಲವೆ ತೀರಾ ತಲೆಹೋಕ
ಹಾವಾಡಿಗ ವರ್‍ತಕ ಅಥವಾ
ಜನಸಾಮಾನ್ಯ
ವಂಚಿಸಿದ ನಂತರ ಅವರು ನಿಜ ವೇಷವ
ತೋರುವರು
ಅದೇನು ಅಕರಾಳ ವಿಕರಾಳ
ಏನು ರಾಳದ ಪುಡಿ ಎಡಬಲ ದೊಂದಿ
ಬಯಲ ಕೊನೆಯಿಂದ ಎದ್ದು ಬರುತಾರೆ
ಅದೇನಟ್ಟಹಾಸ ಅದೇನು ಹೂಂಕಾರ
ನಿದ್ದೆ ತೂಗುತ ಇದ್ದ ಜನ ಈಗ ಎಚ್ಚರ
ನೋಡಿದರಿದೋ ಎದುರಿಗೇ ಇದೆ ಒಂದು ಘೋರಾಕಾರ
ಜನ ತತ್ತರ
ಒಮ್ಮೆಲೆ ಹಾಹಾಕಾರ
ಏನಿದು ಉಪಟಳ ಏನಿದು ಹಿಂಸೆ
ಏನಿದು ಜನಾಂಗ ಹತ್ಯೆ
ಈಗುಳಿದುದು ಒಂದೇ
ದೇವರ ಪ್ರಾರ್‍ಥನೆ
ಅಯ್ಯ ಬಾರೋ ಅಪ್ಪ ಬಾರೋ
ಹೇಗಾದರೂ ನಮ್ಮ ಕಾಪಾಡೋ
ಅವನೂ ಬರುತಾನೆ ಶಂಖ ಊದಿ
ಬರದೇನು ಮಾಡ್ತಾನೆ ಧರ್‍ಮಗ್ಲಾನಿ
ನಿವಾರಿಸಬೇಕು ತಾನೆ
ಹತ್ತವತಾರಿ ಇದೆಷ್ಟನೆ ಬಾರಿ
ಬಾರಿ ಬಾರಿಗೂ ರಕ್ಕಸರ ತಲೆ ಹಾರಿಸಿ
ದುಷ್ಟನಿಗ್ರಹ ಶಿಷ್ಟ ಅನುಗ್ರಹ
ಎಷ್ಟಾದರು ಅವತಾರ
ಅದೂ ಮುಗಿಯದು ಲೋಕವೆ ಹಾಗೆ
ನಿರಂತರ ಧಾರಾವಾಹಿ
ಇತ್ತ ವಿದೂಷಕ ವಿಧವಿಧ ವೇಷ
ಧರಿಸಿ ಪ್ರವೇಶಿಸುತಾನೆ
ಮಧ್ಯಂತರದಲಿ
ಅಥವಾ ಕೆಲವು ಸಲ ಸಣ್ಣ ಪಾತ್ರದಲಿ
ಉದಾಹರಣೆಗೆ ದೂತ
ಅಥವಾ ಅಂಬಿಗ
ರಾಯರ ಕೆಲಸ ದೇವರ ಕೆಲಸ
ಹೈರಾಣಾದ ಪ್ರೇಕ್ಷಕರನ್ನ
ನಗಿಸೋದೂ ಅವನ ಕೆಲಸ
ಆದರೆ ನಗಿಸೋದು ಯಾರು
ಖುದ್ದು ಈ ವಿದೂಷಕನ
ಅವನೆಂದೂ ನಗಲೇಬಾರದು
ಹೆಂಡ್ತಿಗೆ ಕಾಯಿಲೆ ಮಕ್ಕಳು ದಡ್ಡರು
ಇವನಿಗೊ ನಿದ್ದೇನೆ ಇಲ್ಲದೆ
ನೆತ್ತಿಗೇರಿದೆ ಕಪಿತ್ಥ ಜಂಬೂ
ಓ ದೇವರೆ, ನಿನ್ನ ಲೀಲೆಯಲಿ
ಈ ಇವನಿಗೇನು ಬೆಲೆ
ಈ ನಮಗೇನು ನೆಲೆ
ಬರಿನೆಲದಲ್ಲಿ ಕೂತವರು ನಾವು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...