Home / ಕವನ / ಕವಿತೆ / ಕಾಸರಗೋಡು

ಕಾಸರಗೋಡು

ಎಷ್ಟೋ ನಾಡುಗಳಿವೆ ಎಷ್ಟೋ ಕಾಡುಗಳಿವೆ
ಕಾಸರಗೋಡು ಒಂದೇ
ಅದು ನಾ ಹುಟ್ಟಿ ಬೆಳೆದ ನಾಡು

ಕಾಶ್ಮೀರವಲ್ಲ ಕುಲು ಮನಾಲಿಯಲ್ಲ
ನೀಲಗಿರಿ ಊಟಿಯಲ್ಲ
ಆದರೂ ಅದಕಿರುವುದು
ಅದರದೇ ಆದ ಚಂದ

ಪಡುಗಡಲ ತಡಿಯ
ಒಂದು ತುಣುಕು
ಸುಂದರ ಚಂದ್ರಗಿರಿ ನದಿಪಕ್ಕ
ಚಂದ್ರಖಂಡದಂತದರ ಸೊಬಗು

ಭೋರ್‍ಗರೆವ ಸಮುದ್ರ ಪಡುವಲಲಿ
ಆಕಾಶಚುಂಬಿ ಸಹ್ಯಾದ್ರಿ ಬೆಟ್ಟ ಮೂಡಲಲಿ
ಮಧ್ಯೆ ಹಾಸಿ ಮಲಗಿದೆ ನಮ್ಮ
ಪ್ರೀತಿಯ ಕಾಸರಗೋಡು

ಕನ್ನಡ ತುಳು ಮಲೆಯಾಳ
ಕೊಂಕಣಿ ಮರಾಠಿ ಉರ್‍ದು
ಹಲವು ಹಕ್ಕಿಗಳ ಕಲರವದಂತೆ
ಅದೆ ಒಂದು ಕೇಳ್ವ ಸೊಗಸು

ದೇವಾಲಯ ಇಗರ್‍ಜಿ ಮಸೀದಿ
ಅಲ್ಲಲ್ಲಿ ಜಾತ್ರೆ ತೇರು ಬೆಡಿ ಸಂತೆ ಭೂತಕೋಲ
ಚೆಂಡೆ ಮದ್ದಳೆ ಯಕ್ಷಗಾನ ಬಯಲಾಟ
ಲೋಕದೊಳಗೆ ಇದೊಂದು ಲೋಕ

ಮಾವು ಇಮ್ಮಾವು ಹಲಸು
ತೇಗ ಬೀಟೆ ಶ್ರೀಗಂಧ
ಗೇರು ಬೀಜ ಕಾಳು ಮೆಣಸು
ಹುಲಿ ಹಂದಿ ಕಾಡು ಗೆಣಸು

ಕಂಗು ತಂಗು ಬಾಳೆ ಹಸಿರು
ಭತ್ತ ಕಬ್ಬು ಗದ್ದೆ ಬಯಲು
ಬೆಟ್ಟ ಕಣಿವೆ ಹಳ್ಳಕೊಳ್ಳಗಳ
ನೋಟ ಸಾಲುಸಾಲು

ಅದು ನೋಡು ಬೆರ್‍ಚಪ್ಪ
ಇದು ನೋಡು ಬೈಪಣೆ
ಇದು ತೊಂಡೆ ಚಪ್ಪರ ಬೆಂಡೆ ಬದನೆ ಸಾಲು
ಅಲಸಂಡೆ ಕುಂಬಳ ಸಿಹಿಗುಂಬಳ
ಸೊರಕಾಯಿ ಸೌತೆ
ಅಲ್ಲಲ್ಲಿ ಸಿಹಿನೀರ ಒರತೆ
ಇನ್ನೇನು ಯಾವುದಕೆ ಕೊರತೆ

ನೋಡುನೋಡು ಪನ್ನೀರು
ನೋಡು ಮಲ್ಲಿಗೆ ಸೇವಂತಿಗೆ
ನೋಡು ಎರವಂತಿಗೆ ನಿತ್ಯಪುಷ್ಪ
ನೋಡು ಕೇದಿಗೆ ರತ್ನಕಂಟಿಕೆ ಇದು ತುಲಸಿ
ನೋಡಿದೋ ತುಂಬಿ ಜೇನ್ನೊಣ ಜೇನು
ತೊಡವೆ ಮಂಜೆಟ್ಟಿ ಕೋಲುಜೇನು ಹೆಜ್ಜೇನು
ಇದೊ ಕಾಗೆ ಕೋಗಿಲೆ ಗಿಳಿ ಗುಬ್ಬಿ ಬಜಕರೆ ಹಕ್ಕಿ
ಇದಿಗೊ ಮನೆಬಾಗಿಲಿಗೆ ಸಿಹಿನೀರ ತರುವ ಅಬ್ಬಿ

ಕುಂಬಳೆ ಮಂಜೇಶ್ವರ ಮಂಗಲ್ಪಾಡಿ
ಕಾರಡ್ಕ ಬದಿಯಡ್ಕ ಬೋವಿಕಾನ
ಪೆರ್‍ಲ ಮುಳ್ಳರ್‍ಯ ಸುಳ್ಯ ಮಧೂರು
ಸೂರಂಬೈಲು
ಏನೆಂಥ ಹೆಸರುಗಳ ಊರು

ಓ ಆತ ಪಕೀರ ಈತ ಕೊರಗ ತುಕ್ರ ತನಿಯ
ಅವ ಮಾಲಿಂಗು ಈಕೆ ಕೊರಪಾಳು
ಇನ್ನಿವಳು ಬೆಳಚ್ಚಿ
ನನ್ನನೆತ್ತಿದವರು ಸೊಂಟದಲಿ ಹೆಗಲಲ್ಲಿ
ನೆತ್ತಿಯಲಿ
ನನ್ನನಾಡಿಸಿದವರು ಪ್ರೀತಿ ನೀಡಿದವರು
ಮಾತು ಕಲಿಸಿದವರು
ಈಗೆಲ್ಲಿ ಅವರು ಓ ಈಗೆಲ್ಲಿ ಅವರು

ಪಂಪನಿಗೆ ಬನವಾಸಿ ನಾನೊ ಅನಿವಾಸಿ
ಪಂಪನಂತೆಯೆ ನಾನು ವ್ಯಸನಿ
ಆರಂಕುಶಮಿಟ್ಟೊಡಂ
ನೆನೆವುದೆನ್ನ ಮನ ನನ್ನ ಹುಟ್ಟೂರ

ತೆಂಕಣಗಾಳಿಯಲಂಪು
ನಮ್ಮವರ ಮಾತಿನಿಂಪು
ನೆನಪುಗಳು ಕರೆಯುವುವು
ಮೇಘಗಳಂತೆ ಮಳೆಯಂತೆ
ದಿನದಿನವು ವರ್‍ಷಧಾರೆ

ಹರ್‍ಷವನಲಾರೆ ದುಃಖವನಲಾರೆ
ಹೆಸರಿಲ್ಲದೊಂದು ಭಾವ
ನನ್ನ ಮನಃ ಪಟಲದಲಿ ತುಂಬಿದೆ ಸದಾ
ನನ್ನೆಚ್ಚರದಂತೆ ನನ್ನ ಮನಃ ಸಾಕ್ಷಿಯಂತೆ

ಅದು ಮಿಡಿವ ತನಕ
ನನಗೆ ಭಯವಿಲ್ಲ
ಬೇಸರವಿಲ್ಲ
ಸ್ವರ್‍ಗವೋ ನರಕವೋ
ಆವೂರೊ ಈವೂರೊ
ಅದು ಮಿಡಿವ ತನಕ
ನಾನತೀತ ಎಂದೆಂದಿಗೂ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...