Home / ಕವನ / ಕವಿತೆ / ಕಾಸರಗೋಡು

ಕಾಸರಗೋಡು

ಎಷ್ಟೋ ನಾಡುಗಳಿವೆ ಎಷ್ಟೋ ಕಾಡುಗಳಿವೆ
ಕಾಸರಗೋಡು ಒಂದೇ
ಅದು ನಾ ಹುಟ್ಟಿ ಬೆಳೆದ ನಾಡು

ಕಾಶ್ಮೀರವಲ್ಲ ಕುಲು ಮನಾಲಿಯಲ್ಲ
ನೀಲಗಿರಿ ಊಟಿಯಲ್ಲ
ಆದರೂ ಅದಕಿರುವುದು
ಅದರದೇ ಆದ ಚಂದ

ಪಡುಗಡಲ ತಡಿಯ
ಒಂದು ತುಣುಕು
ಸುಂದರ ಚಂದ್ರಗಿರಿ ನದಿಪಕ್ಕ
ಚಂದ್ರಖಂಡದಂತದರ ಸೊಬಗು

ಭೋರ್‍ಗರೆವ ಸಮುದ್ರ ಪಡುವಲಲಿ
ಆಕಾಶಚುಂಬಿ ಸಹ್ಯಾದ್ರಿ ಬೆಟ್ಟ ಮೂಡಲಲಿ
ಮಧ್ಯೆ ಹಾಸಿ ಮಲಗಿದೆ ನಮ್ಮ
ಪ್ರೀತಿಯ ಕಾಸರಗೋಡು

ಕನ್ನಡ ತುಳು ಮಲೆಯಾಳ
ಕೊಂಕಣಿ ಮರಾಠಿ ಉರ್‍ದು
ಹಲವು ಹಕ್ಕಿಗಳ ಕಲರವದಂತೆ
ಅದೆ ಒಂದು ಕೇಳ್ವ ಸೊಗಸು

ದೇವಾಲಯ ಇಗರ್‍ಜಿ ಮಸೀದಿ
ಅಲ್ಲಲ್ಲಿ ಜಾತ್ರೆ ತೇರು ಬೆಡಿ ಸಂತೆ ಭೂತಕೋಲ
ಚೆಂಡೆ ಮದ್ದಳೆ ಯಕ್ಷಗಾನ ಬಯಲಾಟ
ಲೋಕದೊಳಗೆ ಇದೊಂದು ಲೋಕ

ಮಾವು ಇಮ್ಮಾವು ಹಲಸು
ತೇಗ ಬೀಟೆ ಶ್ರೀಗಂಧ
ಗೇರು ಬೀಜ ಕಾಳು ಮೆಣಸು
ಹುಲಿ ಹಂದಿ ಕಾಡು ಗೆಣಸು

ಕಂಗು ತಂಗು ಬಾಳೆ ಹಸಿರು
ಭತ್ತ ಕಬ್ಬು ಗದ್ದೆ ಬಯಲು
ಬೆಟ್ಟ ಕಣಿವೆ ಹಳ್ಳಕೊಳ್ಳಗಳ
ನೋಟ ಸಾಲುಸಾಲು

ಅದು ನೋಡು ಬೆರ್‍ಚಪ್ಪ
ಇದು ನೋಡು ಬೈಪಣೆ
ಇದು ತೊಂಡೆ ಚಪ್ಪರ ಬೆಂಡೆ ಬದನೆ ಸಾಲು
ಅಲಸಂಡೆ ಕುಂಬಳ ಸಿಹಿಗುಂಬಳ
ಸೊರಕಾಯಿ ಸೌತೆ
ಅಲ್ಲಲ್ಲಿ ಸಿಹಿನೀರ ಒರತೆ
ಇನ್ನೇನು ಯಾವುದಕೆ ಕೊರತೆ

ನೋಡುನೋಡು ಪನ್ನೀರು
ನೋಡು ಮಲ್ಲಿಗೆ ಸೇವಂತಿಗೆ
ನೋಡು ಎರವಂತಿಗೆ ನಿತ್ಯಪುಷ್ಪ
ನೋಡು ಕೇದಿಗೆ ರತ್ನಕಂಟಿಕೆ ಇದು ತುಲಸಿ
ನೋಡಿದೋ ತುಂಬಿ ಜೇನ್ನೊಣ ಜೇನು
ತೊಡವೆ ಮಂಜೆಟ್ಟಿ ಕೋಲುಜೇನು ಹೆಜ್ಜೇನು
ಇದೊ ಕಾಗೆ ಕೋಗಿಲೆ ಗಿಳಿ ಗುಬ್ಬಿ ಬಜಕರೆ ಹಕ್ಕಿ
ಇದಿಗೊ ಮನೆಬಾಗಿಲಿಗೆ ಸಿಹಿನೀರ ತರುವ ಅಬ್ಬಿ

ಕುಂಬಳೆ ಮಂಜೇಶ್ವರ ಮಂಗಲ್ಪಾಡಿ
ಕಾರಡ್ಕ ಬದಿಯಡ್ಕ ಬೋವಿಕಾನ
ಪೆರ್‍ಲ ಮುಳ್ಳರ್‍ಯ ಸುಳ್ಯ ಮಧೂರು
ಸೂರಂಬೈಲು
ಏನೆಂಥ ಹೆಸರುಗಳ ಊರು

ಓ ಆತ ಪಕೀರ ಈತ ಕೊರಗ ತುಕ್ರ ತನಿಯ
ಅವ ಮಾಲಿಂಗು ಈಕೆ ಕೊರಪಾಳು
ಇನ್ನಿವಳು ಬೆಳಚ್ಚಿ
ನನ್ನನೆತ್ತಿದವರು ಸೊಂಟದಲಿ ಹೆಗಲಲ್ಲಿ
ನೆತ್ತಿಯಲಿ
ನನ್ನನಾಡಿಸಿದವರು ಪ್ರೀತಿ ನೀಡಿದವರು
ಮಾತು ಕಲಿಸಿದವರು
ಈಗೆಲ್ಲಿ ಅವರು ಓ ಈಗೆಲ್ಲಿ ಅವರು

ಪಂಪನಿಗೆ ಬನವಾಸಿ ನಾನೊ ಅನಿವಾಸಿ
ಪಂಪನಂತೆಯೆ ನಾನು ವ್ಯಸನಿ
ಆರಂಕುಶಮಿಟ್ಟೊಡಂ
ನೆನೆವುದೆನ್ನ ಮನ ನನ್ನ ಹುಟ್ಟೂರ

ತೆಂಕಣಗಾಳಿಯಲಂಪು
ನಮ್ಮವರ ಮಾತಿನಿಂಪು
ನೆನಪುಗಳು ಕರೆಯುವುವು
ಮೇಘಗಳಂತೆ ಮಳೆಯಂತೆ
ದಿನದಿನವು ವರ್‍ಷಧಾರೆ

ಹರ್‍ಷವನಲಾರೆ ದುಃಖವನಲಾರೆ
ಹೆಸರಿಲ್ಲದೊಂದು ಭಾವ
ನನ್ನ ಮನಃ ಪಟಲದಲಿ ತುಂಬಿದೆ ಸದಾ
ನನ್ನೆಚ್ಚರದಂತೆ ನನ್ನ ಮನಃ ಸಾಕ್ಷಿಯಂತೆ

ಅದು ಮಿಡಿವ ತನಕ
ನನಗೆ ಭಯವಿಲ್ಲ
ಬೇಸರವಿಲ್ಲ
ಸ್ವರ್‍ಗವೋ ನರಕವೋ
ಆವೂರೊ ಈವೂರೊ
ಅದು ಮಿಡಿವ ತನಕ
ನಾನತೀತ ಎಂದೆಂದಿಗೂ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...