Home / ಬಾಲ ಚಿಲುಮೆ / ಕವಿತೆ / ವಿದ್ಯೆ ಕಲಿತ ರಕ್ಕಸ

ವಿದ್ಯೆ ಕಲಿತ ರಕ್ಕಸ

ಹಿತ್ತಲಿಂದ ಬರುತಲೊಮ್ಮೆ
ಬೆಚ್ಚಿ ಬಿದ್ದೆನು
ದೂರದಲ್ಲಿ ಕಪ್ಪು ಕಪ್ಪು
ಏನೋ ಕಂಡೆನು

ತಲೆಯ ಮೇಲೆ ಕೋಡು
ಕೋರೆಗಳಿವೆ ಜೋಡು
ವಿಕಾರವಾದ ಮುಖ
ಉದ್ದುದ್ದನೆಯ ನಖ

ಮಾರಿಗೊಂದು ಹೆಜ್ಜೆ
ತಿನುವ ಮಾಂಸ ಮಜ್ಜೆ
ಝಲ್ಲೆಂದಿತು ಎದೆಯು
ಬಿರಿಯ ಬಾರ್ದೆ ಭುವಿಯು

ಆನೆಗಿಂತ ಎತ್ರ
ಅವನ ಆ ಗಾತ್ರ
ನಡುಗುತ್ತಲೆ ನಿಲುವುದ್ಹೇಗೆ
ಅಯ್ಯೋ ಬಂದ ಹತ್ರ

ಇವನೆ ಇವನೆ ರಕ್ಕಸ
ಏರಿಳಿಯಿತು ಪುಪ್ಪಸ
ರಾಮ, ಭೀಮ, ಹನುಮರೆಲ್ಲ
ಕೊಂದ ರಕ್ಕಸ

ಓಡಲೆಂದು ನೋಡಿದೆ
ಕಾಲು ಮರವೆ ಆಗಿದೆ
ಕೂಗಲೆಂದು ಬಾಯಿತೆರೆದೆ
ಅದೂ ಹೊಲೆದು ಕೊಂಡಿದೆ

ಗಣಪನನ್ನು ನೆನೆದೆ
ಮೇಷ್ಟ್ರರನ್ನು ಕರೆದೆ
ಬರಲಿಲ್ಲ ಯಾರು ಪಾಲಿಗೆ
ಮಗನಿಲ್ಲ ನನ್ನತಾಯಿಗೆ

ದಡಬಡನೆ ಬಂದೆಬಿಟ್ಟ
ಮುಷ್ಟಿಯಲ್ಲಿ ಎತ್ತಿಬಿಟ್ಟ
ಮುದ್ದು ಮರಿಯೆ ಎಂದ
ಕೊಟ್ಟ ಮುತ್ತನೊಂದ

ಹೆದರಬೇಡ ನಡುಗಬೇಡ
ಕೇಳೋ ಇಲ್ಲಿ ಪೋರ
ತಿನ್ನೋದಿಲ್ಲ ನಿನ್ನ ನಾನು
ಗೆಳೆಯ ನೀನು ಬಾರ

ಗೆಳೆಯನಲ್ಲ ನೀನು
ಹೆದರಿಹೆನು ನಾನು
ನೀನು ನರ ಭಕ್ಷಕ
ನಾನು ಶಾಲಾ ಬಾಲಕ

ನಾನು ಶಾಲೆಗೆ ಬರುವೆ
ನಿನ್ನ ಜೊತೆಗೆ ಆಡುವೆ
ಬಿಸಿಊಟವನ್ನೆ ಮಾಡುವೆ
ಆಪ್ ಎಂದು ತೇಗುವೆ

ಬೇಡ, ಬೇಡ ರಕ್ಕಸ
ನನ್ನ ಕಾಡಬೇಡ
ನೀನು ಜೊತೆಗೆ ಬಂದರೆ
ನನಗೆ ಭಾರಿ ತೊಂದರೆ

ತಂಟೆ ಮಾಡೆನು
ಮಾಂಸ ಮಜ್ಜೆ ಕೇಳೆನು
ಗೆಳೆಯನಲ್ವೆ ನೀನು
ಪಪ್ಪಿ ಕೊಡುವೆ ನಾನು

ಶಾಲೆಗೆ ಬಂದ್ರೆ ನೀನು
ಪಾಠಕಲಿಯ ಬೇಕು
ಹೋಂವರ್ಕ ಮಾಡಬೇಕು
ಅಲ್ಲಿ ಏಟು ತಿನ್ನಬೇಕು

ಪಾಠ ಗೀಟ ಓದುವೆ
ಮಗ್ಗಿ ಹಾಡು ಹೇಳುವೆ
ಏಟು ಕೊಡಲು ಮೇಷ್ಟ್ರು ಬಂದ್ರೆ
ಅವರನ್ನೆ ಮಾಯ ಮಾಡುವೆ

ನರ-ರಾಕ್ಷಸ ಒಂದಾದರು
ಸಂತಸದೀ ಕುಣಿದರು
ಶಾಲೆ ಕಡೆಗೆ ನಡೆದರು
ಗೇಟು ತೆರೆದು ಬಿಟ್ಟರು

ರಕ್ಕಸನ ಕಂಡರು
ಮಕ್ಕಳು ಬೆರಗಾದರು
ಚಿಳ್ಳೆ ಪಿಳ್ಳೆ ಎಲ್ಲರೂ
ಚೆಡ್ಡಿ ತೋಯಿಸಿಕೊಂಡರು

ಹೆದರಬೇಡಿ ಮಕ್ಕಳೆ
ಮುದ್ದು ಮುದ್ದು ಹೂಗಳೆ
ನಾನು ನಿಮ್ಮ ತಿನ್ನೆನು
ಆಗುವೆ ನಿಮ್ಮ ಗೆಳೆಯನು

ಮಕ್ಕಳೆಲ್ಲ ನಕ್ಕರು
ಹತ್ತಿರಕ್ಕೆ ಬಂದರು
ಕೈಯ ಹಿಡಿದು ಎಳೆದರು
ಭಾರಿ ಖಷಿಯಪಟ್ಟರು

ಮಾಸ್ತರ್ ಮಾತು ಮರೆತರು
ಶಿಕ್ಷಕಿ ಶಿಲೆಯಾದರು
ಕನಸೆ ಇರಬೇಕೆಂದುಕೊಂಡು
ಕೈಯ ಚಿವುಟಿಕೊಂಡರು

ಪುರದ ಜನರು ನೆರೆದರು
ಬಡಿಗೆ ಹಿಡಿದು ಬಂದರು
ರಕ್ಕಸನ ಕಂಡ ಅವರು
ಅವಾಕ್ಕಾಗಿ ನಿಂತರು

ಕೇಳಿ ಪುರದ ಜನಗಳೇ
ಇಲ್ಲ ನನ್ನಿಂದ ತೊಂದರೆ
ಬೇರೆ ಏನು ಬಯಸೆನು
ವಿದ್ಯೆ ಕಲಿಯ ಬಂದೆನು

ಬಡಿಯ ಬೇಡಿ ನನ್ನ
ತಿನ್ನುವುದಿಲ್ಲ ನಿಮ್ಮ
ವಿದ್ಯೆ ಕಲಿಸಿ ನನಗೆ
ನಾನು ಶರಣು ನಿಮಗೆ

ಟೀಚರ್ ಒಪ್ಪಿಬಿಟ್ಟರು
ಶಾಲೆಯೊಳಗೆ ಕರೆದರು
ಸ್ಟೇಟು ಬಳಪ ಕೊಟ್ಟರು
ಅಕ್ಷರ ಕಲಿಸಿ ಬಿಟ್ಟರು

ವಿದ್ಯೆ ಕಲಿತ ರಕ್ಕಸ
ವಿರೂಪ ಕಳಚಿ ಬಿಟ್ಟನು
ಕೋರೆ, ದಾಡೆ, ಕೋಡು ಎಲ್ಲ
ಮಾಯವಾಗಿ ಬಿಟ್ಟವು.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...