Home / ಬಾಲ ಚಿಲುಮೆ / ಕವಿತೆ / ವಿದ್ಯೆ ಕಲಿತ ರಕ್ಕಸ

ವಿದ್ಯೆ ಕಲಿತ ರಕ್ಕಸ

ಹಿತ್ತಲಿಂದ ಬರುತಲೊಮ್ಮೆ
ಬೆಚ್ಚಿ ಬಿದ್ದೆನು
ದೂರದಲ್ಲಿ ಕಪ್ಪು ಕಪ್ಪು
ಏನೋ ಕಂಡೆನು

ತಲೆಯ ಮೇಲೆ ಕೋಡು
ಕೋರೆಗಳಿವೆ ಜೋಡು
ವಿಕಾರವಾದ ಮುಖ
ಉದ್ದುದ್ದನೆಯ ನಖ

ಮಾರಿಗೊಂದು ಹೆಜ್ಜೆ
ತಿನುವ ಮಾಂಸ ಮಜ್ಜೆ
ಝಲ್ಲೆಂದಿತು ಎದೆಯು
ಬಿರಿಯ ಬಾರ್ದೆ ಭುವಿಯು

ಆನೆಗಿಂತ ಎತ್ರ
ಅವನ ಆ ಗಾತ್ರ
ನಡುಗುತ್ತಲೆ ನಿಲುವುದ್ಹೇಗೆ
ಅಯ್ಯೋ ಬಂದ ಹತ್ರ

ಇವನೆ ಇವನೆ ರಕ್ಕಸ
ಏರಿಳಿಯಿತು ಪುಪ್ಪಸ
ರಾಮ, ಭೀಮ, ಹನುಮರೆಲ್ಲ
ಕೊಂದ ರಕ್ಕಸ

ಓಡಲೆಂದು ನೋಡಿದೆ
ಕಾಲು ಮರವೆ ಆಗಿದೆ
ಕೂಗಲೆಂದು ಬಾಯಿತೆರೆದೆ
ಅದೂ ಹೊಲೆದು ಕೊಂಡಿದೆ

ಗಣಪನನ್ನು ನೆನೆದೆ
ಮೇಷ್ಟ್ರರನ್ನು ಕರೆದೆ
ಬರಲಿಲ್ಲ ಯಾರು ಪಾಲಿಗೆ
ಮಗನಿಲ್ಲ ನನ್ನತಾಯಿಗೆ

ದಡಬಡನೆ ಬಂದೆಬಿಟ್ಟ
ಮುಷ್ಟಿಯಲ್ಲಿ ಎತ್ತಿಬಿಟ್ಟ
ಮುದ್ದು ಮರಿಯೆ ಎಂದ
ಕೊಟ್ಟ ಮುತ್ತನೊಂದ

ಹೆದರಬೇಡ ನಡುಗಬೇಡ
ಕೇಳೋ ಇಲ್ಲಿ ಪೋರ
ತಿನ್ನೋದಿಲ್ಲ ನಿನ್ನ ನಾನು
ಗೆಳೆಯ ನೀನು ಬಾರ

ಗೆಳೆಯನಲ್ಲ ನೀನು
ಹೆದರಿಹೆನು ನಾನು
ನೀನು ನರ ಭಕ್ಷಕ
ನಾನು ಶಾಲಾ ಬಾಲಕ

ನಾನು ಶಾಲೆಗೆ ಬರುವೆ
ನಿನ್ನ ಜೊತೆಗೆ ಆಡುವೆ
ಬಿಸಿಊಟವನ್ನೆ ಮಾಡುವೆ
ಆಪ್ ಎಂದು ತೇಗುವೆ

ಬೇಡ, ಬೇಡ ರಕ್ಕಸ
ನನ್ನ ಕಾಡಬೇಡ
ನೀನು ಜೊತೆಗೆ ಬಂದರೆ
ನನಗೆ ಭಾರಿ ತೊಂದರೆ

ತಂಟೆ ಮಾಡೆನು
ಮಾಂಸ ಮಜ್ಜೆ ಕೇಳೆನು
ಗೆಳೆಯನಲ್ವೆ ನೀನು
ಪಪ್ಪಿ ಕೊಡುವೆ ನಾನು

ಶಾಲೆಗೆ ಬಂದ್ರೆ ನೀನು
ಪಾಠಕಲಿಯ ಬೇಕು
ಹೋಂವರ್ಕ ಮಾಡಬೇಕು
ಅಲ್ಲಿ ಏಟು ತಿನ್ನಬೇಕು

ಪಾಠ ಗೀಟ ಓದುವೆ
ಮಗ್ಗಿ ಹಾಡು ಹೇಳುವೆ
ಏಟು ಕೊಡಲು ಮೇಷ್ಟ್ರು ಬಂದ್ರೆ
ಅವರನ್ನೆ ಮಾಯ ಮಾಡುವೆ

ನರ-ರಾಕ್ಷಸ ಒಂದಾದರು
ಸಂತಸದೀ ಕುಣಿದರು
ಶಾಲೆ ಕಡೆಗೆ ನಡೆದರು
ಗೇಟು ತೆರೆದು ಬಿಟ್ಟರು

ರಕ್ಕಸನ ಕಂಡರು
ಮಕ್ಕಳು ಬೆರಗಾದರು
ಚಿಳ್ಳೆ ಪಿಳ್ಳೆ ಎಲ್ಲರೂ
ಚೆಡ್ಡಿ ತೋಯಿಸಿಕೊಂಡರು

ಹೆದರಬೇಡಿ ಮಕ್ಕಳೆ
ಮುದ್ದು ಮುದ್ದು ಹೂಗಳೆ
ನಾನು ನಿಮ್ಮ ತಿನ್ನೆನು
ಆಗುವೆ ನಿಮ್ಮ ಗೆಳೆಯನು

ಮಕ್ಕಳೆಲ್ಲ ನಕ್ಕರು
ಹತ್ತಿರಕ್ಕೆ ಬಂದರು
ಕೈಯ ಹಿಡಿದು ಎಳೆದರು
ಭಾರಿ ಖಷಿಯಪಟ್ಟರು

ಮಾಸ್ತರ್ ಮಾತು ಮರೆತರು
ಶಿಕ್ಷಕಿ ಶಿಲೆಯಾದರು
ಕನಸೆ ಇರಬೇಕೆಂದುಕೊಂಡು
ಕೈಯ ಚಿವುಟಿಕೊಂಡರು

ಪುರದ ಜನರು ನೆರೆದರು
ಬಡಿಗೆ ಹಿಡಿದು ಬಂದರು
ರಕ್ಕಸನ ಕಂಡ ಅವರು
ಅವಾಕ್ಕಾಗಿ ನಿಂತರು

ಕೇಳಿ ಪುರದ ಜನಗಳೇ
ಇಲ್ಲ ನನ್ನಿಂದ ತೊಂದರೆ
ಬೇರೆ ಏನು ಬಯಸೆನು
ವಿದ್ಯೆ ಕಲಿಯ ಬಂದೆನು

ಬಡಿಯ ಬೇಡಿ ನನ್ನ
ತಿನ್ನುವುದಿಲ್ಲ ನಿಮ್ಮ
ವಿದ್ಯೆ ಕಲಿಸಿ ನನಗೆ
ನಾನು ಶರಣು ನಿಮಗೆ

ಟೀಚರ್ ಒಪ್ಪಿಬಿಟ್ಟರು
ಶಾಲೆಯೊಳಗೆ ಕರೆದರು
ಸ್ಟೇಟು ಬಳಪ ಕೊಟ್ಟರು
ಅಕ್ಷರ ಕಲಿಸಿ ಬಿಟ್ಟರು

ವಿದ್ಯೆ ಕಲಿತ ರಕ್ಕಸ
ವಿರೂಪ ಕಳಚಿ ಬಿಟ್ಟನು
ಕೋರೆ, ದಾಡೆ, ಕೋಡು ಎಲ್ಲ
ಮಾಯವಾಗಿ ಬಿಟ್ಟವು.
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...