ಒಮ್ಮೆ ಗುರುಗಳು ತಮ್ಮ ಶಿಷ್ಯರನ್ನು ಕರೆದು “ಈ ದೇವಾಲಯದ ಸುತ್ತಾ ಗೋಡೆ ಕೆಡವಿರಿ” ಎಂದರು. ಶಿಷ್ಯರು ಗುರುವಿನ ಆಜ್ಞೆ ಮೀರಲಾರದೆ ಗೋಡೆ ಕೆಡವಿದರು.
ನಂತರ ಗುರುಗಳು “ಈಗ ಅತಿ ಮುಖ್ಯ ಕಾರ್ಯ ಮಾಡಬೇಕು.”
“ದೇವಾಲಯವನ್ನೇ ಕೆಡವಿ” ಎಂದಾಗ ಶಿಷ್ಯರು ಕಕ್ಕಾವಿಕ್ಕಿಯಾದರು.
“ಇದೇನು, ಗುರುಗಳ ಅಣತಿ? ಪಾಲಿಸಲು ಕಷ್ಟ, ಬಿಡಲು ಕಷ್ಟ” ಎಂದು ತಲ್ಲಣಿಸಿದರು.
ಕೊನೆಗೆ ದೇವಾಲಯವೂ ನೆಲಸಮವಾಯಿತು.
“ಅಹಾ! ಎಷ್ಟು! ಸುಂದರ ದೇವಾಲಯ” ಎಂದರು ಗುರುಗಳು.
“ಎಲ್ಲಿ? ಗುರುಗಳೇ?” ಎಂದರು ಶಿಷ್ಯರು.
“ಏಕೆ ಕಾಣುವುದಿಲ್ಲವೇ?” ಎಂದರು ಗುರುಗಳು.
“ನಮ್ಮ ಮುಂದಿದ್ದ ಸ್ಥೂಲ ದೇವಾಲಯ ಬಿದ್ದಾಗ ನಮ್ಮ ಮನದಲ್ಲಿ ಸೂಕ್ಷ್ಮದ ದೇವಾಲಯದ ದ್ವಾರ ತೆರೆದುಕೊಳ್ಳಬೇಕು. ಮನವೇ ಮಂದಿರವಲ್ಲವೇ” ಎಂದರು ಗುರುಗಳು. ಅವರ ಮಾತು ಶಿಷ್ಯರ ಕಣ್ಣು ತೆರೆಯಿತು.
*****