Home / ಕವನ / ಕವಿತೆ / ಹಾಡು ಹಕ್ಕಿ

ಹಾಡು ಹಕ್ಕಿ

ನನ್ನ ಹಾಡು ಹಕ್ಕಿಯಾಗಿ ಹಾರಿ ಹೋಗಲೀ
ನನ್ನ ಹಾಡು ಗೂಡು ಗೂಡು ಸಾಗಿ ಹೋಗಲೀ ||ಪ||

ಮಹಡಿ ಮನೆಯ ಪಂಜರದಲಿ ಸಿಕ್ಕಿ ಹಿಕ್ಕಿ ಹಾಕಧಾಂಗೆ
ಪಟ್ಟಣಗಳ ಬೆಂಕಿ ಪೊಟ್ಟಣಗಳ ಕಡ್ಡಿ ಆಗಧಾಂಗೆ
ಬೊಜ್ಜುಗಳ ಮುಖದ ಮೀಸೆ ಮೇಲೆ ಕುಳಿತು ಕಿಸಿಯಧಾಂಗೆ
ಕಲಿತ ಮಾತ ಮಾರಿಕೋಂತ ಬೀದಿಗಿಳಿಯು ಆಗಧಾಂಗೆ ||೧||

ನೋಟುಗಳನು ಚುಂಚದಿಂದ ಗುಟ್ಟಾಗಿ ಎಣಿಸಧಾಂಗೆ
ವಾರ ನಾರಿಹಂಗೆ ವಾರೆ ನೋಟ ಮೋಡಿ ಮಾಡಧಾಂಗೆ
ಅಂಗಿ ಸಂದುಗಳಲಿ ತೂರಿ ಮಂಗನಾಟ ಆಡಧಾಂಗೆ
ಅಲ್ಲಿ ಇಲ್ಲಿ ಬೆಲ್ಲ ಮಾಡಿ ಬೇಳೆ ಬೇಯ್ಸಿಕೊಳ್ಳಧಾಂಗೆ ||೨||

ಬೂಟುಗಾಲು ನೆಕ್ಕಧಾಂಗೆ ತುಳಿಯೋ ಕಾಲ್ಗೆ ಸಿಕ್ಕಧಾಂಗೆ
ತಾಟಗಿತ್ರಿ ತಂತ್ರದಿಂದ ತೂತು ತೂತು ತೂರಧಾಂಗೆ
ಪೇಟೆ ಬಸವಿಹಂಗೆ ಹಣದ ವಿಟನಿಗಾಗಿ ಕಾಯಧಾಂಗೆ
ಮೇಲೆ ಮೇಲೆ ಹಾರಿಕೋಂತ ಮುಗಿಲು ಚಿಕ್ಕಿ ಆಗಧಾಂಗೆ
ಕೆಳಗೆ ಕೆಳಗೆ ಕುಪ್ಪಳಿಸುತ ನೆಲಗುಮ್ಮ ನಾಗಧಾಂಗೆ ||೩||

ಹರಕು ಮುರುಕು ಗುಡಿಸಲಲ್ಲಿ ಬರಿಯ ಎಲುಬು ಗೂಡುಗಳಲಿ
ಬದುಕುಬಲದ ಭಾವಗೀತೆ ಸೆಲೆಯ ಚಿಮ್ಮಿ ಹೊಮ್ಮಿಸಲಿ
ಸಾವು ನೋವು ನರಳುಗಳಿಗೆ ಉಪಶಮನದ ಗಾಳಿಯಾಗಿ
ಬತ್ತಿದ ಕಣ್ಣಿನ ಕುಳಿಗಳ ಬೆಳಕ ಬಲ್ಬು ಹೊತ್ತಿಸಲಿ ||೪||

ಬರಗಾಲದ ಬಿರುಕುಗಳಲಿ ಛಲದ ಜಲವನುಕ್ಕಿಸಲಿ
ಮಾತು ಕೋತಿ ಕುಣಿಸಧಾಂಗೆ ಮೌನರಾಗ ಮೀಟಲಿ
ಸತ್ತನರರ ನರಕೆ ದಿಟ್ಟ ಸತ್ವದೆಳೆಯ ಕಸಿ ಮಾಡಲಿ ||೫||

ಹರಿವಿಯೊಳಗೆ ಕೊಳೆತ ನೀರ ಶುದ್ದಿ ಮಾಡೋ ತಿಳಿವಾಗಲಿ
ಮಣ್ಣ ಮರ್ಮವರಿತು ಮಣ್ಣ ಬಣ್ಣದೊಳಗೆ ಮುಳಿಗೇಳಲಿ
ತಾನೆ ತಾನೆ ತನನವಾಗಿ ಬದುಕಗೂಡ ಮುದವಾಗಲಿ ||೬||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...