ಅಮರ

ಇದು ಹರಿವ ನೀರು
ಮೂಗು ಹಿಡಿದು ಮೂರು ಮುಳುಗು ಗಂಗಾಸ್ನಾನ
ತಿರುಪತಿ ಬ್ರ್ಯಾಂಡ್ ತಲೆ ಮೇಲ್ಕೋಟೆ ಮೂರ್‍ನಾಮ
-ಎಲ್ಲ ನೋಡುವ ಮೌನ ಮುಗುಳ್ನಗೆಯ ನೀರು.
ದಂಡೆಯಲಿ ಮಂಡಿಯೂರಿ ಮಂತ್ರ ಪಠಿಸುವ
ನೀರಿನ ನಿರಿಗೆಗೆ ಗರಿಗೆದರುವ ಬೆಲೆಗಟ್ಟುವ
ಜೀವರ ಬಳಿ ತೆವಳಿ ಕಂಪು ಮಾಡುತ್ತ
ಕಾಲ
ಹಿಡಿದೆಳೆದು ಮುಸಿ ಮುಸಿ
ಮೀಸೆ ಕುಣಿಸುವ ಸಹಜ ಠೀವಿ
ಮಂತ್ರದಂಡ ಬೇಕಿಲ್ಲದ ಮಹಾ ಮಾಯಾವಿ!

ಸಿಟ್ಟು ಬಂದರೆ ಇನ್ನು ಕಟ್ಟುಕಟ್ಟಳೆಯೆಲ್ಲಿ?
ದಡದ ಮಣ್ಣೆಲ್ಲ ಕೊಳೆತಮಂಡಲ ಕಡಿದ ಮೈ.
ಕ್ಷಣ ಕ್ಷಣಕ್ಕೆ ಬೆಳೆಯುವ ಕೈಬೆರಳು
ಉಗುರು; ಬೇರಿಗೆ ಉರುಳು.

ಬೆಳೆಯುತ್ತ ಬಲಿಯತ್ತ
ತೊಟ್ಟು ಸಡಿಲಿದ ಫಲಕ್ಕೆ ದುರ್‍ಬೀನು ಪತ್ತೆ
ರೊಚ್ಚಿಗೆ ಬೆಚ್ಚಿ ಬಿದ್ದವೆಷ್ಟೋ;
ಕಚ್ಚೆ ಹಿಡಿದು ದಡಬಡಿಸಿ ಎದ್ದೆದ್ದು ಬಿದ್ದು ಕೊಚ್ಚಿ ಹೋದವೆಷ್ಪೋ!
ಏನು ಹೇಳುವುದು ಮುಂದೆ?
ಕಡೆಗೆ ಉಳಿಯುವುದು ಬರೀ ನೆನಪು:
ದೊಕ್ಕರು ಬಿದ್ದ ನೆಲ ; ಅಲ್ಲಲ್ಲಿ ಅಸ್ತಿತ್ವ ಉಗ್ಗಡಿಸುವ ಜಲ;
ಹೊರ ಬಂದ ನೆಣ ; ಮರ ಮಸಣ ;
ಹದ್ದುಗಳಿಗೆ ಹಬ್ಬವೋ ಹಬ್ಬ :
ಗಬ್ಬ ಹತ್ತಿದ ಕಡಸು ತುರುಸು
ಮನದ ತಂಬೆಲ್ಲ ಬಾಣ ಬಿರುಸು.
ಪಾಪ! ಯಾವ ದಿಬ್ಬದ ಮೇಲೆ ಕದ್ದು ಹೊಂಚುತ್ತಿದೆಯೊ
ಸಹಜ ಸಂಚಿನ ಚುಂಚು!

ಸುಳ್ಳಲ್ಲ, ದಾರಿಗತ್ತಲಲ್ಲಿ ಹತ್ತಿ ಉರಿಯತ್ತವೆ ಲಾಂದ್ರ
ಎಣ್ಣೆ ಇದ್ದಷ್ಟು ಬೆಳಕು ಬೀದಿ,
ಸಂತೆ ಹಾದಿಯ ಕಾದ ಕಳ್ಳ ಇದ್ದಕ್ಕಿದ್ದಂತೆ ಅಮರಿ
ಅಡ್ಡಗಟ್ಟುವ ಪರಿ-
ಭೂತ ಭೇತಾಳಗಳ ವಿಜೃಂಭಿತ ಛತ್ರಿ ಚಾಮರ
ನೆಲಕ್ಕಂಟಿ ಬೇರಿಳದ ಗಾದಿ.

ಮೂಳೆ ಮೈ-
ಗಳ ಕುಣಿತ ಹುಲಿವೇಷ
ಕೊಂಬು ಕಹಳೆ ತಮ್ಮಟೆ ಆರ್‍ಭಟೆ
ಕತ್ತಿಗೆ ರೋಟಿ ಕೋಲು ಕಟಟಿದ ತೋಟಿ*
ಚಿತ್ತೈಸುವಾಗ ಕುಣಿಯುತ್ತ, ನೆಲಕ್ಕೆ ನಡುಗು ಒಳತೋಟಿ.

ಮೈ ತಂಬ ಸೆರಗು ಹೊದ್ದು ಬಾಳಿದರೂ ತಪ್ಪಿತೆ
ಸೀತಾ ಸಾಕ್ಷಾತ್ಕಾರ?
ಹುಟ್ಟಿಗೆ ಸಾವೊಂದೇ ಶಾಶ್ವತ ಪರಿಹಾರ
ಅದೇ ಅಮರ.
*****

*ತೋಟಿ -ಎಂಬುದು ಹಳ್ಳಿಯ ಕಡೆ ಹಾಕುವ ಒಂದು ವೇಷ. ಹಬ್ಬ ಹರಿದಿನಗಳಲ್ಲಿ ಭಯಂಕರ ಮೀಸೆಯೊಂದಿಗೆ ಈ ವೇಷ ವಾದ್ಯ ಶಬ್ಬಕ್ಕನುಗುಣವಾಗಿ ಕುಣಿಯುತ್ತ ಬೀದಿಯಲ್ಲಿ ಸಾಗುತ್ತದೆ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...