Home / ಕವನ / ಕವಿತೆ / ಒಬ್ಬನೆಂದರೊಬ್ಬನೇ

ಒಬ್ಬನೆಂದರೊಬ್ಬನೇ

ಒಬ್ಬನೆಂದರೊಬ್ಬನೇ
ಒಬ್ಬನೊಳಗೆ ಇಬ್ಬನೇ
ಇಬ್ಬನೇ ಮೂವನೇ
ಒಬ್ಬನೊಳಗೆ ಎಷ್ಟನೇ

ಒಂದು ಒಡಲ ನೋಡಿ ನಾವು
ಒಬ್ಬನೆನುವೆವು
ಒಂದು ಒಡಲಿಗೊಬ್ಬನೇ
ಎಂದುಕೊಳುವೆವು

ಒಬ್ಬನಲ್ಲ ಇಬ್ಬನಲ್ಲ
ಒಳಗಿರುವವನಿಗೆ ಲೆಕ್ಕವಿಲ್ಲ
ಬಂದು ಹೋಗಿ ಮಾಡುತಾರೆ
ಒಕ್ಕಲಿಗರೆ ಎಲ್ಲರೂ

ಒಬ್ಬನೆಂದು ಯಾರು ಇಲ್ಲ
ಒಬ್ಬರನೊಬ್ಬ ಒತ್ತುತ್ತಾರೆ
ತಳ್ಳಿ ಜಾಗ ಮಾಡುತಾರೆ
ಆಚೆ ಈಚೆ ನಿಲ್ಲುತಾರೆ

ನೆರಳಿನಲ್ಲಿ ಅಡಗುತಾರೆ
ಸಮಯ ಕಾಯುತಿರುತಾರೆ
ಅಂದುಕೊಳ್ಳದಿರುವಾಗ
ಮುಂದೆ ಕಾಣಿಸಿಕೊಳ್ಳುತಾರೆ

ಮುಂಜಾನೆ ಕಂಡವನೇ
ಸಂಜೆ ಹಾಗೇ ಇರುತಾನೆಯೆ
ಹಗಲು ನಗುತ ಇದ್ದವನೆ
ಇರುಳು ಅಳುತ ಇದ್ದಾನೆಯೆ

ಒಬ್ಬರನೊಬ್ಬರು ಕೆಣಕುತಾರೆ
ಪರಸ್ಪರ ದೂರುತ್ತಾರೆ
ನೀನು ತಾನು ಎನುತಾರೆ
ತಪ್ಪು ಯಾರೂ ಒಪ್ಪಿಕೊಳರು
ತಾವೇ ಸರಿ ಎನುವರು

ಕ್ಷಣಕ್ಷಣವು ಬದಲಾವಣೆ
ಇದ್ದಂತೆಯೆ ಇರುವುದಿಲ್ಲ
ಪಾಪಿಯಿಂದು ಸಂತ ನಾಳೆ
ನಿನ್ನೆಯ ಆರೋಪಿಯೇ
ಈವತ್ತು ನ್ಯಾಯಾಧೀಶನು

ಯಾರ ನೀನು ಹಳಿಯುವಿ
ಯಾರ ಹಾಡಿ ಹೊಗಳುವಿ
ಒಂದೆ ಒಡಲ ಮನದ ಪರಿಯ
ಹೇಗ ಅರಿಯುವಿ

ಮನವೆಂಬುದು ಅತಿ ವಿಚಿತ್ರ
ಬರೆದರಿಲ್ಲ ಅದರ ಚಿತ್ರ
ಭಾಷೆ ಕೂಡ ಸೋಲುವುದು
ಅದರ ರೀತಿ ಹಿಡಿಯಲು

ಒಬ್ಬನಲ್ಲ ನೀನು ನಾನು
ನನ್ನೊಳಗೆ ನಿನ್ನ ಭಾವ
ನಿನ್ನೊಳಗೆ ನನ್ನ ಭಾವ
ಅದಲುಬದಲು ಆಗುವೆವು

ನಿನ್ನ ಮನದ ಗಾಯವೆ
ನನ್ನೊಳಗೂ ವೇದನೆ
ನಿನ್ನ ಸಂತೋಷವೆ
ಕಿಂಚಿದೂನು ನನ್ನದೆನೆ

ನೀನು ಯಾರು ನಾನು ಯಾರು
ಒಬ್ಬನಲ್ಲ ಸಹಸ್ರ
*****

Tagged:

Leave a Reply

Your email address will not be published. Required fields are marked *

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...