Home / ಕವನ / ಕವಿತೆ / ಒಂದಿರುಳು

ಒಂದಿರುಳು

ಪಡುವ ಮಲೆಯ ಕಣಿವೆಯಾಚೆ
ಹೊತ್ತು ಹಾರಿಹೋಗುತಿತ್ತು,
ಮೂಡ ಮಲೆಯ ಹಲ್ಲೆ ಹತ್ತಿ
ಇರುಳ ದಾಳಿ ನುಗ್ಗುತಿತ್ತು;
ಬಿದ್ದ ಹೊನ್ನ ಕೊಳ್ಳೆ ಹೊಡೆದು
ಕಳ್ಳಸಂಜೆಯೋಡುತಿತ್ತು,
ತಲೆಯ ಬಾಗಿ ಪುರದ ದೀಪ
ಜೀವದೊಂದಿಗಿದ್ದಿತು.

ಪಾನಭೂಮಿಯಲ್ಲಿ ಮತ್ತ-
ಜನದ ಮಾತಿನಲ್ಲಿ ಚಿತ್ತ
ಗೋತಹಾಕುತಿತ್ತು ಭರದಿ
ಸೂತ್ರಕೆಟ್ಟ ಪಟದ ತೆರದಿ.
ಮದ್ಯತುಷ್ಟ ಮುದಿಯ ಚೆನ್ನ
‘ಕುಡಿಲ ಕುಡಿಲ’ ಎಂದು ತನ್ನ
ಮರಿಯಮಗನ ಮೂಗ ಹಿಡಿದು
ಬಾಯ ತೆರೆಸಿ, ಕಳ್ಳ ಸುರಿದು,
ತನ್ನ ಜೀವಕಾದ ನಲವ
ತನ್ನವನಿಗು ಹಂಚಿಕೊಡುವ
ಯತ್ನದಲ್ಲಿ ತೋರುತಿತ್ತು-
ವಿಕೃತ ವ್ಯಂಗ್ಯವೇಷವೆತ್ತು
ಪ್ರೇಮ, ಮನುಜ ಧರ್ಮವು.

ಭಾವವೇನು ಭಂಗಿಯೇನು
ಹಾಸ್ಯವೇನು ಲಾಸ್ಯವೇನು,
ಎಂತಂದರಂತು ತೋರಿ,
ಬವಣೆಯಸಯ ನುಣಚಿ ಜಾರಿ,
ಮರೆವುಕಿಂಡಿಯಿಂದ ದೂರಿ,
ಮುಕ್ತಿಯುನ್ಮಾದದಿಂದ
ವ್ಯಕ್ತವಾಯಿತಾನಂದ-
ಭೂತಧರ್ಮವು-ಸರ್ವ-
ಭೂತಧರ್ಮವು.

ಪಡುಬಡಗಲ ಮೂಲೆಯಲ್ಲಿ
ಕಾಳಿಯಿರುವ ತಾಣದಲ್ಲಿ
ಕಿಚ್ಚು ಇರುಳ ನೊಣೆಯುತಿತ್ತು,
ಭಯವ ಮೂಡಿ ಮಸಗುತಿತ್ತು,
ಜೀವ ಹೌಹಾರುತಿತ್ತು,
ಡುಮ್ಮಿ ಡುಕಿಟಿ ನಾನ ತತ್ತು
ಎನುತ ತಮಟೆ ದುಡಿಯುತಿತ್ತು-
ತನುವೊಳಾದ ಬೇನೆಗಾಗಿ
ವಿಶ್ವಜೀವ ಮೂಕವಾಗಿ
ವಿಣ್ಣವಿಣ್ಣ ದುಡಿವ ತೆರದಿ,
ಗಾಯಗೊಂಡ ತಾಣದಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...