ಚಂದ್ರಚುಂಬಿತ ಯಾಮಿನೀ

ಚಂದ್ರಚುಂಬಿತ ಯಾಮಿನೀ
ನವವಿರಹಿ ಚಿತ್ತೋನ್ಮಾದಿನೀ,
ಜಾರುತಿದೆ ಕಲನಾದಿನೀ,
ಅದೊ! ಹಾಡುತಿರುವಳು ಕಾಮಿನೀ.

ತರುಣಿ ವೀಣೆಯ ಮಿಡಿವಳು
ತಚ್ಛ್ರುತಿಗೆ ವಾಣಿಯನೆಳೆವಳು-
ಮಧುರಗೀತದ ನುಡಿಯೊಳು
ತನ್ನೆದೆಯ ಭಾವವ ಮೊಗೆವಳು:

ಒಲುಮೆ ಹೃದಯವ ಹೊಗಲು ಬಯಸಲು
ಆರು ತಡೆಯಲು ಬಲ್ಲರು?
ಎದೆಯ ಬಿಟ್ಟದು ಹಾರ ಬಯಸಲು
ಆರು ತಡೆಯಲು ಬಲ್ಲರು?

ಚೆಲುವೆ, ಯೌವನದೀಪ್ತಳು,
ಮೇಣೊಲುಮೆ ಕನಸೊಳಗಿರುವಳು.
ಒಲುಮೆನಚ್ಚನು ನಂಬಳು,
ಹೊಸ ಭಯಕೆ ತಲ್ಲಣಗೊಂಬಳು.

ಒಲುಮೆ ಹಕ್ಕಿಯು ಸುಳಿಯಲು
ಅದರಂದಕಚ್ಚರಿಗೊಂಡಳು.
‘ಒಲುಮೆ’ ಎಂದವಳರಿಯಳು
ತನ್ನೆದೆಯ ಗೂಡೊಳಗಿಟ್ಟಳು.

ಅಲ್ಲಿ ಹಕ್ಕಿಯು ಹಾಡಿತು;
ಮೇಣೆಂಥ ಚೈತ್ರವ ತಂದಿತು!
ಬಾಳನೆಂತದು ರಮಿಸಿತು!
ಹೊಸ ನಚ್ಚ ಮೋದವ ತೋರಿತು!

ಅದಕೆ ಅವಳಸು ಮೀಸಲು-
ಅದು ಹಾರಿಹೋಗದ ತೆರದೊಳು
ನೇಹಮೋಹದ ಸರಳೊಳು
ತನ್ನೆದೆಗೆ ಪಂಜರ ಬಿಗಿದಳು.

ಹುಚ್ಚಿ, ಒಲುಮೆಗೆ ಬಂಧವೆ?
ಅದ ಸೆರೆಯ ಕೊಳುವುದು ಸುಲಭವೆ?
ಬಯಸಿದೆಡೆಗದು ಪರಿವುದು,
ನರನೆದೆಯ ಪಾಳಂಗೈವುದು.

ಬಾಳ ಸಾರವ ಶೋಷಿಸಿ
ಹೊಸ ಬಯಕೆ ಬವಣೆಯ ತೋರಿಸಿ
ನುಸುಳಿದೊಲುಮೆಗೆ ಶಂಕಿಸಿ
ತಾ ಮಿಡುಕುತಿಹಳಾ ಮಾನಿಸಿ.

ಇಂದುರಂಜಿತ ಯಾಮಿನೀ
ಸುಖಿಜನರ ಚಿತ್ತಾಹ್ಲಾದಿನೀ;
ಗಾನಗೈವಳು ಕಾಮಿನೀ;
ಆ ವಾಣಿ ಹೃದ್ವಿದ್ರಾವಿಣೀ:

ಒಲುಮೆ ದಾಳಿಯನಿಡಲು ಜಗ್ಗದ
ಹೃದಯವುಂಟೇ ಮನುಜಗೆ?
ಒಲವ ಸೆರೆಯನು ಕೊಳುವ ಬಲ್ಮೆಯ
ಹೃದಯವುಂಟೇ ಮನುಜಗೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಣಿಯೆಂಬೊ ಭಾಂವಕ
Next post ಆತ್ಮಸ್ಥೈರ್ಯ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…