Home / ಕವನ / ಕವಿತೆ / ಚಂದ್ರಚುಂಬಿತ ಯಾಮಿನೀ

ಚಂದ್ರಚುಂಬಿತ ಯಾಮಿನೀ

ಚಂದ್ರಚುಂಬಿತ ಯಾಮಿನೀ
ನವವಿರಹಿ ಚಿತ್ತೋನ್ಮಾದಿನೀ,
ಜಾರುತಿದೆ ಕಲನಾದಿನೀ,
ಅದೊ! ಹಾಡುತಿರುವಳು ಕಾಮಿನೀ.

ತರುಣಿ ವೀಣೆಯ ಮಿಡಿವಳು
ತಚ್ಛ್ರುತಿಗೆ ವಾಣಿಯನೆಳೆವಳು-
ಮಧುರಗೀತದ ನುಡಿಯೊಳು
ತನ್ನೆದೆಯ ಭಾವವ ಮೊಗೆವಳು:

ಒಲುಮೆ ಹೃದಯವ ಹೊಗಲು ಬಯಸಲು
ಆರು ತಡೆಯಲು ಬಲ್ಲರು?
ಎದೆಯ ಬಿಟ್ಟದು ಹಾರ ಬಯಸಲು
ಆರು ತಡೆಯಲು ಬಲ್ಲರು?

ಚೆಲುವೆ, ಯೌವನದೀಪ್ತಳು,
ಮೇಣೊಲುಮೆ ಕನಸೊಳಗಿರುವಳು.
ಒಲುಮೆನಚ್ಚನು ನಂಬಳು,
ಹೊಸ ಭಯಕೆ ತಲ್ಲಣಗೊಂಬಳು.

ಒಲುಮೆ ಹಕ್ಕಿಯು ಸುಳಿಯಲು
ಅದರಂದಕಚ್ಚರಿಗೊಂಡಳು.
‘ಒಲುಮೆ’ ಎಂದವಳರಿಯಳು
ತನ್ನೆದೆಯ ಗೂಡೊಳಗಿಟ್ಟಳು.

ಅಲ್ಲಿ ಹಕ್ಕಿಯು ಹಾಡಿತು;
ಮೇಣೆಂಥ ಚೈತ್ರವ ತಂದಿತು!
ಬಾಳನೆಂತದು ರಮಿಸಿತು!
ಹೊಸ ನಚ್ಚ ಮೋದವ ತೋರಿತು!

ಅದಕೆ ಅವಳಸು ಮೀಸಲು-
ಅದು ಹಾರಿಹೋಗದ ತೆರದೊಳು
ನೇಹಮೋಹದ ಸರಳೊಳು
ತನ್ನೆದೆಗೆ ಪಂಜರ ಬಿಗಿದಳು.

ಹುಚ್ಚಿ, ಒಲುಮೆಗೆ ಬಂಧವೆ?
ಅದ ಸೆರೆಯ ಕೊಳುವುದು ಸುಲಭವೆ?
ಬಯಸಿದೆಡೆಗದು ಪರಿವುದು,
ನರನೆದೆಯ ಪಾಳಂಗೈವುದು.

ಬಾಳ ಸಾರವ ಶೋಷಿಸಿ
ಹೊಸ ಬಯಕೆ ಬವಣೆಯ ತೋರಿಸಿ
ನುಸುಳಿದೊಲುಮೆಗೆ ಶಂಕಿಸಿ
ತಾ ಮಿಡುಕುತಿಹಳಾ ಮಾನಿಸಿ.

ಇಂದುರಂಜಿತ ಯಾಮಿನೀ
ಸುಖಿಜನರ ಚಿತ್ತಾಹ್ಲಾದಿನೀ;
ಗಾನಗೈವಳು ಕಾಮಿನೀ;
ಆ ವಾಣಿ ಹೃದ್ವಿದ್ರಾವಿಣೀ:

ಒಲುಮೆ ದಾಳಿಯನಿಡಲು ಜಗ್ಗದ
ಹೃದಯವುಂಟೇ ಮನುಜಗೆ?
ಒಲವ ಸೆರೆಯನು ಕೊಳುವ ಬಲ್ಮೆಯ
ಹೃದಯವುಂಟೇ ಮನುಜಗೆ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...