ಚಂದ್ರಚುಂಬಿತ ಯಾಮಿನೀ

ಚಂದ್ರಚುಂಬಿತ ಯಾಮಿನೀ
ನವವಿರಹಿ ಚಿತ್ತೋನ್ಮಾದಿನೀ,
ಜಾರುತಿದೆ ಕಲನಾದಿನೀ,
ಅದೊ! ಹಾಡುತಿರುವಳು ಕಾಮಿನೀ.

ತರುಣಿ ವೀಣೆಯ ಮಿಡಿವಳು
ತಚ್ಛ್ರುತಿಗೆ ವಾಣಿಯನೆಳೆವಳು-
ಮಧುರಗೀತದ ನುಡಿಯೊಳು
ತನ್ನೆದೆಯ ಭಾವವ ಮೊಗೆವಳು:

ಒಲುಮೆ ಹೃದಯವ ಹೊಗಲು ಬಯಸಲು
ಆರು ತಡೆಯಲು ಬಲ್ಲರು?
ಎದೆಯ ಬಿಟ್ಟದು ಹಾರ ಬಯಸಲು
ಆರು ತಡೆಯಲು ಬಲ್ಲರು?

ಚೆಲುವೆ, ಯೌವನದೀಪ್ತಳು,
ಮೇಣೊಲುಮೆ ಕನಸೊಳಗಿರುವಳು.
ಒಲುಮೆನಚ್ಚನು ನಂಬಳು,
ಹೊಸ ಭಯಕೆ ತಲ್ಲಣಗೊಂಬಳು.

ಒಲುಮೆ ಹಕ್ಕಿಯು ಸುಳಿಯಲು
ಅದರಂದಕಚ್ಚರಿಗೊಂಡಳು.
‘ಒಲುಮೆ’ ಎಂದವಳರಿಯಳು
ತನ್ನೆದೆಯ ಗೂಡೊಳಗಿಟ್ಟಳು.

ಅಲ್ಲಿ ಹಕ್ಕಿಯು ಹಾಡಿತು;
ಮೇಣೆಂಥ ಚೈತ್ರವ ತಂದಿತು!
ಬಾಳನೆಂತದು ರಮಿಸಿತು!
ಹೊಸ ನಚ್ಚ ಮೋದವ ತೋರಿತು!

ಅದಕೆ ಅವಳಸು ಮೀಸಲು-
ಅದು ಹಾರಿಹೋಗದ ತೆರದೊಳು
ನೇಹಮೋಹದ ಸರಳೊಳು
ತನ್ನೆದೆಗೆ ಪಂಜರ ಬಿಗಿದಳು.

ಹುಚ್ಚಿ, ಒಲುಮೆಗೆ ಬಂಧವೆ?
ಅದ ಸೆರೆಯ ಕೊಳುವುದು ಸುಲಭವೆ?
ಬಯಸಿದೆಡೆಗದು ಪರಿವುದು,
ನರನೆದೆಯ ಪಾಳಂಗೈವುದು.

ಬಾಳ ಸಾರವ ಶೋಷಿಸಿ
ಹೊಸ ಬಯಕೆ ಬವಣೆಯ ತೋರಿಸಿ
ನುಸುಳಿದೊಲುಮೆಗೆ ಶಂಕಿಸಿ
ತಾ ಮಿಡುಕುತಿಹಳಾ ಮಾನಿಸಿ.

ಇಂದುರಂಜಿತ ಯಾಮಿನೀ
ಸುಖಿಜನರ ಚಿತ್ತಾಹ್ಲಾದಿನೀ;
ಗಾನಗೈವಳು ಕಾಮಿನೀ;
ಆ ವಾಣಿ ಹೃದ್ವಿದ್ರಾವಿಣೀ:

ಒಲುಮೆ ದಾಳಿಯನಿಡಲು ಜಗ್ಗದ
ಹೃದಯವುಂಟೇ ಮನುಜಗೆ?
ಒಲವ ಸೆರೆಯನು ಕೊಳುವ ಬಲ್ಮೆಯ
ಹೃದಯವುಂಟೇ ಮನುಜಗೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಣಿಯೆಂಬೊ ಭಾಂವಕ
Next post ಆತ್ಮಸ್ಥೈರ್ಯ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…