Home / ಕವನ / ಕವಿತೆ / ಪಂಢರಪುರದಲ್ಲಿ

ಪಂಢರಪುರದಲ್ಲಿ

ರಾಗ ಯಮುನಾಕಲ್ಯಾಣಿ-ತಾಳ ಧುಮಾಳಿ

ಯಾವ ಭಾಗ್ಯದಿಂದಿಲ್ಲಿಗೆ ಬಂದೆ?
ನಿನ್ನ ಕಂಡು ಧನ್ಯನಾದೆ ತಂದೆ!
ಇನ್ನಾದಡಮೆನಿಸೆನ್ನೆದೆಯಿಂದೆ-
ಜಯ ಜಯ ಪಂಢರಿನಾಥ ವಿಠೋಬಾ! ||೧||

ತುಕಾರಾಮ ನಾಮದೇವರಿಲ್ಲಿ
ಕುಣಿದ ರಂಗಸಿಲೆಯಿಂ ೧ಸೆಲೆವಲ್ಲಿ
ನಿನ್ನ ನಾಮಮೆದೆಯೊತ್ತುವೆನಲ್ಲಿ-
ಜಯ ಜಯ ಪಂಢರಿನಾಥ ವಿಠೋಬಾ! ||೨||

ನಡುವಲಿ ಕೆಯ್ಮಡಗುತ ನಿಡುನಿಂತೆ
ಕೃತಕೃತ್ಯನೊಲೆನ್ನ ಕಾವ ಮುಂತೆ
ಮುಗಿವುದೆಂತು ನಿನ್ನ ಕೆಲಸದಂತೆ?
ಜಯ ಜಯ ಪಂಢರಿನಾಥ ವಿಠೋಬಾ! ||೩||

೨ಬಬ್ಬುಳಿಯ ಮುಳ್ಳ ಮೆಳೆಯಲಿ ನಿಲ್ಲೆ,
ಏಕೆ ವಿಷಯವಿಷಮ ಮನಮನೊಲ್ಲೆ?
ನೀತಿಯಿದೇಂ, ದೇವ, ನೀನೆ ಬಲ್ಲೆ!
ಜಯ ಜಯ ಪಂಢರಿನಾಥ ವಿಠೋಬಾ ||೪||

ಸಕೂಬಾಯಿಯೊಡಬೀಸಿದೆ ಕಲ್ಲಂ,
ಗೋಮಾಯಿಯ ೩ಕಡಸಲಾಂತೆ ಜಲ್ಲಂ-
ನನ್ನ ಕಡೆಗೆ ಕಣ್ಣೆತ್ತಿದುದಿಲ್ಲಂ!
ಜಯ ಜಯ ಪಂಢರಿನಾಥ ವಿಠೋಬಾ ||೫||

೪ಹಳಸಿರದೆ ೫ಅಂದಿನಿಟ್ಟಿಗೆ ನಿನ್ನ?
ನೋಡ ಜೀಯ ತಂದಿಹೆ ಹೊಸತನ್ನ-
ಮೆಟ್ಟಿ ನಿಲ್ಲು ನಿಷ್ಠುರ ಮನಮೆನ್ನ,
ಜಯ ಜಯ ಪಂಢರಿನಾಥ ವಿಠೋಬಾ! ||೬||

ಪುಣ್ಯಸಲಿಲೆ ತಾಯೆ ಚಂದ್ರಭಾಗೆ,
ತೊಳಸೆನ್ನ ಮನದ ಶಂಕೆಯ ನೀಗೆ,
ಗುಳುಗುಳಿಸೊಡೆಯನ ನೆನವೆದೆ ಬೀಗೆ-
ಜಯ ಜಯ ಪಂಢರಿನಾಥ ವಿಠೋಬಾ! ||೭||

ಪೊರೆಯ! ತೊರೆಯ! ಇನ್ನೆರೆಯ ನೀನೆನ್ನ-
ಧನ್ಯನಾದೆ ಕಂಡೆನೆಂದೆ ನಿನ್ನ!
ನೀ ಮರೆವೊಡಮಿನ್ನಿದೆ ಮರೆಯೆನ್ನ-
ಜಯ ಜಯ ಪಂಢರಿನಾಥ ವಿಠೋಬಾ! ||೮||

ಗೆಯ್ದ ಪಾಪಮನಿತುಂ ನಿನಗರ್ಪಣ,
ಗೆಯ್ಯದ ಪುಣ್ಯಮದುಂ ನಿನಗರ್ಪಣ,
ಕಳೆದುಳಿದ ಜೀವಿತಂ ನಿನಗರ್ಪಣ,
ಜಯ ಜಯ ಪಂಢರಿನಾಥ ವಿಠೋಬಾ! ||೯||

ನಿನ್ನನೊಡೆಯ ಮತ್ತೇನನು ಬೇಡೆ-
ಬೇಡಲೇಕೆ ನೀ ಬೇಡದೆ ನೀಡೆ?
ಸಾಕಂತ್ಯವರಂ ನಾಲಗೆಯಾಡೆ –
ಜಯ ಜಯ ಪಂಢರಿನಾಥ ವಿಠೋಬಾ! ||೧೦||
*****
೧ ಮರುಧ್ವನಿಸು
೨ ಜಾಲೀಗಿಡ
೩ ಕಡವನ್ನು ದಾಟಿಸು
೪ ಹಳತಾಗು
೫ ದೇವರು ತನ್ನ ಭಕ್ತನಾದ ಪುಂಡರೀಕನ ಮನೆಗೆ ಬಂದಾಗ, ತಾಯಿತಂದೆಯವರ ಸೇವೆಯಲ್ಲಿ ನಿರತನಾಗಿದ್ದ ಆತನು ತಾನದನ್ನು ಮುಗಿಸಿ ಬರುವ ವರೆಗೆ ಇದರಲ್ಲಿರು ಎಂದು ಕೊಟ್ಟ ಇಟ್ಟಿಗೆ.

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...