Home / ಕವನ / ಕವಿತೆ / ಪಂಢರಪುರದಲ್ಲಿ

ಪಂಢರಪುರದಲ್ಲಿ

ರಾಗ ಯಮುನಾಕಲ್ಯಾಣಿ-ತಾಳ ಧುಮಾಳಿ

ಯಾವ ಭಾಗ್ಯದಿಂದಿಲ್ಲಿಗೆ ಬಂದೆ?
ನಿನ್ನ ಕಂಡು ಧನ್ಯನಾದೆ ತಂದೆ!
ಇನ್ನಾದಡಮೆನಿಸೆನ್ನೆದೆಯಿಂದೆ-
ಜಯ ಜಯ ಪಂಢರಿನಾಥ ವಿಠೋಬಾ! ||೧||

ತುಕಾರಾಮ ನಾಮದೇವರಿಲ್ಲಿ
ಕುಣಿದ ರಂಗಸಿಲೆಯಿಂ ೧ಸೆಲೆವಲ್ಲಿ
ನಿನ್ನ ನಾಮಮೆದೆಯೊತ್ತುವೆನಲ್ಲಿ-
ಜಯ ಜಯ ಪಂಢರಿನಾಥ ವಿಠೋಬಾ! ||೨||

ನಡುವಲಿ ಕೆಯ್ಮಡಗುತ ನಿಡುನಿಂತೆ
ಕೃತಕೃತ್ಯನೊಲೆನ್ನ ಕಾವ ಮುಂತೆ
ಮುಗಿವುದೆಂತು ನಿನ್ನ ಕೆಲಸದಂತೆ?
ಜಯ ಜಯ ಪಂಢರಿನಾಥ ವಿಠೋಬಾ! ||೩||

೨ಬಬ್ಬುಳಿಯ ಮುಳ್ಳ ಮೆಳೆಯಲಿ ನಿಲ್ಲೆ,
ಏಕೆ ವಿಷಯವಿಷಮ ಮನಮನೊಲ್ಲೆ?
ನೀತಿಯಿದೇಂ, ದೇವ, ನೀನೆ ಬಲ್ಲೆ!
ಜಯ ಜಯ ಪಂಢರಿನಾಥ ವಿಠೋಬಾ ||೪||

ಸಕೂಬಾಯಿಯೊಡಬೀಸಿದೆ ಕಲ್ಲಂ,
ಗೋಮಾಯಿಯ ೩ಕಡಸಲಾಂತೆ ಜಲ್ಲಂ-
ನನ್ನ ಕಡೆಗೆ ಕಣ್ಣೆತ್ತಿದುದಿಲ್ಲಂ!
ಜಯ ಜಯ ಪಂಢರಿನಾಥ ವಿಠೋಬಾ ||೫||

೪ಹಳಸಿರದೆ ೫ಅಂದಿನಿಟ್ಟಿಗೆ ನಿನ್ನ?
ನೋಡ ಜೀಯ ತಂದಿಹೆ ಹೊಸತನ್ನ-
ಮೆಟ್ಟಿ ನಿಲ್ಲು ನಿಷ್ಠುರ ಮನಮೆನ್ನ,
ಜಯ ಜಯ ಪಂಢರಿನಾಥ ವಿಠೋಬಾ! ||೬||

ಪುಣ್ಯಸಲಿಲೆ ತಾಯೆ ಚಂದ್ರಭಾಗೆ,
ತೊಳಸೆನ್ನ ಮನದ ಶಂಕೆಯ ನೀಗೆ,
ಗುಳುಗುಳಿಸೊಡೆಯನ ನೆನವೆದೆ ಬೀಗೆ-
ಜಯ ಜಯ ಪಂಢರಿನಾಥ ವಿಠೋಬಾ! ||೭||

ಪೊರೆಯ! ತೊರೆಯ! ಇನ್ನೆರೆಯ ನೀನೆನ್ನ-
ಧನ್ಯನಾದೆ ಕಂಡೆನೆಂದೆ ನಿನ್ನ!
ನೀ ಮರೆವೊಡಮಿನ್ನಿದೆ ಮರೆಯೆನ್ನ-
ಜಯ ಜಯ ಪಂಢರಿನಾಥ ವಿಠೋಬಾ! ||೮||

ಗೆಯ್ದ ಪಾಪಮನಿತುಂ ನಿನಗರ್ಪಣ,
ಗೆಯ್ಯದ ಪುಣ್ಯಮದುಂ ನಿನಗರ್ಪಣ,
ಕಳೆದುಳಿದ ಜೀವಿತಂ ನಿನಗರ್ಪಣ,
ಜಯ ಜಯ ಪಂಢರಿನಾಥ ವಿಠೋಬಾ! ||೯||

ನಿನ್ನನೊಡೆಯ ಮತ್ತೇನನು ಬೇಡೆ-
ಬೇಡಲೇಕೆ ನೀ ಬೇಡದೆ ನೀಡೆ?
ಸಾಕಂತ್ಯವರಂ ನಾಲಗೆಯಾಡೆ –
ಜಯ ಜಯ ಪಂಢರಿನಾಥ ವಿಠೋಬಾ! ||೧೦||
*****
೧ ಮರುಧ್ವನಿಸು
೨ ಜಾಲೀಗಿಡ
೩ ಕಡವನ್ನು ದಾಟಿಸು
೪ ಹಳತಾಗು
೫ ದೇವರು ತನ್ನ ಭಕ್ತನಾದ ಪುಂಡರೀಕನ ಮನೆಗೆ ಬಂದಾಗ, ತಾಯಿತಂದೆಯವರ ಸೇವೆಯಲ್ಲಿ ನಿರತನಾಗಿದ್ದ ಆತನು ತಾನದನ್ನು ಮುಗಿಸಿ ಬರುವ ವರೆಗೆ ಇದರಲ್ಲಿರು ಎಂದು ಕೊಟ್ಟ ಇಟ್ಟಿಗೆ.

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...