ಪಂಢರಪುರದಲ್ಲಿ

ರಾಗ ಯಮುನಾಕಲ್ಯಾಣಿ-ತಾಳ ಧುಮಾಳಿ

ಯಾವ ಭಾಗ್ಯದಿಂದಿಲ್ಲಿಗೆ ಬಂದೆ?
ನಿನ್ನ ಕಂಡು ಧನ್ಯನಾದೆ ತಂದೆ!
ಇನ್ನಾದಡಮೆನಿಸೆನ್ನೆದೆಯಿಂದೆ-
ಜಯ ಜಯ ಪಂಢರಿನಾಥ ವಿಠೋಬಾ! ||೧||

ತುಕಾರಾಮ ನಾಮದೇವರಿಲ್ಲಿ
ಕುಣಿದ ರಂಗಸಿಲೆಯಿಂ ೧ಸೆಲೆವಲ್ಲಿ
ನಿನ್ನ ನಾಮಮೆದೆಯೊತ್ತುವೆನಲ್ಲಿ-
ಜಯ ಜಯ ಪಂಢರಿನಾಥ ವಿಠೋಬಾ! ||೨||

ನಡುವಲಿ ಕೆಯ್ಮಡಗುತ ನಿಡುನಿಂತೆ
ಕೃತಕೃತ್ಯನೊಲೆನ್ನ ಕಾವ ಮುಂತೆ
ಮುಗಿವುದೆಂತು ನಿನ್ನ ಕೆಲಸದಂತೆ?
ಜಯ ಜಯ ಪಂಢರಿನಾಥ ವಿಠೋಬಾ! ||೩||

೨ಬಬ್ಬುಳಿಯ ಮುಳ್ಳ ಮೆಳೆಯಲಿ ನಿಲ್ಲೆ,
ಏಕೆ ವಿಷಯವಿಷಮ ಮನಮನೊಲ್ಲೆ?
ನೀತಿಯಿದೇಂ, ದೇವ, ನೀನೆ ಬಲ್ಲೆ!
ಜಯ ಜಯ ಪಂಢರಿನಾಥ ವಿಠೋಬಾ ||೪||

ಸಕೂಬಾಯಿಯೊಡಬೀಸಿದೆ ಕಲ್ಲಂ,
ಗೋಮಾಯಿಯ ೩ಕಡಸಲಾಂತೆ ಜಲ್ಲಂ-
ನನ್ನ ಕಡೆಗೆ ಕಣ್ಣೆತ್ತಿದುದಿಲ್ಲಂ!
ಜಯ ಜಯ ಪಂಢರಿನಾಥ ವಿಠೋಬಾ ||೫||

೪ಹಳಸಿರದೆ ೫ಅಂದಿನಿಟ್ಟಿಗೆ ನಿನ್ನ?
ನೋಡ ಜೀಯ ತಂದಿಹೆ ಹೊಸತನ್ನ-
ಮೆಟ್ಟಿ ನಿಲ್ಲು ನಿಷ್ಠುರ ಮನಮೆನ್ನ,
ಜಯ ಜಯ ಪಂಢರಿನಾಥ ವಿಠೋಬಾ! ||೬||

ಪುಣ್ಯಸಲಿಲೆ ತಾಯೆ ಚಂದ್ರಭಾಗೆ,
ತೊಳಸೆನ್ನ ಮನದ ಶಂಕೆಯ ನೀಗೆ,
ಗುಳುಗುಳಿಸೊಡೆಯನ ನೆನವೆದೆ ಬೀಗೆ-
ಜಯ ಜಯ ಪಂಢರಿನಾಥ ವಿಠೋಬಾ! ||೭||

ಪೊರೆಯ! ತೊರೆಯ! ಇನ್ನೆರೆಯ ನೀನೆನ್ನ-
ಧನ್ಯನಾದೆ ಕಂಡೆನೆಂದೆ ನಿನ್ನ!
ನೀ ಮರೆವೊಡಮಿನ್ನಿದೆ ಮರೆಯೆನ್ನ-
ಜಯ ಜಯ ಪಂಢರಿನಾಥ ವಿಠೋಬಾ! ||೮||

ಗೆಯ್ದ ಪಾಪಮನಿತುಂ ನಿನಗರ್ಪಣ,
ಗೆಯ್ಯದ ಪುಣ್ಯಮದುಂ ನಿನಗರ್ಪಣ,
ಕಳೆದುಳಿದ ಜೀವಿತಂ ನಿನಗರ್ಪಣ,
ಜಯ ಜಯ ಪಂಢರಿನಾಥ ವಿಠೋಬಾ! ||೯||

ನಿನ್ನನೊಡೆಯ ಮತ್ತೇನನು ಬೇಡೆ-
ಬೇಡಲೇಕೆ ನೀ ಬೇಡದೆ ನೀಡೆ?
ಸಾಕಂತ್ಯವರಂ ನಾಲಗೆಯಾಡೆ –
ಜಯ ಜಯ ಪಂಢರಿನಾಥ ವಿಠೋಬಾ! ||೧೦||
*****
೧ ಮರುಧ್ವನಿಸು
೨ ಜಾಲೀಗಿಡ
೩ ಕಡವನ್ನು ದಾಟಿಸು
೪ ಹಳತಾಗು
೫ ದೇವರು ತನ್ನ ಭಕ್ತನಾದ ಪುಂಡರೀಕನ ಮನೆಗೆ ಬಂದಾಗ, ತಾಯಿತಂದೆಯವರ ಸೇವೆಯಲ್ಲಿ ನಿರತನಾಗಿದ್ದ ಆತನು ತಾನದನ್ನು ಮುಗಿಸಿ ಬರುವ ವರೆಗೆ ಇದರಲ್ಲಿರು ಎಂದು ಕೊಟ್ಟ ಇಟ್ಟಿಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಗೃತ ಗೀತೆ
Next post ಹೆಂಗಸರು ಕಾಫಿ ಕುಡಿಯುವುದು ಯೋಗ್ಯ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys