Home / ಕವನ / ಕವಿತೆ / ಹೇಮಾವತಿಯ ತೀರದಲ್ಲಿ

ಹೇಮಾವತಿಯ ತೀರದಲ್ಲಿ

ಹಗಲ ಕಣ್ಣನು ಮಂಕು ಕವಿಯಿತು,
ಮುಗಿಲ ಬಾಣದ ಬಿರುಸು ಹೆಚ್ಚಿತು,
ನೆಗೆದು ನೊರೆಯನು ಕೀಳುತೋಡಿತು
ಮಲೆಯನಾಡಿನ ಹೇಮೆಯು.

ಕರೆಯ ಮಂಟಪದೊಳಗೆ ಕುಳಿತು,
ಬೆರಗುಮಾಡುವ ಪ್ರಕೃತಿಯಂದಿನ
ಇರವ ನೋಡುತ ಮೂಕರಾದೆವು
ನಾನು ರಾಮ ಇಬ್ಬರೂ.

ಮುಗಿಲಿನಾರ್‍ಭಟ, ಗಾಳಿಯುಲುಹು,
ಹಗಲ ಕಂಬನಿಯಂತೆ ಸೋನೆಯು,
ನೆಗೆದು ಮೊರೆಯುವ ಹೇಮೆಯಬ್ಬರ-
ಏನು ಭೀಕರ ಪ್ರಕೃತಿಯು!

ಬಾನ ನೀಲವನಲೆಯೊಳಿಟ್ಟು,
ತಾನದೊಂದಿಗೆ ಹಾಡಿ ತೂಗಿದ
ಮಾನವತಿ ಮೃದುಗಮನೆ ಹೇಮೆಯೆ
ಕನಲಿ ಮೊರೆವೀ ಹೇಮೆಯು!

ಹಗಲಿನಂದಿನ ರೂಪು ತಂದಿತು
ಬಗೆಗೆ ಸಾವಿನ ಚಿಂತೆಗಳನು,
ನಗೆಯನಣಕಿಸಿ ಸೊಗವ ಜರೆಯುತ
ಬವಣೆಗೊಳ್ಳುವ ಭಾವವ.

ಏನು ಸೋಜಿಗ ಇಂಥ ದಿನದೊಳು
ಸ್ನಾನಮಾಡಲು ಪುಣ್ಯ ಕೆಳಸಿ
ಸಾನುರಾಗದಿ ಬಂದ ಬಾಲೆಯ-
ರಸುವ ನುಂಗಲು ಹೇಮೆಯು!

ಇರಲಿ ರೂಪವು, ಇರಲಿ ಬೆಡಗು,
ಸುರರ ಕನ್ಯೆಯ ಜರೆವ ಕೊರಲು,
ಇರಲಿ ಸ್ವರ್ಗದ ಮೌಗ್ಧ್ಯ-ಕನ್ನೆಯು
ಹೊನಲ ಮುನಿಸನು ತಡೆವಳೆ?

“ಇರುಳನೆಲ್ಲಾ ಹಾಡಿ ದಣಿದು
ಕೊರಲು ಕಟ್ಟಿದೆ, ಮೊಗವು ಸೊರಗಿದೆ.
ಬರಿಯ ಛಲವೇಕಿಂದು ಮೀವರೆ,
ಸೋನೆ ಹಗಲೊಳು, ಹೊಳೆಯೊಳು?”

ಕೆಳದಿಯರ ಜೊತೆ ಕೂಡಿ ಸರಸದಿ
ಹೊಳೆಯೊಳಲೆಯುತ ನಲಿವ ಕೌತುಕ-
ಕೆಳಸಿ, ತುಡಿಯುವ ಬಾಲೆ ಕೇಳ್ವಳೆ
ತಾಯಿ ನುಡಿದಾ ಹಿತವನು?

“ಬಾರೆ ಕಮಲೆ, ಬಾರೆ ಗೌರಿ,
ಬಾರೆ ಶಾರದೆ, ಪುಣ್ಯದಿನದೊಳು
ಕಾರ ಮುಗಿಲಿನ ಮೊಳಗಿಗಂಜುತ
ಹೊಳೆಗೆ ಹೋಗದೆ ನಿಲ್ವರೆ?”

ಏನು ಸಡಗರ! ಏನು ನಗೆಯು!
ಏನು ಉಲ್ಲಸವವರಿಗಂದು!
ಹೊನಲೊಳಡಗಿದ ಜವನ ಮೊಗದೊಳು
ನಗೆಯ ಹರಡುವ ಸರಸವು!

ಅವರ ಮೋದಕೆ, ಆದೊಡಯ್ಯೋ,
ಬುವಿಯೊಳಂದೇ ಚರಮದಿನವು.
ಅವರ ಜೀವದ ಹಣತೆ ಕ್ಷಣದೊಳು
ನಂದಿಹೋಯಿತು ಹೊನಲೊಳು.

ಹೊಳೆಯ ಮಂಟಪದೊಳಗೆ ಕುಳಿತು
ಹಳೆಯ ನೆನಪನು ಮನಕೆ ತಂದೆನು:
ಹಳುವ ತುಂಬಿದ ಗೋಳ ಹೊಳಲನು,
ಹರಿದ ಕಂಬನಿಕಾಲ್ವೆಯ;

ಆರ ಗಾನದ ಲಹರಿ ಹೃದಯಕೆ
ತೂರಿ ತೋರಿದ ಆತ್ಮದರಕೆಯ-
ನಾರ ಪ್ರೇಮವೆ ಪೂರ್‍ಣಮಾಡಿತೊ,
ಅಂಥ ತಂಗಿಯ ಸಾವನು.

ತಿಳಿವು ಮರಳಿತು, ಮನದ ದುಗುಡವ-
ನಳೆದು ಮರುಕವನೆರೆವ ತೆರದೊಳು
ತಲೆಯ ತಡಹುತ ರಾಮುವಿದ್ದನು-
ನುಡಿದೇನೀಪರಿ ಕೆಳೆಯಗೆ:

“ಏನು ದಿನವಿದು, ಕೆಳೆಯ, ಹೇಮೆಗೆ
ಏನಿದಬ್ಬರ!- ಇಂಥ ಹಗಲೊಳು
ಹೊನಳೊಳಳಿದಳು ತಂಗಿ ಜಾನಕಿ;
ತೋರಬಲ್ಲೆಯ ಮಸಣವ?”

ಎನ್ನ ಮಾತಿಗೆ, ರಾಮು ಸುಯ್ಯುತ,
“ಚಿನ್ನ, ನೆರೆಯೊಳು ಕಾಣದೆ”ಂದನು-
ಎನ್ನ ಕಂಬನಿಕೋಡಿ ಬೆರೆಯಿತು
ಮೊರೆವ ಹೇಮೆಯ ತೆರೆಯೊಳು.

ಸಾವು ಸೋಕುವುದೆಲ್ಲರನು, ದಿಟ-
ಸಾವಿಗಂಜುತ ಗೋಳ ಕರೆವುದು
ಸಾವು ಒಯ್ಯುವ ಜೀವಕಲ್ಲವು-
ಹಿಂದೆ ಉಳಿಸುವ ಅರಕೆಗೆ!
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...