Home / ಕವನ / ಕವಿತೆ / ಹೇಮಾವತಿಯ ತೀರದಲ್ಲಿ

ಹೇಮಾವತಿಯ ತೀರದಲ್ಲಿ

ಹಗಲ ಕಣ್ಣನು ಮಂಕು ಕವಿಯಿತು,
ಮುಗಿಲ ಬಾಣದ ಬಿರುಸು ಹೆಚ್ಚಿತು,
ನೆಗೆದು ನೊರೆಯನು ಕೀಳುತೋಡಿತು
ಮಲೆಯನಾಡಿನ ಹೇಮೆಯು.

ಕರೆಯ ಮಂಟಪದೊಳಗೆ ಕುಳಿತು,
ಬೆರಗುಮಾಡುವ ಪ್ರಕೃತಿಯಂದಿನ
ಇರವ ನೋಡುತ ಮೂಕರಾದೆವು
ನಾನು ರಾಮ ಇಬ್ಬರೂ.

ಮುಗಿಲಿನಾರ್‍ಭಟ, ಗಾಳಿಯುಲುಹು,
ಹಗಲ ಕಂಬನಿಯಂತೆ ಸೋನೆಯು,
ನೆಗೆದು ಮೊರೆಯುವ ಹೇಮೆಯಬ್ಬರ-
ಏನು ಭೀಕರ ಪ್ರಕೃತಿಯು!

ಬಾನ ನೀಲವನಲೆಯೊಳಿಟ್ಟು,
ತಾನದೊಂದಿಗೆ ಹಾಡಿ ತೂಗಿದ
ಮಾನವತಿ ಮೃದುಗಮನೆ ಹೇಮೆಯೆ
ಕನಲಿ ಮೊರೆವೀ ಹೇಮೆಯು!

ಹಗಲಿನಂದಿನ ರೂಪು ತಂದಿತು
ಬಗೆಗೆ ಸಾವಿನ ಚಿಂತೆಗಳನು,
ನಗೆಯನಣಕಿಸಿ ಸೊಗವ ಜರೆಯುತ
ಬವಣೆಗೊಳ್ಳುವ ಭಾವವ.

ಏನು ಸೋಜಿಗ ಇಂಥ ದಿನದೊಳು
ಸ್ನಾನಮಾಡಲು ಪುಣ್ಯ ಕೆಳಸಿ
ಸಾನುರಾಗದಿ ಬಂದ ಬಾಲೆಯ-
ರಸುವ ನುಂಗಲು ಹೇಮೆಯು!

ಇರಲಿ ರೂಪವು, ಇರಲಿ ಬೆಡಗು,
ಸುರರ ಕನ್ಯೆಯ ಜರೆವ ಕೊರಲು,
ಇರಲಿ ಸ್ವರ್ಗದ ಮೌಗ್ಧ್ಯ-ಕನ್ನೆಯು
ಹೊನಲ ಮುನಿಸನು ತಡೆವಳೆ?

“ಇರುಳನೆಲ್ಲಾ ಹಾಡಿ ದಣಿದು
ಕೊರಲು ಕಟ್ಟಿದೆ, ಮೊಗವು ಸೊರಗಿದೆ.
ಬರಿಯ ಛಲವೇಕಿಂದು ಮೀವರೆ,
ಸೋನೆ ಹಗಲೊಳು, ಹೊಳೆಯೊಳು?”

ಕೆಳದಿಯರ ಜೊತೆ ಕೂಡಿ ಸರಸದಿ
ಹೊಳೆಯೊಳಲೆಯುತ ನಲಿವ ಕೌತುಕ-
ಕೆಳಸಿ, ತುಡಿಯುವ ಬಾಲೆ ಕೇಳ್ವಳೆ
ತಾಯಿ ನುಡಿದಾ ಹಿತವನು?

“ಬಾರೆ ಕಮಲೆ, ಬಾರೆ ಗೌರಿ,
ಬಾರೆ ಶಾರದೆ, ಪುಣ್ಯದಿನದೊಳು
ಕಾರ ಮುಗಿಲಿನ ಮೊಳಗಿಗಂಜುತ
ಹೊಳೆಗೆ ಹೋಗದೆ ನಿಲ್ವರೆ?”

ಏನು ಸಡಗರ! ಏನು ನಗೆಯು!
ಏನು ಉಲ್ಲಸವವರಿಗಂದು!
ಹೊನಲೊಳಡಗಿದ ಜವನ ಮೊಗದೊಳು
ನಗೆಯ ಹರಡುವ ಸರಸವು!

ಅವರ ಮೋದಕೆ, ಆದೊಡಯ್ಯೋ,
ಬುವಿಯೊಳಂದೇ ಚರಮದಿನವು.
ಅವರ ಜೀವದ ಹಣತೆ ಕ್ಷಣದೊಳು
ನಂದಿಹೋಯಿತು ಹೊನಲೊಳು.

ಹೊಳೆಯ ಮಂಟಪದೊಳಗೆ ಕುಳಿತು
ಹಳೆಯ ನೆನಪನು ಮನಕೆ ತಂದೆನು:
ಹಳುವ ತುಂಬಿದ ಗೋಳ ಹೊಳಲನು,
ಹರಿದ ಕಂಬನಿಕಾಲ್ವೆಯ;

ಆರ ಗಾನದ ಲಹರಿ ಹೃದಯಕೆ
ತೂರಿ ತೋರಿದ ಆತ್ಮದರಕೆಯ-
ನಾರ ಪ್ರೇಮವೆ ಪೂರ್‍ಣಮಾಡಿತೊ,
ಅಂಥ ತಂಗಿಯ ಸಾವನು.

ತಿಳಿವು ಮರಳಿತು, ಮನದ ದುಗುಡವ-
ನಳೆದು ಮರುಕವನೆರೆವ ತೆರದೊಳು
ತಲೆಯ ತಡಹುತ ರಾಮುವಿದ್ದನು-
ನುಡಿದೇನೀಪರಿ ಕೆಳೆಯಗೆ:

“ಏನು ದಿನವಿದು, ಕೆಳೆಯ, ಹೇಮೆಗೆ
ಏನಿದಬ್ಬರ!- ಇಂಥ ಹಗಲೊಳು
ಹೊನಳೊಳಳಿದಳು ತಂಗಿ ಜಾನಕಿ;
ತೋರಬಲ್ಲೆಯ ಮಸಣವ?”

ಎನ್ನ ಮಾತಿಗೆ, ರಾಮು ಸುಯ್ಯುತ,
“ಚಿನ್ನ, ನೆರೆಯೊಳು ಕಾಣದೆ”ಂದನು-
ಎನ್ನ ಕಂಬನಿಕೋಡಿ ಬೆರೆಯಿತು
ಮೊರೆವ ಹೇಮೆಯ ತೆರೆಯೊಳು.

ಸಾವು ಸೋಕುವುದೆಲ್ಲರನು, ದಿಟ-
ಸಾವಿಗಂಜುತ ಗೋಳ ಕರೆವುದು
ಸಾವು ಒಯ್ಯುವ ಜೀವಕಲ್ಲವು-
ಹಿಂದೆ ಉಳಿಸುವ ಅರಕೆಗೆ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...