Home / ಕವನ / ಕವಿತೆ / ಹೇಮಾವತಿಯ ತೀರದಲ್ಲಿ

ಹೇಮಾವತಿಯ ತೀರದಲ್ಲಿ

ಹಗಲ ಕಣ್ಣನು ಮಂಕು ಕವಿಯಿತು,
ಮುಗಿಲ ಬಾಣದ ಬಿರುಸು ಹೆಚ್ಚಿತು,
ನೆಗೆದು ನೊರೆಯನು ಕೀಳುತೋಡಿತು
ಮಲೆಯನಾಡಿನ ಹೇಮೆಯು.

ಕರೆಯ ಮಂಟಪದೊಳಗೆ ಕುಳಿತು,
ಬೆರಗುಮಾಡುವ ಪ್ರಕೃತಿಯಂದಿನ
ಇರವ ನೋಡುತ ಮೂಕರಾದೆವು
ನಾನು ರಾಮ ಇಬ್ಬರೂ.

ಮುಗಿಲಿನಾರ್‍ಭಟ, ಗಾಳಿಯುಲುಹು,
ಹಗಲ ಕಂಬನಿಯಂತೆ ಸೋನೆಯು,
ನೆಗೆದು ಮೊರೆಯುವ ಹೇಮೆಯಬ್ಬರ-
ಏನು ಭೀಕರ ಪ್ರಕೃತಿಯು!

ಬಾನ ನೀಲವನಲೆಯೊಳಿಟ್ಟು,
ತಾನದೊಂದಿಗೆ ಹಾಡಿ ತೂಗಿದ
ಮಾನವತಿ ಮೃದುಗಮನೆ ಹೇಮೆಯೆ
ಕನಲಿ ಮೊರೆವೀ ಹೇಮೆಯು!

ಹಗಲಿನಂದಿನ ರೂಪು ತಂದಿತು
ಬಗೆಗೆ ಸಾವಿನ ಚಿಂತೆಗಳನು,
ನಗೆಯನಣಕಿಸಿ ಸೊಗವ ಜರೆಯುತ
ಬವಣೆಗೊಳ್ಳುವ ಭಾವವ.

ಏನು ಸೋಜಿಗ ಇಂಥ ದಿನದೊಳು
ಸ್ನಾನಮಾಡಲು ಪುಣ್ಯ ಕೆಳಸಿ
ಸಾನುರಾಗದಿ ಬಂದ ಬಾಲೆಯ-
ರಸುವ ನುಂಗಲು ಹೇಮೆಯು!

ಇರಲಿ ರೂಪವು, ಇರಲಿ ಬೆಡಗು,
ಸುರರ ಕನ್ಯೆಯ ಜರೆವ ಕೊರಲು,
ಇರಲಿ ಸ್ವರ್ಗದ ಮೌಗ್ಧ್ಯ-ಕನ್ನೆಯು
ಹೊನಲ ಮುನಿಸನು ತಡೆವಳೆ?

“ಇರುಳನೆಲ್ಲಾ ಹಾಡಿ ದಣಿದು
ಕೊರಲು ಕಟ್ಟಿದೆ, ಮೊಗವು ಸೊರಗಿದೆ.
ಬರಿಯ ಛಲವೇಕಿಂದು ಮೀವರೆ,
ಸೋನೆ ಹಗಲೊಳು, ಹೊಳೆಯೊಳು?”

ಕೆಳದಿಯರ ಜೊತೆ ಕೂಡಿ ಸರಸದಿ
ಹೊಳೆಯೊಳಲೆಯುತ ನಲಿವ ಕೌತುಕ-
ಕೆಳಸಿ, ತುಡಿಯುವ ಬಾಲೆ ಕೇಳ್ವಳೆ
ತಾಯಿ ನುಡಿದಾ ಹಿತವನು?

“ಬಾರೆ ಕಮಲೆ, ಬಾರೆ ಗೌರಿ,
ಬಾರೆ ಶಾರದೆ, ಪುಣ್ಯದಿನದೊಳು
ಕಾರ ಮುಗಿಲಿನ ಮೊಳಗಿಗಂಜುತ
ಹೊಳೆಗೆ ಹೋಗದೆ ನಿಲ್ವರೆ?”

ಏನು ಸಡಗರ! ಏನು ನಗೆಯು!
ಏನು ಉಲ್ಲಸವವರಿಗಂದು!
ಹೊನಲೊಳಡಗಿದ ಜವನ ಮೊಗದೊಳು
ನಗೆಯ ಹರಡುವ ಸರಸವು!

ಅವರ ಮೋದಕೆ, ಆದೊಡಯ್ಯೋ,
ಬುವಿಯೊಳಂದೇ ಚರಮದಿನವು.
ಅವರ ಜೀವದ ಹಣತೆ ಕ್ಷಣದೊಳು
ನಂದಿಹೋಯಿತು ಹೊನಲೊಳು.

ಹೊಳೆಯ ಮಂಟಪದೊಳಗೆ ಕುಳಿತು
ಹಳೆಯ ನೆನಪನು ಮನಕೆ ತಂದೆನು:
ಹಳುವ ತುಂಬಿದ ಗೋಳ ಹೊಳಲನು,
ಹರಿದ ಕಂಬನಿಕಾಲ್ವೆಯ;

ಆರ ಗಾನದ ಲಹರಿ ಹೃದಯಕೆ
ತೂರಿ ತೋರಿದ ಆತ್ಮದರಕೆಯ-
ನಾರ ಪ್ರೇಮವೆ ಪೂರ್‍ಣಮಾಡಿತೊ,
ಅಂಥ ತಂಗಿಯ ಸಾವನು.

ತಿಳಿವು ಮರಳಿತು, ಮನದ ದುಗುಡವ-
ನಳೆದು ಮರುಕವನೆರೆವ ತೆರದೊಳು
ತಲೆಯ ತಡಹುತ ರಾಮುವಿದ್ದನು-
ನುಡಿದೇನೀಪರಿ ಕೆಳೆಯಗೆ:

“ಏನು ದಿನವಿದು, ಕೆಳೆಯ, ಹೇಮೆಗೆ
ಏನಿದಬ್ಬರ!- ಇಂಥ ಹಗಲೊಳು
ಹೊನಳೊಳಳಿದಳು ತಂಗಿ ಜಾನಕಿ;
ತೋರಬಲ್ಲೆಯ ಮಸಣವ?”

ಎನ್ನ ಮಾತಿಗೆ, ರಾಮು ಸುಯ್ಯುತ,
“ಚಿನ್ನ, ನೆರೆಯೊಳು ಕಾಣದೆ”ಂದನು-
ಎನ್ನ ಕಂಬನಿಕೋಡಿ ಬೆರೆಯಿತು
ಮೊರೆವ ಹೇಮೆಯ ತೆರೆಯೊಳು.

ಸಾವು ಸೋಕುವುದೆಲ್ಲರನು, ದಿಟ-
ಸಾವಿಗಂಜುತ ಗೋಳ ಕರೆವುದು
ಸಾವು ಒಯ್ಯುವ ಜೀವಕಲ್ಲವು-
ಹಿಂದೆ ಉಳಿಸುವ ಅರಕೆಗೆ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...