ರಾಮಿಯ ಗಂಡು

ಸರಸಿಯ ದಡದೊಳು ಹೊಂಗೆಯ ನೆಳಲೊಳು
ಗರುಕೆ ಮೆತ್ತೆಯ ಮೇಲೆ ಉರುಳಿ,
ಹರುಷದ ಮುದ್ದೆಯೆ ತಾನೆಂಬ ತೆರದೊಳ-
ಗಿರುವನು ರಾಮಿಯ ಗಂಡು.

ಹೊಲ್ಲಳು ರಾಮಿ; ಇಂದವಳಿಗೆ ಮನೆಯಿಲ್ಲ-
ಇಲ್ಲ ಬಾಂಧವ್ಯದ ಅಂಟು.
ಎಲ್ಲವು ಆ ಕಂದನೊಬ್ಬನೆ ಬಾಳಿನೊ-
ಳುಲ್ಲಸ ಹೂಡುವ ನಂಟು.

ಹಸುರೊಳಗಾಡುವ ಕಂದನ ನೋಡುತ
ಬಸಿರನ್ನು ನೆನೆವಳು ರಾಮಿ-
ಕಸಕಿಂತ ಹೀನನು ತನು ಮನ ಮಾನವ
ಕಸಿದುಕೊಂಡಾ ಹಳೆ ಕತೆಯ.

ನೋಟಕ್ಕೆ ರೂಪಿಲ್ಲ, ಕೂಟಕ್ಕೆ ಸಮನಲ್ಲ,
ಬೇಟಕ್ಕು ನಯವಿಲ್ಲ ಕನಕ.
ಮಾಟಗಾರಿಕೆಯೇನೊ? ಬಲ್ಲಳೆ? ಆವುದೊ
ಹೂಟದಿ ಗೆದ್ದನು ತನ್ನ.

“ರಾಮಿ, ನನ್ನೊಲುಮೆಯೆ, ನನ್ನೆದೆ ಹಣತೆಯೆ,
ಕಾಮಿಸಿ ಬಂದಿಹೆ ನಿನ್ನ,
ಪ್ರೇಮದ ಚಿಲುಮೆಯ ಚಿಮ್ಮಿಸುತೀ ಮರು-
ಭೂಮಿಯ ದಾಹವ ತಣಿಸು.

“ಮನೆ ಇದೆ- ಆದೊಡೆ – ದೀಪ ಹಚ್ಚುವರಿಲ್ಲ,
ದನ ಕರು ಹೊಲ ಗದ್ದೆ ವ್ಯರ್‍ಥ.
ಮನೆಸಿರಿಯಾಗು ಬಾ, ಬದುಕಿಗೆ ಬೆಳಕಾಗು,
ಮನದನ್ನೆ, ಬಾಳಿನ ಕಣ್ಣೆ.”

ಕನಕ ಸಾಮಾನ್ಯನೆ? ಒಲಿಸಲಿದೇ ಮೊದಲೆ?
ಪ್ರಣಯಿಗಳೊಳು ಕಡುಜಾಣ.
ಇನಿದಾಯ್ತು, ರಾಮಿಯ ಕಿವಿಗತವ ಹೊಯ್ದಿ.
ತನುನಯದಾ ಸವಿಸೊಲ್ಲು.

ಬಿಟ್ಟಳು ತೌರೂರ, ನೆಚ್ಚಿದ ತಂದೆಯ,
ದಿಟ್ಟ ಕನಕಣ್ಣನ ಮೆಚ್ಚಿ,
ಕಟ್ಟುಂಟೆ ಪ್ರಾಯದೊಳುಕ್ಕುವ ಮೋಹಕೆ?
ದುಷ್ಟನ ಹುಚ್ಚಿ ನೆಚ್ಚಿದಳು.

ದಿನ ದಿನ ಊರೂರನಲೆಯುತ ಕಳೆದರು.
ಕನಕನ ಮನೆಮಠವೆಲ್ಲಾ
ಕನಸಿನ ಗಂಟಾಯ್ತು, ರಾಮಿಯ ಕನಸೊಡೆ-
ದನುತಾಪದುರಿ ತಾಗಿತೆದೆಗೆ.

ಕಾಮಿ ಬಿಟ್ಟೋಡಿದನಬಲೆಯ ಸತ್ರದಿ
ಕಾಮದ ಬಿಸಿಯಾರಿಹೋಗೆ,
ಭೀಮಭವಾರ್‍ಣವದೊಳಗೀಜಲಿಬ್ಬರೆ:
ರಾಮಿ- ಮತ್ತಾಕೆಯ ಪಾಪ!

ಹತ್ತಿರ ಕರೆದಳು ಮೋಹದ ಮುದ್ದನ,
ಮುತ್ತಲು ಕಂಬನಿ ಕಣ್ಣ.
ಕತ್ತನಾಲಿಂಗಿಸಿ ಮುಡಿಯ ನೇವರಿಸುತ್ತ-
ಲೊತ್ತಿದಳಧರವ ತಲೆಗೆ.

“ಒಲುಮೆಯ ಕುರುಡಿಗೆ ಬಲಿಯಾದೆವಿಬ್ಬರು,
ಬಳುವಳಿಗೀ ಬಾಳೆ ನಿನಗೆ?
ಕುಲವಿತ್ತೆ, ರೂಪಿತ್ತೆ, ಶೀಲವೆ ಕನಕಗೆ?
ಹುಲುಮನುಜಗೆ ನಾನೆಂತೊಲಿದೆ?

“ಪ್ರಣಯ ಪ್ರಪಾತಕ್ಕೆ ಧುಮುಕೆಂದು ನಚ್ಚೊಂದು
ಕೆಣಕಿತೊ ಮನವ? ನಾನರಿಯೆ.
ಕನಕನ ನೆಮ್ಮುವ ನರಕವೆ ಬಾಗಿಲೊ,
ಗಿಣಿ, ನಿನ್ನ ನಪ್ಪುವ ದಿವಕೆ?

“ಒಲುಮೆಯ ಹುಚ್ಚೊಳು ನೀ ಬಹ ನೆಚ್ಹಿತ್ತೊ?
ಒಲಿದೆನೊ ನಿನಗಾಗಿ, ಚಿನ್ನ?”
ಬಲು ಮೋಹದಿಂದಣುಗನ ಮುತ್ತಿಟ್ಟಳು ರಾಮಿ-
ಇಳೆಯೊಳು ತನ್ನೊಂದೆ ನಚ್ಚ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೂಸು ಒಪ್ಪಿಸುವ ಹಾಡು
Next post ಕುರುಹು

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…