Home / ಕವನ / ಕವಿತೆ / ರಾಮಿಯ ಗಂಡು

ರಾಮಿಯ ಗಂಡು

ಸರಸಿಯ ದಡದೊಳು ಹೊಂಗೆಯ ನೆಳಲೊಳು
ಗರುಕೆ ಮೆತ್ತೆಯ ಮೇಲೆ ಉರುಳಿ,
ಹರುಷದ ಮುದ್ದೆಯೆ ತಾನೆಂಬ ತೆರದೊಳ-
ಗಿರುವನು ರಾಮಿಯ ಗಂಡು.

ಹೊಲ್ಲಳು ರಾಮಿ; ಇಂದವಳಿಗೆ ಮನೆಯಿಲ್ಲ-
ಇಲ್ಲ ಬಾಂಧವ್ಯದ ಅಂಟು.
ಎಲ್ಲವು ಆ ಕಂದನೊಬ್ಬನೆ ಬಾಳಿನೊ-
ಳುಲ್ಲಸ ಹೂಡುವ ನಂಟು.

ಹಸುರೊಳಗಾಡುವ ಕಂದನ ನೋಡುತ
ಬಸಿರನ್ನು ನೆನೆವಳು ರಾಮಿ-
ಕಸಕಿಂತ ಹೀನನು ತನು ಮನ ಮಾನವ
ಕಸಿದುಕೊಂಡಾ ಹಳೆ ಕತೆಯ.

ನೋಟಕ್ಕೆ ರೂಪಿಲ್ಲ, ಕೂಟಕ್ಕೆ ಸಮನಲ್ಲ,
ಬೇಟಕ್ಕು ನಯವಿಲ್ಲ ಕನಕ.
ಮಾಟಗಾರಿಕೆಯೇನೊ? ಬಲ್ಲಳೆ? ಆವುದೊ
ಹೂಟದಿ ಗೆದ್ದನು ತನ್ನ.

“ರಾಮಿ, ನನ್ನೊಲುಮೆಯೆ, ನನ್ನೆದೆ ಹಣತೆಯೆ,
ಕಾಮಿಸಿ ಬಂದಿಹೆ ನಿನ್ನ,
ಪ್ರೇಮದ ಚಿಲುಮೆಯ ಚಿಮ್ಮಿಸುತೀ ಮರು-
ಭೂಮಿಯ ದಾಹವ ತಣಿಸು.

“ಮನೆ ಇದೆ- ಆದೊಡೆ – ದೀಪ ಹಚ್ಚುವರಿಲ್ಲ,
ದನ ಕರು ಹೊಲ ಗದ್ದೆ ವ್ಯರ್‍ಥ.
ಮನೆಸಿರಿಯಾಗು ಬಾ, ಬದುಕಿಗೆ ಬೆಳಕಾಗು,
ಮನದನ್ನೆ, ಬಾಳಿನ ಕಣ್ಣೆ.”

ಕನಕ ಸಾಮಾನ್ಯನೆ? ಒಲಿಸಲಿದೇ ಮೊದಲೆ?
ಪ್ರಣಯಿಗಳೊಳು ಕಡುಜಾಣ.
ಇನಿದಾಯ್ತು, ರಾಮಿಯ ಕಿವಿಗತವ ಹೊಯ್ದಿ.
ತನುನಯದಾ ಸವಿಸೊಲ್ಲು.

ಬಿಟ್ಟಳು ತೌರೂರ, ನೆಚ್ಚಿದ ತಂದೆಯ,
ದಿಟ್ಟ ಕನಕಣ್ಣನ ಮೆಚ್ಚಿ,
ಕಟ್ಟುಂಟೆ ಪ್ರಾಯದೊಳುಕ್ಕುವ ಮೋಹಕೆ?
ದುಷ್ಟನ ಹುಚ್ಚಿ ನೆಚ್ಚಿದಳು.

ದಿನ ದಿನ ಊರೂರನಲೆಯುತ ಕಳೆದರು.
ಕನಕನ ಮನೆಮಠವೆಲ್ಲಾ
ಕನಸಿನ ಗಂಟಾಯ್ತು, ರಾಮಿಯ ಕನಸೊಡೆ-
ದನುತಾಪದುರಿ ತಾಗಿತೆದೆಗೆ.

ಕಾಮಿ ಬಿಟ್ಟೋಡಿದನಬಲೆಯ ಸತ್ರದಿ
ಕಾಮದ ಬಿಸಿಯಾರಿಹೋಗೆ,
ಭೀಮಭವಾರ್‍ಣವದೊಳಗೀಜಲಿಬ್ಬರೆ:
ರಾಮಿ- ಮತ್ತಾಕೆಯ ಪಾಪ!

ಹತ್ತಿರ ಕರೆದಳು ಮೋಹದ ಮುದ್ದನ,
ಮುತ್ತಲು ಕಂಬನಿ ಕಣ್ಣ.
ಕತ್ತನಾಲಿಂಗಿಸಿ ಮುಡಿಯ ನೇವರಿಸುತ್ತ-
ಲೊತ್ತಿದಳಧರವ ತಲೆಗೆ.

“ಒಲುಮೆಯ ಕುರುಡಿಗೆ ಬಲಿಯಾದೆವಿಬ್ಬರು,
ಬಳುವಳಿಗೀ ಬಾಳೆ ನಿನಗೆ?
ಕುಲವಿತ್ತೆ, ರೂಪಿತ್ತೆ, ಶೀಲವೆ ಕನಕಗೆ?
ಹುಲುಮನುಜಗೆ ನಾನೆಂತೊಲಿದೆ?

“ಪ್ರಣಯ ಪ್ರಪಾತಕ್ಕೆ ಧುಮುಕೆಂದು ನಚ್ಚೊಂದು
ಕೆಣಕಿತೊ ಮನವ? ನಾನರಿಯೆ.
ಕನಕನ ನೆಮ್ಮುವ ನರಕವೆ ಬಾಗಿಲೊ,
ಗಿಣಿ, ನಿನ್ನ ನಪ್ಪುವ ದಿವಕೆ?

“ಒಲುಮೆಯ ಹುಚ್ಚೊಳು ನೀ ಬಹ ನೆಚ್ಹಿತ್ತೊ?
ಒಲಿದೆನೊ ನಿನಗಾಗಿ, ಚಿನ್ನ?”
ಬಲು ಮೋಹದಿಂದಣುಗನ ಮುತ್ತಿಟ್ಟಳು ರಾಮಿ-
ಇಳೆಯೊಳು ತನ್ನೊಂದೆ ನಚ್ಚ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...