Home / ಕವನ / ಕವಿತೆ / ರಾಮಿಯ ಗಂಡು

ರಾಮಿಯ ಗಂಡು

ಸರಸಿಯ ದಡದೊಳು ಹೊಂಗೆಯ ನೆಳಲೊಳು
ಗರುಕೆ ಮೆತ್ತೆಯ ಮೇಲೆ ಉರುಳಿ,
ಹರುಷದ ಮುದ್ದೆಯೆ ತಾನೆಂಬ ತೆರದೊಳ-
ಗಿರುವನು ರಾಮಿಯ ಗಂಡು.

ಹೊಲ್ಲಳು ರಾಮಿ; ಇಂದವಳಿಗೆ ಮನೆಯಿಲ್ಲ-
ಇಲ್ಲ ಬಾಂಧವ್ಯದ ಅಂಟು.
ಎಲ್ಲವು ಆ ಕಂದನೊಬ್ಬನೆ ಬಾಳಿನೊ-
ಳುಲ್ಲಸ ಹೂಡುವ ನಂಟು.

ಹಸುರೊಳಗಾಡುವ ಕಂದನ ನೋಡುತ
ಬಸಿರನ್ನು ನೆನೆವಳು ರಾಮಿ-
ಕಸಕಿಂತ ಹೀನನು ತನು ಮನ ಮಾನವ
ಕಸಿದುಕೊಂಡಾ ಹಳೆ ಕತೆಯ.

ನೋಟಕ್ಕೆ ರೂಪಿಲ್ಲ, ಕೂಟಕ್ಕೆ ಸಮನಲ್ಲ,
ಬೇಟಕ್ಕು ನಯವಿಲ್ಲ ಕನಕ.
ಮಾಟಗಾರಿಕೆಯೇನೊ? ಬಲ್ಲಳೆ? ಆವುದೊ
ಹೂಟದಿ ಗೆದ್ದನು ತನ್ನ.

“ರಾಮಿ, ನನ್ನೊಲುಮೆಯೆ, ನನ್ನೆದೆ ಹಣತೆಯೆ,
ಕಾಮಿಸಿ ಬಂದಿಹೆ ನಿನ್ನ,
ಪ್ರೇಮದ ಚಿಲುಮೆಯ ಚಿಮ್ಮಿಸುತೀ ಮರು-
ಭೂಮಿಯ ದಾಹವ ತಣಿಸು.

“ಮನೆ ಇದೆ- ಆದೊಡೆ – ದೀಪ ಹಚ್ಚುವರಿಲ್ಲ,
ದನ ಕರು ಹೊಲ ಗದ್ದೆ ವ್ಯರ್‍ಥ.
ಮನೆಸಿರಿಯಾಗು ಬಾ, ಬದುಕಿಗೆ ಬೆಳಕಾಗು,
ಮನದನ್ನೆ, ಬಾಳಿನ ಕಣ್ಣೆ.”

ಕನಕ ಸಾಮಾನ್ಯನೆ? ಒಲಿಸಲಿದೇ ಮೊದಲೆ?
ಪ್ರಣಯಿಗಳೊಳು ಕಡುಜಾಣ.
ಇನಿದಾಯ್ತು, ರಾಮಿಯ ಕಿವಿಗತವ ಹೊಯ್ದಿ.
ತನುನಯದಾ ಸವಿಸೊಲ್ಲು.

ಬಿಟ್ಟಳು ತೌರೂರ, ನೆಚ್ಚಿದ ತಂದೆಯ,
ದಿಟ್ಟ ಕನಕಣ್ಣನ ಮೆಚ್ಚಿ,
ಕಟ್ಟುಂಟೆ ಪ್ರಾಯದೊಳುಕ್ಕುವ ಮೋಹಕೆ?
ದುಷ್ಟನ ಹುಚ್ಚಿ ನೆಚ್ಚಿದಳು.

ದಿನ ದಿನ ಊರೂರನಲೆಯುತ ಕಳೆದರು.
ಕನಕನ ಮನೆಮಠವೆಲ್ಲಾ
ಕನಸಿನ ಗಂಟಾಯ್ತು, ರಾಮಿಯ ಕನಸೊಡೆ-
ದನುತಾಪದುರಿ ತಾಗಿತೆದೆಗೆ.

ಕಾಮಿ ಬಿಟ್ಟೋಡಿದನಬಲೆಯ ಸತ್ರದಿ
ಕಾಮದ ಬಿಸಿಯಾರಿಹೋಗೆ,
ಭೀಮಭವಾರ್‍ಣವದೊಳಗೀಜಲಿಬ್ಬರೆ:
ರಾಮಿ- ಮತ್ತಾಕೆಯ ಪಾಪ!

ಹತ್ತಿರ ಕರೆದಳು ಮೋಹದ ಮುದ್ದನ,
ಮುತ್ತಲು ಕಂಬನಿ ಕಣ್ಣ.
ಕತ್ತನಾಲಿಂಗಿಸಿ ಮುಡಿಯ ನೇವರಿಸುತ್ತ-
ಲೊತ್ತಿದಳಧರವ ತಲೆಗೆ.

“ಒಲುಮೆಯ ಕುರುಡಿಗೆ ಬಲಿಯಾದೆವಿಬ್ಬರು,
ಬಳುವಳಿಗೀ ಬಾಳೆ ನಿನಗೆ?
ಕುಲವಿತ್ತೆ, ರೂಪಿತ್ತೆ, ಶೀಲವೆ ಕನಕಗೆ?
ಹುಲುಮನುಜಗೆ ನಾನೆಂತೊಲಿದೆ?

“ಪ್ರಣಯ ಪ್ರಪಾತಕ್ಕೆ ಧುಮುಕೆಂದು ನಚ್ಚೊಂದು
ಕೆಣಕಿತೊ ಮನವ? ನಾನರಿಯೆ.
ಕನಕನ ನೆಮ್ಮುವ ನರಕವೆ ಬಾಗಿಲೊ,
ಗಿಣಿ, ನಿನ್ನ ನಪ್ಪುವ ದಿವಕೆ?

“ಒಲುಮೆಯ ಹುಚ್ಚೊಳು ನೀ ಬಹ ನೆಚ್ಹಿತ್ತೊ?
ಒಲಿದೆನೊ ನಿನಗಾಗಿ, ಚಿನ್ನ?”
ಬಲು ಮೋಹದಿಂದಣುಗನ ಮುತ್ತಿಟ್ಟಳು ರಾಮಿ-
ಇಳೆಯೊಳು ತನ್ನೊಂದೆ ನಚ್ಚ.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...