Home / ಕವನ / ಕವಿತೆ / ರಾಮಿಯ ಗಂಡು

ರಾಮಿಯ ಗಂಡು

ಸರಸಿಯ ದಡದೊಳು ಹೊಂಗೆಯ ನೆಳಲೊಳು
ಗರುಕೆ ಮೆತ್ತೆಯ ಮೇಲೆ ಉರುಳಿ,
ಹರುಷದ ಮುದ್ದೆಯೆ ತಾನೆಂಬ ತೆರದೊಳ-
ಗಿರುವನು ರಾಮಿಯ ಗಂಡು.

ಹೊಲ್ಲಳು ರಾಮಿ; ಇಂದವಳಿಗೆ ಮನೆಯಿಲ್ಲ-
ಇಲ್ಲ ಬಾಂಧವ್ಯದ ಅಂಟು.
ಎಲ್ಲವು ಆ ಕಂದನೊಬ್ಬನೆ ಬಾಳಿನೊ-
ಳುಲ್ಲಸ ಹೂಡುವ ನಂಟು.

ಹಸುರೊಳಗಾಡುವ ಕಂದನ ನೋಡುತ
ಬಸಿರನ್ನು ನೆನೆವಳು ರಾಮಿ-
ಕಸಕಿಂತ ಹೀನನು ತನು ಮನ ಮಾನವ
ಕಸಿದುಕೊಂಡಾ ಹಳೆ ಕತೆಯ.

ನೋಟಕ್ಕೆ ರೂಪಿಲ್ಲ, ಕೂಟಕ್ಕೆ ಸಮನಲ್ಲ,
ಬೇಟಕ್ಕು ನಯವಿಲ್ಲ ಕನಕ.
ಮಾಟಗಾರಿಕೆಯೇನೊ? ಬಲ್ಲಳೆ? ಆವುದೊ
ಹೂಟದಿ ಗೆದ್ದನು ತನ್ನ.

“ರಾಮಿ, ನನ್ನೊಲುಮೆಯೆ, ನನ್ನೆದೆ ಹಣತೆಯೆ,
ಕಾಮಿಸಿ ಬಂದಿಹೆ ನಿನ್ನ,
ಪ್ರೇಮದ ಚಿಲುಮೆಯ ಚಿಮ್ಮಿಸುತೀ ಮರು-
ಭೂಮಿಯ ದಾಹವ ತಣಿಸು.

“ಮನೆ ಇದೆ- ಆದೊಡೆ – ದೀಪ ಹಚ್ಚುವರಿಲ್ಲ,
ದನ ಕರು ಹೊಲ ಗದ್ದೆ ವ್ಯರ್‍ಥ.
ಮನೆಸಿರಿಯಾಗು ಬಾ, ಬದುಕಿಗೆ ಬೆಳಕಾಗು,
ಮನದನ್ನೆ, ಬಾಳಿನ ಕಣ್ಣೆ.”

ಕನಕ ಸಾಮಾನ್ಯನೆ? ಒಲಿಸಲಿದೇ ಮೊದಲೆ?
ಪ್ರಣಯಿಗಳೊಳು ಕಡುಜಾಣ.
ಇನಿದಾಯ್ತು, ರಾಮಿಯ ಕಿವಿಗತವ ಹೊಯ್ದಿ.
ತನುನಯದಾ ಸವಿಸೊಲ್ಲು.

ಬಿಟ್ಟಳು ತೌರೂರ, ನೆಚ್ಚಿದ ತಂದೆಯ,
ದಿಟ್ಟ ಕನಕಣ್ಣನ ಮೆಚ್ಚಿ,
ಕಟ್ಟುಂಟೆ ಪ್ರಾಯದೊಳುಕ್ಕುವ ಮೋಹಕೆ?
ದುಷ್ಟನ ಹುಚ್ಚಿ ನೆಚ್ಚಿದಳು.

ದಿನ ದಿನ ಊರೂರನಲೆಯುತ ಕಳೆದರು.
ಕನಕನ ಮನೆಮಠವೆಲ್ಲಾ
ಕನಸಿನ ಗಂಟಾಯ್ತು, ರಾಮಿಯ ಕನಸೊಡೆ-
ದನುತಾಪದುರಿ ತಾಗಿತೆದೆಗೆ.

ಕಾಮಿ ಬಿಟ್ಟೋಡಿದನಬಲೆಯ ಸತ್ರದಿ
ಕಾಮದ ಬಿಸಿಯಾರಿಹೋಗೆ,
ಭೀಮಭವಾರ್‍ಣವದೊಳಗೀಜಲಿಬ್ಬರೆ:
ರಾಮಿ- ಮತ್ತಾಕೆಯ ಪಾಪ!

ಹತ್ತಿರ ಕರೆದಳು ಮೋಹದ ಮುದ್ದನ,
ಮುತ್ತಲು ಕಂಬನಿ ಕಣ್ಣ.
ಕತ್ತನಾಲಿಂಗಿಸಿ ಮುಡಿಯ ನೇವರಿಸುತ್ತ-
ಲೊತ್ತಿದಳಧರವ ತಲೆಗೆ.

“ಒಲುಮೆಯ ಕುರುಡಿಗೆ ಬಲಿಯಾದೆವಿಬ್ಬರು,
ಬಳುವಳಿಗೀ ಬಾಳೆ ನಿನಗೆ?
ಕುಲವಿತ್ತೆ, ರೂಪಿತ್ತೆ, ಶೀಲವೆ ಕನಕಗೆ?
ಹುಲುಮನುಜಗೆ ನಾನೆಂತೊಲಿದೆ?

“ಪ್ರಣಯ ಪ್ರಪಾತಕ್ಕೆ ಧುಮುಕೆಂದು ನಚ್ಚೊಂದು
ಕೆಣಕಿತೊ ಮನವ? ನಾನರಿಯೆ.
ಕನಕನ ನೆಮ್ಮುವ ನರಕವೆ ಬಾಗಿಲೊ,
ಗಿಣಿ, ನಿನ್ನ ನಪ್ಪುವ ದಿವಕೆ?

“ಒಲುಮೆಯ ಹುಚ್ಚೊಳು ನೀ ಬಹ ನೆಚ್ಹಿತ್ತೊ?
ಒಲಿದೆನೊ ನಿನಗಾಗಿ, ಚಿನ್ನ?”
ಬಲು ಮೋಹದಿಂದಣುಗನ ಮುತ್ತಿಟ್ಟಳು ರಾಮಿ-
ಇಳೆಯೊಳು ತನ್ನೊಂದೆ ನಚ್ಚ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...