Home / ಕವನ / ಕವಿತೆ / ಮಹಾತ್ಮರಿಗೆ

ಮಹಾತ್ಮರಿಗೆ

ಒಡದು ಕರ್ಮದ ಕಟ್ಟು – ಜಗದ ಮೋಹವ ಸುಟ್ಟು
ಪಡೆದು ಸತ್ಯದ ದೃಷ್ಟಿ – ಜನಕೆ ತಿಳಿವನು ಕೊಟ್ಟು
ಜಡ ಶರೀರದ ಮಮತೆ – ಕಾಮ ಮದಗಳ ಬಿಟ್ಟು
ನುಡಿ ನುಡಿಗಹಿಂಸೆಯನ್ನು ಬೋಧಿಸುವೆ ಕೃಪೆಯಿಟ್ಟು.

ಎಲ್ಲ ಹೃದಯವ ಹೊಕ್ಕು – ಅಳೆದು ಜನುಮಗಳನ್ನು
ಎಲ್ಲ ಶೂಲೆಯನರಿದು – ಎರೆದು ಓಷಧಿಗಳನು
ಎಲ್ಲ ಹಿಂಸೆಯ ತೊಡೆದು – ಮುರಿದು ದುರ್ಗುಣಗಳನು
ಸೊಲ್ಲು ಸೊಲ್ಲಿಗೆ ಸತ್ಯ – ಕಾಣಿಸುವ ಗುರು ಶರಣು.

ನೀನು ನಡೆದುದೆ ಧರ್ಮ- ನೀನು ನುಡಿದುದೆ ಸತ್ಯ.
ನೀನಹಂಕಾರಗಳ – ಮೋಹ ರೋಷದ ಮಿಥ್ಯ
ಮಾನಾಭಿಮಾನಗಳ – ಹಾಯ್ದು ಕಂಡಿಹೆ ಸತ್ಯ.
ನೀನು ಪ್ರೇಮದ ಮೂರ್ತಿ – ಜಾಗ್ರತನು ನೀ ನಿತ್ಯ.

ಕೃಷ್ಣಟನಾಡಿತಮೆಲ್ಲ – ಹಾಸುಹೊಕ್ಕಾಗಿಹುದು
ಕೃಷ್ಣ ನೀನಾಗಿರಲು – ವಿಜಯರಾವಹುದಹುದು
ಈ ಕುರುಕ್ಷೇತ್ರದಲಿ – ನೀನು ಸಾರಥಿಯಾಗಿ
ಲೋಕ ರಕ್ಷಿಸು ಗಾಂಧಿ – ಸನ್ಮಹಾತ್ಮನೆ ಸಾಗಿ.

ಸತ್ವರಜತಮಗುಣವ – ಹಸುರು ಬಿಳಿ ಕೆಂಪುಗಳ
ನಿತ್ಯಕೇತನವೆತ್ತಿ – ಸ್ನೇಹದಿಂ ಲೋಕಗಳ
ಅತ್ಯಧಿಕ ವಾತ್ಸಲ್ಯ – ಅಭಯ ವಿಶ್ವಾಸಗಳ
ಸ್ತುತ್ಯ ಮೂರುತಿ ಶರಣು – ನೆನೆವೆ ನಿನ್ನಂಘ್ರಿಗಳ.

ಹತ್ತು ದಿಕ್ಕುಗಳಲ್ಲಿ – ಕರುಣವಾಹಿನಿ ಹರಿಸಿ
ಮತ್ತೆ ಬಿಂಬಿಸಿ ನಿನ್ನ – ನೆಲ್ಲ ಹೃದಯದೊಳಿರಿಸಿ
ಓ ಹಸನ್ಮುಖಿ ಬಾರ – ಶಾಂತಿ ಲೋಕದಿ ಸುರಿಸಿ
ಶ್ರೀಹಸಾದವ ನೀಡು- ಓ ಮಹಾತ್ಮನೆ ಹರಸಿ-

ವಾಣಿಯಲ್ಲಿ ಶ್ರೀರಾಮ – ರಾಮಚಂದ್ರನನಾಮ
ಕ್ಷೋಣಿಯಲಿ ರಘುರಾಮ – ನಾಮ ಪಾವನನಾಮ
ಸಕಲಕೆಲ್ಲಕು ಮರ್ದು – ರಾಂ ರಹೀಮರನಾಮ
ನಿಖಿಳದೇವರ ನಿಜವ – ನೊರೆವ ಸಾಧು ಸನಾಮ.

ನಿನ್ನ ಬಾಳೀ ಜಗದ- ರಕ್ಷಣೆಗೆ ಮುಡುಪಾಯ್ತು
ಸನ್ನುತನೆ ಭಾರತಿಯ – ಬಿಡುಗಡೆಗೆ ಎಡೆಯಾಯ್ತು
ಉನ್ನತಾಮಲ ಕೀರ್ತಿ – ಮಾನಿನಿಗೆ ಚಿರಮಾಯ್ತು.
ಮುನ್ನ ಸ್ವಾತಂತ್ರ್ಯಕ್ಕೆ – ಸುಸ್ಥಿರದ ಜಯಮಾಯ್ತು.

ಲೋಕವೇ ನಿನದಾಯ್ತು – ನೀನು ಸರ್ವರೊಳಿರಲು
ಶ್ರೀಕರಾಂಘ್ರಿಯ ರೇಣು – ಎಮ್ಮ ಶಿರದೊಳಗಿರಲು
ಸಾಕು ನಿನ್ನ ಸ್ಮರಣೆ – ಸಕಲರನ್ನೆಬ್ಬಿಸಲು
ಶೋಕದಳಿವುದು ದೇವ – ನಿನ್ನ ಕೃಪೆಯೊಂದಿರಲು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...