Home / ಕವನ / ಕವಿತೆ / ಇದೊ, ಶ್ರಾವಣ ಬಂದಿದೆ!

ಇದೊ, ಶ್ರಾವಣ ಬಂದಿದೆ!

(ಭಾರತ ಸ್ವಾತಂತ್ರ್ಯೋದಯದ ರೂಪಕ)

ಇದೊ, ಶ್ರಾವಣಬಂದಿದೆ ಭೂವನಕೆ,
ಜನಜೀವನ ಪಾವನ ಗೈಯಲಿಕೆ-
ಇದೊ, ಶ್ರಾವಣ ಬಂದಿದೆ ಭಾರತಕೆ !


ತೆರಳಿತು ವೈಶಾಖದ ಬಿರುಬಿಸಿಲು,
ಸರಿಯಿತು ಮೃಗಜಲದಾ ಹುಸಿಹೊನಲು ;
ಮರೆಯಾಯಿತು ಸುಟ್ಟುರೆಗಳ ಹೊಯಿಲು,
ಬರಿ ಬಾನೊಳು ತುಂಬಿದೆ ನೀರ್‌ ಮುಗಿಲು !
ಬರಗಾಲದ ಬಾಧೆಯ ಹಣಿಯಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ !


ಮುಂಗಾರಿನ ಕಾರ್‍ಮೋಡದ ಕೂಟ….
ಮುನ್ನೀರಲೆಗಳ ತಾಂಡವದಾಟ….
ಕಂಗೆಡಿಸುವ ಕೋಲ್ಮಿಂಚಿನ ಕಾಟ….
ಹಿಂಗಿದುವೋ ಸಿಡಿಲಿನ ಗುಡುಗಾಟ-
ಸಮಯೋಗದ ಸರಿಯನು ಸುರಿಸಲಿಕೆ
ಇದೊ, ಶ್ರಾವಣ ಬಂದಿದೆ ಭೂತಲಕೆ !


ಕಾಡುವ ತಗರಿನ ಕೊಂಬನು ಕಳೆದು….
ಹೋರುವ ಹೋರಿಯ ಹಮ್ಮನು ಹಿಳಿದು….
ಹೆಣ್‌-ಗಂಡನು ಹುರುಪಿಸಿ ಮನಸೆಳೆದು….
ರಣಹೇಡಿ ಏಡಿಯಾ ತಲೆ ತುಳಿದು….
ಮೃಗರಾಜನ ಮೈ ಗುಣ ಮೆರೆಸಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ!


ಬಾನೊಳು ತುಂಬಿದೆ ಜೀವನ ಜಲವು….
ಬುವಿಯೊಳು ತಂಗಿದೆ ಬೆಳಕಿನ ಬಲವು….
‘ಏಳಲಿ, ಏಳಲಿ, ಕೃಷಿಕರ ಕುಲವು’ …
ಗಾಳಿ ಕೂಗುತಿದೆ ಕೇಳದೆ ಉಲಿವು ?
ನಮ್ಮೆಲ್ಲರ ಹಸಿವನ್ನು ತಣಿಸಲಿಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ !


ಬರತ ತೊರೆಗಳದೊ, ಸೂಸಿ ಹರಿದಿವೆ….
ಅರತ ಕೆರೆಗಳಗೊ, ತುಂಬಿ ಮೆರೆದಿವೆ….
ಬರಡು ಬಳ್ಳಿ-ಗಿಡ ಚಿಗಿತು ನಗುತಿವೆ…
ಬರಿಹೊಲ-ನೆಲ ಸಸಿ-ಹಸಿರನುಗುತಿವೆ….
ಚೆಲುವಿಂಗೆ ಗೆಲವ ತಾನೀಯಲಿಕೆ-
ಇದೊ, ಶ್ರಾವಣ ಬಂದಿದೆ ಭೂತಲಕೆ!


‘ಬಂದಿದೆ ಗೆಳೆಯರೆ ನಲ್ಮಳೆಗಾಲ….
‘ತಂದಿದೆ ಬಲ್‌ಬೆಳಸಿಗೆ ಹದಗಾಲ….
‘ಉಳುಮೆ-ಬಿಗೆಗೆ ಇದುವೆ ಸಕಾಲ….
‘ಕಳೆದುಕೊಳ್ಳದಿರಿ, ನಿಮ್ಮಯ ಪಾಲ’ –
ಇಂತೊರೆದು ಜಗವ ಜಾಗರಿಸಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ!


ಶ್ರಾವಣದೀ ಶುಭಯೋಗವೆಂಧದೋ
ದೇವಭಾವ ತಲೆಯೆತ್ತಿ ನಿಂತುದೋ!
ಹಾವು-ಹುಳುವನೂ ದೇವರು ಎನುವ …
ಭಾವನೆಯಲಿ ಜನ ಪೂಜಿಸುತಿಹುದೊ ?
ಆ ದೇವನ ಮಹಿಮೆಯ ಗಾಯನಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ!


ಕನಸಿರದಾ ನಿದ್ದೆ ಯನೋಡಿಸುತ….
ಮನದಾಶೆಗೆ ಕುಸುರನು ಮೂಡಿಸುತ…
ಮನುಕುಲವನೆ ಉಯ್ಯಲೆಯಾಡಿಸುತ…
ಕಣಸಿನ ಕತೆಗಳ ಕೊಂಡಾಡಿಸುತ-
ಸವಿಯೊಲವನು ಹಂಚುತ ಮನಮನಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ!


ಬರಲಿದೆ ಮಾನವಮಿಯ ಬಲರಾಗ
ಕರೆದಿದೆ ಗೆಲವಿನ ದಸರೆಯ ಭೋಗ….
ತರಲಿದೆ ಇದೆ ದೀವಳಿಗೆಯ ಯೋಗ….
ಬೆಳಕಿನ ರಾಜ್ಯವೆ ಇಳೆಯೊಳಗಾಗ..
ಆ ಬೆಳಕಿನ ದಾರಿಯ ತಿಳುಹಲಿಕೆ-
ಇದೊ, ಶ್ರಾವಣ ಬಂದಿದೆ ಭೂತಲಕೆ!
* * *

ಜನಜೀವನ ಪಾವನ ಗೈಯಲಿಕೆ
ಇದೊ, ಬಂದಿದೆ ಶ್ರಾವಣ ಭಾರತಕೆ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...