ಇದೊ, ಶ್ರಾವಣ ಬಂದಿದೆ!

(ಭಾರತ ಸ್ವಾತಂತ್ರ್ಯೋದಯದ ರೂಪಕ)

ಇದೊ, ಶ್ರಾವಣಬಂದಿದೆ ಭೂವನಕೆ,
ಜನಜೀವನ ಪಾವನ ಗೈಯಲಿಕೆ-
ಇದೊ, ಶ್ರಾವಣ ಬಂದಿದೆ ಭಾರತಕೆ !


ತೆರಳಿತು ವೈಶಾಖದ ಬಿರುಬಿಸಿಲು,
ಸರಿಯಿತು ಮೃಗಜಲದಾ ಹುಸಿಹೊನಲು ;
ಮರೆಯಾಯಿತು ಸುಟ್ಟುರೆಗಳ ಹೊಯಿಲು,
ಬರಿ ಬಾನೊಳು ತುಂಬಿದೆ ನೀರ್‌ ಮುಗಿಲು !
ಬರಗಾಲದ ಬಾಧೆಯ ಹಣಿಯಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ !


ಮುಂಗಾರಿನ ಕಾರ್‍ಮೋಡದ ಕೂಟ….
ಮುನ್ನೀರಲೆಗಳ ತಾಂಡವದಾಟ….
ಕಂಗೆಡಿಸುವ ಕೋಲ್ಮಿಂಚಿನ ಕಾಟ….
ಹಿಂಗಿದುವೋ ಸಿಡಿಲಿನ ಗುಡುಗಾಟ-
ಸಮಯೋಗದ ಸರಿಯನು ಸುರಿಸಲಿಕೆ
ಇದೊ, ಶ್ರಾವಣ ಬಂದಿದೆ ಭೂತಲಕೆ !


ಕಾಡುವ ತಗರಿನ ಕೊಂಬನು ಕಳೆದು….
ಹೋರುವ ಹೋರಿಯ ಹಮ್ಮನು ಹಿಳಿದು….
ಹೆಣ್‌-ಗಂಡನು ಹುರುಪಿಸಿ ಮನಸೆಳೆದು….
ರಣಹೇಡಿ ಏಡಿಯಾ ತಲೆ ತುಳಿದು….
ಮೃಗರಾಜನ ಮೈ ಗುಣ ಮೆರೆಸಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ!


ಬಾನೊಳು ತುಂಬಿದೆ ಜೀವನ ಜಲವು….
ಬುವಿಯೊಳು ತಂಗಿದೆ ಬೆಳಕಿನ ಬಲವು….
‘ಏಳಲಿ, ಏಳಲಿ, ಕೃಷಿಕರ ಕುಲವು’ …
ಗಾಳಿ ಕೂಗುತಿದೆ ಕೇಳದೆ ಉಲಿವು ?
ನಮ್ಮೆಲ್ಲರ ಹಸಿವನ್ನು ತಣಿಸಲಿಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ !


ಬರತ ತೊರೆಗಳದೊ, ಸೂಸಿ ಹರಿದಿವೆ….
ಅರತ ಕೆರೆಗಳಗೊ, ತುಂಬಿ ಮೆರೆದಿವೆ….
ಬರಡು ಬಳ್ಳಿ-ಗಿಡ ಚಿಗಿತು ನಗುತಿವೆ…
ಬರಿಹೊಲ-ನೆಲ ಸಸಿ-ಹಸಿರನುಗುತಿವೆ….
ಚೆಲುವಿಂಗೆ ಗೆಲವ ತಾನೀಯಲಿಕೆ-
ಇದೊ, ಶ್ರಾವಣ ಬಂದಿದೆ ಭೂತಲಕೆ!


‘ಬಂದಿದೆ ಗೆಳೆಯರೆ ನಲ್ಮಳೆಗಾಲ….
‘ತಂದಿದೆ ಬಲ್‌ಬೆಳಸಿಗೆ ಹದಗಾಲ….
‘ಉಳುಮೆ-ಬಿಗೆಗೆ ಇದುವೆ ಸಕಾಲ….
‘ಕಳೆದುಕೊಳ್ಳದಿರಿ, ನಿಮ್ಮಯ ಪಾಲ’ –
ಇಂತೊರೆದು ಜಗವ ಜಾಗರಿಸಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ!


ಶ್ರಾವಣದೀ ಶುಭಯೋಗವೆಂಧದೋ
ದೇವಭಾವ ತಲೆಯೆತ್ತಿ ನಿಂತುದೋ!
ಹಾವು-ಹುಳುವನೂ ದೇವರು ಎನುವ …
ಭಾವನೆಯಲಿ ಜನ ಪೂಜಿಸುತಿಹುದೊ ?
ಆ ದೇವನ ಮಹಿಮೆಯ ಗಾಯನಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ!


ಕನಸಿರದಾ ನಿದ್ದೆ ಯನೋಡಿಸುತ….
ಮನದಾಶೆಗೆ ಕುಸುರನು ಮೂಡಿಸುತ…
ಮನುಕುಲವನೆ ಉಯ್ಯಲೆಯಾಡಿಸುತ…
ಕಣಸಿನ ಕತೆಗಳ ಕೊಂಡಾಡಿಸುತ-
ಸವಿಯೊಲವನು ಹಂಚುತ ಮನಮನಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ!


ಬರಲಿದೆ ಮಾನವಮಿಯ ಬಲರಾಗ
ಕರೆದಿದೆ ಗೆಲವಿನ ದಸರೆಯ ಭೋಗ….
ತರಲಿದೆ ಇದೆ ದೀವಳಿಗೆಯ ಯೋಗ….
ಬೆಳಕಿನ ರಾಜ್ಯವೆ ಇಳೆಯೊಳಗಾಗ..
ಆ ಬೆಳಕಿನ ದಾರಿಯ ತಿಳುಹಲಿಕೆ-
ಇದೊ, ಶ್ರಾವಣ ಬಂದಿದೆ ಭೂತಲಕೆ!
* * *

ಜನಜೀವನ ಪಾವನ ಗೈಯಲಿಕೆ
ಇದೊ, ಬಂದಿದೆ ಶ್ರಾವಣ ಭಾರತಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆಯೇ?
Next post ಗೆಲುವು

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys