Home / ಕವನ / ಕವಿತೆ / ಇದೊ, ಶ್ರಾವಣ ಬಂದಿದೆ!

ಇದೊ, ಶ್ರಾವಣ ಬಂದಿದೆ!

(ಭಾರತ ಸ್ವಾತಂತ್ರ್ಯೋದಯದ ರೂಪಕ)

ಇದೊ, ಶ್ರಾವಣಬಂದಿದೆ ಭೂವನಕೆ,
ಜನಜೀವನ ಪಾವನ ಗೈಯಲಿಕೆ-
ಇದೊ, ಶ್ರಾವಣ ಬಂದಿದೆ ಭಾರತಕೆ !


ತೆರಳಿತು ವೈಶಾಖದ ಬಿರುಬಿಸಿಲು,
ಸರಿಯಿತು ಮೃಗಜಲದಾ ಹುಸಿಹೊನಲು ;
ಮರೆಯಾಯಿತು ಸುಟ್ಟುರೆಗಳ ಹೊಯಿಲು,
ಬರಿ ಬಾನೊಳು ತುಂಬಿದೆ ನೀರ್‌ ಮುಗಿಲು !
ಬರಗಾಲದ ಬಾಧೆಯ ಹಣಿಯಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ !


ಮುಂಗಾರಿನ ಕಾರ್‍ಮೋಡದ ಕೂಟ….
ಮುನ್ನೀರಲೆಗಳ ತಾಂಡವದಾಟ….
ಕಂಗೆಡಿಸುವ ಕೋಲ್ಮಿಂಚಿನ ಕಾಟ….
ಹಿಂಗಿದುವೋ ಸಿಡಿಲಿನ ಗುಡುಗಾಟ-
ಸಮಯೋಗದ ಸರಿಯನು ಸುರಿಸಲಿಕೆ
ಇದೊ, ಶ್ರಾವಣ ಬಂದಿದೆ ಭೂತಲಕೆ !


ಕಾಡುವ ತಗರಿನ ಕೊಂಬನು ಕಳೆದು….
ಹೋರುವ ಹೋರಿಯ ಹಮ್ಮನು ಹಿಳಿದು….
ಹೆಣ್‌-ಗಂಡನು ಹುರುಪಿಸಿ ಮನಸೆಳೆದು….
ರಣಹೇಡಿ ಏಡಿಯಾ ತಲೆ ತುಳಿದು….
ಮೃಗರಾಜನ ಮೈ ಗುಣ ಮೆರೆಸಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ!


ಬಾನೊಳು ತುಂಬಿದೆ ಜೀವನ ಜಲವು….
ಬುವಿಯೊಳು ತಂಗಿದೆ ಬೆಳಕಿನ ಬಲವು….
‘ಏಳಲಿ, ಏಳಲಿ, ಕೃಷಿಕರ ಕುಲವು’ …
ಗಾಳಿ ಕೂಗುತಿದೆ ಕೇಳದೆ ಉಲಿವು ?
ನಮ್ಮೆಲ್ಲರ ಹಸಿವನ್ನು ತಣಿಸಲಿಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ !


ಬರತ ತೊರೆಗಳದೊ, ಸೂಸಿ ಹರಿದಿವೆ….
ಅರತ ಕೆರೆಗಳಗೊ, ತುಂಬಿ ಮೆರೆದಿವೆ….
ಬರಡು ಬಳ್ಳಿ-ಗಿಡ ಚಿಗಿತು ನಗುತಿವೆ…
ಬರಿಹೊಲ-ನೆಲ ಸಸಿ-ಹಸಿರನುಗುತಿವೆ….
ಚೆಲುವಿಂಗೆ ಗೆಲವ ತಾನೀಯಲಿಕೆ-
ಇದೊ, ಶ್ರಾವಣ ಬಂದಿದೆ ಭೂತಲಕೆ!


‘ಬಂದಿದೆ ಗೆಳೆಯರೆ ನಲ್ಮಳೆಗಾಲ….
‘ತಂದಿದೆ ಬಲ್‌ಬೆಳಸಿಗೆ ಹದಗಾಲ….
‘ಉಳುಮೆ-ಬಿಗೆಗೆ ಇದುವೆ ಸಕಾಲ….
‘ಕಳೆದುಕೊಳ್ಳದಿರಿ, ನಿಮ್ಮಯ ಪಾಲ’ –
ಇಂತೊರೆದು ಜಗವ ಜಾಗರಿಸಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ!


ಶ್ರಾವಣದೀ ಶುಭಯೋಗವೆಂಧದೋ
ದೇವಭಾವ ತಲೆಯೆತ್ತಿ ನಿಂತುದೋ!
ಹಾವು-ಹುಳುವನೂ ದೇವರು ಎನುವ …
ಭಾವನೆಯಲಿ ಜನ ಪೂಜಿಸುತಿಹುದೊ ?
ಆ ದೇವನ ಮಹಿಮೆಯ ಗಾಯನಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ!


ಕನಸಿರದಾ ನಿದ್ದೆ ಯನೋಡಿಸುತ….
ಮನದಾಶೆಗೆ ಕುಸುರನು ಮೂಡಿಸುತ…
ಮನುಕುಲವನೆ ಉಯ್ಯಲೆಯಾಡಿಸುತ…
ಕಣಸಿನ ಕತೆಗಳ ಕೊಂಡಾಡಿಸುತ-
ಸವಿಯೊಲವನು ಹಂಚುತ ಮನಮನಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ!


ಬರಲಿದೆ ಮಾನವಮಿಯ ಬಲರಾಗ
ಕರೆದಿದೆ ಗೆಲವಿನ ದಸರೆಯ ಭೋಗ….
ತರಲಿದೆ ಇದೆ ದೀವಳಿಗೆಯ ಯೋಗ….
ಬೆಳಕಿನ ರಾಜ್ಯವೆ ಇಳೆಯೊಳಗಾಗ..
ಆ ಬೆಳಕಿನ ದಾರಿಯ ತಿಳುಹಲಿಕೆ-
ಇದೊ, ಶ್ರಾವಣ ಬಂದಿದೆ ಭೂತಲಕೆ!
* * *

ಜನಜೀವನ ಪಾವನ ಗೈಯಲಿಕೆ
ಇದೊ, ಬಂದಿದೆ ಶ್ರಾವಣ ಭಾರತಕೆ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...