ಏನು ಮುನ್ನಿನ ಜನ್ಮದಲಿ ಪುಣ್ಯಗೈದಿರುವೆ
ಇಂಚರದ ಕೊಳಲೆ ನೀನು ?
ಗಾನಲೋಲನ ಕೈಯ ಸೇರಿ ಕುಣಿದಾಡಿಸಿದೆ
ಕಮಲೋದ್ಧವಾಂಡವನ್ನು!
ಆರೋಹಣ ಸ್ವರದಿ ಸುಪ್ತಿಯಲ್ಲಿಹ ಜಗವ
ಜಾಗೃತಿಯನೊಂದಿಸಿದೆಯೊ !
ಅವರೋಹಣ ಸ್ವರದಿ ಎಚ್ಚತ್ತ ಜಗದ ಬಗೆ-
ಯನ್ನು ನಿನ್ನೆಡೆಗೆಳೆದೆಯೊ!
ನಂದನಂದನನ ನನ್ನಿಯ ಹಾಡನೊಡಗೊಂಡ
ಚೆಂದವಹ ನಿನ್ನ ದನಿಯು-
ಕಂದರನು ಒಳುದಾರಿಯಲ್ಲಿ ನಡೆಯಿಸುವ ಹೆ-
ತ್ತಮ್ಮನಿನಿದಾದ ನುಡಿಯು!
ಗೋಪಾಲಬಾಲಕರು ತಾಪಕೊಳಗಾಗದೊಲು
ಶ್ರೀಕೃಷ್ಣನೇನು ಗೈದ?
ನೀ ಪೇಳು, ನಿನ್ನ ಮಧುರವದಿಂದಲವನಾವ
ಮೋಹಮಂತ್ರವನೂದಿದ?
ನಲ್ಲೆಯರ ಮುಂದೆ ಗೋವಿಂದನಾಜ್ಞೆಯಲಿ ನೀ-
ನಾವ ಪದ ಪಳ್ದೆ ? ಎಂತು ?
ಗೊಲ್ಲಹೆಂಗಳೆಯರಿಗೆ ಸಂಸಾರದನುಭವವು
ಬೆಲ್ಲದಂತಾದುದೆಂತು ?
ಸತ್ಯಕ್ಕೆ ಸಹಕಾರಿ ಮಿಥ್ಯಕ್ಕೆ ಕಡುವೈರಿ
ಸಜ್ಜನರ ದುಃಖಹಾರಿ-
ಮತ್ತೆ ನಿನ್ನಾ ಗಾನವಾಗಿದ್ದಿತೈ ಕುಜನ-
ವಂಶಕ್ಕೆ ಹಿರಿಯ ಮಾರಿ!
ಸಂತಸದ ಸಿರಿಮನೆಯು ಸಂತೃಪ್ತಿಯರಮನೆಯು
ಜ್ಞಾನಪೀಯೂಷಝರಿಯು,
ಶಾಂತಿಯಾಗರವು ನಿಶ್ಚಿಂತೆಯಾ ತವರೂರು
ನಿನ್ನ ಮಂಜುಲಲಹರಿಯು!
ನಿನ್ನ ಸ್ವರ ಕೇಳದಿರೆ ಚೆನ್ನ ಕಿಟ್ಟನ ಮರೆತು
ಬನ್ನಗೊಂಡಿಹುದು ಬುವಿಯು;
ಧನ್ಯ ವೇಣುವೆ, ನಮಗೆ ಕೇಳದಿಹುದೇಕೀಗ.
ನಿನ್ನ ಮಾಧುರ ಮುರಲಿಯು?
ದ್ವಾಪರದಿ ನುಡಿಸಿದಾ ಗೋಪಾಲ ನಿನ್ನನ್ನ-
ದೇಕೀಗ ನುಡಿಸದಿಹನು?
ತಾಪ ಕೂಪದೊಳುರುಳಿರುವ ಜಗದ ಜನರನ್ನು
ತಣಿಸದೇತಕೆ ತಡೆದನು?
ಇದೇ ಭಾವಸಮಾಧಿಯೊಳಿರುವಂದು, ಒಳಗಿವಿಯಲೊಂದು
ಕೊಳಲುಲಿಯ ಇನಿದನಿ ಮಿಡಿದು ಎದೆಯನರಳಿಸಿತು:
ನುಡಿಸದೇಕಿಹ? ದೇವ ಜಗದಾದಿಯಿಂದೆ ಎಡೆ-
ಬಿಡದೆ ನುಡಿಸುತಲಿರುವನು;
ನುಡಿಸುವನು ಜಗವು ಮುಗಿವಾ ವರೆಗೆ ಮುಂದೆಯೂ
ಎಂದಿನಂದದಲಾತನು.
ಭೋಗಮಲದಲಿ ಮುಚ್ಚಿ ಹೋಗಿರುವ ನಿನ್ನ ಕಿವಿ-
ಗಳಿಗೆ ಕೇಳಿಸದಿರುವುದೋ!
ತ್ಯಾಗದಿಂದಾ ಮಲವ ನೀಗಿದರೆ ನಿನಗೆ ನಿಜ-
ವಾಗಿಯಾ ದನಿ ಕೇಳ್ವುದೋ!
*****