Home / ಕವನ / ಕವಿತೆ / ಶ್ರೀಕೃಷ್ಣನ ಕೊಳಲಿಗೆ

ಶ್ರೀಕೃಷ್ಣನ ಕೊಳಲಿಗೆ

ಏನು ಮುನ್ನಿನ ಜನ್ಮದಲಿ ಪುಣ್ಯಗೈದಿರುವೆ
ಇಂಚರದ ಕೊಳಲೆ ನೀನು ?
ಗಾನಲೋಲನ ಕೈಯ ಸೇರಿ ಕುಣಿದಾಡಿಸಿದೆ
ಕಮಲೋದ್ಧವಾಂಡವನ್ನು!
ಆರೋಹಣ ಸ್ವರದಿ ಸುಪ್ತಿಯಲ್ಲಿಹ ಜಗವ
ಜಾಗೃತಿಯನೊಂದಿಸಿದೆಯೊ !
ಅವರೋಹಣ ಸ್ವರದಿ ಎಚ್ಚತ್ತ ಜಗದ ಬಗೆ-
ಯನ್ನು ನಿನ್ನೆಡೆಗೆಳೆದೆಯೊ!
ನಂದನಂದನನ ನನ್ನಿಯ ಹಾಡನೊಡಗೊಂಡ
ಚೆಂದವಹ ನಿನ್ನ ದನಿಯು-
ಕಂದರನು ಒಳುದಾರಿಯಲ್ಲಿ ನಡೆಯಿಸುವ ಹೆ-
ತ್ತಮ್ಮನಿನಿದಾದ ನುಡಿಯು!
ಗೋಪಾಲಬಾಲಕರು ತಾಪಕೊಳಗಾಗದೊಲು
ಶ್ರೀಕೃಷ್ಣನೇನು ಗೈದ?
ನೀ ಪೇಳು, ನಿನ್ನ ಮಧುರವದಿಂದಲವನಾವ
ಮೋಹಮಂತ್ರವನೂದಿದ?
ನಲ್ಲೆಯರ ಮುಂದೆ ಗೋವಿಂದನಾಜ್ಞೆಯಲಿ ನೀ-
ನಾವ ಪದ ಪಳ್ದೆ ? ಎಂತು ?
ಗೊಲ್ಲಹೆಂಗಳೆಯರಿಗೆ ಸಂಸಾರದನುಭವವು
ಬೆಲ್ಲದಂತಾದುದೆಂತು ?
ಸತ್ಯಕ್ಕೆ ಸಹಕಾರಿ ಮಿಥ್ಯಕ್ಕೆ ಕಡುವೈರಿ
ಸಜ್ಜನರ ದುಃಖಹಾರಿ-
ಮತ್ತೆ ನಿನ್ನಾ ಗಾನವಾಗಿದ್ದಿತೈ ಕುಜನ-
ವಂಶಕ್ಕೆ ಹಿರಿಯ ಮಾರಿ!
ಸಂತಸದ ಸಿರಿಮನೆಯು ಸಂತೃಪ್ತಿಯರಮನೆಯು
ಜ್ಞಾನಪೀಯೂಷಝರಿಯು,
ಶಾಂತಿಯಾಗರವು ನಿಶ್ಚಿಂತೆಯಾ ತವರೂರು
ನಿನ್ನ ಮಂಜುಲಲಹರಿಯು!
ನಿನ್ನ ಸ್ವರ ಕೇಳದಿರೆ ಚೆನ್ನ ಕಿಟ್ಟನ ಮರೆತು
ಬನ್ನಗೊಂಡಿಹುದು ಬುವಿಯು;
ಧನ್ಯ ವೇಣುವೆ, ನಮಗೆ ಕೇಳದಿಹುದೇಕೀಗ.
ನಿನ್ನ ಮಾಧುರ ಮುರಲಿಯು?
ದ್ವಾಪರದಿ ನುಡಿಸಿದಾ ಗೋಪಾಲ ನಿನ್ನನ್ನ-
ದೇಕೀಗ ನುಡಿಸದಿಹನು?
ತಾಪ ಕೂಪದೊಳುರುಳಿರುವ ಜಗದ ಜನರನ್ನು
ತಣಿಸದೇತಕೆ ತಡೆದನು?

ಇದೇ ಭಾವಸಮಾಧಿಯೊಳಿರುವಂದು, ಒಳಗಿವಿಯಲೊಂದು

ಕೊಳಲುಲಿಯ ಇನಿದನಿ ಮಿಡಿದು ಎದೆಯನರಳಿಸಿತು:

ನುಡಿಸದೇಕಿಹ? ದೇವ ಜಗದಾದಿಯಿಂದೆ ಎಡೆ-
ಬಿಡದೆ ನುಡಿಸುತಲಿರುವನು;

ನುಡಿಸುವನು ಜಗವು ಮುಗಿವಾ ವರೆಗೆ ಮುಂದೆಯೂ
ಎಂದಿನಂದದಲಾತನು.

ಭೋಗಮಲದಲಿ ಮುಚ್ಚಿ ಹೋಗಿರುವ ನಿನ್ನ ಕಿವಿ-
ಗಳಿಗೆ ಕೇಳಿಸದಿರುವುದೋ!
ತ್ಯಾಗದಿಂದಾ ಮಲವ ನೀಗಿದರೆ ನಿನಗೆ ನಿಜ-
ವಾಗಿಯಾ ದನಿ ಕೇಳ್ವುದೋ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...