Home / ಕವನ / ಕವಿತೆ / ಶ್ರೀಕೃಷ್ಣನ ಕೊಳಲಿಗೆ

ಶ್ರೀಕೃಷ್ಣನ ಕೊಳಲಿಗೆ

ಏನು ಮುನ್ನಿನ ಜನ್ಮದಲಿ ಪುಣ್ಯಗೈದಿರುವೆ
ಇಂಚರದ ಕೊಳಲೆ ನೀನು ?
ಗಾನಲೋಲನ ಕೈಯ ಸೇರಿ ಕುಣಿದಾಡಿಸಿದೆ
ಕಮಲೋದ್ಧವಾಂಡವನ್ನು!
ಆರೋಹಣ ಸ್ವರದಿ ಸುಪ್ತಿಯಲ್ಲಿಹ ಜಗವ
ಜಾಗೃತಿಯನೊಂದಿಸಿದೆಯೊ !
ಅವರೋಹಣ ಸ್ವರದಿ ಎಚ್ಚತ್ತ ಜಗದ ಬಗೆ-
ಯನ್ನು ನಿನ್ನೆಡೆಗೆಳೆದೆಯೊ!
ನಂದನಂದನನ ನನ್ನಿಯ ಹಾಡನೊಡಗೊಂಡ
ಚೆಂದವಹ ನಿನ್ನ ದನಿಯು-
ಕಂದರನು ಒಳುದಾರಿಯಲ್ಲಿ ನಡೆಯಿಸುವ ಹೆ-
ತ್ತಮ್ಮನಿನಿದಾದ ನುಡಿಯು!
ಗೋಪಾಲಬಾಲಕರು ತಾಪಕೊಳಗಾಗದೊಲು
ಶ್ರೀಕೃಷ್ಣನೇನು ಗೈದ?
ನೀ ಪೇಳು, ನಿನ್ನ ಮಧುರವದಿಂದಲವನಾವ
ಮೋಹಮಂತ್ರವನೂದಿದ?
ನಲ್ಲೆಯರ ಮುಂದೆ ಗೋವಿಂದನಾಜ್ಞೆಯಲಿ ನೀ-
ನಾವ ಪದ ಪಳ್ದೆ ? ಎಂತು ?
ಗೊಲ್ಲಹೆಂಗಳೆಯರಿಗೆ ಸಂಸಾರದನುಭವವು
ಬೆಲ್ಲದಂತಾದುದೆಂತು ?
ಸತ್ಯಕ್ಕೆ ಸಹಕಾರಿ ಮಿಥ್ಯಕ್ಕೆ ಕಡುವೈರಿ
ಸಜ್ಜನರ ದುಃಖಹಾರಿ-
ಮತ್ತೆ ನಿನ್ನಾ ಗಾನವಾಗಿದ್ದಿತೈ ಕುಜನ-
ವಂಶಕ್ಕೆ ಹಿರಿಯ ಮಾರಿ!
ಸಂತಸದ ಸಿರಿಮನೆಯು ಸಂತೃಪ್ತಿಯರಮನೆಯು
ಜ್ಞಾನಪೀಯೂಷಝರಿಯು,
ಶಾಂತಿಯಾಗರವು ನಿಶ್ಚಿಂತೆಯಾ ತವರೂರು
ನಿನ್ನ ಮಂಜುಲಲಹರಿಯು!
ನಿನ್ನ ಸ್ವರ ಕೇಳದಿರೆ ಚೆನ್ನ ಕಿಟ್ಟನ ಮರೆತು
ಬನ್ನಗೊಂಡಿಹುದು ಬುವಿಯು;
ಧನ್ಯ ವೇಣುವೆ, ನಮಗೆ ಕೇಳದಿಹುದೇಕೀಗ.
ನಿನ್ನ ಮಾಧುರ ಮುರಲಿಯು?
ದ್ವಾಪರದಿ ನುಡಿಸಿದಾ ಗೋಪಾಲ ನಿನ್ನನ್ನ-
ದೇಕೀಗ ನುಡಿಸದಿಹನು?
ತಾಪ ಕೂಪದೊಳುರುಳಿರುವ ಜಗದ ಜನರನ್ನು
ತಣಿಸದೇತಕೆ ತಡೆದನು?

ಇದೇ ಭಾವಸಮಾಧಿಯೊಳಿರುವಂದು, ಒಳಗಿವಿಯಲೊಂದು

ಕೊಳಲುಲಿಯ ಇನಿದನಿ ಮಿಡಿದು ಎದೆಯನರಳಿಸಿತು:

ನುಡಿಸದೇಕಿಹ? ದೇವ ಜಗದಾದಿಯಿಂದೆ ಎಡೆ-
ಬಿಡದೆ ನುಡಿಸುತಲಿರುವನು;

ನುಡಿಸುವನು ಜಗವು ಮುಗಿವಾ ವರೆಗೆ ಮುಂದೆಯೂ
ಎಂದಿನಂದದಲಾತನು.

ಭೋಗಮಲದಲಿ ಮುಚ್ಚಿ ಹೋಗಿರುವ ನಿನ್ನ ಕಿವಿ-
ಗಳಿಗೆ ಕೇಳಿಸದಿರುವುದೋ!
ತ್ಯಾಗದಿಂದಾ ಮಲವ ನೀಗಿದರೆ ನಿನಗೆ ನಿಜ-
ವಾಗಿಯಾ ದನಿ ಕೇಳ್ವುದೋ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...