Home / ಕವನ / ಕವಿತೆ / ಭೂದೇವಿಯ ನೋಟ

ಭೂದೇವಿಯ ನೋಟ

ಜಗದ ಮೌನವನೊಡೆದು ಗಗನ ಗರ್ಭವ ಸೀಳಿ
ಜಲದ ಶಾಂತಿಯ ಕಡೆದು ಯುಗಯುಗದ ಬಗೆ ಕನಲಿ
ಉರಿವ ಬೆಂಕಿಯ ಜ್ವಾಲೆ ಹರಿವ ಗಾಳಿಯನಾಳಿ
ಮಾನವರ ಜೀವನವ ಬಲಿಗೊಳ್ಳುತಿದಿರಾಳಿ
ಸತ್ಯ ಧರ್ಮದ ಹೆಸರ ಬಗೆಯೆತ್ತಿ ಕರೆಯುತಿದೆ
ಲೋಕವೇ ಬರೆದಿಟ್ಟ ಶಾಸನವ ಮುರಿಯುತಿದೆ
ಕ್ರಾಂತಿ ಮಾರಿಯ ಬರವು ಲೋಕಕಾಯ್ತು.

ಮೂಡ ಪಡು ಬಡಗ ತೆಂಕಣದ ಮೂಲೆಗಳಿಂದ
ಬದುಕುಗಳ ಬಗೆಯೊಗೆದು ಕಾಲದೀ ಕರೆಯಿಂದ
ಹೆತ್ತೊಡಲ ಮಮತೆಯನು ಹೊತ್ತೊಡಲ ಶಾಂತಿಯನು
ತಿಳಿಯಲಾರದ ಹೃದಯ ನೂಕುತಿದೆ ಮೋಹವನು
ಈ ಮಣ್ಣು ವಿಷ ಹುಣ್ಣು. ನುಡಿವೆಣ್ಣು ಸುಡುಗಣ್ಣು
ಧರ್ಮದೀ ಹೆಸರಿನಲಿ ಕರ್ಮಗಳನುರಿಸುತಿದೆ
ಆಸೆಗಳ ಬಗಯಿಂದ ಪ್ರಳಯವಾಯ್ತು.

ಲೋಕದಾಯುಷ್ಯದಲಿ ಯುಗಯುಗಗಳುರುಳಿದುವು
ಯುಗದ ಯಂತ್ರವ ನಡೆಸಿ ನೋಡುವನು ರವಿ ದಿನವು
ರಜನಿಯನ್ನಾಳುತಲಿ ಕಳದ ಶಶಿ ನಿಶಿ ಹಲವು
ಜಲರಾಶಿಯೇರಿನಲಿ ಪ್ರಳಯಗಳು ದಾಟಿದುವು
ಆಸೆಗಳ ನೆಲೆಯಿಲ್ಲ, ದೋಷಗಳ ಬಗಯಿಲ್ಲ
ಒಂದು ಗುಣ ಒಂದು ನೆಲೆ ಒಂದು ಕೃತಿ ಒಂದು ಸ್ಮೃತಿ
ಶಾಂತಿಧರ್ಮದ ಬೀಡು ಪಾಲಿಗಾಯ್ತು.

ಜಗದಗಲ ನಭದಗಲ ಜಲಗಗನ ರಣವಾಗಿ
ಭೀಕರದ ದೃಶ್ಯದಲಿ ಕ್ರಾಂತಿ ರಾಕ್ಷಸಿಯಾಗಿ
ಶಾಂತಿ ದಾಂತಿಗೆ ಮಣಿವ ಮಕುಟಗಳ ಹಗೆಯಾಗಿ
ಜಗದ ಬದುಕನು ಮುರಿವ ಕಾಣದಿಹ ತೊಡರಾಗಿ
ನುಡಿಯೊಂದು ನಡೆಯೊಂದು ಮನವೊಂದು ಗುಣವೊಂದು
ಕರುಣರಸಕಿಂಬಿಲ್ಲ ಅರುಣರಸಧಾರೆಯಲಿ
ಬಿಸಿ ನೆತ್ತರೀಂಟುತಿದೆ ಕಾಲವಿಂದು.

ಬಂಡೆಬಂಡೆಗಳುರುಳಿ ಹುಡಿಯಾಗಿ ಹಸರಳಿಸಿ
ಬದುಕಿನಾಗರವಾದ ಲೋಹಗಳು ರೂಪಳಿಸಿ
ಸುಖದ ಬೀಡೆನಿಸಿರ್ದ ಓಷಧಿಯು ಗುಣ ಮರೆಸಿ
ಗಾಳಿ ನೀರುಗಳಲ್ಲಿ ಹಸಿದಿಹವು ಮೈಮರೆಸಿ
ಮುಟ್ಟಿದರೆ ನೋಡಿದರೆ ಕೇಳಿದರೆ ಹೇಳಿದರೆ
ದೇಹವನೆ ಸುಟ್ಟಾವು ಜೀವವನೆ ಕೊಂಡಾವು
ಜಗದ ಜೀವದ ಜೀವ ಮೃತ್ಯುವಾಯ್ತು.

ಶಾಂತಿ ಸತ್ಯವು ಸೆರೆಗೆ ದ್ವೇಷಕರ್ಮವು ಹೊರಗೆ
ಸಾಧು ಶೌಚವು ಮರೆಗೆ ಪಾಪಸೂತಕ ಕೊಲೆಗೆ
ಸುಖದ ಸಂತಸವಡಗೆ ಹಿಂಸೆ ಭಯಗಳು ನೆರೆಗೆ
ಪುಣ್ಯಭೂಮಿಯ ಮಣ್ಣು ಮನೆಯಾಯ್ತು ಹಣಗಳಿಗೆ
ಇಲ್ಲಿ ಮೊರೆಯಲ್ಲಿ ಸೆರೆ, ಇಲ್ಲಿ ಭಯಮಲ್ಲಿ ಕೊಲೆ
ಉಸಿರುಸಿರು ಹೂಗಯಾಗಿ ಸಿಡಿಮದ್ದು ಕರೆದಾವು
ತವರಿಗೇ ಕಿಚಿಕ್ಕಿ ಸುಡುವುದಾಯ್ತು.

ಭೂಮಿಯಾಚೆಯ ಕರೆಗೆ ತನುವೊಡ್ಡಿ ನಡೆದಿಹರು
ಆಚೆ ಈಚೆಯ ಕೃತಿಗೆ ಸಿಲುಕಿ ಮರೆಯಾಗಿಹರು
ಹಸಿವಿಗಾಹುತಿಯಾಗಿ ಕೆಲರು ಶಿಲೆಯಾಗಿಹರು
ನೀರಡಸಿ ಉಸಿರಾರಿ ಹಲರು ಹೆಣವಾಗಿಹರು
ಬದುಕೇಕೆ ಜಗೆಯೇಕೆ ಹೊಲಸು ಜೀವನವೇಕೆ
ಕಾಲರುದ್ರನ ಕರೆಗೆ ತಲೆವಾಗಿ ನಡೆದಿಹರು
ಪ್ರೇಮಪಾಶವ ಹರಿದು ಹೃದಯದಿಂದ.

ಆಲದೆಲೆ ನೌಕೆಯಲಿ ಕ್ಷೀರಸಾಗರದಲ್ಲಿ
ಕ್ರೀಡಿಸುವ ವಿಷ್ಣುವಿನ ಸುಳಿವೆಲ್ಲಿ ಇರವೆಲ್ಲಿ?
ಪಾರ್ವತಿಯ ಕೈಸೇರಿ ಕೈಲಾಸಗಿರಿಯಲ್ಲಿ
ನೃತ್ಯಲಾಸ್ಯದಿ ನಲಿವ ಶಂಕರನ ನಡೆಯೆಲ್ಲಿ?
ಕಾಣೆವೋ ಮರೆತೆವೋ ತಿಳಿಯೆವೋ ನೋಡೆವೋ
ದೇವರಿಹ ನೆನವೊಂದು ಭಯವೊಂದು ಕಾಣದೀ
ವಿಲಯಭೈರವಮೂರ್ತಿ ಚೇಷ್ಟೆಯಿಂದ.

ಅವತಾರಪುರುಷರಿಂದಾಗದಾ ನವಯುಗದ
ನಿರ್ಮಾಣ ಮಾಡುವೆವು ನಿಲಿಸುವೆವು ಹೊಸ ಜಗದ
ಕೋಟೆಯಲಿ ಶಾಂತಿಯನ್‌ ಕರೆತಂದು ಸವಿಸುಖದ
ಪೆಂಪುಬಿಂಪುಗಳುಣಿಸಿ ತಣಿಸುವೀ ಹಿರಿಮನದ
ಕಾಣದಿಹ ಕನಸುಗಳು ಕೇಳದಿಹ ವಾಣಿಗಳು
ತೋರುತಿಹವೆಮಗಿಂದು ನುಡಿಯದಿಹ ಸತ್ಯಗಳು
ಕಾಲರುದ್ರನ ನೃತ್ಯದೆಸಕದಿಂದ.

ಇದೊ ಸಿದ್ದರಾಗಿಹೆವು ಕಾಲಪುರುಷನ ಕರೆಗೆ
ಇದು ನೋಡಿ ಅದು ಕೇಳಿ ನೀಗಿ ನೆಮ್ಮದಿಯ ಬಗೆ
ಈ ಬಾಳು ಈ ಗೋಳು ಸಾಕೆನಿಸೆ ಭೂತಾಯ್ಗೆ
ಸಾವು ನೋವುಗಳೆಲ್ಲ ಹೋಗಲಿಂದೇ ಕೊನೆಗೆ
ಹೂಸ ಯುಗದ ಸೋದರರು ಮಂಗಳವ ಹಾಡುವರು
ಕಲ್ಯಾಣಮಂಟಪವ ಕಟ್ಟುವರು ಮೆರೆಯುವರು
ಭೂತಾಯ ಸಿಂಗರಿಸಿ ತಿಲಕವಿರಿಸಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...