ಭೂದೇವಿಯ ನೋಟ

ಜಗದ ಮೌನವನೊಡೆದು ಗಗನ ಗರ್ಭವ ಸೀಳಿ
ಜಲದ ಶಾಂತಿಯ ಕಡೆದು ಯುಗಯುಗದ ಬಗೆ ಕನಲಿ
ಉರಿವ ಬೆಂಕಿಯ ಜ್ವಾಲೆ ಹರಿವ ಗಾಳಿಯನಾಳಿ
ಮಾನವರ ಜೀವನವ ಬಲಿಗೊಳ್ಳುತಿದಿರಾಳಿ
ಸತ್ಯ ಧರ್ಮದ ಹೆಸರ ಬಗೆಯೆತ್ತಿ ಕರೆಯುತಿದೆ
ಲೋಕವೇ ಬರೆದಿಟ್ಟ ಶಾಸನವ ಮುರಿಯುತಿದೆ
ಕ್ರಾಂತಿ ಮಾರಿಯ ಬರವು ಲೋಕಕಾಯ್ತು.

ಮೂಡ ಪಡು ಬಡಗ ತೆಂಕಣದ ಮೂಲೆಗಳಿಂದ
ಬದುಕುಗಳ ಬಗೆಯೊಗೆದು ಕಾಲದೀ ಕರೆಯಿಂದ
ಹೆತ್ತೊಡಲ ಮಮತೆಯನು ಹೊತ್ತೊಡಲ ಶಾಂತಿಯನು
ತಿಳಿಯಲಾರದ ಹೃದಯ ನೂಕುತಿದೆ ಮೋಹವನು
ಈ ಮಣ್ಣು ವಿಷ ಹುಣ್ಣು. ನುಡಿವೆಣ್ಣು ಸುಡುಗಣ್ಣು
ಧರ್ಮದೀ ಹೆಸರಿನಲಿ ಕರ್ಮಗಳನುರಿಸುತಿದೆ
ಆಸೆಗಳ ಬಗಯಿಂದ ಪ್ರಳಯವಾಯ್ತು.

ಲೋಕದಾಯುಷ್ಯದಲಿ ಯುಗಯುಗಗಳುರುಳಿದುವು
ಯುಗದ ಯಂತ್ರವ ನಡೆಸಿ ನೋಡುವನು ರವಿ ದಿನವು
ರಜನಿಯನ್ನಾಳುತಲಿ ಕಳದ ಶಶಿ ನಿಶಿ ಹಲವು
ಜಲರಾಶಿಯೇರಿನಲಿ ಪ್ರಳಯಗಳು ದಾಟಿದುವು
ಆಸೆಗಳ ನೆಲೆಯಿಲ್ಲ, ದೋಷಗಳ ಬಗಯಿಲ್ಲ
ಒಂದು ಗುಣ ಒಂದು ನೆಲೆ ಒಂದು ಕೃತಿ ಒಂದು ಸ್ಮೃತಿ
ಶಾಂತಿಧರ್ಮದ ಬೀಡು ಪಾಲಿಗಾಯ್ತು.

ಜಗದಗಲ ನಭದಗಲ ಜಲಗಗನ ರಣವಾಗಿ
ಭೀಕರದ ದೃಶ್ಯದಲಿ ಕ್ರಾಂತಿ ರಾಕ್ಷಸಿಯಾಗಿ
ಶಾಂತಿ ದಾಂತಿಗೆ ಮಣಿವ ಮಕುಟಗಳ ಹಗೆಯಾಗಿ
ಜಗದ ಬದುಕನು ಮುರಿವ ಕಾಣದಿಹ ತೊಡರಾಗಿ
ನುಡಿಯೊಂದು ನಡೆಯೊಂದು ಮನವೊಂದು ಗುಣವೊಂದು
ಕರುಣರಸಕಿಂಬಿಲ್ಲ ಅರುಣರಸಧಾರೆಯಲಿ
ಬಿಸಿ ನೆತ್ತರೀಂಟುತಿದೆ ಕಾಲವಿಂದು.

ಬಂಡೆಬಂಡೆಗಳುರುಳಿ ಹುಡಿಯಾಗಿ ಹಸರಳಿಸಿ
ಬದುಕಿನಾಗರವಾದ ಲೋಹಗಳು ರೂಪಳಿಸಿ
ಸುಖದ ಬೀಡೆನಿಸಿರ್ದ ಓಷಧಿಯು ಗುಣ ಮರೆಸಿ
ಗಾಳಿ ನೀರುಗಳಲ್ಲಿ ಹಸಿದಿಹವು ಮೈಮರೆಸಿ
ಮುಟ್ಟಿದರೆ ನೋಡಿದರೆ ಕೇಳಿದರೆ ಹೇಳಿದರೆ
ದೇಹವನೆ ಸುಟ್ಟಾವು ಜೀವವನೆ ಕೊಂಡಾವು
ಜಗದ ಜೀವದ ಜೀವ ಮೃತ್ಯುವಾಯ್ತು.

ಶಾಂತಿ ಸತ್ಯವು ಸೆರೆಗೆ ದ್ವೇಷಕರ್ಮವು ಹೊರಗೆ
ಸಾಧು ಶೌಚವು ಮರೆಗೆ ಪಾಪಸೂತಕ ಕೊಲೆಗೆ
ಸುಖದ ಸಂತಸವಡಗೆ ಹಿಂಸೆ ಭಯಗಳು ನೆರೆಗೆ
ಪುಣ್ಯಭೂಮಿಯ ಮಣ್ಣು ಮನೆಯಾಯ್ತು ಹಣಗಳಿಗೆ
ಇಲ್ಲಿ ಮೊರೆಯಲ್ಲಿ ಸೆರೆ, ಇಲ್ಲಿ ಭಯಮಲ್ಲಿ ಕೊಲೆ
ಉಸಿರುಸಿರು ಹೂಗಯಾಗಿ ಸಿಡಿಮದ್ದು ಕರೆದಾವು
ತವರಿಗೇ ಕಿಚಿಕ್ಕಿ ಸುಡುವುದಾಯ್ತು.

ಭೂಮಿಯಾಚೆಯ ಕರೆಗೆ ತನುವೊಡ್ಡಿ ನಡೆದಿಹರು
ಆಚೆ ಈಚೆಯ ಕೃತಿಗೆ ಸಿಲುಕಿ ಮರೆಯಾಗಿಹರು
ಹಸಿವಿಗಾಹುತಿಯಾಗಿ ಕೆಲರು ಶಿಲೆಯಾಗಿಹರು
ನೀರಡಸಿ ಉಸಿರಾರಿ ಹಲರು ಹೆಣವಾಗಿಹರು
ಬದುಕೇಕೆ ಜಗೆಯೇಕೆ ಹೊಲಸು ಜೀವನವೇಕೆ
ಕಾಲರುದ್ರನ ಕರೆಗೆ ತಲೆವಾಗಿ ನಡೆದಿಹರು
ಪ್ರೇಮಪಾಶವ ಹರಿದು ಹೃದಯದಿಂದ.

ಆಲದೆಲೆ ನೌಕೆಯಲಿ ಕ್ಷೀರಸಾಗರದಲ್ಲಿ
ಕ್ರೀಡಿಸುವ ವಿಷ್ಣುವಿನ ಸುಳಿವೆಲ್ಲಿ ಇರವೆಲ್ಲಿ?
ಪಾರ್ವತಿಯ ಕೈಸೇರಿ ಕೈಲಾಸಗಿರಿಯಲ್ಲಿ
ನೃತ್ಯಲಾಸ್ಯದಿ ನಲಿವ ಶಂಕರನ ನಡೆಯೆಲ್ಲಿ?
ಕಾಣೆವೋ ಮರೆತೆವೋ ತಿಳಿಯೆವೋ ನೋಡೆವೋ
ದೇವರಿಹ ನೆನವೊಂದು ಭಯವೊಂದು ಕಾಣದೀ
ವಿಲಯಭೈರವಮೂರ್ತಿ ಚೇಷ್ಟೆಯಿಂದ.

ಅವತಾರಪುರುಷರಿಂದಾಗದಾ ನವಯುಗದ
ನಿರ್ಮಾಣ ಮಾಡುವೆವು ನಿಲಿಸುವೆವು ಹೊಸ ಜಗದ
ಕೋಟೆಯಲಿ ಶಾಂತಿಯನ್‌ ಕರೆತಂದು ಸವಿಸುಖದ
ಪೆಂಪುಬಿಂಪುಗಳುಣಿಸಿ ತಣಿಸುವೀ ಹಿರಿಮನದ
ಕಾಣದಿಹ ಕನಸುಗಳು ಕೇಳದಿಹ ವಾಣಿಗಳು
ತೋರುತಿಹವೆಮಗಿಂದು ನುಡಿಯದಿಹ ಸತ್ಯಗಳು
ಕಾಲರುದ್ರನ ನೃತ್ಯದೆಸಕದಿಂದ.

ಇದೊ ಸಿದ್ದರಾಗಿಹೆವು ಕಾಲಪುರುಷನ ಕರೆಗೆ
ಇದು ನೋಡಿ ಅದು ಕೇಳಿ ನೀಗಿ ನೆಮ್ಮದಿಯ ಬಗೆ
ಈ ಬಾಳು ಈ ಗೋಳು ಸಾಕೆನಿಸೆ ಭೂತಾಯ್ಗೆ
ಸಾವು ನೋವುಗಳೆಲ್ಲ ಹೋಗಲಿಂದೇ ಕೊನೆಗೆ
ಹೂಸ ಯುಗದ ಸೋದರರು ಮಂಗಳವ ಹಾಡುವರು
ಕಲ್ಯಾಣಮಂಟಪವ ಕಟ್ಟುವರು ಮೆರೆಯುವರು
ಭೂತಾಯ ಸಿಂಗರಿಸಿ ತಿಲಕವಿರಿಸಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೂರೇನ್‌ಳ ಅಂತರಂಗ
Next post ಪುಟ್ಟು-ಮಗ್ಗಿ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys