ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು

ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು
ಇರುಳಿನಲಿ ಭಯವೆರಸಿ ದಾರಿ ಮರೆದಿಹುದು
ಹೊರಗೆ ಚಳಿ ಮಳೆ ಗಾಳಿ ಜಗವ ಭಯಗೊಳಿಸುವುದು
ಸೊರಗಿ ಮೌನದಿ ನಡುಗಿ ಭೀತಿಗೊಳುತಿಹುದು.

ಒಳ ದನಿಯು ಅಡಗಿಹುದು ಎದೆಯೊಳಗೆ ಉಸಿರಿಲ್ಲ
ಕಳೆದೊಗೆದ ಸಿಪ್ಪೆಯೊಲು ಬಾಳಲರಿವಿಲ್ಲ
ಏನಪಾಯವು ಬಹುದೊ ಸೆರೆಯಲ್ಲದಿನ್ನಿಲ್ಲ
ಕಾಣದಿಹ ದಿಕ್ಕುಗಳ ನೋಡುತಿಹುದಲ್ಲ.

ಎಲ್ಲಿಂದ ಬಂದೆನೋ ಇಲ್ಲೆನಿತು ಸಮಯವೋ
ಎಲ್ಲಿಗೆಯ್ವುದೊ ಮುಂದೆ – ಮುಂದಾವ ನೋವೊ?
ಬಲ್ಲವರ ಸುಳಿವಿಲ್ಲ ಬಲ್ಲಿದರ ನೆರೆಯಿಲ್ಲ
ಇಲ್ಲಿ ಪರಮಡಿಲಿನಲಿ ತನಗಿನ್ನು ಸಾವೊ?

ದೀನ ದಿಟ್ಟಿಯು ಮೂಡಿ ಎದ್ದರೇನೋ ಎಂದು
ಮಾನಕೇ ಚ್ಯುತಿಯಾಯ್ತು ಇಲ್ಲಿ ತಾಂ ಬಂದು
ಹೀನತನದಿಂ ತನ್ನ ತಿನ್ನುವರು ಇವರೆಂದು
ಮ್ಲಾನಮುಖದಿಂ ಸೊರಗಿ ಕರಗುತಿದೆ ನೊಂದು.

ಹಳೆಯುಗದ ನೆನಪಿಲ್ಲ ಹೊಸ ಜಗದ ಅರಿವಿಲ್ಲ
ಕಳೆದುಳಿದ ದಿನಮಾನದಳತೆ ಗೊತ್ತಿಲ್ಲ
ಎಲ್ಲರೂ ತನ್ನಂತೆ ಕೊಳೆವ ಜೀವಿಗಳೆಲ್ಲ
ಹೊಲ್ಲದೀ ಬಾಳಿನ್ನು ಮೋಕ್ಷಕ್ಕೆ ಸಲ್ಲ.

ಇರವರಿಯದಿರುತಿಹರು ಅದಕ್ಕಾಗಿ ದುಃಖಿಸರು
ಹೊರಹೊಮ್ಮಿ ಸಾಗುತಿದೆ- ಅದ ಕಾಣರಿವರು
ಸರುವ ಸುಖವಿದು ಎಂಬ ಭ್ರಾಂತಿಯಿಂ ತುಂಬಿಹರು
ಜರೆ ಬಾಯ ತೆರೆದಿಹುದು ಅದ ನೋಡದಿಹರು.

ರೆಕ್ಕೆ ಮುರಿದಿಕ್ಕಿದರು ಕಾಲಲಡಿ ತುಳಿಯುವರು
ಹಕ್ಕನೊರೆಯುವವರಿಂಗೆ ಬುದ್ಧಿ ಹೇಳುವರು
ಅಕ್ಕರೆನರಿಯದರು ಸತ್ಯವನೆ ಕಾಣದರು
ಫಕ್ಕನೇ ಮುನಿಸಾಳ್ದು ಸೊಕ್ಕ ಬೀರುವ.

ಇದ ಕಂಡು ಭಯಗೊಂಡು ಕನಿಕರಿಸಿ ಉದ್ಧರಿಸಿ
ಬದುಕಿಸುವೆನಿವರನ್ನು ಎಂದು ನಿಜವರಸಿ
ಹದುಳ ನುಡಿಯಾಡಿದರೆ ಜಗ್ಗಿದರು ಸಿಂಡರಿಸಿ
ಹದನರಿತು ಬೇಡಿದುದು ಮಂಗಳವ ಹರಸಿ.

ಲೋಕ ಬದುಕಿದೊಡಾನು ಮುಕ್ತನಪ್ಪೆನು ಎಂದು
ಸಾಕಲ್ಯದಿಂ ಬೇಡುತಿರೆ ಬೆಳಕ ಕಂಡು
ಆ ಕಡೆಗೆ ಹಾರಿದುದು ನವಚೇತನವ ತಂದು
ನೂಕಿ ತಮ ಬೆಳಕಿತ್ತು ಸಂತಸದೊಳಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಧಿಗಳು
Next post ಮರದ ಮಹತ್ವ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…