Home / ಕವನ / ಕವಿತೆ / ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು

ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು

ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು
ಇರುಳಿನಲಿ ಭಯವೆರಸಿ ದಾರಿ ಮರೆದಿಹುದು
ಹೊರಗೆ ಚಳಿ ಮಳೆ ಗಾಳಿ ಜಗವ ಭಯಗೊಳಿಸುವುದು
ಸೊರಗಿ ಮೌನದಿ ನಡುಗಿ ಭೀತಿಗೊಳುತಿಹುದು.

ಒಳ ದನಿಯು ಅಡಗಿಹುದು ಎದೆಯೊಳಗೆ ಉಸಿರಿಲ್ಲ
ಕಳೆದೊಗೆದ ಸಿಪ್ಪೆಯೊಲು ಬಾಳಲರಿವಿಲ್ಲ
ಏನಪಾಯವು ಬಹುದೊ ಸೆರೆಯಲ್ಲದಿನ್ನಿಲ್ಲ
ಕಾಣದಿಹ ದಿಕ್ಕುಗಳ ನೋಡುತಿಹುದಲ್ಲ.

ಎಲ್ಲಿಂದ ಬಂದೆನೋ ಇಲ್ಲೆನಿತು ಸಮಯವೋ
ಎಲ್ಲಿಗೆಯ್ವುದೊ ಮುಂದೆ – ಮುಂದಾವ ನೋವೊ?
ಬಲ್ಲವರ ಸುಳಿವಿಲ್ಲ ಬಲ್ಲಿದರ ನೆರೆಯಿಲ್ಲ
ಇಲ್ಲಿ ಪರಮಡಿಲಿನಲಿ ತನಗಿನ್ನು ಸಾವೊ?

ದೀನ ದಿಟ್ಟಿಯು ಮೂಡಿ ಎದ್ದರೇನೋ ಎಂದು
ಮಾನಕೇ ಚ್ಯುತಿಯಾಯ್ತು ಇಲ್ಲಿ ತಾಂ ಬಂದು
ಹೀನತನದಿಂ ತನ್ನ ತಿನ್ನುವರು ಇವರೆಂದು
ಮ್ಲಾನಮುಖದಿಂ ಸೊರಗಿ ಕರಗುತಿದೆ ನೊಂದು.

ಹಳೆಯುಗದ ನೆನಪಿಲ್ಲ ಹೊಸ ಜಗದ ಅರಿವಿಲ್ಲ
ಕಳೆದುಳಿದ ದಿನಮಾನದಳತೆ ಗೊತ್ತಿಲ್ಲ
ಎಲ್ಲರೂ ತನ್ನಂತೆ ಕೊಳೆವ ಜೀವಿಗಳೆಲ್ಲ
ಹೊಲ್ಲದೀ ಬಾಳಿನ್ನು ಮೋಕ್ಷಕ್ಕೆ ಸಲ್ಲ.

ಇರವರಿಯದಿರುತಿಹರು ಅದಕ್ಕಾಗಿ ದುಃಖಿಸರು
ಹೊರಹೊಮ್ಮಿ ಸಾಗುತಿದೆ- ಅದ ಕಾಣರಿವರು
ಸರುವ ಸುಖವಿದು ಎಂಬ ಭ್ರಾಂತಿಯಿಂ ತುಂಬಿಹರು
ಜರೆ ಬಾಯ ತೆರೆದಿಹುದು ಅದ ನೋಡದಿಹರು.

ರೆಕ್ಕೆ ಮುರಿದಿಕ್ಕಿದರು ಕಾಲಲಡಿ ತುಳಿಯುವರು
ಹಕ್ಕನೊರೆಯುವವರಿಂಗೆ ಬುದ್ಧಿ ಹೇಳುವರು
ಅಕ್ಕರೆನರಿಯದರು ಸತ್ಯವನೆ ಕಾಣದರು
ಫಕ್ಕನೇ ಮುನಿಸಾಳ್ದು ಸೊಕ್ಕ ಬೀರುವ.

ಇದ ಕಂಡು ಭಯಗೊಂಡು ಕನಿಕರಿಸಿ ಉದ್ಧರಿಸಿ
ಬದುಕಿಸುವೆನಿವರನ್ನು ಎಂದು ನಿಜವರಸಿ
ಹದುಳ ನುಡಿಯಾಡಿದರೆ ಜಗ್ಗಿದರು ಸಿಂಡರಿಸಿ
ಹದನರಿತು ಬೇಡಿದುದು ಮಂಗಳವ ಹರಸಿ.

ಲೋಕ ಬದುಕಿದೊಡಾನು ಮುಕ್ತನಪ್ಪೆನು ಎಂದು
ಸಾಕಲ್ಯದಿಂ ಬೇಡುತಿರೆ ಬೆಳಕ ಕಂಡು
ಆ ಕಡೆಗೆ ಹಾರಿದುದು ನವಚೇತನವ ತಂದು
ನೂಕಿ ತಮ ಬೆಳಕಿತ್ತು ಸಂತಸದೊಳಂದು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...