Home / ಕವನ / ಕವಿತೆ / ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು

ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು

ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು
ಇರುಳಿನಲಿ ಭಯವೆರಸಿ ದಾರಿ ಮರೆದಿಹುದು
ಹೊರಗೆ ಚಳಿ ಮಳೆ ಗಾಳಿ ಜಗವ ಭಯಗೊಳಿಸುವುದು
ಸೊರಗಿ ಮೌನದಿ ನಡುಗಿ ಭೀತಿಗೊಳುತಿಹುದು.

ಒಳ ದನಿಯು ಅಡಗಿಹುದು ಎದೆಯೊಳಗೆ ಉಸಿರಿಲ್ಲ
ಕಳೆದೊಗೆದ ಸಿಪ್ಪೆಯೊಲು ಬಾಳಲರಿವಿಲ್ಲ
ಏನಪಾಯವು ಬಹುದೊ ಸೆರೆಯಲ್ಲದಿನ್ನಿಲ್ಲ
ಕಾಣದಿಹ ದಿಕ್ಕುಗಳ ನೋಡುತಿಹುದಲ್ಲ.

ಎಲ್ಲಿಂದ ಬಂದೆನೋ ಇಲ್ಲೆನಿತು ಸಮಯವೋ
ಎಲ್ಲಿಗೆಯ್ವುದೊ ಮುಂದೆ – ಮುಂದಾವ ನೋವೊ?
ಬಲ್ಲವರ ಸುಳಿವಿಲ್ಲ ಬಲ್ಲಿದರ ನೆರೆಯಿಲ್ಲ
ಇಲ್ಲಿ ಪರಮಡಿಲಿನಲಿ ತನಗಿನ್ನು ಸಾವೊ?

ದೀನ ದಿಟ್ಟಿಯು ಮೂಡಿ ಎದ್ದರೇನೋ ಎಂದು
ಮಾನಕೇ ಚ್ಯುತಿಯಾಯ್ತು ಇಲ್ಲಿ ತಾಂ ಬಂದು
ಹೀನತನದಿಂ ತನ್ನ ತಿನ್ನುವರು ಇವರೆಂದು
ಮ್ಲಾನಮುಖದಿಂ ಸೊರಗಿ ಕರಗುತಿದೆ ನೊಂದು.

ಹಳೆಯುಗದ ನೆನಪಿಲ್ಲ ಹೊಸ ಜಗದ ಅರಿವಿಲ್ಲ
ಕಳೆದುಳಿದ ದಿನಮಾನದಳತೆ ಗೊತ್ತಿಲ್ಲ
ಎಲ್ಲರೂ ತನ್ನಂತೆ ಕೊಳೆವ ಜೀವಿಗಳೆಲ್ಲ
ಹೊಲ್ಲದೀ ಬಾಳಿನ್ನು ಮೋಕ್ಷಕ್ಕೆ ಸಲ್ಲ.

ಇರವರಿಯದಿರುತಿಹರು ಅದಕ್ಕಾಗಿ ದುಃಖಿಸರು
ಹೊರಹೊಮ್ಮಿ ಸಾಗುತಿದೆ- ಅದ ಕಾಣರಿವರು
ಸರುವ ಸುಖವಿದು ಎಂಬ ಭ್ರಾಂತಿಯಿಂ ತುಂಬಿಹರು
ಜರೆ ಬಾಯ ತೆರೆದಿಹುದು ಅದ ನೋಡದಿಹರು.

ರೆಕ್ಕೆ ಮುರಿದಿಕ್ಕಿದರು ಕಾಲಲಡಿ ತುಳಿಯುವರು
ಹಕ್ಕನೊರೆಯುವವರಿಂಗೆ ಬುದ್ಧಿ ಹೇಳುವರು
ಅಕ್ಕರೆನರಿಯದರು ಸತ್ಯವನೆ ಕಾಣದರು
ಫಕ್ಕನೇ ಮುನಿಸಾಳ್ದು ಸೊಕ್ಕ ಬೀರುವ.

ಇದ ಕಂಡು ಭಯಗೊಂಡು ಕನಿಕರಿಸಿ ಉದ್ಧರಿಸಿ
ಬದುಕಿಸುವೆನಿವರನ್ನು ಎಂದು ನಿಜವರಸಿ
ಹದುಳ ನುಡಿಯಾಡಿದರೆ ಜಗ್ಗಿದರು ಸಿಂಡರಿಸಿ
ಹದನರಿತು ಬೇಡಿದುದು ಮಂಗಳವ ಹರಸಿ.

ಲೋಕ ಬದುಕಿದೊಡಾನು ಮುಕ್ತನಪ್ಪೆನು ಎಂದು
ಸಾಕಲ್ಯದಿಂ ಬೇಡುತಿರೆ ಬೆಳಕ ಕಂಡು
ಆ ಕಡೆಗೆ ಹಾರಿದುದು ನವಚೇತನವ ತಂದು
ನೂಕಿ ತಮ ಬೆಳಕಿತ್ತು ಸಂತಸದೊಳಂದು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...