Home / ಕವನ / ಕವಿತೆ / ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು

ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು

ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು
ಇರುಳಿನಲಿ ಭಯವೆರಸಿ ದಾರಿ ಮರೆದಿಹುದು
ಹೊರಗೆ ಚಳಿ ಮಳೆ ಗಾಳಿ ಜಗವ ಭಯಗೊಳಿಸುವುದು
ಸೊರಗಿ ಮೌನದಿ ನಡುಗಿ ಭೀತಿಗೊಳುತಿಹುದು.

ಒಳ ದನಿಯು ಅಡಗಿಹುದು ಎದೆಯೊಳಗೆ ಉಸಿರಿಲ್ಲ
ಕಳೆದೊಗೆದ ಸಿಪ್ಪೆಯೊಲು ಬಾಳಲರಿವಿಲ್ಲ
ಏನಪಾಯವು ಬಹುದೊ ಸೆರೆಯಲ್ಲದಿನ್ನಿಲ್ಲ
ಕಾಣದಿಹ ದಿಕ್ಕುಗಳ ನೋಡುತಿಹುದಲ್ಲ.

ಎಲ್ಲಿಂದ ಬಂದೆನೋ ಇಲ್ಲೆನಿತು ಸಮಯವೋ
ಎಲ್ಲಿಗೆಯ್ವುದೊ ಮುಂದೆ – ಮುಂದಾವ ನೋವೊ?
ಬಲ್ಲವರ ಸುಳಿವಿಲ್ಲ ಬಲ್ಲಿದರ ನೆರೆಯಿಲ್ಲ
ಇಲ್ಲಿ ಪರಮಡಿಲಿನಲಿ ತನಗಿನ್ನು ಸಾವೊ?

ದೀನ ದಿಟ್ಟಿಯು ಮೂಡಿ ಎದ್ದರೇನೋ ಎಂದು
ಮಾನಕೇ ಚ್ಯುತಿಯಾಯ್ತು ಇಲ್ಲಿ ತಾಂ ಬಂದು
ಹೀನತನದಿಂ ತನ್ನ ತಿನ್ನುವರು ಇವರೆಂದು
ಮ್ಲಾನಮುಖದಿಂ ಸೊರಗಿ ಕರಗುತಿದೆ ನೊಂದು.

ಹಳೆಯುಗದ ನೆನಪಿಲ್ಲ ಹೊಸ ಜಗದ ಅರಿವಿಲ್ಲ
ಕಳೆದುಳಿದ ದಿನಮಾನದಳತೆ ಗೊತ್ತಿಲ್ಲ
ಎಲ್ಲರೂ ತನ್ನಂತೆ ಕೊಳೆವ ಜೀವಿಗಳೆಲ್ಲ
ಹೊಲ್ಲದೀ ಬಾಳಿನ್ನು ಮೋಕ್ಷಕ್ಕೆ ಸಲ್ಲ.

ಇರವರಿಯದಿರುತಿಹರು ಅದಕ್ಕಾಗಿ ದುಃಖಿಸರು
ಹೊರಹೊಮ್ಮಿ ಸಾಗುತಿದೆ- ಅದ ಕಾಣರಿವರು
ಸರುವ ಸುಖವಿದು ಎಂಬ ಭ್ರಾಂತಿಯಿಂ ತುಂಬಿಹರು
ಜರೆ ಬಾಯ ತೆರೆದಿಹುದು ಅದ ನೋಡದಿಹರು.

ರೆಕ್ಕೆ ಮುರಿದಿಕ್ಕಿದರು ಕಾಲಲಡಿ ತುಳಿಯುವರು
ಹಕ್ಕನೊರೆಯುವವರಿಂಗೆ ಬುದ್ಧಿ ಹೇಳುವರು
ಅಕ್ಕರೆನರಿಯದರು ಸತ್ಯವನೆ ಕಾಣದರು
ಫಕ್ಕನೇ ಮುನಿಸಾಳ್ದು ಸೊಕ್ಕ ಬೀರುವ.

ಇದ ಕಂಡು ಭಯಗೊಂಡು ಕನಿಕರಿಸಿ ಉದ್ಧರಿಸಿ
ಬದುಕಿಸುವೆನಿವರನ್ನು ಎಂದು ನಿಜವರಸಿ
ಹದುಳ ನುಡಿಯಾಡಿದರೆ ಜಗ್ಗಿದರು ಸಿಂಡರಿಸಿ
ಹದನರಿತು ಬೇಡಿದುದು ಮಂಗಳವ ಹರಸಿ.

ಲೋಕ ಬದುಕಿದೊಡಾನು ಮುಕ್ತನಪ್ಪೆನು ಎಂದು
ಸಾಕಲ್ಯದಿಂ ಬೇಡುತಿರೆ ಬೆಳಕ ಕಂಡು
ಆ ಕಡೆಗೆ ಹಾರಿದುದು ನವಚೇತನವ ತಂದು
ನೂಕಿ ತಮ ಬೆಳಕಿತ್ತು ಸಂತಸದೊಳಂದು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...