Home / ಕವನ / ಕವಿತೆ / ಹುಲಿ ಮತ್ತು ಹುಲ್ಲೆ

ಹುಲಿ ಮತ್ತು ಹುಲ್ಲೆ

ಮಿಂಚಿ ಚಕಮಕ, ಬಾಗಿ ತೂಗುತ ಮಣಿದು ಬಳಕುತ ತಡೆದಿದೆ
ಕಾಮಬೆಟ್ಟದ ಪಚ್ಚೆ ಹೃದಯದಿ ಏನು ನುಸುಳುತ ನಡೆದಿದೆ
ನಯನ ನಿಗಿನಿಗಿ ಎದೆಯ ದೃಢಪಡೆ ಏನೊ ನಾತವ ಹಿಡಿದಿದೆ
ಕಳ್ಳಹೆಜ್ಜೆಯ ಮೆಲ್ಲನಡಿಗೆಯ ಘಾತಸಂಭ್ರಮ ಪಡೆದಿದೆ
ಎಲೆಯ ಸಂದಿಗಳಿಂದ ಜಳಕನೆ ಹರಿದ ಮರ್ಮರ ಗಾಳಿಯೆ
ಮೊದಲೆ ನಿರ್ದಯವಾದ ಅದ್ಭುತ ಮತ್ತೆ ಕೆರಳಿದರೆಂತೆನೆ
ಉಸಿರನಡಗಿಸಿ ಭಯದಿ ನಡುಗುತ ಕಾಣ ಕಾಣುತ ಜಾರಿದೆ
ಮಹಾಮೃಗವಗೊ ಹೇಗೆ ಸಾಗಿದೆ ಬಾಗಿ ನಯಭಯಮಯದಲಿ
ಸೌಮ್ಯ ಸೌಂದರ್ಯವನ್ನು ನಶಿಸಲು ರೌದ್ರ ಸುಂದರ ನಯದಲಿ.

ಮುಗ್ಧ ಮೃಗವಧು ತನ್ನ ಕಾಲಿಲೆ ಮರಣವಿದ್ದೆಡೆ ಸಾಗಿದೆ
ಬನದ ತಣ್ನೆಳಲಲ್ಲಿ ತಿಳಿಗೊಳದಲ್ಲಿ ನಿರ್ಭಯ ಬಾಗಿದೆ
ಪಾಪ, ಸಂಶಯವೆಂಬುದೇ ಗೊತ್ತಿಲ್ಲ ನಂಬುಗೆ-ಜೀವಕೆ
ಆಚೆ-ಈಚೆಗೆ ನೋಡದೇ ನಾಲಗೆಯ ಚಾಚಿರೆ ತೇವಕೆ
ಹಾರಿ ಜಿಗಿದಿತು ಮೇಲೆ ಒಗೆದಿತು ಹುಲಿಯು ಹುಲ್ಲೆಯ ಹೀರಿತು
ಅಯ್ಯೋ ಬಿದ್ದಿತು, ಭಕ್ಷವಾಯಿತು, ಆಯಿತೋ ಬಾಳಾಯಿತು,
ಗಹನ ಗುಹೆಯಲ್ಲಿ ಒಂಟಿ ಇಹ ಸಖನನ್ನೆ ನೆನೆಯುತ ತೀರಿತು
ಅದೇ ಸುಖದಲಿ ಮೃತ್ಯುಮುಖದಲಿ ಹುಲ್ಲೆ ಓ ಹಾಳಾಯಿತು
ಹಾರಿ ಜಪ್ಪಿಸಿ ಕೊಲುವ ಕೌಶಲವಿರಲಿ ಆರ್ಭಟಿ ಇಂದಿನ
ಆದರೂ ಬಂದೀತು ಎಂದೋ ಹುಲಿಯ ಲಯವಾದೊಂದಿನ.

ನೆಲವ ಲಟಲಟ ಮುರಿಯೆ ಮೆಟ್ಟಿದ ಪೆಡಂಭೂತಗಳೆಲ್ಲಿವೆ?
ನೆರಳ ತಂಗೊಳ ಜಲವ ಕುಡಿದುಳಿದಾವು ಹರಿಣಗಳಿಲ್ಲಿಯೇ!
ಪ್ರಬಲ ಬಲಿಯೇ ತನ್ನ ಬಲಭರಭಾರದಲ್ಲಿಯೆ ಮಡಿವನು
ಬದುಕಿನೊಡೆಯನು ಸತ್ತನೆನಿಸಿದ ಸತ್ಯಸಂತತಿ ಜೀವನು
ಕೊಲ್ಲಬಲ್ಲವ ಮೆಲ್ಲಮೆಲ್ಲನೆ ಮೃತ್ಯು ಪಂಥವ ಹಿಡಿವನು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...