Home / ಕವನ / ಕವಿತೆ / ಹುಲಿ ಮತ್ತು ಹುಲ್ಲೆ

ಹುಲಿ ಮತ್ತು ಹುಲ್ಲೆ

ಮಿಂಚಿ ಚಕಮಕ, ಬಾಗಿ ತೂಗುತ ಮಣಿದು ಬಳಕುತ ತಡೆದಿದೆ
ಕಾಮಬೆಟ್ಟದ ಪಚ್ಚೆ ಹೃದಯದಿ ಏನು ನುಸುಳುತ ನಡೆದಿದೆ
ನಯನ ನಿಗಿನಿಗಿ ಎದೆಯ ದೃಢಪಡೆ ಏನೊ ನಾತವ ಹಿಡಿದಿದೆ
ಕಳ್ಳಹೆಜ್ಜೆಯ ಮೆಲ್ಲನಡಿಗೆಯ ಘಾತಸಂಭ್ರಮ ಪಡೆದಿದೆ
ಎಲೆಯ ಸಂದಿಗಳಿಂದ ಜಳಕನೆ ಹರಿದ ಮರ್ಮರ ಗಾಳಿಯೆ
ಮೊದಲೆ ನಿರ್ದಯವಾದ ಅದ್ಭುತ ಮತ್ತೆ ಕೆರಳಿದರೆಂತೆನೆ
ಉಸಿರನಡಗಿಸಿ ಭಯದಿ ನಡುಗುತ ಕಾಣ ಕಾಣುತ ಜಾರಿದೆ
ಮಹಾಮೃಗವಗೊ ಹೇಗೆ ಸಾಗಿದೆ ಬಾಗಿ ನಯಭಯಮಯದಲಿ
ಸೌಮ್ಯ ಸೌಂದರ್ಯವನ್ನು ನಶಿಸಲು ರೌದ್ರ ಸುಂದರ ನಯದಲಿ.

ಮುಗ್ಧ ಮೃಗವಧು ತನ್ನ ಕಾಲಿಲೆ ಮರಣವಿದ್ದೆಡೆ ಸಾಗಿದೆ
ಬನದ ತಣ್ನೆಳಲಲ್ಲಿ ತಿಳಿಗೊಳದಲ್ಲಿ ನಿರ್ಭಯ ಬಾಗಿದೆ
ಪಾಪ, ಸಂಶಯವೆಂಬುದೇ ಗೊತ್ತಿಲ್ಲ ನಂಬುಗೆ-ಜೀವಕೆ
ಆಚೆ-ಈಚೆಗೆ ನೋಡದೇ ನಾಲಗೆಯ ಚಾಚಿರೆ ತೇವಕೆ
ಹಾರಿ ಜಿಗಿದಿತು ಮೇಲೆ ಒಗೆದಿತು ಹುಲಿಯು ಹುಲ್ಲೆಯ ಹೀರಿತು
ಅಯ್ಯೋ ಬಿದ್ದಿತು, ಭಕ್ಷವಾಯಿತು, ಆಯಿತೋ ಬಾಳಾಯಿತು,
ಗಹನ ಗುಹೆಯಲ್ಲಿ ಒಂಟಿ ಇಹ ಸಖನನ್ನೆ ನೆನೆಯುತ ತೀರಿತು
ಅದೇ ಸುಖದಲಿ ಮೃತ್ಯುಮುಖದಲಿ ಹುಲ್ಲೆ ಓ ಹಾಳಾಯಿತು
ಹಾರಿ ಜಪ್ಪಿಸಿ ಕೊಲುವ ಕೌಶಲವಿರಲಿ ಆರ್ಭಟಿ ಇಂದಿನ
ಆದರೂ ಬಂದೀತು ಎಂದೋ ಹುಲಿಯ ಲಯವಾದೊಂದಿನ.

ನೆಲವ ಲಟಲಟ ಮುರಿಯೆ ಮೆಟ್ಟಿದ ಪೆಡಂಭೂತಗಳೆಲ್ಲಿವೆ?
ನೆರಳ ತಂಗೊಳ ಜಲವ ಕುಡಿದುಳಿದಾವು ಹರಿಣಗಳಿಲ್ಲಿಯೇ!
ಪ್ರಬಲ ಬಲಿಯೇ ತನ್ನ ಬಲಭರಭಾರದಲ್ಲಿಯೆ ಮಡಿವನು
ಬದುಕಿನೊಡೆಯನು ಸತ್ತನೆನಿಸಿದ ಸತ್ಯಸಂತತಿ ಜೀವನು
ಕೊಲ್ಲಬಲ್ಲವ ಮೆಲ್ಲಮೆಲ್ಲನೆ ಮೃತ್ಯು ಪಂಥವ ಹಿಡಿವನು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...