Home / ಕವನ / ಕವಿತೆ / ಮನದ ಮಾತು

ಮನದ ಮಾತು

ಎಲ್ಲೆಲ್ಲಿಯೂ ಮನದ ಮಾತುಗಳೆ ಮುಂಬರಿದು
ಎದೆಯ ಕೊಳಲುಲಿಯನೇ ಕೇಳಗೊಡವು !

ಹಗಲೆಲ್ಲವೂ ಜಿನುಗುತಿಹುದೆ ಮನಸಿನ ವಾಯ,
ತೆಗೆವುದೊಂದೊಂದು ಸಲ ಎದೆಯು ಬಾಯ ;
ಎಣಿಕೆಯಿಲ್ಲದೆ ಬಣಗುನುಡಿಯ ಹೆಣೆವುದು ಮನಸು,
ಎದೆಯದೊಂದೇ ಒಂದು ಪದವೆ ಸವಿಗನಸು !

ಕಾಗೆ- ಗೂಗೆಗಳ ಕೂಗಾಟ- ಕಿರುಚಾಟದಲಿ
ರಾಗಿಸುವ ವೀಣೆಯುಲಿ ಅಡಗಿರುವುದು ;
ನೆರೆದ ಮಂದಿಯ ಬೀದಿಗಲಹದಾ ಕಲಕಲದಿ
ತಾಯ ಜೋಗುಳವಾಡು ಹುದುಗಿರುವುದು.

ಸೂಳೆಯರ ಸಂಗೀತ ಗಟ್ಟಿಗೊಂಡಿಡಿದಿರಲು
ತಿಂಗಳಿನ ಮೌನಗಾನವು ಹೋಯ್ತು ಹೂತು ;
ಡೋಳು- ಹರೆ-ಕೊಂಬುಗಳ ಬಿರುದನಿಯು ಕಿವಿದುಂಬಿ
ಬಾಲಕನ ಲಲ್ಲೆನುಡಿ ಹೋಯ್ತು, ಬೀತು !

ಸಿಡಿಲು- ಮಿಂಚುಗಳ ಗುಡುಗಾಟ ಮರೆಮಾಡಿಹುದು.
ಮಡದಿಯಾ ಮೆಲುನುಡಿಯ ಪ್ರಣಯದಾಟ ;
ಮೊರೆದು ಭೋರ್‍ಗರೆವ ಕಡಲಲಿ ಹುದುಗಿಕೊಂಡಿಹುದು
ನೊರೆವಾಲಿನೊಂದು ಕಿರಿಯೊರತೆಯಕಟ !

ಬನದರಳ ಕಂಪ ತೊಂಗಲನು ತಳೆದಿರುವೆಲರು
ಸುಳಿಯುತಿರೆ ಪಾರಿಜಾತಕದ ಮೆಲುಗಂಪು
ನಡುನಡುವೆ ತಲೆದೋರಿ ತಡೆದು ತಣಿವಿತ್ತಂತೆ
ನುಡಿಯು ಒಂದೊಂದು ಸಲ ಕೇಳಿಸುವುದಿಂಪು !

ಕೊಳೆಯ ನೆಲೆವೀಡಾದ ಒಡಲಿನೊಳಗನು ಮರೆದು,
ಚೆಲುವನೇ ಕಣ್ಣುಗಳು ಮೆಚ್ಚುವಂತೆ …
ಬಲೆಬಲೆಯ ನುಡಿಯುಳಿದು ರಸಿಕ ಕಬ್ಬದ ಜೀವ-
ಕಳೆಯನೇ ಕಂಡುಂಡು ಹೆಚ್ಚುವಂತೆ-

ಮನದ ಮಾತಿನೊಳು ಮರೆಗೊಂಡಿರುವ ಎದೆಯುಲಿಯು
ಅನುದಿನವು ಕೇಳುತಿರುವೊಲು ಕಿವಿಯನು …
ಅಣಿಗೊಳಿಪೆನೆಂತೆನುತ ನೆನೆವೆನಾವಾಗಲೂ
ಮನದ ಮಾತಿಗೆ ಕೊನೆಯೆ ಇಲ್ಲವೇನು ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...