Home / ಕವನ / ಕವಿತೆ / ಮನದ ಮಾತು

ಮನದ ಮಾತು

ಎಲ್ಲೆಲ್ಲಿಯೂ ಮನದ ಮಾತುಗಳೆ ಮುಂಬರಿದು
ಎದೆಯ ಕೊಳಲುಲಿಯನೇ ಕೇಳಗೊಡವು !

ಹಗಲೆಲ್ಲವೂ ಜಿನುಗುತಿಹುದೆ ಮನಸಿನ ವಾಯ,
ತೆಗೆವುದೊಂದೊಂದು ಸಲ ಎದೆಯು ಬಾಯ ;
ಎಣಿಕೆಯಿಲ್ಲದೆ ಬಣಗುನುಡಿಯ ಹೆಣೆವುದು ಮನಸು,
ಎದೆಯದೊಂದೇ ಒಂದು ಪದವೆ ಸವಿಗನಸು !

ಕಾಗೆ- ಗೂಗೆಗಳ ಕೂಗಾಟ- ಕಿರುಚಾಟದಲಿ
ರಾಗಿಸುವ ವೀಣೆಯುಲಿ ಅಡಗಿರುವುದು ;
ನೆರೆದ ಮಂದಿಯ ಬೀದಿಗಲಹದಾ ಕಲಕಲದಿ
ತಾಯ ಜೋಗುಳವಾಡು ಹುದುಗಿರುವುದು.

ಸೂಳೆಯರ ಸಂಗೀತ ಗಟ್ಟಿಗೊಂಡಿಡಿದಿರಲು
ತಿಂಗಳಿನ ಮೌನಗಾನವು ಹೋಯ್ತು ಹೂತು ;
ಡೋಳು- ಹರೆ-ಕೊಂಬುಗಳ ಬಿರುದನಿಯು ಕಿವಿದುಂಬಿ
ಬಾಲಕನ ಲಲ್ಲೆನುಡಿ ಹೋಯ್ತು, ಬೀತು !

ಸಿಡಿಲು- ಮಿಂಚುಗಳ ಗುಡುಗಾಟ ಮರೆಮಾಡಿಹುದು.
ಮಡದಿಯಾ ಮೆಲುನುಡಿಯ ಪ್ರಣಯದಾಟ ;
ಮೊರೆದು ಭೋರ್‍ಗರೆವ ಕಡಲಲಿ ಹುದುಗಿಕೊಂಡಿಹುದು
ನೊರೆವಾಲಿನೊಂದು ಕಿರಿಯೊರತೆಯಕಟ !

ಬನದರಳ ಕಂಪ ತೊಂಗಲನು ತಳೆದಿರುವೆಲರು
ಸುಳಿಯುತಿರೆ ಪಾರಿಜಾತಕದ ಮೆಲುಗಂಪು
ನಡುನಡುವೆ ತಲೆದೋರಿ ತಡೆದು ತಣಿವಿತ್ತಂತೆ
ನುಡಿಯು ಒಂದೊಂದು ಸಲ ಕೇಳಿಸುವುದಿಂಪು !

ಕೊಳೆಯ ನೆಲೆವೀಡಾದ ಒಡಲಿನೊಳಗನು ಮರೆದು,
ಚೆಲುವನೇ ಕಣ್ಣುಗಳು ಮೆಚ್ಚುವಂತೆ …
ಬಲೆಬಲೆಯ ನುಡಿಯುಳಿದು ರಸಿಕ ಕಬ್ಬದ ಜೀವ-
ಕಳೆಯನೇ ಕಂಡುಂಡು ಹೆಚ್ಚುವಂತೆ-

ಮನದ ಮಾತಿನೊಳು ಮರೆಗೊಂಡಿರುವ ಎದೆಯುಲಿಯು
ಅನುದಿನವು ಕೇಳುತಿರುವೊಲು ಕಿವಿಯನು …
ಅಣಿಗೊಳಿಪೆನೆಂತೆನುತ ನೆನೆವೆನಾವಾಗಲೂ
ಮನದ ಮಾತಿಗೆ ಕೊನೆಯೆ ಇಲ್ಲವೇನು ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...