Home / ಲೇಖನ / ಇತರೆ / ವಚನ ವಿಚಾರ – ಅರ್ಧ ಮಂಚ

ವಚನ ವಿಚಾರ – ಅರ್ಧ ಮಂಚ

ಆನೆ ಕುದುರೆ ಭಂಡಾರವಿರ್ದಡೇನೋ
ತಾನುಂಬುದು ಪಡಿಯಕ್ಕಿ
ಒಂದಾವಿನ ಹಾಲು
ಮಲಗುವುದರ್ಧ ಮಂಚ
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ
ಒಡಲು ಭೂಮಿಯ ಸಂಗ
ಒಡವೆ ತಾನೇನಪ್ಪುದೋ
ಕೈಹಿಡಿದ ಮಡದಿ ಪರರ ಸಂಗ
ಪ್ರಾಣ ವಾಯುವಿನ ಸಂಗ
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ
ನಿಃಕಳಂಕ ಮಲ್ಲಿ ಕಾರ್ಜುನಾ

[ಪಡಿ-ಒಂದು ಅಳತೆ, ಒಂದಾವಿನ-ಒಂದು ಹಸುವಿನ]

ಮೋಳಿಗೆ ಮಾರಯ್ಯನ ವಚನ. `ನನ್ನದು’ ಎಂದುಕೊಂಡ ವಸ್ತುಗಳಲ್ಲೇ ಬದುಕಿನ ಸಾರ್ಥಕತೆಯನ್ನು ಕಾಣುವ ಧೋರಣೆ ಸರಿಯಲ್ಲ ಅನ್ನುತ್ತದೆ ಈ ವಚನ. ಆನೆ, ಕುದುರೆ, ಭಂಡಾರ ಅನ್ನುವದರ ಬದಲು ಕಾರು, ಬೈಕು, ಆರಂಕಿಯ ಸಂಬಳ ಎಂದು ಕೊಳ್ಳೋಣ. ಆಗ ನಮ್ಮ ಕಾಲದ ಬಗ್ಗೆ ಕಾಮೆಂಟರಿ ಮಾಡುತ್ತಿರುವಂತೆ ಇದೆ ಅನ್ನಿಸುವುದಿಲ್ಲವೇ? ಅಷ್ಟೆಲ್ಲ ಇದ್ದರೂ ತಿನ್ನುವುದು ಮಾತ್ರ ಒಂದಳತೆ ಅಕ್ಕಿಯ ಅನ್ನ, ಅದೂ ನಮ್ಮ ಹೊಟ್ಟೆ ಹಿಡಿಸುವುವಷ್ಟೇ. ಅರ್ಧಮಂಚ ಅನ್ನುವುದಂತೂ ಅದ್ಭುತವಾದ ರೂಪಕ.

ನನಗೆ ಸುಖಕೊಡುವ ಜೊತೆ ಜೀವಿಯೊಡನೆ ಅರ್ಧ ಮಂಚ ಹಂಚಿಕೊಳ್ಳಬೇಕು. ಇಬ್ಬರೂ ಸ್ವಂತದ ಸುಖವನ್ನೇ ಅಪೇಕ್ಷಿಸುತ್ತಾ ಸುಖ ಸಿಕ್ಕಿದ್ದೂ ಭ್ರಮೆಯೇ ಆಗಬಹುದು. ಹಾಗೆ ಸುಖದ ಸಾಧನ ಅಂದುಕೊಂಡಿರುವ ಮಂಚ ಸಿಕ್ಕಿದ್ದೂ ಅರ್ಧವೇ! ಸುಖಸಾಧನವಾದ ದೇಹ ನನ್ನದು ಅಂದುಕೊಂಡರೆ ಅದೂ ಭೂಮಿಯ ಪಾಲು, ಜೀವಿಸಿದ್ದೇನೆನ್ನುವುದಕ್ಕೆ ಆಡುತ್ತಿರುವ ಉಸಿರು ಕೂಡ ಗಾಳಿಯ ಪಾಲು. ನನ್ನವಳೆಂದುಕೊಂಡ ಹೆಂಡತಿ ನನ್ನ ನಂತರ ಬೇರೆಯವರ ಪಾಲಾಗುವುದಿಲ್ಲವೇ, ಆಗಬಾರದೇ? ಹಾಗಿದ್ದರೆ ನನ್ನ ಜೊತೆಗೆ ಯಾರಿದ್ದಾರೆ, ಏನಿದೆ? ಸಾವು ಒಂದೇ, ಸಂಗಡ ಇರುವವರು ಯಾರೂ ಇಲ್ಲ. ಹತಾಶೆಯೋ, ಅಗಾಧ ಒಂಟಿತನದ ಅನುಭವವೋ, ಇಂಗ್ಲಿಶಿನಲ್ಲಿ ಆಂಗ್ಸ್ಟ್ ಅನ್ನುತ್ತಾರಲ್ಲ ಅದೋ, ಏನಾದರೂ ಕರೆಯಿರಿ. ಕಾಡುವ ಏಕಾಂಗಿತನ ಕೇವಲ ಆಧುನಿಕ ಕಾಲದ್ದೂ ಅಲ್ಲ. ಅದು ಎಲ್ಲ ಕಾಲದ ಮನುಷ್ಯ ಬದುಕಿನ ಸತ್ಯ ಅನ್ನಿಸುತ್ತದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...