ನಿರೀಕ್ಷೆ

ಮೋಹನ


ಮೂರು ದಿನಗಳು ಜಾರಿದುವು, ಬರಿ-
ದಾರಿ ಕಾಯುತಲಿರುವೆನು.
ಹಾರಯಿಕೆಯಂತಹದು ! ನನ್ನವ
ಬಾರನೇಕೆನುತಿರುವೆನು.
ಬರುವೆನೆನ್ನುವ ಓಲೆಯಿಲ್ಲವ-
ನರುಹಿದೊಸಗೆಗಳಿಲ್ಲ,
ಬರುವನೆನ್ನುತ ಬಗೆಯಿದೇನೋ
ಮೊರೆಯುತಿದೆ ಸುಳ್ಳಲ್ಲ.
ಎಂತಲೇ ದಿನವೆಲ್ಲಾ….
ಎಂತಲೇ ದಿನವೆಲ್ಲ ಹೀಗೆಯೆ
ನಿಂತು ನಿರುಕಿಪೆನಲ್ಲಾ !


ಸದ್ದನಾವುದ ಕೇಳಿದರೆ ಜು-
ಮ್ಮೆದ್ದ ಮೈಮನದಿಂದ
ಎದ್ದು ನೋಡುವೆ ಇನಿಯನೆಂದೇ
ಹೊದ್ದಿದಾತುರದಿಂದ.
ಆತನಲ್ಲದೆ ಇರಲು ಬಯಕೆಯು
ಬೀತು ಬಳಲಿಕೆಯಾಂತು,
ಕಾತರದಿ ಬಂದೊಳಗೆ ಬೀಳುವೆ-
ಕಾಯ್ದ ಸುಯ್ಲಲಿ-ಸೋತು.
ಮತ್ತೆ ಆಶೆಯು ಕೂಗಿ ….
ಮತ್ತೆ ಆಶಯು ಕೂಗಿ ಕರೆಯಲು
ಒತ್ತಿ ಏಳುವೆ ಬೀಗಿ.


ದೂರ ಬರುತಿರಬಹುದು ನನ್ನಾ
ನೀರನೆಂಬ ವಿಚಾರದಿ,
ಏರಿ ನೆಲೆಮನೆ ಹುಬ್ಬಿನೊಳು ಕೈ-
ಯೂರಿ ನಿರುಕಿಪೆ ದೂರದಿ;
‘ಏನಿದಿವಳಾರನ್ನು ನೋಡುವ-
ಳೇನಿದಾತುರ?’ ಎನ್ನುತ
ಆಡುವುದೆ ಜನ ?-ಎಂದು ಸುತ್ತಲು
ನೋಡುವೆನು ನಾನಂಜುತ
ಬರಲಿರುವನವನೆಂದು….
ಬರಲಿರುವನೆಂಬೀ ಬಗೆಯ ಬರಿ-
ಮೊರೆತಕೇನೆನಲಿಂದು ?
* * *

ಮೂರು ದಿನಗಳು ಜಾರಿದುವು ಬರಿ-
ದಾರಿ ಕಾಯುತಲಿರುವೆನು.
ಹಾರಯಿಕೆಯಂತಹದು ? ನಲ್ಲನು
ಬಾರನೇಕೆನುತಿರುವೆನು.
ಮನವನ್ನೇತರೊಳೊ
ಹೆಣೆದವನ ಮರೆಯಲಿಕೆ
ಹಣುಗಿಯೇ ಹಣುಗುವೆನು, ಆದರೇನು !


ಕಿಡಗೇಡಿ ತಂಗಾಳಿ-
ಯೊಡನೆ ಬಂದಾ ನೆನಹು
ಒಡಲ ಜುಽಮ್ಮೆನಿಸಿ ನವಿರೇರಿಸುವುದು.
ಬೆಳುದಿಂಗಳೊಡಗೊಂಡು
ತಿಳಿಯದಂತೈತಂದು
ಕಳವಳವ ಕರುಳಿನೊಳಗೂರಿಸುವುದು.


ತನ್ನವಳ ಜೊತೆಗೂಡಿ
ಹಾಡುತಿಹ ಹಕ್ಕಿಯುಲಿ
ತನ್ನ ಮಟ್ಟಕೆ ಸುಮ್ಮನಿರಬಾರದೆ?
ನನ್ನ ದೇನಿರಲು ಬಹು-
ದನ್ನೆಯವು ! ಅವನ ನೆನ-
ಪನ್ನು ಕಿವಿಗೊತ್ತಿ ಕಾಡುವುದು ಬರಿದೆ.


ಸುಡಲಿ, ಬಂದಿತಿದೇಕೊ
ಜಡಿಯ ಮೋಡದ ಜಿನುಗು !
ಹಿಡಿದು ಬೆಸೆವುದು ಆತನಾಶೆಯೊಡನೆ,
ಇಡಿದ ಕತ್ತಲೆಯಿರುಳು
ಮಿಡುಕುತೊಬ್ಬಳೆ ಮಲಗಿ-
ದೆಡೆಗೆ ಕಳುಹುವುದವನ ಬಯಕೆಯನ್ನೇ.


ಮುಳಿಸು ಹೆಮ್ಮೆಗಳಲ್ಲಿ
ಮಾಡಿದಾ ನಿರ್ಣಯವು
ಗಳಿಗೆಯರೆಗಳಿಗೆಯೂ ನಿಲ್ಲದಿಹುದು.
ನನಗಿರುವ ಆತುರವು
ಇನಿಯಗೇಕಿರದೆಂದು
ಜಿನುಗಿ ನನ್ನೆದೆಯುಸಿರ ಚೆಲ್ಲುತಿಹುದು.


‘ಇನಿತೊಂದು ಹಲುಬಿ ಕಂ-
ಬನಿಯಿಡುವೆನವಗಾಗಿ
‘ನೆನಪಾದರೂ ಇಹುದೆ ನನ್ನದವಗೆ?’
ಎನುವ ಯೋಚನೆ ಬರಲು
ಮುನಿಸು ಮೊಗದೋರಿ ನಾ-
ನೆನುವೆ ‘ಇನಿತೇಕೆ ಮನದಳಲು ನನಗೆ ?’
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನಗೂ ಸ್ವಲ್ಪ
Next post ಕಲ್ಲುಮೂರ್ತಿ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…