Home / ಕವನ / ಕವಿತೆ / ನಿರೀಕ್ಷೆ

ನಿರೀಕ್ಷೆ

ಮೋಹನ


ಮೂರು ದಿನಗಳು ಜಾರಿದುವು, ಬರಿ-
ದಾರಿ ಕಾಯುತಲಿರುವೆನು.
ಹಾರಯಿಕೆಯಂತಹದು ! ನನ್ನವ
ಬಾರನೇಕೆನುತಿರುವೆನು.
ಬರುವೆನೆನ್ನುವ ಓಲೆಯಿಲ್ಲವ-
ನರುಹಿದೊಸಗೆಗಳಿಲ್ಲ,
ಬರುವನೆನ್ನುತ ಬಗೆಯಿದೇನೋ
ಮೊರೆಯುತಿದೆ ಸುಳ್ಳಲ್ಲ.
ಎಂತಲೇ ದಿನವೆಲ್ಲಾ….
ಎಂತಲೇ ದಿನವೆಲ್ಲ ಹೀಗೆಯೆ
ನಿಂತು ನಿರುಕಿಪೆನಲ್ಲಾ !


ಸದ್ದನಾವುದ ಕೇಳಿದರೆ ಜು-
ಮ್ಮೆದ್ದ ಮೈಮನದಿಂದ
ಎದ್ದು ನೋಡುವೆ ಇನಿಯನೆಂದೇ
ಹೊದ್ದಿದಾತುರದಿಂದ.
ಆತನಲ್ಲದೆ ಇರಲು ಬಯಕೆಯು
ಬೀತು ಬಳಲಿಕೆಯಾಂತು,
ಕಾತರದಿ ಬಂದೊಳಗೆ ಬೀಳುವೆ-
ಕಾಯ್ದ ಸುಯ್ಲಲಿ-ಸೋತು.
ಮತ್ತೆ ಆಶೆಯು ಕೂಗಿ ….
ಮತ್ತೆ ಆಶಯು ಕೂಗಿ ಕರೆಯಲು
ಒತ್ತಿ ಏಳುವೆ ಬೀಗಿ.


ದೂರ ಬರುತಿರಬಹುದು ನನ್ನಾ
ನೀರನೆಂಬ ವಿಚಾರದಿ,
ಏರಿ ನೆಲೆಮನೆ ಹುಬ್ಬಿನೊಳು ಕೈ-
ಯೂರಿ ನಿರುಕಿಪೆ ದೂರದಿ;
‘ಏನಿದಿವಳಾರನ್ನು ನೋಡುವ-
ಳೇನಿದಾತುರ?’ ಎನ್ನುತ
ಆಡುವುದೆ ಜನ ?-ಎಂದು ಸುತ್ತಲು
ನೋಡುವೆನು ನಾನಂಜುತ
ಬರಲಿರುವನವನೆಂದು….
ಬರಲಿರುವನೆಂಬೀ ಬಗೆಯ ಬರಿ-
ಮೊರೆತಕೇನೆನಲಿಂದು ?
* * *

ಮೂರು ದಿನಗಳು ಜಾರಿದುವು ಬರಿ-
ದಾರಿ ಕಾಯುತಲಿರುವೆನು.
ಹಾರಯಿಕೆಯಂತಹದು ? ನಲ್ಲನು
ಬಾರನೇಕೆನುತಿರುವೆನು.
ಮನವನ್ನೇತರೊಳೊ
ಹೆಣೆದವನ ಮರೆಯಲಿಕೆ
ಹಣುಗಿಯೇ ಹಣುಗುವೆನು, ಆದರೇನು !


ಕಿಡಗೇಡಿ ತಂಗಾಳಿ-
ಯೊಡನೆ ಬಂದಾ ನೆನಹು
ಒಡಲ ಜುಽಮ್ಮೆನಿಸಿ ನವಿರೇರಿಸುವುದು.
ಬೆಳುದಿಂಗಳೊಡಗೊಂಡು
ತಿಳಿಯದಂತೈತಂದು
ಕಳವಳವ ಕರುಳಿನೊಳಗೂರಿಸುವುದು.


ತನ್ನವಳ ಜೊತೆಗೂಡಿ
ಹಾಡುತಿಹ ಹಕ್ಕಿಯುಲಿ
ತನ್ನ ಮಟ್ಟಕೆ ಸುಮ್ಮನಿರಬಾರದೆ?
ನನ್ನ ದೇನಿರಲು ಬಹು-
ದನ್ನೆಯವು ! ಅವನ ನೆನ-
ಪನ್ನು ಕಿವಿಗೊತ್ತಿ ಕಾಡುವುದು ಬರಿದೆ.


ಸುಡಲಿ, ಬಂದಿತಿದೇಕೊ
ಜಡಿಯ ಮೋಡದ ಜಿನುಗು !
ಹಿಡಿದು ಬೆಸೆವುದು ಆತನಾಶೆಯೊಡನೆ,
ಇಡಿದ ಕತ್ತಲೆಯಿರುಳು
ಮಿಡುಕುತೊಬ್ಬಳೆ ಮಲಗಿ-
ದೆಡೆಗೆ ಕಳುಹುವುದವನ ಬಯಕೆಯನ್ನೇ.


ಮುಳಿಸು ಹೆಮ್ಮೆಗಳಲ್ಲಿ
ಮಾಡಿದಾ ನಿರ್ಣಯವು
ಗಳಿಗೆಯರೆಗಳಿಗೆಯೂ ನಿಲ್ಲದಿಹುದು.
ನನಗಿರುವ ಆತುರವು
ಇನಿಯಗೇಕಿರದೆಂದು
ಜಿನುಗಿ ನನ್ನೆದೆಯುಸಿರ ಚೆಲ್ಲುತಿಹುದು.


‘ಇನಿತೊಂದು ಹಲುಬಿ ಕಂ-
ಬನಿಯಿಡುವೆನವಗಾಗಿ
‘ನೆನಪಾದರೂ ಇಹುದೆ ನನ್ನದವಗೆ?’
ಎನುವ ಯೋಚನೆ ಬರಲು
ಮುನಿಸು ಮೊಗದೋರಿ ನಾ-
ನೆನುವೆ ‘ಇನಿತೇಕೆ ಮನದಳಲು ನನಗೆ ?’
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...