Home / ಕವನ / ಕವಿತೆ / ನಿರೀಕ್ಷೆ

ನಿರೀಕ್ಷೆ

ಮೋಹನ


ಮೂರು ದಿನಗಳು ಜಾರಿದುವು, ಬರಿ-
ದಾರಿ ಕಾಯುತಲಿರುವೆನು.
ಹಾರಯಿಕೆಯಂತಹದು ! ನನ್ನವ
ಬಾರನೇಕೆನುತಿರುವೆನು.
ಬರುವೆನೆನ್ನುವ ಓಲೆಯಿಲ್ಲವ-
ನರುಹಿದೊಸಗೆಗಳಿಲ್ಲ,
ಬರುವನೆನ್ನುತ ಬಗೆಯಿದೇನೋ
ಮೊರೆಯುತಿದೆ ಸುಳ್ಳಲ್ಲ.
ಎಂತಲೇ ದಿನವೆಲ್ಲಾ….
ಎಂತಲೇ ದಿನವೆಲ್ಲ ಹೀಗೆಯೆ
ನಿಂತು ನಿರುಕಿಪೆನಲ್ಲಾ !


ಸದ್ದನಾವುದ ಕೇಳಿದರೆ ಜು-
ಮ್ಮೆದ್ದ ಮೈಮನದಿಂದ
ಎದ್ದು ನೋಡುವೆ ಇನಿಯನೆಂದೇ
ಹೊದ್ದಿದಾತುರದಿಂದ.
ಆತನಲ್ಲದೆ ಇರಲು ಬಯಕೆಯು
ಬೀತು ಬಳಲಿಕೆಯಾಂತು,
ಕಾತರದಿ ಬಂದೊಳಗೆ ಬೀಳುವೆ-
ಕಾಯ್ದ ಸುಯ್ಲಲಿ-ಸೋತು.
ಮತ್ತೆ ಆಶೆಯು ಕೂಗಿ ….
ಮತ್ತೆ ಆಶಯು ಕೂಗಿ ಕರೆಯಲು
ಒತ್ತಿ ಏಳುವೆ ಬೀಗಿ.


ದೂರ ಬರುತಿರಬಹುದು ನನ್ನಾ
ನೀರನೆಂಬ ವಿಚಾರದಿ,
ಏರಿ ನೆಲೆಮನೆ ಹುಬ್ಬಿನೊಳು ಕೈ-
ಯೂರಿ ನಿರುಕಿಪೆ ದೂರದಿ;
‘ಏನಿದಿವಳಾರನ್ನು ನೋಡುವ-
ಳೇನಿದಾತುರ?’ ಎನ್ನುತ
ಆಡುವುದೆ ಜನ ?-ಎಂದು ಸುತ್ತಲು
ನೋಡುವೆನು ನಾನಂಜುತ
ಬರಲಿರುವನವನೆಂದು….
ಬರಲಿರುವನೆಂಬೀ ಬಗೆಯ ಬರಿ-
ಮೊರೆತಕೇನೆನಲಿಂದು ?
* * *

ಮೂರು ದಿನಗಳು ಜಾರಿದುವು ಬರಿ-
ದಾರಿ ಕಾಯುತಲಿರುವೆನು.
ಹಾರಯಿಕೆಯಂತಹದು ? ನಲ್ಲನು
ಬಾರನೇಕೆನುತಿರುವೆನು.
ಮನವನ್ನೇತರೊಳೊ
ಹೆಣೆದವನ ಮರೆಯಲಿಕೆ
ಹಣುಗಿಯೇ ಹಣುಗುವೆನು, ಆದರೇನು !


ಕಿಡಗೇಡಿ ತಂಗಾಳಿ-
ಯೊಡನೆ ಬಂದಾ ನೆನಹು
ಒಡಲ ಜುಽಮ್ಮೆನಿಸಿ ನವಿರೇರಿಸುವುದು.
ಬೆಳುದಿಂಗಳೊಡಗೊಂಡು
ತಿಳಿಯದಂತೈತಂದು
ಕಳವಳವ ಕರುಳಿನೊಳಗೂರಿಸುವುದು.


ತನ್ನವಳ ಜೊತೆಗೂಡಿ
ಹಾಡುತಿಹ ಹಕ್ಕಿಯುಲಿ
ತನ್ನ ಮಟ್ಟಕೆ ಸುಮ್ಮನಿರಬಾರದೆ?
ನನ್ನ ದೇನಿರಲು ಬಹು-
ದನ್ನೆಯವು ! ಅವನ ನೆನ-
ಪನ್ನು ಕಿವಿಗೊತ್ತಿ ಕಾಡುವುದು ಬರಿದೆ.


ಸುಡಲಿ, ಬಂದಿತಿದೇಕೊ
ಜಡಿಯ ಮೋಡದ ಜಿನುಗು !
ಹಿಡಿದು ಬೆಸೆವುದು ಆತನಾಶೆಯೊಡನೆ,
ಇಡಿದ ಕತ್ತಲೆಯಿರುಳು
ಮಿಡುಕುತೊಬ್ಬಳೆ ಮಲಗಿ-
ದೆಡೆಗೆ ಕಳುಹುವುದವನ ಬಯಕೆಯನ್ನೇ.


ಮುಳಿಸು ಹೆಮ್ಮೆಗಳಲ್ಲಿ
ಮಾಡಿದಾ ನಿರ್ಣಯವು
ಗಳಿಗೆಯರೆಗಳಿಗೆಯೂ ನಿಲ್ಲದಿಹುದು.
ನನಗಿರುವ ಆತುರವು
ಇನಿಯಗೇಕಿರದೆಂದು
ಜಿನುಗಿ ನನ್ನೆದೆಯುಸಿರ ಚೆಲ್ಲುತಿಹುದು.


‘ಇನಿತೊಂದು ಹಲುಬಿ ಕಂ-
ಬನಿಯಿಡುವೆನವಗಾಗಿ
‘ನೆನಪಾದರೂ ಇಹುದೆ ನನ್ನದವಗೆ?’
ಎನುವ ಯೋಚನೆ ಬರಲು
ಮುನಿಸು ಮೊಗದೋರಿ ನಾ-
ನೆನುವೆ ‘ಇನಿತೇಕೆ ಮನದಳಲು ನನಗೆ ?’
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...