Home / ಕವನ / ಕವಿತೆ / ನಂದಾದೀಪ

ನಂದಾದೀಪ

ಹರಿದ ಸೀರೆಯಲಿ ನೂರೆಂಟು
ತೇಪೆಯ ಚಿತ್ತಾರ
ಅರಿಶಿನದ ಓಕುಳಿ ಕೆನ್ನೆಗೆ
ಹಣೆಯಲಿ ಕಾಸಿನಗಲದ
ಕುಂಕುಮದ ಸಿಂಗಾರ
ಮುಡಿಯಲ್ಲಿ ಮಾಸದ ಹೂವಿನ ದಂಡೆ
ಮುಗ್ಧ ಮಗುವಿನ ಮೊಗ
ಅಲ್ಲಿ ನಗುವೆಂಬ ನಗ
ಕಂಗಳಲ್ಲಿ ಬತ್ತದ ವಾತ್ಸಲ್ಯದ ಒರತೆ
ಆಧುನಿಕ ಗಂಧಗಾಳಿಯ ಕೊರತೆ
ಕಡಲಿಗೂ ಸಮನಾಗದ
ಮಮತೆಯ ಬಿಂದು
ಆಗಸದ ಪಾತ್ರಕ್ಕೂ ಹಿರಿದು
ಕಾರುಣ್ಯಸಿಂಧು
ಮಾತಿನಲಿ ಕುಗ್ಗದ ಅಗಾಧ ಪ್ರೀತಿ
ಮರುಳಾಗಿಸಿ ಮಣಿಸುವ ಮಾಂತ್ರಿಕ ಶಕ್ತಿ
ಮುಚ್ಚುಮರೆಯಿಲ್ಲದ ಬಿಚ್ಚುನುಡಿ
ಕಪಟ ಮೋಸವರಿಯದ ಶುದ್ಧ ಕನ್ನಡಿ
ಗಂಧದ ಮರ ಬೇಕಿಲ್ಲ ಉಪಮೆಗೆ
ಕರ್ಪೂರದಾರತಿ ಕಾಂತಿ ಕಂಗಳೊಳಗೆ
ನಿನ್ನೆ ನಾಳೆಗಳ ಚಿಂತೆ ತೊರೆದು
ಬೇಕು ಬೇಡಗಳ ಪಟ್ಟಿ ಕಿತ್ತೆಸೆದು
ಉರಿವ ಒಲೆಯೊಳಗೆ ಕನಸು,
ಕಲ್ಪನೆಗಳ ಸುಟ್ಟ ಬೂದಿ.
ವಾಸ್ತವತೆಯ ಪರಿಧಿಯಲ್ಲಿ
ಗರಗರ ತಿರುಗುವ ಗಾಣದೆತ್ತು
ಅಪ್ಪ ಹಾಕಿದ ಲಕ್ಷ್ಮಣ ರೇಖೆ
ಮೀರಿ ದಾಟಿದ ಭಯಭಕ್ತಿ
ತುತ್ತು ಅನ್ನ ಹಿಡಿಯಷ್ಟು ಪ್ರೀತಿ
ಪಂಚಾಮೃತವೆನ್ನುವ ಪರಮ ತೃಪ್ತಿ
ನೂರು ದೇವರ ನಿವಾಳಿಸಿ
ಒಗೆಯಬೇಕಿವಳ ಮುಂದೆ
ಕರುಳು ಬತ್ತಿಯ ನೇದು
ನೆತ್ತರ ತೈಲವನೆರೆದು
ಒಡಲ ಕುಡಿಗಳ ಬೆಳಗುವ
ನಿತ್ಯ ಉರಿಯುವ ನಂದಾದೀಪ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...