ನಂದಾದೀಪ

ಹರಿದ ಸೀರೆಯಲಿ ನೂರೆಂಟು
ತೇಪೆಯ ಚಿತ್ತಾರ
ಅರಿಶಿನದ ಓಕುಳಿ ಕೆನ್ನೆಗೆ
ಹಣೆಯಲಿ ಕಾಸಿನಗಲದ
ಕುಂಕುಮದ ಸಿಂಗಾರ
ಮುಡಿಯಲ್ಲಿ ಮಾಸದ ಹೂವಿನ ದಂಡೆ
ಮುಗ್ಧ ಮಗುವಿನ ಮೊಗ
ಅಲ್ಲಿ ನಗುವೆಂಬ ನಗ
ಕಂಗಳಲ್ಲಿ ಬತ್ತದ ವಾತ್ಸಲ್ಯದ ಒರತೆ
ಆಧುನಿಕ ಗಂಧಗಾಳಿಯ ಕೊರತೆ
ಕಡಲಿಗೂ ಸಮನಾಗದ
ಮಮತೆಯ ಬಿಂದು
ಆಗಸದ ಪಾತ್ರಕ್ಕೂ ಹಿರಿದು
ಕಾರುಣ್ಯಸಿಂಧು
ಮಾತಿನಲಿ ಕುಗ್ಗದ ಅಗಾಧ ಪ್ರೀತಿ
ಮರುಳಾಗಿಸಿ ಮಣಿಸುವ ಮಾಂತ್ರಿಕ ಶಕ್ತಿ
ಮುಚ್ಚುಮರೆಯಿಲ್ಲದ ಬಿಚ್ಚುನುಡಿ
ಕಪಟ ಮೋಸವರಿಯದ ಶುದ್ಧ ಕನ್ನಡಿ
ಗಂಧದ ಮರ ಬೇಕಿಲ್ಲ ಉಪಮೆಗೆ
ಕರ್ಪೂರದಾರತಿ ಕಾಂತಿ ಕಂಗಳೊಳಗೆ
ನಿನ್ನೆ ನಾಳೆಗಳ ಚಿಂತೆ ತೊರೆದು
ಬೇಕು ಬೇಡಗಳ ಪಟ್ಟಿ ಕಿತ್ತೆಸೆದು
ಉರಿವ ಒಲೆಯೊಳಗೆ ಕನಸು,
ಕಲ್ಪನೆಗಳ ಸುಟ್ಟ ಬೂದಿ.
ವಾಸ್ತವತೆಯ ಪರಿಧಿಯಲ್ಲಿ
ಗರಗರ ತಿರುಗುವ ಗಾಣದೆತ್ತು
ಅಪ್ಪ ಹಾಕಿದ ಲಕ್ಷ್ಮಣ ರೇಖೆ
ಮೀರಿ ದಾಟಿದ ಭಯಭಕ್ತಿ
ತುತ್ತು ಅನ್ನ ಹಿಡಿಯಷ್ಟು ಪ್ರೀತಿ
ಪಂಚಾಮೃತವೆನ್ನುವ ಪರಮ ತೃಪ್ತಿ
ನೂರು ದೇವರ ನಿವಾಳಿಸಿ
ಒಗೆಯಬೇಕಿವಳ ಮುಂದೆ
ಕರುಳು ಬತ್ತಿಯ ನೇದು
ನೆತ್ತರ ತೈಲವನೆರೆದು
ಒಡಲ ಕುಡಿಗಳ ಬೆಳಗುವ
ನಿತ್ಯ ಉರಿಯುವ ನಂದಾದೀಪ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಹಸಿವು, ಸುಳ್ಳು, ಅನಿವಾರ್ಯ
Next post ಬ್ರಹ್ಮ ಮಾನಸ ಸರೋವರದಲಿ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…