Home / ಕವನ / ಕವಿತೆ / ಬಜಾರಿನಲ್ಲಿ ಬುದ್ಧ….

ಬಜಾರಿನಲ್ಲಿ ಬುದ್ಧ….

ಬಜಾರಿನಲ್ಲಿ ಇದ್ದ ಬುದ್ಧ
ರಾಮ, ಕೃಷ್ಣ, ಶಿವ, ಗಾಂಧಿ
ಅಂಬೇಡ್ಕರ್ ಅವರ ಜೊತೆಗೆ ಕುಳಿತಿದ್ದ.

ಮೊಂಡು ಕೈ, ಹರಿದ ಅಂಗವಸ್ತ್ರ….
ಬುದ್ಧ ಹೌದೋ ಅಲ್ಲವೋ ಎಂದು
ಅನುಮಾನಿಸುವಷ್ಟು ಚಿಂದಿಯಾಗಿದ್ದ.

ಆದರವೇ ಜಾಜ್ವಲ್ಯಮಾನ ಕಣ್ಣುಗಳು
ಸೆಳೆದವು, ಹೊಳೆದವು ಫಳ ಫಳ
ಪುಳಕಿತಳಾಗಿ ಮನೆಗೆ ಕರೆದೆ, ಬಂದ.

ಒಣಗಿದ ಹೂವು, ಆರಿದ ದೀಪ, ಪಿನ್ನು,
ಪುಸ್ತಕ, ಎಂಜಲು ತಟ್ಟೆ, ಒಣಗಿದ ಬಟ್ಟೆ,
ಹಣ್ಣು-ತರಕಾರಿಯ ಒತ್ತರಿಸಿ, ಅಂಗೈಯಲ್ಲಿ
ಗುಡಿಸಿ, ಸಾರಿಸಿ ಜಾಗ ಮಾಡಿಕೊಟ್ಟೆ-
ಮೇಜಿನ ಮೂಲೆಯಲಿ ಕೂತ.

ಅವನು ಬುದ್ಧ
ಮೈತ್ರಿ-ಕರುಣೆಯ ಸಾಕಾರ
ಅವನದೇ ಮಾತು: ಸಂಸಾರ ದುಃಖಸಾಗರ
ಆಶೆಯೇ ದುಃಖಕ್ಕೆ ಮೂಲ, ಜೀವನವು ನಶ್ವರ.

ಮಾರನಿಗೊಲಿದಿದ್ದ ನಾವು ಅವನ ಮುಂದೆಯೆ
ಶುರು ಹಚ್ಚಿಕೊಂಡೆವು ವ್ಯವಹಾರ
ಮನೆ ಮಂದಿಯ ಮೋಹ, ಮದ, ಮತ್ಸರ
ಆತಂಕ, ಆವೇಶ, ದುಃಖ, ಕೋಪ
ಎಲ್ಲವೂ ಈಗವನ ಸಮ್ಮುಖ!

ದೂಷಣೆ, ಶೋಷಣೆ, ಘೋಷಣೆ
ಯುದ್ಧ-ಕದನ ವಿರಾಮಗಳಿಗೆ-
ಅವನೇ ಸಾಕ್ಷಿ, ಅವನದೇ ರಾಯಭಾರ.
ರೋಗ ರುಜಿನ, ಮರಣ ಎಲ್ಲವುಗಳಿಗೆ
ಅವನೇ ಕಾರಣ, ಅವನಿಂದಲೇ ಶಮನ!

ಅಷ್ಟಾಂಗ ಮಾರ್ಗಗಳಿಗೆ ನಮಿಸಿದೆವು ನಿಜ,
ಆಚರಿಸಿದೆವೋ ಅನುಮಾನ!
ಏರಿದ ಎತ್ತರ, ಇಳಿದ ಪ್ರಪಾತ,
ಕವಿದ ಕಾರ್ಮೋಡ, ಕರಗಿದ ಕಾವಳ-
ಇಲ್ಲದೆಯೂ ಇದ್ದಂತೆ, ಜೊತೆಗಿದ್ದ….

ಇಪ್ಪತ್ತು ವರುಷವಾಯಿತು ಬುದ್ಧ
ನಮ್ಮಲ್ಲಿಗೆ ಬಂದು-
ನಮ್ಮೊಂದಿಗೇ ನಿಂದು, ನೊಂದು, ಬೆಂದು;
ಈಗವನು ನಮ್ಮವನು, ನಮ್ಮಲ್ಲೇ ಒಂದು.

ಇನಿತೂ ಬದಲಾಗಿಲ್ಲ….ಅದೇ
ಗುಂಡು ಮುಖ, ತುಂಡು ಬಾಯಿ
ಮೊಂಡು ಕೈ, ಹರಿದ ಅಂಗವಸ್ತ್ರ,
ಅದೇ ಮೌನ, ಸಮಾಧಾನ

ನಾವೂ ಅಷ್ಟೆ, ಇನಿತೂ ಬದಲಾಗಿಲ್ಲ!
ಅದೇ ವೇಗ, ಅದೇ ಭೋಗ,
ಅದೇ ತನ್ಹಾ….ಅದೇ ತಲ್ಲಣ!!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...