Home / ಕವನ / ಕವಿತೆ / ಬಜಾರಿನಲ್ಲಿ ಬುದ್ಧ….

ಬಜಾರಿನಲ್ಲಿ ಬುದ್ಧ….

ಬಜಾರಿನಲ್ಲಿ ಇದ್ದ ಬುದ್ಧ
ರಾಮ, ಕೃಷ್ಣ, ಶಿವ, ಗಾಂಧಿ
ಅಂಬೇಡ್ಕರ್ ಅವರ ಜೊತೆಗೆ ಕುಳಿತಿದ್ದ.

ಮೊಂಡು ಕೈ, ಹರಿದ ಅಂಗವಸ್ತ್ರ….
ಬುದ್ಧ ಹೌದೋ ಅಲ್ಲವೋ ಎಂದು
ಅನುಮಾನಿಸುವಷ್ಟು ಚಿಂದಿಯಾಗಿದ್ದ.

ಆದರವೇ ಜಾಜ್ವಲ್ಯಮಾನ ಕಣ್ಣುಗಳು
ಸೆಳೆದವು, ಹೊಳೆದವು ಫಳ ಫಳ
ಪುಳಕಿತಳಾಗಿ ಮನೆಗೆ ಕರೆದೆ, ಬಂದ.

ಒಣಗಿದ ಹೂವು, ಆರಿದ ದೀಪ, ಪಿನ್ನು,
ಪುಸ್ತಕ, ಎಂಜಲು ತಟ್ಟೆ, ಒಣಗಿದ ಬಟ್ಟೆ,
ಹಣ್ಣು-ತರಕಾರಿಯ ಒತ್ತರಿಸಿ, ಅಂಗೈಯಲ್ಲಿ
ಗುಡಿಸಿ, ಸಾರಿಸಿ ಜಾಗ ಮಾಡಿಕೊಟ್ಟೆ-
ಮೇಜಿನ ಮೂಲೆಯಲಿ ಕೂತ.

ಅವನು ಬುದ್ಧ
ಮೈತ್ರಿ-ಕರುಣೆಯ ಸಾಕಾರ
ಅವನದೇ ಮಾತು: ಸಂಸಾರ ದುಃಖಸಾಗರ
ಆಶೆಯೇ ದುಃಖಕ್ಕೆ ಮೂಲ, ಜೀವನವು ನಶ್ವರ.

ಮಾರನಿಗೊಲಿದಿದ್ದ ನಾವು ಅವನ ಮುಂದೆಯೆ
ಶುರು ಹಚ್ಚಿಕೊಂಡೆವು ವ್ಯವಹಾರ
ಮನೆ ಮಂದಿಯ ಮೋಹ, ಮದ, ಮತ್ಸರ
ಆತಂಕ, ಆವೇಶ, ದುಃಖ, ಕೋಪ
ಎಲ್ಲವೂ ಈಗವನ ಸಮ್ಮುಖ!

ದೂಷಣೆ, ಶೋಷಣೆ, ಘೋಷಣೆ
ಯುದ್ಧ-ಕದನ ವಿರಾಮಗಳಿಗೆ-
ಅವನೇ ಸಾಕ್ಷಿ, ಅವನದೇ ರಾಯಭಾರ.
ರೋಗ ರುಜಿನ, ಮರಣ ಎಲ್ಲವುಗಳಿಗೆ
ಅವನೇ ಕಾರಣ, ಅವನಿಂದಲೇ ಶಮನ!

ಅಷ್ಟಾಂಗ ಮಾರ್ಗಗಳಿಗೆ ನಮಿಸಿದೆವು ನಿಜ,
ಆಚರಿಸಿದೆವೋ ಅನುಮಾನ!
ಏರಿದ ಎತ್ತರ, ಇಳಿದ ಪ್ರಪಾತ,
ಕವಿದ ಕಾರ್ಮೋಡ, ಕರಗಿದ ಕಾವಳ-
ಇಲ್ಲದೆಯೂ ಇದ್ದಂತೆ, ಜೊತೆಗಿದ್ದ….

ಇಪ್ಪತ್ತು ವರುಷವಾಯಿತು ಬುದ್ಧ
ನಮ್ಮಲ್ಲಿಗೆ ಬಂದು-
ನಮ್ಮೊಂದಿಗೇ ನಿಂದು, ನೊಂದು, ಬೆಂದು;
ಈಗವನು ನಮ್ಮವನು, ನಮ್ಮಲ್ಲೇ ಒಂದು.

ಇನಿತೂ ಬದಲಾಗಿಲ್ಲ….ಅದೇ
ಗುಂಡು ಮುಖ, ತುಂಡು ಬಾಯಿ
ಮೊಂಡು ಕೈ, ಹರಿದ ಅಂಗವಸ್ತ್ರ,
ಅದೇ ಮೌನ, ಸಮಾಧಾನ

ನಾವೂ ಅಷ್ಟೆ, ಇನಿತೂ ಬದಲಾಗಿಲ್ಲ!
ಅದೇ ವೇಗ, ಅದೇ ಭೋಗ,
ಅದೇ ತನ್ಹಾ….ಅದೇ ತಲ್ಲಣ!!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...