Home / ಕವನ / ಕವಿತೆ / ಬಜಾರಿನಲ್ಲಿ ಬುದ್ಧ….

ಬಜಾರಿನಲ್ಲಿ ಬುದ್ಧ….

ಬಜಾರಿನಲ್ಲಿ ಇದ್ದ ಬುದ್ಧ
ರಾಮ, ಕೃಷ್ಣ, ಶಿವ, ಗಾಂಧಿ
ಅಂಬೇಡ್ಕರ್ ಅವರ ಜೊತೆಗೆ ಕುಳಿತಿದ್ದ.

ಮೊಂಡು ಕೈ, ಹರಿದ ಅಂಗವಸ್ತ್ರ….
ಬುದ್ಧ ಹೌದೋ ಅಲ್ಲವೋ ಎಂದು
ಅನುಮಾನಿಸುವಷ್ಟು ಚಿಂದಿಯಾಗಿದ್ದ.

ಆದರವೇ ಜಾಜ್ವಲ್ಯಮಾನ ಕಣ್ಣುಗಳು
ಸೆಳೆದವು, ಹೊಳೆದವು ಫಳ ಫಳ
ಪುಳಕಿತಳಾಗಿ ಮನೆಗೆ ಕರೆದೆ, ಬಂದ.

ಒಣಗಿದ ಹೂವು, ಆರಿದ ದೀಪ, ಪಿನ್ನು,
ಪುಸ್ತಕ, ಎಂಜಲು ತಟ್ಟೆ, ಒಣಗಿದ ಬಟ್ಟೆ,
ಹಣ್ಣು-ತರಕಾರಿಯ ಒತ್ತರಿಸಿ, ಅಂಗೈಯಲ್ಲಿ
ಗುಡಿಸಿ, ಸಾರಿಸಿ ಜಾಗ ಮಾಡಿಕೊಟ್ಟೆ-
ಮೇಜಿನ ಮೂಲೆಯಲಿ ಕೂತ.

ಅವನು ಬುದ್ಧ
ಮೈತ್ರಿ-ಕರುಣೆಯ ಸಾಕಾರ
ಅವನದೇ ಮಾತು: ಸಂಸಾರ ದುಃಖಸಾಗರ
ಆಶೆಯೇ ದುಃಖಕ್ಕೆ ಮೂಲ, ಜೀವನವು ನಶ್ವರ.

ಮಾರನಿಗೊಲಿದಿದ್ದ ನಾವು ಅವನ ಮುಂದೆಯೆ
ಶುರು ಹಚ್ಚಿಕೊಂಡೆವು ವ್ಯವಹಾರ
ಮನೆ ಮಂದಿಯ ಮೋಹ, ಮದ, ಮತ್ಸರ
ಆತಂಕ, ಆವೇಶ, ದುಃಖ, ಕೋಪ
ಎಲ್ಲವೂ ಈಗವನ ಸಮ್ಮುಖ!

ದೂಷಣೆ, ಶೋಷಣೆ, ಘೋಷಣೆ
ಯುದ್ಧ-ಕದನ ವಿರಾಮಗಳಿಗೆ-
ಅವನೇ ಸಾಕ್ಷಿ, ಅವನದೇ ರಾಯಭಾರ.
ರೋಗ ರುಜಿನ, ಮರಣ ಎಲ್ಲವುಗಳಿಗೆ
ಅವನೇ ಕಾರಣ, ಅವನಿಂದಲೇ ಶಮನ!

ಅಷ್ಟಾಂಗ ಮಾರ್ಗಗಳಿಗೆ ನಮಿಸಿದೆವು ನಿಜ,
ಆಚರಿಸಿದೆವೋ ಅನುಮಾನ!
ಏರಿದ ಎತ್ತರ, ಇಳಿದ ಪ್ರಪಾತ,
ಕವಿದ ಕಾರ್ಮೋಡ, ಕರಗಿದ ಕಾವಳ-
ಇಲ್ಲದೆಯೂ ಇದ್ದಂತೆ, ಜೊತೆಗಿದ್ದ….

ಇಪ್ಪತ್ತು ವರುಷವಾಯಿತು ಬುದ್ಧ
ನಮ್ಮಲ್ಲಿಗೆ ಬಂದು-
ನಮ್ಮೊಂದಿಗೇ ನಿಂದು, ನೊಂದು, ಬೆಂದು;
ಈಗವನು ನಮ್ಮವನು, ನಮ್ಮಲ್ಲೇ ಒಂದು.

ಇನಿತೂ ಬದಲಾಗಿಲ್ಲ….ಅದೇ
ಗುಂಡು ಮುಖ, ತುಂಡು ಬಾಯಿ
ಮೊಂಡು ಕೈ, ಹರಿದ ಅಂಗವಸ್ತ್ರ,
ಅದೇ ಮೌನ, ಸಮಾಧಾನ

ನಾವೂ ಅಷ್ಟೆ, ಇನಿತೂ ಬದಲಾಗಿಲ್ಲ!
ಅದೇ ವೇಗ, ಅದೇ ಭೋಗ,
ಅದೇ ತನ್ಹಾ….ಅದೇ ತಲ್ಲಣ!!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...