ಬಜಾರಿನಲ್ಲಿ ಬುದ್ಧ….

ಬಜಾರಿನಲ್ಲಿ ಇದ್ದ ಬುದ್ಧ
ರಾಮ, ಕೃಷ್ಣ, ಶಿವ, ಗಾಂಧಿ
ಅಂಬೇಡ್ಕರ್ ಅವರ ಜೊತೆಗೆ ಕುಳಿತಿದ್ದ.

ಮೊಂಡು ಕೈ, ಹರಿದ ಅಂಗವಸ್ತ್ರ….
ಬುದ್ಧ ಹೌದೋ ಅಲ್ಲವೋ ಎಂದು
ಅನುಮಾನಿಸುವಷ್ಟು ಚಿಂದಿಯಾಗಿದ್ದ.

ಆದರವೇ ಜಾಜ್ವಲ್ಯಮಾನ ಕಣ್ಣುಗಳು
ಸೆಳೆದವು, ಹೊಳೆದವು ಫಳ ಫಳ
ಪುಳಕಿತಳಾಗಿ ಮನೆಗೆ ಕರೆದೆ, ಬಂದ.

ಒಣಗಿದ ಹೂವು, ಆರಿದ ದೀಪ, ಪಿನ್ನು,
ಪುಸ್ತಕ, ಎಂಜಲು ತಟ್ಟೆ, ಒಣಗಿದ ಬಟ್ಟೆ,
ಹಣ್ಣು-ತರಕಾರಿಯ ಒತ್ತರಿಸಿ, ಅಂಗೈಯಲ್ಲಿ
ಗುಡಿಸಿ, ಸಾರಿಸಿ ಜಾಗ ಮಾಡಿಕೊಟ್ಟೆ-
ಮೇಜಿನ ಮೂಲೆಯಲಿ ಕೂತ.

ಅವನು ಬುದ್ಧ
ಮೈತ್ರಿ-ಕರುಣೆಯ ಸಾಕಾರ
ಅವನದೇ ಮಾತು: ಸಂಸಾರ ದುಃಖಸಾಗರ
ಆಶೆಯೇ ದುಃಖಕ್ಕೆ ಮೂಲ, ಜೀವನವು ನಶ್ವರ.

ಮಾರನಿಗೊಲಿದಿದ್ದ ನಾವು ಅವನ ಮುಂದೆಯೆ
ಶುರು ಹಚ್ಚಿಕೊಂಡೆವು ವ್ಯವಹಾರ
ಮನೆ ಮಂದಿಯ ಮೋಹ, ಮದ, ಮತ್ಸರ
ಆತಂಕ, ಆವೇಶ, ದುಃಖ, ಕೋಪ
ಎಲ್ಲವೂ ಈಗವನ ಸಮ್ಮುಖ!

ದೂಷಣೆ, ಶೋಷಣೆ, ಘೋಷಣೆ
ಯುದ್ಧ-ಕದನ ವಿರಾಮಗಳಿಗೆ-
ಅವನೇ ಸಾಕ್ಷಿ, ಅವನದೇ ರಾಯಭಾರ.
ರೋಗ ರುಜಿನ, ಮರಣ ಎಲ್ಲವುಗಳಿಗೆ
ಅವನೇ ಕಾರಣ, ಅವನಿಂದಲೇ ಶಮನ!

ಅಷ್ಟಾಂಗ ಮಾರ್ಗಗಳಿಗೆ ನಮಿಸಿದೆವು ನಿಜ,
ಆಚರಿಸಿದೆವೋ ಅನುಮಾನ!
ಏರಿದ ಎತ್ತರ, ಇಳಿದ ಪ್ರಪಾತ,
ಕವಿದ ಕಾರ್ಮೋಡ, ಕರಗಿದ ಕಾವಳ-
ಇಲ್ಲದೆಯೂ ಇದ್ದಂತೆ, ಜೊತೆಗಿದ್ದ….

ಇಪ್ಪತ್ತು ವರುಷವಾಯಿತು ಬುದ್ಧ
ನಮ್ಮಲ್ಲಿಗೆ ಬಂದು-
ನಮ್ಮೊಂದಿಗೇ ನಿಂದು, ನೊಂದು, ಬೆಂದು;
ಈಗವನು ನಮ್ಮವನು, ನಮ್ಮಲ್ಲೇ ಒಂದು.

ಇನಿತೂ ಬದಲಾಗಿಲ್ಲ….ಅದೇ
ಗುಂಡು ಮುಖ, ತುಂಡು ಬಾಯಿ
ಮೊಂಡು ಕೈ, ಹರಿದ ಅಂಗವಸ್ತ್ರ,
ಅದೇ ಮೌನ, ಸಮಾಧಾನ

ನಾವೂ ಅಷ್ಟೆ, ಇನಿತೂ ಬದಲಾಗಿಲ್ಲ!
ಅದೇ ವೇಗ, ಅದೇ ಭೋಗ,
ಅದೇ ತನ್ಹಾ….ಅದೇ ತಲ್ಲಣ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾದು ಕುಳಿತ ಪೆಣತಿನಿಗಳು
Next post ಮನೆವಾಳ್ತನ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…