Home / ಕವನ / ಕವಿತೆ / ಬಸವಿ ಮಗಳು

ಬಸವಿ ಮಗಳು

ನಾಲ್ಕು ಜನರಿರುವ ಜಾಗವನ್ನು ದಾಟಿ ಹೋಗ ಬೇಕೆಂದರೆ
ಕುತ್ತಿಗೆಗೆ ಬರುವುದು
ಜನರ ನೋಟ ಹೊಟ್ಟೆಯೊಳಗೆ ಕಟ್ಟು ಚೂರಿಯನ್ನಾಡಿಸಿದಂತಾಗುವುದು
ಮಾತುಗಳು ನಗಾರಿಯ ಭೇರಿಯಂತೆ ತಮಟೆ ಹರಿಯುವವು
ತಲೆ, ತಂತಾನೆ ಮಣ ಭಾರ ವಾಗುವುದು; ಮೇಲೆತ್ತದಂತಾಗುವುದು
ನಿತ್ರಾಣವಾಗಿ ಕಾಲುಗಳು ಕಿತ್ತಿಡಲಾಗದಷ್ಟು ಭಾರವಾಗುವವು
ಜೀವ ಮುದ್ದೆ, ಮುದ್ದೆಯಾಗುವುದು.
ಬಸವಿಯ ಮಗಳಾದ ಪಾಪಕ್ಕಾಗಿ ಎಲ್ಲಾ ಸಹಿಸ ಬೇಕಾಗುವುದು

ಹೊರಗೆ ಈ ವಾಡು
ಒಳಗೆ, ಕೇಳೋದೆ ಬೇಡ!

ನಮ್ಮನ್ನು ಸಾಕಿದ ದೊಡ್ಡಮ್ಮನ ಮಗನೂ
ಮಾತಿಗೆ ಬಂದರೆ ಏನೇನೂ ಉಳಿಸನು, ಜನ್ಮ ಜಾಲಾಡಿ ಬಿಡುವನು-
“ನಿಮಗೆ ಯಾರಿದ್ದರು?
ನಾನೊಬ್ಬ ಕೈ ಹಿಡಿಯದಿದ್ದರೆ
ಎಂದೋ ತುರುಕರು, ತುಂಡರ ಪಾಲಾಗಿ ಹೋಗಿ ಬಿಡುತ್ತಿದ್ದಿರಿ,
ನಿಮ್ಮಮ್ಮ, ಬೀದಿ ನಾಯಿಯಂತೆ
ಸಿಕ್ಕಿದವರಿಗೆ ಬಸುರಾಗಿ, ಸಿಕ್ಕಲ್ಲಿ ಈದುಕೊಂಡು, ಹಾಗೇನೆ,
ಮೂರು ಹೆಣ್ಣು ಬೋಕಿಗಳನ್ನು ಕಟ್ಟಿ ಕೊಂಡು
ಹೊಸ್ತಿಲಿಂದ ಹೊಸ್ತಿಲಿಗೆ ತಳ, ಕೂಳಿಗಾಗಿ ಅಲೆಯುತ್ತಿದ್ದಾಗ
ಪಾಪ! ಅಂದ ನಾನು ಕರಕೊಂಡು ಬಂದು
ಒಳಗಿಟ್ಟು ಕೊಂಡೆ;
ಒಂದು ಗೌರವ, ಬಾಳು ಕೊಟ್ಟೆ ಕಣಿರೆ” ಎನ್ನುವನು

ಮಾಡಿದ್ದ ಆಡಿದರೆ ಏನು ಬಂತು? ಹೇಳಿ

ಕಟ್ಟಿ ಕೊಂಡವನೋ…
ದೇವರಿಗೆ ಪ್ರೀತಿಯಾಗ ಬೇಕು!-
ಅಂಬದ ಮಾತಿಲ್ಲ
ಕೊಡದ ಚಿತ್ರ ಹಿಂಸೆಯಿಲ್ಲ
ಅವನಿಗೆ ನಾನೊಬ್ಬಳು ಮನುಷ್ಯಳೆಂಬುದೇ ಗೊತ್ತಿಲ್ಲ
ನನಗೆ ಅನುಭವಿಸದೆ ವಿಧಿಯಿಲ್ಲ

ಬಿಟ್ಟನೆಂದರೆ ಬರಮಾಡಿಕೊಳ್ಳುವರಾರು!
ಹೊರಟೆನೆಂದರೆ ಹೋಗುವುದೆಲ್ಲಿಗೆ?
ನನಗೆ, ನನ್ನವರೆ, ತನ್ನವರೆ, ಮನೆಯೆ, ಮಠವೆ?
ಯಾರಿದ್ದಾರೆ? ಏನಿದೆ?
ಇದ್ದರೂ ಇಲ್ಲೆ ಬಿದ್ದರೂ ಇಲ್ಲೆ! ನನಗಿರುವುದು ಇದೊಂದೆ!
ಇದ್ದೊಬ್ಬ ತಾಯಿಯೂ ಹೆಣವಾಗಿ ಇಲ್ಲೆ ಬಿದ್ದಿಹಳು

ಎಲ್ಲೆಲ್ಲೋ ಬಿದ್ದೆದ್ದು ಬರುವನು
ತಿಂದು, ಕುಡಿದು ಮಜಾ ಮಾಡಿ ಲಾಕ್ ಲೇಕ್ ಮಾಡುವನು
ಯಾರು ಯಾರನ್ನೋ ಕಟ್ಟಿ ಕೊಂಡು ಬರುವನು
ಹೊತ್ತು ಗೊತ್ತೆಂಬುದೇ ಇಲ್ಲ
ಬಂದಾಗ ಬಾಗಿಲು ತೆರೆಯಬೇಕು
ಈಗ ಆಗ ಬೇಕೆಂದರೆ ಆಗ ಆಗಬೇಕು
ಒಳಗೆ ಐತ್ತೆ ಇಲ್ಲ ಅನ್ನೋದು ನೋಡಲ್ಲ
ತನಗೆ ಹೇಗೊ ತನ್ನ ಹಿಂದೆ ಬಂದಿರುವವರಿಗೂ ಹಾಗೇ
ಏನೂ ಕಡಿಮೆಯಾಗಬಾರದು
ಹಾಗೇನಾದರೂ ಆಯಿತೋ ಕೆಂಡ, ಕೆಂಡವನ್ನೇ ಕಾರುವನು
ಮಹಾರಾಯ! ತಾನು ಸಾಕಿರುವ ನಾಯಿಗೆ ತೋರಿಸುವಷ್ಟು ಪ್ರೀತಿ
ತೋರಿಸಿದ್ದರೂ ಎಷ್ಟೋ ಆಗುತ್ತಿತ್ತು

ಏನಾದರೂ ಮಾಡಲಿ ಬಿಡಲಿ
ಇರುಳು ಹಗಲು ಮಲಗಿ ಕೊಂಡಿರಲಿ ಕೇಳುವ ಹಾಗಿಲ್ಲ
ಬಾಯಿತಪ್ಪಿ ಅಂದರೂ
ಆಂ! ಊಂ… ಊ….!
ಉಸಿರು ಬಿಟ್ಟರೆ ನೋಡು
ತಲೆ ಹೊಯ್ದ ಎಲೆ ಮುಚ್ಚಿ ಬರುವೆ ಹುಷಾರ್!
ಎಚ್ಚರಿಕೆಯಲ್ಲಿರು ಎನ್ನುವನು

ಅದು ಹೋಗಲಿ ಬಿಡಿ!
ಇವುಗಳ ತಲೆ ಬಿದ್ದೋಗ
ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಾದರೂ ಕೂಡ
ನೋಡಿ, ಮಾಡಿ ಮಾತಾಡುವುದಿದೆಯೆ?
“ಲೇ! ಅಪ್ಪನ ಗುರುತು ಅರಿಯದವಳೆ! ಹಾರಾಡ ಬೇಡ”
ವೆನ್ನುವವು

ಥೂ! ಇಂತಾ ಜನ್ಮಬೇಕಿತ್ತಾ?
ಯಾವ ತಾಯಿಗ್ಗಂಡ ಮಾಡಿದನೋ ಈ ಬಸವಿ ಬಿಡೋದಾ!
ಇವನ ವಂಶ ನಿರ್ವಂಶವಾಗಿ ಹೋಗಾ!
ಅವನನ್ನು ಮೆಟ್ಟು ಬೀಳುವಾಗ ಮೆಟ್ಟು ತಗೊಂಡು ಹೊಡಿಬೇಕು
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...