Home / ಕವನ / ಕವಿತೆ / ಬಾಗಿಲ ತೆಗೆಯಮ್ಮ

ಬಾಗಿಲ ತೆಗೆಯಮ್ಮ

ಕಳೆಯನು ಕಳೆಯದೆ ನಾನಿನ್ನ ಕಾಣೆನು
ಸರಸಮ್ಮ ನೀನೆಷ್ಟು ಕಳವಂತಿಯೆ
ಹೊಲದಲ್ಲಿ ತುಂಬಿರುವ ದನಗಳನಟ್ಟದೆ
ಬೆಳೆಯನ್ನು ಕಾಣೆನು ರಸವಂತಿಯೆ || ೧ ||

ಈ ಮಣ್ಣು ಈ ನೀರು ಗಾಳಿ ಬೆಂಕಿಗಳಿಂದ
ಹೊಲದಲ್ಲಿ ಬೆಳೆಯನು ಬೆಳೆಯಬಹುದು
ಬರಿಸೊಪ್ಪೆ ಬೆಳೆದರೆ ಹೊಟ್ಟಿಗೆ ಬರಿಮಣ್ಣು
ಕಳೆಯ ಕಾಳಿಲ್ಲದೆ ಗೆಯ್ಮೆ ಬರಿದು || ೨ ||

ಅಡವಿಯ ಪೈಣದಿ ಕಣ್ಣು ಕಾಣಿಸದಂತೆ
ಎಡರು ತೊಡರುಗಳಲ್ಲಿ ನಾನಿರುವೆನು
ತೊಡರನು ಬಿಡಿಸಲೇ ಬಡಿದಾಟ ಸಾಗಿದೆ
ಹೊಡಮುರಿದೇಳ್ವುದು ಬಯಕೆ ಬಳ್ಳಿ || ೩ ||

ಆಗೊಮ್ಮೆ ಈಗೊಮ್ಮೆ ಮರಗಳ ಸಂದೀಲೆ
ಹಣಿಕೆ ಹಾಕುವುದಿನ್ನು ಬಯಕೆ ಬಾನು
ಛಳಕು ಹೊಡೆದಂತಾಗಿ ಬೆಳಕನ್ನು ಕಾಣುವೆ
ಕೈಯಲ್ಲಿ ಸಿಗಲದು ಕೋಲು ಏನು || ೪ ||

ಭೂಮಿಗೆ ಬಾರದೆ ಮಿಂಚನು ಮೆರೆಯುತ್ತ
ಮೋಡದ ಮರೆಯಿಂದ ನೀನಿಳಿಯಲಾರೆ
ನಿನಗಾಗಿ ಕಾಯುತ್ತ ಹಳ್ಳ ಕೆರೆಗಳಂತೆ
ಬರಿದಾದ ಎದೆಯಿಂದ ನಾನೇರಲಾರೆ || ೫ ||

ನೂರಾರು ಸಂತೆಯ ಮಾಡಿದರು ಬರಿಗೈಯಿ
ಕೊಡುವುತ್ತ ನಿಂತೇನು ಹತಭಾಗ್ಯನು
ತಿರುಗಿ ದಣಿದದ್ದೊಂದೆ ಕೂಗಿ ಮಾರಿದ್ದೊಂದೆ
ಕೈಯಲ್ಲಿ ಉಳಿದಿಲ್ಲ ಚಿಕ್ಕಾಸೇನೂ || ೬ ||

ಎಷ್ಟೊತ್ತು ಕಾಯ್ಬೇಕು ತೆಗೆಯಮ್ಮ ಬಾಗಿಲ
ಭಿಕ್ಷುಕ ನಿಂತೀನಿ ಮನಿಯ ಮುಂದೆ
ಏನಾದರೊಂದಿಷ್ಟು ಉಳಿದಿದ್ದು ಕೊಟ್ಟರೆ
ಹರಸುತ್ತ ಹೋಗುವೆ ಇನ್ನು ಮುಂದೆ || ೭ ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...