ಜಾಗತೀಕರಣದ ಹೊಸಿಲಲ್ಲಿ ನಿಂತಿರುವ ರೈತನಿಗೊಂದು ಕಿವಿಮಾತು

ಯಾವಾಗ ನೋಡಿದ್ರೂ
ಜರಿಶಾಲು, ರೇಷ್ಮೆ ಪೇಟ
ದೀಪಾ-ಧೂಪಾ
ಹೂವು-ಹಾರ ಜೊತೆಗೆ
ನಾಯಕರ ನಗೂ ಮುಖ
ಹೊತ್ಕೊಂಡು ಬರ್‍ತಾ ಇದ್ದ
ಪೇಪರ್‌ನಾಗೆ ನಿನ್ನ
ಸುದ್ದಿನೂ ಓದ್ದೇ ಕಣಪ್ಪಾ…

ದಿಕ್ಕಿಲ್ಲದಂಗೆ ರಾಶಿ ಬಿದ್ದಿದ್ದ
ಟೊಮೊಟೊ, ಆಲೂಗಡ್ಡೆ, ಮೆಕ್ಕೆಜೋಳದ
ಜತೆಗೆ ಕಂಗಾಲಾಗಿ ಕೂತಿದ್ದ
ನಿನ್ನ ಚಿತ್ರಾನೂ ಮುಖಪುಟದಾಗೆ
ನೋಡ್ದೆ ಕಣಪ್ಪಾ

ಅಲ್ಲಾ ಕಣಪ್ಪಾ…
ಭಾರತಾಂಬೆಯ ಬೆನ್ನೆಲುಬು
ಅಂತ ಯಾಮಾರಿ ಕುಂತಿದ್ಯಲ್ಲಾ
ಈಗ ನೋಡು…
ನೀ ಯಾರ ಅಂತ
ಕೇಳೋರು ಇಲ್ಲ…

ನೀ ಹತ್ತು ಪೈಸೆಗೆ ಮಾರೋದನ್ನ
ಹತ್ತು ರೂಪಾಯಿಗೆ ತಕ್ಕೊಳೋ
ನಾ ಹೇಳ್ತೀನಿ ಕೇಳು…

ನೀ ಹದರಬೇಡ
ಇಲಿ ಪಾಷಾಣ
ಕೀಟ ನಾಶಕ ಕುಡ್ದು
ಜೀವ ತಕ್ಕೊಬ್ಯಾಡ

ಭೂಮಿ-ಕಾಣಿ, ಮಳೆ-ಬೇಳೆ
ಎಲ್ಲಾ ಮರ್‍ತು ಬಿಡು
ನೀ ಬಿತ್ತೋದೂ ಬ್ಯಾಡ
ನೀ ಬೆಳೆಯೋದೂ ಬ್ಯಾಡ
ಕೈ ಕೆಸರು ಮಾಡಿಕೊಳ್ಳೋದೂ ಬ್ಯಾಡ
ಬೆವರ ಸುರಿಸೋದೂ ಬ್ಯಾಡ
ನುಸಿ ಪೀಡೆ, ಕೀಟ ಬಾಧೆ, ಪೇಟೆ ಧಾರಣೆ
ಅಂತ ತಲೆಕೆಡಿಸಿಕೊಳ್ಳಬ್ಯಾಡ
ಅಕ್ಕಿ, ರಾಗಿ, ಕೊತ್ತಿಮಿರಿ, ಕರಿಬೇವು
ಎಲ್ಲಾ ಅಮೇರಿಕಾದಿಂದ ಬರುತ್ತೆ
ನೀ ಸುಮ್ಕಿದ್ದು ಬಿಡು ಆರಾಮ…

ಆ ಹಳೆ ಪಂಚೆ
ಹರಕಲು ಚಡ್ಡಿ
ಹವಾಯಿ ಚಪ್ಪಲಿ
ಮೋಟು ಬೀಡಿ ಮೊದ್ಲು ಬಿಸಾಕು
ಜೀನ್ಸ್ ಪ್ಯಾಂಟು, ರಂಗೀಲಾ ಷರಟು
ಮೊದ್ಲು ತೊಟ್ಕೊ…

ಪಿಜ್ಜಾ ತಿನ್ನು, ಕೋಲಾ ಕುಡಿ
ಪ್ಯಾಕ್‌ನಲ್ಲಿ ಮಡಗಿರೋ
ಚಿಕನ್ನು, ಮಟನ್ನು ತಿಂದು
ಪಾಪು, ರ್‍ಯಾಪು ಕೇಳ್ತಾ
ಟಿ. ವಿ. ನಲ್ಲಿ W.W.F ನೋಡ್ತಾ ಮೊಬೈಲ್‌ನಲ್ಲಿ ಕಷ್ಟ-ಸುಖ
ಇಚಾರಿಸ್ತ ಸುಮ್ಕಿದ್ದು ಬಿಡು ಆರಾಮ…
ಹಾಂ… ಹಾಗೆ… ಹಾಗೆ…
ನೋಡ್ತಾ ಇರು ಹ್ಯಾಗೆ
ಹ್ಯಾಗೆ ಆಗುತ್ತೆ ಮ್ಯಾಜಿಕ್ಕು!
ನಿನ್ನೂರು ಮಂಗಾಪುರ ಅಲ್ವಾ?
ಈಗ ನೋಡು…
ಹ್ಯಾಗೆ ಆಗಿದೆ ಸಿಂಗಾಪುರ!

ನೋಡ್ತಾ ಇರು…
ಹೈಟೆಕ್ ಆಸ್ಪತ್ರೆ ಬತ್ತದೆ
ಯಮಗಾತ್ರ ಪವರ್ ಪ್ರಾಜೆಕ್ಟ್ ಬಂದು
ರಾತ್ರಿ-ಹಗಲು ದೀಪ ಉರೀತದೆ
ಕುಡಿಯೋ ನೀರು ಬಾಟ್ಲಿನಲ್ಲಿ
ತಂತಾನೆ ತುಂಬ್ಕೊಂಡು
ಮನೆ ಬಾಗಿಲಿಗೆ ಬಂದು ಬೀಳ್ತದೆ

ಎತ್ತಿನ ಬಂಡಿಗಳು
ಏರೋಪ್ಲೇನ್ ಥರಾ ಹಾರ್‍ಕೋತ
ಸೀದಾ ದಿಲ್ಲಿಗೇ ಹೋಗ್ಬೇಕು
ಆಪಾಟಿ ರಸ್ತೆಗೋಳು ಬತ್ತವೆ
ನಿನ್ನ ಮಕ್ಕಳು, ಮರಿಮಕ್ಕಳು
ದೊಡ್ಡ ದೊಡ್ಡ ಶಾಲೆಗೆ ಹೋಗ್ತಾವೆ
ಎ. ಬಿ. ಸಿ. ಡಿ ಕಲಿತಾವೆ
ಅಮೆರಿಕೆಗೆ ಹಾರಿ
ಕೊಪ್ಪರಿಗೆ ಹಣ ಬಾಚ್ತಾವೆ…

ಹಬ್ಬೆಟ್ಟು-ಛಾಪಾಕಾಗದ
ಸಾಲ, ಬಡ್ಡಿ, ಜಪ್ತಿ
ಉಹುಂ ಕನಸಿನಲ್ಲೂ ಯೋಚಿಸಬ್ಯಾಡ
ನೀ…ರಾಮ-ಕೃಷ್ಣ ಅನ್ನೋದು ಬ್ಯಾಡ
ಕಂಪ್ಯೂಟರ್ ದೇವತೆ
ನಿನ್ನ ಮೈಮ್ಯಾಲೆ ಬಂದು
ಖಂಡಿತ ಮೋಕ್ಷ ಕಾಣಿಸ್ತಾಳ…

ಅದಕ್ಕೆ ಕಣಪ್ಪಾ ನಾ ಹೇಳ್ತೀನೀ ಕೇಳು…
ನೀ ಸುಮ್ಕಿದ್ದು ಬಿಡು…
ಬಾಯ್ ಮುಚ್ಕೊಂಡು… ಕಿವಿ ಮುಚ್ಕೊಂಡು…
ಕಣ್ಣು ಮುಚ್ಕೊಂಡು…

ಹಾಂ ಹಾಗೆ… ಹಾಗೆ…
ಉಸಿರೆತ್ತಬ್ಯಾಡ….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮಣ – ೧೦
Next post ಇರು

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

cheap jordans|wholesale air max|wholesale jordans|wholesale jewelry|wholesale jerseys