Home / ಕವನ / ಕವಿತೆ / ಜಾಗತೀಕರಣದ ಹೊಸಿಲಲ್ಲಿ ನಿಂತಿರುವ ರೈತನಿಗೊಂದು ಕಿವಿಮಾತು

ಜಾಗತೀಕರಣದ ಹೊಸಿಲಲ್ಲಿ ನಿಂತಿರುವ ರೈತನಿಗೊಂದು ಕಿವಿಮಾತು

ಯಾವಾಗ ನೋಡಿದ್ರೂ
ಜರಿಶಾಲು, ರೇಷ್ಮೆ ಪೇಟ
ದೀಪಾ-ಧೂಪಾ
ಹೂವು-ಹಾರ ಜೊತೆಗೆ
ನಾಯಕರ ನಗೂ ಮುಖ
ಹೊತ್ಕೊಂಡು ಬರ್‍ತಾ ಇದ್ದ
ಪೇಪರ್‌ನಾಗೆ ನಿನ್ನ
ಸುದ್ದಿನೂ ಓದ್ದೇ ಕಣಪ್ಪಾ…

ದಿಕ್ಕಿಲ್ಲದಂಗೆ ರಾಶಿ ಬಿದ್ದಿದ್ದ
ಟೊಮೊಟೊ, ಆಲೂಗಡ್ಡೆ, ಮೆಕ್ಕೆಜೋಳದ
ಜತೆಗೆ ಕಂಗಾಲಾಗಿ ಕೂತಿದ್ದ
ನಿನ್ನ ಚಿತ್ರಾನೂ ಮುಖಪುಟದಾಗೆ
ನೋಡ್ದೆ ಕಣಪ್ಪಾ

ಅಲ್ಲಾ ಕಣಪ್ಪಾ…
ಭಾರತಾಂಬೆಯ ಬೆನ್ನೆಲುಬು
ಅಂತ ಯಾಮಾರಿ ಕುಂತಿದ್ಯಲ್ಲಾ
ಈಗ ನೋಡು…
ನೀ ಯಾರ ಅಂತ
ಕೇಳೋರು ಇಲ್ಲ…

ನೀ ಹತ್ತು ಪೈಸೆಗೆ ಮಾರೋದನ್ನ
ಹತ್ತು ರೂಪಾಯಿಗೆ ತಕ್ಕೊಳೋ
ನಾ ಹೇಳ್ತೀನಿ ಕೇಳು…

ನೀ ಹದರಬೇಡ
ಇಲಿ ಪಾಷಾಣ
ಕೀಟ ನಾಶಕ ಕುಡ್ದು
ಜೀವ ತಕ್ಕೊಬ್ಯಾಡ

ಭೂಮಿ-ಕಾಣಿ, ಮಳೆ-ಬೇಳೆ
ಎಲ್ಲಾ ಮರ್‍ತು ಬಿಡು
ನೀ ಬಿತ್ತೋದೂ ಬ್ಯಾಡ
ನೀ ಬೆಳೆಯೋದೂ ಬ್ಯಾಡ
ಕೈ ಕೆಸರು ಮಾಡಿಕೊಳ್ಳೋದೂ ಬ್ಯಾಡ
ಬೆವರ ಸುರಿಸೋದೂ ಬ್ಯಾಡ
ನುಸಿ ಪೀಡೆ, ಕೀಟ ಬಾಧೆ, ಪೇಟೆ ಧಾರಣೆ
ಅಂತ ತಲೆಕೆಡಿಸಿಕೊಳ್ಳಬ್ಯಾಡ
ಅಕ್ಕಿ, ರಾಗಿ, ಕೊತ್ತಿಮಿರಿ, ಕರಿಬೇವು
ಎಲ್ಲಾ ಅಮೇರಿಕಾದಿಂದ ಬರುತ್ತೆ
ನೀ ಸುಮ್ಕಿದ್ದು ಬಿಡು ಆರಾಮ…

ಆ ಹಳೆ ಪಂಚೆ
ಹರಕಲು ಚಡ್ಡಿ
ಹವಾಯಿ ಚಪ್ಪಲಿ
ಮೋಟು ಬೀಡಿ ಮೊದ್ಲು ಬಿಸಾಕು
ಜೀನ್ಸ್ ಪ್ಯಾಂಟು, ರಂಗೀಲಾ ಷರಟು
ಮೊದ್ಲು ತೊಟ್ಕೊ…

ಪಿಜ್ಜಾ ತಿನ್ನು, ಕೋಲಾ ಕುಡಿ
ಪ್ಯಾಕ್‌ನಲ್ಲಿ ಮಡಗಿರೋ
ಚಿಕನ್ನು, ಮಟನ್ನು ತಿಂದು
ಪಾಪು, ರ್‍ಯಾಪು ಕೇಳ್ತಾ
ಟಿ. ವಿ. ನಲ್ಲಿ W.W.F ನೋಡ್ತಾ ಮೊಬೈಲ್‌ನಲ್ಲಿ ಕಷ್ಟ-ಸುಖ
ಇಚಾರಿಸ್ತ ಸುಮ್ಕಿದ್ದು ಬಿಡು ಆರಾಮ…
ಹಾಂ… ಹಾಗೆ… ಹಾಗೆ…
ನೋಡ್ತಾ ಇರು ಹ್ಯಾಗೆ
ಹ್ಯಾಗೆ ಆಗುತ್ತೆ ಮ್ಯಾಜಿಕ್ಕು!
ನಿನ್ನೂರು ಮಂಗಾಪುರ ಅಲ್ವಾ?
ಈಗ ನೋಡು…
ಹ್ಯಾಗೆ ಆಗಿದೆ ಸಿಂಗಾಪುರ!

ನೋಡ್ತಾ ಇರು…
ಹೈಟೆಕ್ ಆಸ್ಪತ್ರೆ ಬತ್ತದೆ
ಯಮಗಾತ್ರ ಪವರ್ ಪ್ರಾಜೆಕ್ಟ್ ಬಂದು
ರಾತ್ರಿ-ಹಗಲು ದೀಪ ಉರೀತದೆ
ಕುಡಿಯೋ ನೀರು ಬಾಟ್ಲಿನಲ್ಲಿ
ತಂತಾನೆ ತುಂಬ್ಕೊಂಡು
ಮನೆ ಬಾಗಿಲಿಗೆ ಬಂದು ಬೀಳ್ತದೆ

ಎತ್ತಿನ ಬಂಡಿಗಳು
ಏರೋಪ್ಲೇನ್ ಥರಾ ಹಾರ್‍ಕೋತ
ಸೀದಾ ದಿಲ್ಲಿಗೇ ಹೋಗ್ಬೇಕು
ಆಪಾಟಿ ರಸ್ತೆಗೋಳು ಬತ್ತವೆ
ನಿನ್ನ ಮಕ್ಕಳು, ಮರಿಮಕ್ಕಳು
ದೊಡ್ಡ ದೊಡ್ಡ ಶಾಲೆಗೆ ಹೋಗ್ತಾವೆ
ಎ. ಬಿ. ಸಿ. ಡಿ ಕಲಿತಾವೆ
ಅಮೆರಿಕೆಗೆ ಹಾರಿ
ಕೊಪ್ಪರಿಗೆ ಹಣ ಬಾಚ್ತಾವೆ…

ಹಬ್ಬೆಟ್ಟು-ಛಾಪಾಕಾಗದ
ಸಾಲ, ಬಡ್ಡಿ, ಜಪ್ತಿ
ಉಹುಂ ಕನಸಿನಲ್ಲೂ ಯೋಚಿಸಬ್ಯಾಡ
ನೀ…ರಾಮ-ಕೃಷ್ಣ ಅನ್ನೋದು ಬ್ಯಾಡ
ಕಂಪ್ಯೂಟರ್ ದೇವತೆ
ನಿನ್ನ ಮೈಮ್ಯಾಲೆ ಬಂದು
ಖಂಡಿತ ಮೋಕ್ಷ ಕಾಣಿಸ್ತಾಳ…

ಅದಕ್ಕೆ ಕಣಪ್ಪಾ ನಾ ಹೇಳ್ತೀನೀ ಕೇಳು…
ನೀ ಸುಮ್ಕಿದ್ದು ಬಿಡು…
ಬಾಯ್ ಮುಚ್ಕೊಂಡು… ಕಿವಿ ಮುಚ್ಕೊಂಡು…
ಕಣ್ಣು ಮುಚ್ಕೊಂಡು…

ಹಾಂ ಹಾಗೆ… ಹಾಗೆ…
ಉಸಿರೆತ್ತಬ್ಯಾಡ….
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...