Home / ಕವನ / ಕವಿತೆ / ಜಾಗತೀಕರಣದ ಹೊಸಿಲಲ್ಲಿ ನಿಂತಿರುವ ರೈತನಿಗೊಂದು ಕಿವಿಮಾತು

ಜಾಗತೀಕರಣದ ಹೊಸಿಲಲ್ಲಿ ನಿಂತಿರುವ ರೈತನಿಗೊಂದು ಕಿವಿಮಾತು

ಯಾವಾಗ ನೋಡಿದ್ರೂ
ಜರಿಶಾಲು, ರೇಷ್ಮೆ ಪೇಟ
ದೀಪಾ-ಧೂಪಾ
ಹೂವು-ಹಾರ ಜೊತೆಗೆ
ನಾಯಕರ ನಗೂ ಮುಖ
ಹೊತ್ಕೊಂಡು ಬರ್‍ತಾ ಇದ್ದ
ಪೇಪರ್‌ನಾಗೆ ನಿನ್ನ
ಸುದ್ದಿನೂ ಓದ್ದೇ ಕಣಪ್ಪಾ…

ದಿಕ್ಕಿಲ್ಲದಂಗೆ ರಾಶಿ ಬಿದ್ದಿದ್ದ
ಟೊಮೊಟೊ, ಆಲೂಗಡ್ಡೆ, ಮೆಕ್ಕೆಜೋಳದ
ಜತೆಗೆ ಕಂಗಾಲಾಗಿ ಕೂತಿದ್ದ
ನಿನ್ನ ಚಿತ್ರಾನೂ ಮುಖಪುಟದಾಗೆ
ನೋಡ್ದೆ ಕಣಪ್ಪಾ

ಅಲ್ಲಾ ಕಣಪ್ಪಾ…
ಭಾರತಾಂಬೆಯ ಬೆನ್ನೆಲುಬು
ಅಂತ ಯಾಮಾರಿ ಕುಂತಿದ್ಯಲ್ಲಾ
ಈಗ ನೋಡು…
ನೀ ಯಾರ ಅಂತ
ಕೇಳೋರು ಇಲ್ಲ…

ನೀ ಹತ್ತು ಪೈಸೆಗೆ ಮಾರೋದನ್ನ
ಹತ್ತು ರೂಪಾಯಿಗೆ ತಕ್ಕೊಳೋ
ನಾ ಹೇಳ್ತೀನಿ ಕೇಳು…

ನೀ ಹದರಬೇಡ
ಇಲಿ ಪಾಷಾಣ
ಕೀಟ ನಾಶಕ ಕುಡ್ದು
ಜೀವ ತಕ್ಕೊಬ್ಯಾಡ

ಭೂಮಿ-ಕಾಣಿ, ಮಳೆ-ಬೇಳೆ
ಎಲ್ಲಾ ಮರ್‍ತು ಬಿಡು
ನೀ ಬಿತ್ತೋದೂ ಬ್ಯಾಡ
ನೀ ಬೆಳೆಯೋದೂ ಬ್ಯಾಡ
ಕೈ ಕೆಸರು ಮಾಡಿಕೊಳ್ಳೋದೂ ಬ್ಯಾಡ
ಬೆವರ ಸುರಿಸೋದೂ ಬ್ಯಾಡ
ನುಸಿ ಪೀಡೆ, ಕೀಟ ಬಾಧೆ, ಪೇಟೆ ಧಾರಣೆ
ಅಂತ ತಲೆಕೆಡಿಸಿಕೊಳ್ಳಬ್ಯಾಡ
ಅಕ್ಕಿ, ರಾಗಿ, ಕೊತ್ತಿಮಿರಿ, ಕರಿಬೇವು
ಎಲ್ಲಾ ಅಮೇರಿಕಾದಿಂದ ಬರುತ್ತೆ
ನೀ ಸುಮ್ಕಿದ್ದು ಬಿಡು ಆರಾಮ…

ಆ ಹಳೆ ಪಂಚೆ
ಹರಕಲು ಚಡ್ಡಿ
ಹವಾಯಿ ಚಪ್ಪಲಿ
ಮೋಟು ಬೀಡಿ ಮೊದ್ಲು ಬಿಸಾಕು
ಜೀನ್ಸ್ ಪ್ಯಾಂಟು, ರಂಗೀಲಾ ಷರಟು
ಮೊದ್ಲು ತೊಟ್ಕೊ…

ಪಿಜ್ಜಾ ತಿನ್ನು, ಕೋಲಾ ಕುಡಿ
ಪ್ಯಾಕ್‌ನಲ್ಲಿ ಮಡಗಿರೋ
ಚಿಕನ್ನು, ಮಟನ್ನು ತಿಂದು
ಪಾಪು, ರ್‍ಯಾಪು ಕೇಳ್ತಾ
ಟಿ. ವಿ. ನಲ್ಲಿ W.W.F ನೋಡ್ತಾ ಮೊಬೈಲ್‌ನಲ್ಲಿ ಕಷ್ಟ-ಸುಖ
ಇಚಾರಿಸ್ತ ಸುಮ್ಕಿದ್ದು ಬಿಡು ಆರಾಮ…
ಹಾಂ… ಹಾಗೆ… ಹಾಗೆ…
ನೋಡ್ತಾ ಇರು ಹ್ಯಾಗೆ
ಹ್ಯಾಗೆ ಆಗುತ್ತೆ ಮ್ಯಾಜಿಕ್ಕು!
ನಿನ್ನೂರು ಮಂಗಾಪುರ ಅಲ್ವಾ?
ಈಗ ನೋಡು…
ಹ್ಯಾಗೆ ಆಗಿದೆ ಸಿಂಗಾಪುರ!

ನೋಡ್ತಾ ಇರು…
ಹೈಟೆಕ್ ಆಸ್ಪತ್ರೆ ಬತ್ತದೆ
ಯಮಗಾತ್ರ ಪವರ್ ಪ್ರಾಜೆಕ್ಟ್ ಬಂದು
ರಾತ್ರಿ-ಹಗಲು ದೀಪ ಉರೀತದೆ
ಕುಡಿಯೋ ನೀರು ಬಾಟ್ಲಿನಲ್ಲಿ
ತಂತಾನೆ ತುಂಬ್ಕೊಂಡು
ಮನೆ ಬಾಗಿಲಿಗೆ ಬಂದು ಬೀಳ್ತದೆ

ಎತ್ತಿನ ಬಂಡಿಗಳು
ಏರೋಪ್ಲೇನ್ ಥರಾ ಹಾರ್‍ಕೋತ
ಸೀದಾ ದಿಲ್ಲಿಗೇ ಹೋಗ್ಬೇಕು
ಆಪಾಟಿ ರಸ್ತೆಗೋಳು ಬತ್ತವೆ
ನಿನ್ನ ಮಕ್ಕಳು, ಮರಿಮಕ್ಕಳು
ದೊಡ್ಡ ದೊಡ್ಡ ಶಾಲೆಗೆ ಹೋಗ್ತಾವೆ
ಎ. ಬಿ. ಸಿ. ಡಿ ಕಲಿತಾವೆ
ಅಮೆರಿಕೆಗೆ ಹಾರಿ
ಕೊಪ್ಪರಿಗೆ ಹಣ ಬಾಚ್ತಾವೆ…

ಹಬ್ಬೆಟ್ಟು-ಛಾಪಾಕಾಗದ
ಸಾಲ, ಬಡ್ಡಿ, ಜಪ್ತಿ
ಉಹುಂ ಕನಸಿನಲ್ಲೂ ಯೋಚಿಸಬ್ಯಾಡ
ನೀ…ರಾಮ-ಕೃಷ್ಣ ಅನ್ನೋದು ಬ್ಯಾಡ
ಕಂಪ್ಯೂಟರ್ ದೇವತೆ
ನಿನ್ನ ಮೈಮ್ಯಾಲೆ ಬಂದು
ಖಂಡಿತ ಮೋಕ್ಷ ಕಾಣಿಸ್ತಾಳ…

ಅದಕ್ಕೆ ಕಣಪ್ಪಾ ನಾ ಹೇಳ್ತೀನೀ ಕೇಳು…
ನೀ ಸುಮ್ಕಿದ್ದು ಬಿಡು…
ಬಾಯ್ ಮುಚ್ಕೊಂಡು… ಕಿವಿ ಮುಚ್ಕೊಂಡು…
ಕಣ್ಣು ಮುಚ್ಕೊಂಡು…

ಹಾಂ ಹಾಗೆ… ಹಾಗೆ…
ಉಸಿರೆತ್ತಬ್ಯಾಡ….
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...