Home / ಕವನ / ಕವಿತೆ / ಜಾಗತೀಕರಣದ ಹೊಸಿಲಲ್ಲಿ ನಿಂತಿರುವ ರೈತನಿಗೊಂದು ಕಿವಿಮಾತು

ಜಾಗತೀಕರಣದ ಹೊಸಿಲಲ್ಲಿ ನಿಂತಿರುವ ರೈತನಿಗೊಂದು ಕಿವಿಮಾತು

ಯಾವಾಗ ನೋಡಿದ್ರೂ
ಜರಿಶಾಲು, ರೇಷ್ಮೆ ಪೇಟ
ದೀಪಾ-ಧೂಪಾ
ಹೂವು-ಹಾರ ಜೊತೆಗೆ
ನಾಯಕರ ನಗೂ ಮುಖ
ಹೊತ್ಕೊಂಡು ಬರ್‍ತಾ ಇದ್ದ
ಪೇಪರ್‌ನಾಗೆ ನಿನ್ನ
ಸುದ್ದಿನೂ ಓದ್ದೇ ಕಣಪ್ಪಾ…

ದಿಕ್ಕಿಲ್ಲದಂಗೆ ರಾಶಿ ಬಿದ್ದಿದ್ದ
ಟೊಮೊಟೊ, ಆಲೂಗಡ್ಡೆ, ಮೆಕ್ಕೆಜೋಳದ
ಜತೆಗೆ ಕಂಗಾಲಾಗಿ ಕೂತಿದ್ದ
ನಿನ್ನ ಚಿತ್ರಾನೂ ಮುಖಪುಟದಾಗೆ
ನೋಡ್ದೆ ಕಣಪ್ಪಾ

ಅಲ್ಲಾ ಕಣಪ್ಪಾ…
ಭಾರತಾಂಬೆಯ ಬೆನ್ನೆಲುಬು
ಅಂತ ಯಾಮಾರಿ ಕುಂತಿದ್ಯಲ್ಲಾ
ಈಗ ನೋಡು…
ನೀ ಯಾರ ಅಂತ
ಕೇಳೋರು ಇಲ್ಲ…

ನೀ ಹತ್ತು ಪೈಸೆಗೆ ಮಾರೋದನ್ನ
ಹತ್ತು ರೂಪಾಯಿಗೆ ತಕ್ಕೊಳೋ
ನಾ ಹೇಳ್ತೀನಿ ಕೇಳು…

ನೀ ಹದರಬೇಡ
ಇಲಿ ಪಾಷಾಣ
ಕೀಟ ನಾಶಕ ಕುಡ್ದು
ಜೀವ ತಕ್ಕೊಬ್ಯಾಡ

ಭೂಮಿ-ಕಾಣಿ, ಮಳೆ-ಬೇಳೆ
ಎಲ್ಲಾ ಮರ್‍ತು ಬಿಡು
ನೀ ಬಿತ್ತೋದೂ ಬ್ಯಾಡ
ನೀ ಬೆಳೆಯೋದೂ ಬ್ಯಾಡ
ಕೈ ಕೆಸರು ಮಾಡಿಕೊಳ್ಳೋದೂ ಬ್ಯಾಡ
ಬೆವರ ಸುರಿಸೋದೂ ಬ್ಯಾಡ
ನುಸಿ ಪೀಡೆ, ಕೀಟ ಬಾಧೆ, ಪೇಟೆ ಧಾರಣೆ
ಅಂತ ತಲೆಕೆಡಿಸಿಕೊಳ್ಳಬ್ಯಾಡ
ಅಕ್ಕಿ, ರಾಗಿ, ಕೊತ್ತಿಮಿರಿ, ಕರಿಬೇವು
ಎಲ್ಲಾ ಅಮೇರಿಕಾದಿಂದ ಬರುತ್ತೆ
ನೀ ಸುಮ್ಕಿದ್ದು ಬಿಡು ಆರಾಮ…

ಆ ಹಳೆ ಪಂಚೆ
ಹರಕಲು ಚಡ್ಡಿ
ಹವಾಯಿ ಚಪ್ಪಲಿ
ಮೋಟು ಬೀಡಿ ಮೊದ್ಲು ಬಿಸಾಕು
ಜೀನ್ಸ್ ಪ್ಯಾಂಟು, ರಂಗೀಲಾ ಷರಟು
ಮೊದ್ಲು ತೊಟ್ಕೊ…

ಪಿಜ್ಜಾ ತಿನ್ನು, ಕೋಲಾ ಕುಡಿ
ಪ್ಯಾಕ್‌ನಲ್ಲಿ ಮಡಗಿರೋ
ಚಿಕನ್ನು, ಮಟನ್ನು ತಿಂದು
ಪಾಪು, ರ್‍ಯಾಪು ಕೇಳ್ತಾ
ಟಿ. ವಿ. ನಲ್ಲಿ W.W.F ನೋಡ್ತಾ ಮೊಬೈಲ್‌ನಲ್ಲಿ ಕಷ್ಟ-ಸುಖ
ಇಚಾರಿಸ್ತ ಸುಮ್ಕಿದ್ದು ಬಿಡು ಆರಾಮ…
ಹಾಂ… ಹಾಗೆ… ಹಾಗೆ…
ನೋಡ್ತಾ ಇರು ಹ್ಯಾಗೆ
ಹ್ಯಾಗೆ ಆಗುತ್ತೆ ಮ್ಯಾಜಿಕ್ಕು!
ನಿನ್ನೂರು ಮಂಗಾಪುರ ಅಲ್ವಾ?
ಈಗ ನೋಡು…
ಹ್ಯಾಗೆ ಆಗಿದೆ ಸಿಂಗಾಪುರ!

ನೋಡ್ತಾ ಇರು…
ಹೈಟೆಕ್ ಆಸ್ಪತ್ರೆ ಬತ್ತದೆ
ಯಮಗಾತ್ರ ಪವರ್ ಪ್ರಾಜೆಕ್ಟ್ ಬಂದು
ರಾತ್ರಿ-ಹಗಲು ದೀಪ ಉರೀತದೆ
ಕುಡಿಯೋ ನೀರು ಬಾಟ್ಲಿನಲ್ಲಿ
ತಂತಾನೆ ತುಂಬ್ಕೊಂಡು
ಮನೆ ಬಾಗಿಲಿಗೆ ಬಂದು ಬೀಳ್ತದೆ

ಎತ್ತಿನ ಬಂಡಿಗಳು
ಏರೋಪ್ಲೇನ್ ಥರಾ ಹಾರ್‍ಕೋತ
ಸೀದಾ ದಿಲ್ಲಿಗೇ ಹೋಗ್ಬೇಕು
ಆಪಾಟಿ ರಸ್ತೆಗೋಳು ಬತ್ತವೆ
ನಿನ್ನ ಮಕ್ಕಳು, ಮರಿಮಕ್ಕಳು
ದೊಡ್ಡ ದೊಡ್ಡ ಶಾಲೆಗೆ ಹೋಗ್ತಾವೆ
ಎ. ಬಿ. ಸಿ. ಡಿ ಕಲಿತಾವೆ
ಅಮೆರಿಕೆಗೆ ಹಾರಿ
ಕೊಪ್ಪರಿಗೆ ಹಣ ಬಾಚ್ತಾವೆ…

ಹಬ್ಬೆಟ್ಟು-ಛಾಪಾಕಾಗದ
ಸಾಲ, ಬಡ್ಡಿ, ಜಪ್ತಿ
ಉಹುಂ ಕನಸಿನಲ್ಲೂ ಯೋಚಿಸಬ್ಯಾಡ
ನೀ…ರಾಮ-ಕೃಷ್ಣ ಅನ್ನೋದು ಬ್ಯಾಡ
ಕಂಪ್ಯೂಟರ್ ದೇವತೆ
ನಿನ್ನ ಮೈಮ್ಯಾಲೆ ಬಂದು
ಖಂಡಿತ ಮೋಕ್ಷ ಕಾಣಿಸ್ತಾಳ…

ಅದಕ್ಕೆ ಕಣಪ್ಪಾ ನಾ ಹೇಳ್ತೀನೀ ಕೇಳು…
ನೀ ಸುಮ್ಕಿದ್ದು ಬಿಡು…
ಬಾಯ್ ಮುಚ್ಕೊಂಡು… ಕಿವಿ ಮುಚ್ಕೊಂಡು…
ಕಣ್ಣು ಮುಚ್ಕೊಂಡು…

ಹಾಂ ಹಾಗೆ… ಹಾಗೆ…
ಉಸಿರೆತ್ತಬ್ಯಾಡ….
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...