Home / ಕವನ / ಕವಿತೆ / ಹಳ್ಳಿ

ಹಳ್ಳಿ

ಬೆಂಗಳೂರಿನಲ್ಲಿ ಬುದ್ಧಿಯ ಬಿಸಿಬೇಳೆ
ಬಾತು ತಿನ್ನುತ್ತ ಸಂಕೀರ್ಣ ಅಸಂಗತ ಹಾಳುಮೂಳು
ಹೂತು ತಲೆತಪ್ಪಲೆಗೆ ಸಟ್ಟುಗ ತಿರುವುತ್ತ
ಹೊಟ್ಟೆಯಲ್ಲಿ ಹೂವರಳಿಸ ಹೊರಟವನು
ಹಳ್ಳಿಗೆ ಹೋದಾಗ ಭ್ರಮೆ ಬಿಳುಚಿಕೊಂಡಿತು.

ಚೌಕಟ್ಟಿಲ್ಲದ ಊರಬಾಗಿಲು ನೆಲಮುಗಿಲು
ಪ್ರೈಮರಿ ಶಾಲೆಯಲ್ಲಿ ಶಾರದೆಗೆ ಸೀರೆ ಉಡಿಸುವ ಸಡಗರ
ಗೋಡೆಗಳ ಕಟ್ಟು ಕಳಚಿ ಗಾಳಿ ಬೆಳಕು ಅಗಾಧ
ಮೇಲು ಕೀಳು ತಲೆಕೆಳಗು ಮಾಡಿದ ಏಕೈಕ ವೇದಿಕೆ ಎಲ್ಲ ತರ-
ಗತಿಗಲ್ಲೆ ಸ್ಥಾನಮಾನ.
ಒಂದೊಂದ್ಲ ಒಂದು ವಂದಾಕೆ ಸಾ, ಬಸವ ಕಮಲ ಜಿಗುಟ್ದಾ ಸಾ
ಇತ್ಯಾದಿ ಹ್ರಸ್ವ ದೀರ್ಘ ವೈವಿಧ್ಯ ಸ್ವರಮೇಳ
ಸರಸ್ವತಿ ಸೌಧಕ್ಕೆ ಗುದ್ದಲಿಪೂಜೆಯ ಗದ್ದಲ.

ಊರ ಹೊಕ್ಕರೆ ಸಂದಿಗೊಂದಿಗಳಲ್ಲಿ ನೆಲಕ್ಕೆ ಕಾಲರ
ಕಕ್ಕಿತ್ತು; ಗಾರೆನೆಲ ಉಪ್ಪು ಉಕ್ಕಿತ್ತು
ಬೀದಿಯಲ್ಲೆಲ್ಲ ಭಾರತ ದರ್ಶನ;
ಹಿಟ್ಟಿನ ಸೀಕು ತಿನ್ನುತ್ತ ನಿಂತ ಸಿಂಬಳಬುರುಕ ತಲೆಕೆರುಕ
ಮೂಳೆಚಕ್ಕಳ ತಂಡತಂಡದ ಭವಿಷ್ಯ ಇಕ್ಕಳದಲ್ಲಿ ಬತ್ತಲೆ ಗ್ರಾಮಗಿರಣಿಯಲ್ಲಿ ಮೈತಳೆದ ಬೆರಣಿ
ಬಾಳು ಬಿಡಿಸುತ್ತ ಬಂದ ಸೊನ್ನೆ ಸರಣಿ
ನೊಗ ಹೊತ್ತು ಹೊರಟ ಬಡ ಎತ್ತಿನ ಕತ್ತು ಹುಣ್ಣು
ಗೋಣಿತಾಟಿನಲ್ಲಿ ಗೋವಿನ ಮೈ ನೀಟು ಮಾಡುವ ಹೆಣ್ಣು
ಇಲ್ಲದ ಹಾಲಿಗೆ ಕೆಚ್ಚಲು ಕಚ್ಚಿ ಚಪ್ಪರಿಸುವ ಕರು-
ವಿನ ಹಿಂದೆ ನಿಂತು ಮೂಸಿ ನೋಡುವ ನಾಯಿ
ಕಂಡು ಕಲ್ಲು ಎಸೆಯಲೆ ಎಂದುಕೊಂಡಾಗ
ಹಳ್ಳಿಗೇ ಹೆರಿಗೆ ಮಾಡಿಸಲು ಪ್ರಮಾಣವಚನ ಸ್ವೀಕರಿಸಿದ
ಪುಢಾರಿ ಹಲ್ಲು ಕಿಸಿದ

ಮೈ ತುಂಬ ಯೋಜನೆಯ ಮ್ಯಾಪು ಮುದ್ರಿಸಿಕೊಂಡು
ಮಾರುದ್ದ ಮಾತು ಹೊಸೆದ
ಬಚ್ಚಲಿನ ನೀರು ನಿಂತ ಕೊಚ್ಚೆ ಕಾಲುವೆಗೆ ಯಾರೋ ಒಬ್ಬ
ಸತ್ತ ಇಲಿ ಹೆಗ್ಗಣ ಎಸೆದ.

ಚಾವಡಿಯ ಚಂದ್ರಯಾನದ ಚರ್ಚೆಯಲ್ಲಿ
ಪೂಜಾರಿ ಪಾತ್ರ ಎಷ್ಟು ಗಾತ್ರ!
ಬೀಡಿಯ ಒಂದೊಂದು ದಮ್ಮಿಗೂ ತರಾವರಿ ಶೈಲಿ ಚಿಮ್ಮಿ
ಚಂದ್ರಯಾನ ಸುಳ್ಳು ಚಿಲ್ಲರೆ- ಎಂದು ಸಾರಿದ
ತನ್ನ ಮಂತ್ರಯಂತ್ರ ಎಷ್ಟು ಘನ ಬಲ್ಲಿರೆ- ಎಂದು ಭುಜ ಕುಣಿಸಿದ.
ಎಲ್ಲಿ ಸಲ್ಲದಿದ್ದರೂ ನನ್ನಲ್ಲಿ ಸಲ್ಲಿರೆ- ಎಂದು ಕರೆ ನೀಡಿದ
ಮಾತಿನಿಂದ ಮಾತಿಗೆ ಸರ್ಕಸ್ಸು ನೆಗೆತ ಮಗ್ನ ಮಹಾಜನರ
ಅನುಭವ ಮಂಟಪದಲ್ಲಿ ಗಾಂಧಿ ಇಂದಿರಾಗಾಂಧಿ ಸೇಂದಿ
ಎಲ್ಲ ಹುಟ್ಟಿಸತ್ತು ಸತ್ತುಹುಟ್ಟಿ ಪಾಪ!
ಸಂಸ್ಕಾರ ಮಾಡದೆ ಬರಿ ಸಂತಾಪ!

ತೆನೆ ತೆಕ್ಕೆಗೆ ತುಡಿಯುತ್ತ ಆಸ್ತಮ ಹತ್ತಿದ ಫಸಲು ಪಡೆದ ಬೆವರು
ಬರೆದ ಕತೆ ಲೆಕ್ಕಕ್ಕೆ ಸಿಕ್ಕದಷ್ಟು ಪುನರ್‌ಮುದ್ರಣವಾಗುತ್ತಿದೆ
ಅಷ್ಟು ಇಷ್ಟು ಬಂದರೆ ಪ್ರಕಾಶಕನ ಪಾಲಾಗುತ್ತಿದೆ.
ದಡ್ಡ ದೊಡ್ಡ ಕುರುಡು ಹುರುಡು ಬುದ್ಧಿಲದ್ದಿ
ಎಲ್ಲ ತರದ ತವರಾದ ಹಳ್ಳಿ
ಬಳ್ಳಿ ಹಬ್ಬಿದ ಸಾವುಚಪ್ಪರದಲ್ಲಿ ಮಣ್ಣ ಮದುವೆಯಾಗುತ್ತಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...