ಮರಕುಟಿಗ

ಕತ್ತಲಿಗೆ ಕತ್ತರಿ ಬಿದ್ದು ಇಷ್ಟಿಷ್ಟೇ ಹರಿದು
ಚಿಗುರೊಡೆದ ಮರದಲ್ಲಿ ಚಿಲಿಪಿಲಿ; ಒಂದಕ್ಕೊಂದು ಸೇರಿ
ಅಸ್ಪಷ್ಟ ಗದ್ದಲ: ಕಣ್ಣ ತೆರೆಯುವ ತುರಿಕೆ;
ಮನೆಯ ಒಳಹೊರಗೆಲ್ಲ ಬಳೆ ಸದ್ದು ಪೊರಕೆ.
ಮನದ ಮೂಲದಲ್ಲಿ ಬೇರಿಳಿದ ಮರ
ಗೀರಿದರೆ ಚಿಲ್ಲೆನ್ನುವ ರಸ; ಬೆಳವ ರಭಸ.
ಬೆಚ್ಚನೆಯ ಬಿಸಿಲಿಗೆ ಮಡುಗಟ್ಟಿದ್ದ ಮಂಜು
ಹತ್ತು ಕಡೆ ಹರಿಯುವುತ್ಸಾಹ.
ಗಿಡಗೆಂಟೆ ಮುಳ್ಳುಪೊದೆ ಉಬ್ಬುತಗ್ಗುಗಳ
ಸಮತಟ್ಟುಗೊಳಿಸಬೇಕೆಂಬ ಬುಲ್ಡೋಜರ್ ಬುದ್ದಿ.
ಹೀಗೆ ಬೆಳೆಯುತ್ತ ಬಂದದ್ದೇ ಒಂದು ಸುದ್ದಿ-
ಯಾಗಿ ಮರದ ಮೇಲೆಲ್ಲ ಟಕಟಕ ಸದ್ದು
ನೀಲಿ ಹಾಳೆಯ ಮೇಲೆ ಅಚ್ಚೊತ್ತಿದ ಹದ್ದು
ಮರಕುಟಿಗಗಳ ಸದ್ದು ನಿಲ್ಲಲಿಲ್ಲ;
ಚುಚ್ಚುವೆಚ್ಚರ ಹಕ್ಕಿ ಹಾರಲಿಲ್ಲ.

ಮೈನೆರೆದ ಮರದಲ್ಲಿ ಮೋಹಕುಟಿಗ
ಕಿತ್ತು ತಿನ್ನುವ ಕತ್ತುಬಳಸುವ ಹತ್ತಾರು ಸಲಗ
ಹಂಟರನು ಹಿಡಿದಾಗ ಹಲಗೆ ಬಡಿತ
ಕಾಲಕುಣಿಸುವ ಕುದುರೆ ಕೆನೆತ
ಹಂಟರಿನ ಮೈಯಲ್ಲಿ ಸಂಗೀತ ಸ್ವಿಚ್ಚೊತ್ತಿ
ಮೆಲ್ಲಗೆ ಮತ್ತೇರಿದ ಹೆಡೆಯ ನಾಗ.
ಅಚ್ಚೊತ್ತಿದ್ದ ಹದ್ದು ಎಚ್ಚೆತ್ತು ಬಡಿದಾಗ
ಸುತ್ತಮುತ್ತಲ ಮೋಡ ಕಿರುಚಿ ಕಣ್ಣೀರು.
ಅತ್ತಲಿಂದಿತ್ತ ಇತ್ತಲಿಂದಿತ್ತ ರಪರಪನೆ ಬಡಿವ
ಪುಕ್ಕಗಳಿಗೆ ಸಿಕ್ಕಿ ಮರದ ಮೈಯಲ್ಲಿ ದಿಗಿಲು!
ಹದ್ದಿನಾರ್ಭಟದಲ್ಲಿ ಅತ್ತು ಕರೆಯುವ ಮಹಲು
ಬೇರಿಗೆ ಭೈರಿಗೆ ಹಿಡಿವ ಭೋರ್ಗರೆವ ಹೊನಲು.
ದಿಕ್ಕು ಕಾಣದ ಹಕ್ಕಿಗಳು ಮರದಲ್ಲೆ ಮುಲುಗುಟ್ಟಿ
ಮತ್ತದೇ ಕೆಲಸ ಟಕ ಟಕ ಸದ್ದು
ಮೋಹದಲ್ಲೆ ಮೈದಳೆದ ಎಚ್ಚರದ ಗುದ್ದು.
ಮಣ್ಣ ಮೈಥುನದಲ್ಲಿ ಫಲ ಕಾಣುವ ಛಲ ಮರಕ್ಕೆ
ತಲೆಯಲ್ಲಿ ಒಂದೇ ಸಮ ಕುಕ್ಕುವ ಬಯಕೆ.
ಹಾಳು ಬಾವಿಯ ಹೂಣು ಆಳುದ್ದ ತುಂಬಿ
ಸಲಿಕೆ ಗುದ್ದಲಿಗೆ ಎಡೆಬಿಡದ ಕೆಲಸ
ಹೊಸ ಮಂಕರಿಗಳಲ್ಲಿ ಮಣ್ಣು ತುಂಬುವ ರಭಸ.
ಬೆವರು ಬಸಿದು ಹೊಸ ವರಸೆಯಲ್ಲಿ ಹತ್ತುವಾಗ
ದಡದಲ್ಲಿ ಬಾವಿಯೊಡೆಯರ ಪಹರೆ; ಕತ್ತಿಝಳಪು.
ನೆಚ್ಚಿ ನಡೆದವನು ಬೆಚ್ಚಿ ತಲೆತುಂಬ ಕುಟಿಗ-
ಎಚ್ಚರದ ಸಲಗ; ದಾರಿ ಹೊಳಪು.
ಜಗ್ಗದೆ ಕುಗ್ಗದೆ ನುಗ್ಗುತ್ತ ನಡೆದಾಗ
ಬಾವಿಯೊಡಯರಲೆಷ್ಟೋ ಬಂಧು ಬಳಗ!
ನಿಂತು ನೋಡನೋಡುತ್ತ ಸಾವರಿಸಿಕೊಂಡು
ಧ್ಯೇಯ ಧುಮ್ಮಿಕ್ಕಿ ಕರೆಂಟು ದೃಷ್ಟಿ
ಕತ್ತಿಗಳಿಗೆ ಕತ್ತು ಕೊಡದ ಮಲೆತ ಮುಷ್ಟಿ
ಮರದಲ್ಲಿ ಚೈತನ್ಯ ಸೂರ್‍ಯ ಚುರುಕು-
ಹಕ್ಕಿಯಚ್ಚರ ಚಬುಕು.

ಅದುರಿದೊಡೆಯರಿಂದ ದಡಕಡಿವ ಕಾರ್ಯ
ಮೇಲೆ ಮುಸುಕು ಮುಚ್ಚಿದ ಸೂರ್ಯ
ಬಿದ್ದರೂ ಬಿಡದೆ ಬೆನ್ನು ತಿರುಗಿಸದೆ ದಡದೆಡೆಗೆ ಬಂದಾಗ ಬೆದರುಗೊಂಬೆಗಳಿಗೆಲ್ಲ ಬೆರಗು.

ಹಾಳುಬಾವಿಯ ಆಳ ನೋಡಿ ನಕ್ಕಾಗ
ನಾಚಿಕೆಯೆ ನೀರಾಗಿ ತಳ ತೋಯುತಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೂಮುಸಲ್ಮಾನರ ಐಕ್ಯ – ೫
Next post ಹುಚ್ಚಿ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…