Home / ಕವನ / ಕವಿತೆ / ಮರಕುಟಿಗ

ಮರಕುಟಿಗ

ಕತ್ತಲಿಗೆ ಕತ್ತರಿ ಬಿದ್ದು ಇಷ್ಟಿಷ್ಟೇ ಹರಿದು
ಚಿಗುರೊಡೆದ ಮರದಲ್ಲಿ ಚಿಲಿಪಿಲಿ; ಒಂದಕ್ಕೊಂದು ಸೇರಿ
ಅಸ್ಪಷ್ಟ ಗದ್ದಲ: ಕಣ್ಣ ತೆರೆಯುವ ತುರಿಕೆ;
ಮನೆಯ ಒಳಹೊರಗೆಲ್ಲ ಬಳೆ ಸದ್ದು ಪೊರಕೆ.
ಮನದ ಮೂಲದಲ್ಲಿ ಬೇರಿಳಿದ ಮರ
ಗೀರಿದರೆ ಚಿಲ್ಲೆನ್ನುವ ರಸ; ಬೆಳವ ರಭಸ.
ಬೆಚ್ಚನೆಯ ಬಿಸಿಲಿಗೆ ಮಡುಗಟ್ಟಿದ್ದ ಮಂಜು
ಹತ್ತು ಕಡೆ ಹರಿಯುವುತ್ಸಾಹ.
ಗಿಡಗೆಂಟೆ ಮುಳ್ಳುಪೊದೆ ಉಬ್ಬುತಗ್ಗುಗಳ
ಸಮತಟ್ಟುಗೊಳಿಸಬೇಕೆಂಬ ಬುಲ್ಡೋಜರ್ ಬುದ್ದಿ.
ಹೀಗೆ ಬೆಳೆಯುತ್ತ ಬಂದದ್ದೇ ಒಂದು ಸುದ್ದಿ-
ಯಾಗಿ ಮರದ ಮೇಲೆಲ್ಲ ಟಕಟಕ ಸದ್ದು
ನೀಲಿ ಹಾಳೆಯ ಮೇಲೆ ಅಚ್ಚೊತ್ತಿದ ಹದ್ದು
ಮರಕುಟಿಗಗಳ ಸದ್ದು ನಿಲ್ಲಲಿಲ್ಲ;
ಚುಚ್ಚುವೆಚ್ಚರ ಹಕ್ಕಿ ಹಾರಲಿಲ್ಲ.

ಮೈನೆರೆದ ಮರದಲ್ಲಿ ಮೋಹಕುಟಿಗ
ಕಿತ್ತು ತಿನ್ನುವ ಕತ್ತುಬಳಸುವ ಹತ್ತಾರು ಸಲಗ
ಹಂಟರನು ಹಿಡಿದಾಗ ಹಲಗೆ ಬಡಿತ
ಕಾಲಕುಣಿಸುವ ಕುದುರೆ ಕೆನೆತ
ಹಂಟರಿನ ಮೈಯಲ್ಲಿ ಸಂಗೀತ ಸ್ವಿಚ್ಚೊತ್ತಿ
ಮೆಲ್ಲಗೆ ಮತ್ತೇರಿದ ಹೆಡೆಯ ನಾಗ.
ಅಚ್ಚೊತ್ತಿದ್ದ ಹದ್ದು ಎಚ್ಚೆತ್ತು ಬಡಿದಾಗ
ಸುತ್ತಮುತ್ತಲ ಮೋಡ ಕಿರುಚಿ ಕಣ್ಣೀರು.
ಅತ್ತಲಿಂದಿತ್ತ ಇತ್ತಲಿಂದಿತ್ತ ರಪರಪನೆ ಬಡಿವ
ಪುಕ್ಕಗಳಿಗೆ ಸಿಕ್ಕಿ ಮರದ ಮೈಯಲ್ಲಿ ದಿಗಿಲು!
ಹದ್ದಿನಾರ್ಭಟದಲ್ಲಿ ಅತ್ತು ಕರೆಯುವ ಮಹಲು
ಬೇರಿಗೆ ಭೈರಿಗೆ ಹಿಡಿವ ಭೋರ್ಗರೆವ ಹೊನಲು.
ದಿಕ್ಕು ಕಾಣದ ಹಕ್ಕಿಗಳು ಮರದಲ್ಲೆ ಮುಲುಗುಟ್ಟಿ
ಮತ್ತದೇ ಕೆಲಸ ಟಕ ಟಕ ಸದ್ದು
ಮೋಹದಲ್ಲೆ ಮೈದಳೆದ ಎಚ್ಚರದ ಗುದ್ದು.
ಮಣ್ಣ ಮೈಥುನದಲ್ಲಿ ಫಲ ಕಾಣುವ ಛಲ ಮರಕ್ಕೆ
ತಲೆಯಲ್ಲಿ ಒಂದೇ ಸಮ ಕುಕ್ಕುವ ಬಯಕೆ.
ಹಾಳು ಬಾವಿಯ ಹೂಣು ಆಳುದ್ದ ತುಂಬಿ
ಸಲಿಕೆ ಗುದ್ದಲಿಗೆ ಎಡೆಬಿಡದ ಕೆಲಸ
ಹೊಸ ಮಂಕರಿಗಳಲ್ಲಿ ಮಣ್ಣು ತುಂಬುವ ರಭಸ.
ಬೆವರು ಬಸಿದು ಹೊಸ ವರಸೆಯಲ್ಲಿ ಹತ್ತುವಾಗ
ದಡದಲ್ಲಿ ಬಾವಿಯೊಡೆಯರ ಪಹರೆ; ಕತ್ತಿಝಳಪು.
ನೆಚ್ಚಿ ನಡೆದವನು ಬೆಚ್ಚಿ ತಲೆತುಂಬ ಕುಟಿಗ-
ಎಚ್ಚರದ ಸಲಗ; ದಾರಿ ಹೊಳಪು.
ಜಗ್ಗದೆ ಕುಗ್ಗದೆ ನುಗ್ಗುತ್ತ ನಡೆದಾಗ
ಬಾವಿಯೊಡಯರಲೆಷ್ಟೋ ಬಂಧು ಬಳಗ!
ನಿಂತು ನೋಡನೋಡುತ್ತ ಸಾವರಿಸಿಕೊಂಡು
ಧ್ಯೇಯ ಧುಮ್ಮಿಕ್ಕಿ ಕರೆಂಟು ದೃಷ್ಟಿ
ಕತ್ತಿಗಳಿಗೆ ಕತ್ತು ಕೊಡದ ಮಲೆತ ಮುಷ್ಟಿ
ಮರದಲ್ಲಿ ಚೈತನ್ಯ ಸೂರ್‍ಯ ಚುರುಕು-
ಹಕ್ಕಿಯಚ್ಚರ ಚಬುಕು.

ಅದುರಿದೊಡೆಯರಿಂದ ದಡಕಡಿವ ಕಾರ್ಯ
ಮೇಲೆ ಮುಸುಕು ಮುಚ್ಚಿದ ಸೂರ್ಯ
ಬಿದ್ದರೂ ಬಿಡದೆ ಬೆನ್ನು ತಿರುಗಿಸದೆ ದಡದೆಡೆಗೆ ಬಂದಾಗ ಬೆದರುಗೊಂಬೆಗಳಿಗೆಲ್ಲ ಬೆರಗು.

ಹಾಳುಬಾವಿಯ ಆಳ ನೋಡಿ ನಕ್ಕಾಗ
ನಾಚಿಕೆಯೆ ನೀರಾಗಿ ತಳ ತೋಯುತಿತ್ತು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...