Home / ಕವನ / ಕವಿತೆ / ಮರಕುಟಿಗ

ಮರಕುಟಿಗ

ಕತ್ತಲಿಗೆ ಕತ್ತರಿ ಬಿದ್ದು ಇಷ್ಟಿಷ್ಟೇ ಹರಿದು
ಚಿಗುರೊಡೆದ ಮರದಲ್ಲಿ ಚಿಲಿಪಿಲಿ; ಒಂದಕ್ಕೊಂದು ಸೇರಿ
ಅಸ್ಪಷ್ಟ ಗದ್ದಲ: ಕಣ್ಣ ತೆರೆಯುವ ತುರಿಕೆ;
ಮನೆಯ ಒಳಹೊರಗೆಲ್ಲ ಬಳೆ ಸದ್ದು ಪೊರಕೆ.
ಮನದ ಮೂಲದಲ್ಲಿ ಬೇರಿಳಿದ ಮರ
ಗೀರಿದರೆ ಚಿಲ್ಲೆನ್ನುವ ರಸ; ಬೆಳವ ರಭಸ.
ಬೆಚ್ಚನೆಯ ಬಿಸಿಲಿಗೆ ಮಡುಗಟ್ಟಿದ್ದ ಮಂಜು
ಹತ್ತು ಕಡೆ ಹರಿಯುವುತ್ಸಾಹ.
ಗಿಡಗೆಂಟೆ ಮುಳ್ಳುಪೊದೆ ಉಬ್ಬುತಗ್ಗುಗಳ
ಸಮತಟ್ಟುಗೊಳಿಸಬೇಕೆಂಬ ಬುಲ್ಡೋಜರ್ ಬುದ್ದಿ.
ಹೀಗೆ ಬೆಳೆಯುತ್ತ ಬಂದದ್ದೇ ಒಂದು ಸುದ್ದಿ-
ಯಾಗಿ ಮರದ ಮೇಲೆಲ್ಲ ಟಕಟಕ ಸದ್ದು
ನೀಲಿ ಹಾಳೆಯ ಮೇಲೆ ಅಚ್ಚೊತ್ತಿದ ಹದ್ದು
ಮರಕುಟಿಗಗಳ ಸದ್ದು ನಿಲ್ಲಲಿಲ್ಲ;
ಚುಚ್ಚುವೆಚ್ಚರ ಹಕ್ಕಿ ಹಾರಲಿಲ್ಲ.

ಮೈನೆರೆದ ಮರದಲ್ಲಿ ಮೋಹಕುಟಿಗ
ಕಿತ್ತು ತಿನ್ನುವ ಕತ್ತುಬಳಸುವ ಹತ್ತಾರು ಸಲಗ
ಹಂಟರನು ಹಿಡಿದಾಗ ಹಲಗೆ ಬಡಿತ
ಕಾಲಕುಣಿಸುವ ಕುದುರೆ ಕೆನೆತ
ಹಂಟರಿನ ಮೈಯಲ್ಲಿ ಸಂಗೀತ ಸ್ವಿಚ್ಚೊತ್ತಿ
ಮೆಲ್ಲಗೆ ಮತ್ತೇರಿದ ಹೆಡೆಯ ನಾಗ.
ಅಚ್ಚೊತ್ತಿದ್ದ ಹದ್ದು ಎಚ್ಚೆತ್ತು ಬಡಿದಾಗ
ಸುತ್ತಮುತ್ತಲ ಮೋಡ ಕಿರುಚಿ ಕಣ್ಣೀರು.
ಅತ್ತಲಿಂದಿತ್ತ ಇತ್ತಲಿಂದಿತ್ತ ರಪರಪನೆ ಬಡಿವ
ಪುಕ್ಕಗಳಿಗೆ ಸಿಕ್ಕಿ ಮರದ ಮೈಯಲ್ಲಿ ದಿಗಿಲು!
ಹದ್ದಿನಾರ್ಭಟದಲ್ಲಿ ಅತ್ತು ಕರೆಯುವ ಮಹಲು
ಬೇರಿಗೆ ಭೈರಿಗೆ ಹಿಡಿವ ಭೋರ್ಗರೆವ ಹೊನಲು.
ದಿಕ್ಕು ಕಾಣದ ಹಕ್ಕಿಗಳು ಮರದಲ್ಲೆ ಮುಲುಗುಟ್ಟಿ
ಮತ್ತದೇ ಕೆಲಸ ಟಕ ಟಕ ಸದ್ದು
ಮೋಹದಲ್ಲೆ ಮೈದಳೆದ ಎಚ್ಚರದ ಗುದ್ದು.
ಮಣ್ಣ ಮೈಥುನದಲ್ಲಿ ಫಲ ಕಾಣುವ ಛಲ ಮರಕ್ಕೆ
ತಲೆಯಲ್ಲಿ ಒಂದೇ ಸಮ ಕುಕ್ಕುವ ಬಯಕೆ.
ಹಾಳು ಬಾವಿಯ ಹೂಣು ಆಳುದ್ದ ತುಂಬಿ
ಸಲಿಕೆ ಗುದ್ದಲಿಗೆ ಎಡೆಬಿಡದ ಕೆಲಸ
ಹೊಸ ಮಂಕರಿಗಳಲ್ಲಿ ಮಣ್ಣು ತುಂಬುವ ರಭಸ.
ಬೆವರು ಬಸಿದು ಹೊಸ ವರಸೆಯಲ್ಲಿ ಹತ್ತುವಾಗ
ದಡದಲ್ಲಿ ಬಾವಿಯೊಡೆಯರ ಪಹರೆ; ಕತ್ತಿಝಳಪು.
ನೆಚ್ಚಿ ನಡೆದವನು ಬೆಚ್ಚಿ ತಲೆತುಂಬ ಕುಟಿಗ-
ಎಚ್ಚರದ ಸಲಗ; ದಾರಿ ಹೊಳಪು.
ಜಗ್ಗದೆ ಕುಗ್ಗದೆ ನುಗ್ಗುತ್ತ ನಡೆದಾಗ
ಬಾವಿಯೊಡಯರಲೆಷ್ಟೋ ಬಂಧು ಬಳಗ!
ನಿಂತು ನೋಡನೋಡುತ್ತ ಸಾವರಿಸಿಕೊಂಡು
ಧ್ಯೇಯ ಧುಮ್ಮಿಕ್ಕಿ ಕರೆಂಟು ದೃಷ್ಟಿ
ಕತ್ತಿಗಳಿಗೆ ಕತ್ತು ಕೊಡದ ಮಲೆತ ಮುಷ್ಟಿ
ಮರದಲ್ಲಿ ಚೈತನ್ಯ ಸೂರ್‍ಯ ಚುರುಕು-
ಹಕ್ಕಿಯಚ್ಚರ ಚಬುಕು.

ಅದುರಿದೊಡೆಯರಿಂದ ದಡಕಡಿವ ಕಾರ್ಯ
ಮೇಲೆ ಮುಸುಕು ಮುಚ್ಚಿದ ಸೂರ್ಯ
ಬಿದ್ದರೂ ಬಿಡದೆ ಬೆನ್ನು ತಿರುಗಿಸದೆ ದಡದೆಡೆಗೆ ಬಂದಾಗ ಬೆದರುಗೊಂಬೆಗಳಿಗೆಲ್ಲ ಬೆರಗು.

ಹಾಳುಬಾವಿಯ ಆಳ ನೋಡಿ ನಕ್ಕಾಗ
ನಾಚಿಕೆಯೆ ನೀರಾಗಿ ತಳ ತೋಯುತಿತ್ತು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...