Home / ಕವನ / ಕವಿತೆ / ಗುರು ನಮನ

ಗುರು ನಮನ

ಗುರುವೆ ನಮೋ ಶ್ರೀ ಗುರುವೆ ನಮೋ
ಸದ್ಗುರುವೆ ನಮೋ ವರಗುರುವೆ ನಮೋ || ಪ ||

ಗುರುವೇ ಹರ ನಮೋ ಗುರುವೇ ಹರಿ ನಮೋ
ಗುರುವೆ ಬ್ರಹ್ಮ ಪರಗುರುವೆ ನಮೋ ||ಅ.ಪ.||

ತಾಯಿಯ ಒಲುಮೆ ತಂದೆಯ ಬಲುಮೆ
ಬಂಧು ಬಳಗ ಬಲ ನೀನೆ ಗುರು
ಲೋಕಕ್ಕೆಲ್ಲಾ ಹಿರಿಯನು ನೀನು
ದೇವತೆಗಳಿಗೂ ನೀನೆ ಗುರು || ೧ ||

ಆದಿ ಕಾಲದಲಿ ವೇದಗಳುಸುರಿದೆ
ಪ್ರಕೃತಿಯಲ್ಲಿ ಪರಮಾತ್ಮನ ಕಂಡೆ
ಉಪನಿಷತ್ತುಗಳ ಮರ್ಮವ ತಿಳಿಸಿದೆ
ಆತ್ಮ ವಿದ್ಯೆಯ ಸುಧೆಯೆರೆದೆ || ೨ ||

ಅಕ್ಷರ ಅಕ್ಷರ ಕಲಿಸುತ ಆಕ್ಷರ
ಬ್ರಹ್ಮದ ಶಿಖರಕೆ ಕರೆದೊಯ್ದೆ
ನಶ್ಚರ ಜಗದಲಿ ಶಾಶ್ವತದಿರವನು
ಈಶ್ವರತ್ವವನು ತೋರಿಸಿದೆ || ೩ ||

ಜೀವನ ಬೆಲೆಯನು ತಿಳಿಸಿದ ಗುರುವೇ
ಜೀವನ ಕಲೆಯನು ಕಲಿಸಿದೆ ನೀ
ಪಶುವಿನಿಂದ ಪಶುಪತಿಯ ಹಿರಿಮೆಯನು
ನರಕದಿ ನಾಕವ ತೋರಿದೆ ನೀ || ೪ ||

ನಡೆಯನು ತಿದ್ದಿದೆ ನುಡಿಯನು ತೀಡಿದೆ
ನಡೆನುಡಿ ಬೆರೆಯಲು ಕೈಲಾಸ
ಇಹದಲಿ ಜಯವನು ಪರದ ವಿಜಯವನು
ತೋರಿದೆ ಜೀವನದುಲ್ಲಾಸ || ೫ ||

ಶಾಸ್ತ್ರಪುರಾಣಗಳಾಗಮ ವಿಧಿಗಳು
ಯುದ್ಧ ವೈದ್ಯತಂತ್ರಾದಿಗಳು
ಅರವತ್ ನಾಲಕು ವಿದ್ಯೆಗಳೆಲ್ಲಾ
ನೀನಿತ್ತಿರುವ ದಾನಗಳು || ೬ ||

ಸುಂದರ ಗಿಡಗಳ ಹೂ ತೋಟದೊಲು
ವಿದ್ಯಾರ್ಥಿಗಳನು ಬೆಳೆಯಿಸುವೆ
ಕಲ್ಲಲಿ ಶಿಲ್ಪವ ರೂಪುಗೊಳಿಸುವೊಲು
ಮಹಾಮಾನವರ ಮೂರ್ತಿಸುವೆ || ೭ ||

ನಾಡು ನುಡಿಗಳಭಿಮಾನವ ತುಂಬುತ
ದೇಶಭಕ್ತರನು ನಿರ್ಮಿಸುವೆ
ಶ್ರದ್ದೆ ಶಕ್ತಿಗಳ ನ್ಯಾಯ ನೀತಿಗಳ
ಜನನಾಯಕರನು ರೂಪಿಸುವೆ || ೮ ||

ಜಾತಿ ಭೇದಗಳು ನಿನಗಿಲ್ಲಾ ಮತ
ಪಂಥಮೇರೆಗಳು ನಿನಗಿಲ್ಲ
ಸರ್ವರಲಿ ಸಮ ದೃಷ್ಟಿ ನಿನ್ನದು
ಮೇಲು ಕೀಳುಗಳು ನಿನಗಿಲ್ಲ || ೯ ||

ನ್ಯಾಯ ನಿಷ್ಟುರನು ಸತ್ಯ ಸಾಧಕನು
ಖಂಡಿತವಾದಿಯು ನೀನು ಗುರು
ಧೀರರಲ್ಲಿ ಅತಿಧೀರ ಮಹಾತ್ಮನೆ
ಮರಣವ ಮೀರಿದ ಮಹಾಗುರು || ೧೦ ||

ನೀನಿಲ್ಲದೆ ಜಗ ಪಶುರಕ್ಕಸರಿಂ
ಅಂಧಕಾರದಲಿ ಮುಳುಗುವುದೋ
ನಿನ್ನಿಂದಲೇ ಈ ಲೋಕದ ಸಂಸ್ಕೃತಿ
ಕಲೆ ಸಾಹಿತ್ಯವು ಬೆಳಗುವುದೋ || ೧೧ ||

ಕತ್ತಲೆಯಿಂದ ಬೆಳಕಿನ ಕಡೆಗೆ
ಅಸತ್ಯದಿಂದ ಸತ್ಯದ ಎಡೆಗೆ
ಮರ್ತ್ಯದಿಂದ ಅಮೃತತ್ವದ ಗುರಿಗೆ
ನಮ್ಮನು ಒಯ್ಯುವ ಗುರುವೆ ನಮೋ || ೧೨ ||
*****
(ಶಿಕ್ಷಕರ ದಿನಾಚರಣೆಯಲ್ಲಿ ಸಾದರಪಡಿಸಿದ ಕವನ)

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...