ಬಸವನೆಂದರೆ ಒಂದು ವ್ಯಕ್ತಿಯಲ್ಲ

ಬಸವನೆಂದರೆ ಒಂದು ವ್ಯಕ್ತಿಯಲ್ಲ
ಯಾವುದಕು ಹೋಲಿಸಲು ಸಾಟಿಯಲ್ಲ || ಪ ||

ಯುಗಯುಗದ ತಪವೆಲ್ಲ ಸಿದ್ದಿಯಾಕೃತಿಯಾಗಿ
ಬಸವಣ್ಣನೆಂಬ ರೂಪವ ತಳೆಯಿತು
ಯುಗಯುಗಗಳನು ಮೀರಿ ನಿಂತಿರುವ ದರ್ಶನಕೆ
ಬಸವ ನಿನ್ನಯ ದ್ವನಿಯು ತಾ ಮೊಳಗಿತು ||ಅ.ಪ.||

ಬಸವನೆಂದರೆ ಬೆಳಕು ಬರಿಯ ಮಿಣುಬೆಳಕಲ್ಲ
ಕಣ್ಣು ಕೋರೈಸುವ ಮಿಂಚು ವಿದ್ಯುತ್ತು
ಹಿಂದೆ ಶತಮಾನಗಳ ಕತ್ತಲೆಯು ಕಳೆದಿತ್ತು
ಮುಂದೆ ಶತಮಾನಗಳ ತೊಳಗಿ ಬೆಳಗಿತ್ತು || ೧ ||

ಆ ಬೆಳಕಿನಲ್ಲಿ ಹೊಸ ಧರ್ಮವೆ ಉದಿಸಿತ್ತು
ಕಿರಿಯ ಮತ ಧರ್ಮಗಳು ಮರೆಯಾದವು
ಆ ಬೆಳಕಿನಲ್ಲಿಯೇ ಕವಿಯಾಗಿ ಶರಣ ಗಣ
ಹೊಸದು ಮನ್ವಂತರದ ಸಿರಿಯಾದವು || ೨ ||

ಬಸವನೆಂದರೆ ಬಳ್ಳಿ ಹಬ್ಬಿತ್ತು ನಾಡೆಲ್ಲ
ಕರುನಾಡ ತೋಟದಲಿ ತಾನೆ ತಾನು
ಕಳೆ ಕಸುವು ನಶಿಸಿದವು ಹೊಸ ಹೂವು ಅರಳಿದವು
ಸಿರಿಕಂಪು ಮಾಧುರ್ಯ ಎಂಥ ಜೇನು || ೩ ||

ಜಾನಪದ ಸೋಗಡನ್ನು ಮಣ್ಣಿನೊಳ ಕಸುವನ್ನು
ಹೀರಿ ಜನಮನವನದಿ ವ್ಯಾಪಿಸಿತ್ತು
ನಡೆನುಡಿಯ ಬಳಸಿತ್ತು ತಿದ್ದಿತ್ತು ಬೆಳೆಸಿತ್ತು
ತನಿಹಣ್ಣು ರಸವಾಗಿ ರೂಪಿಸಿತ್ತು || ೪ ||

ಬಸವನೆಂದರೆ ಹೊಳೆಯು ಬರಿಯ ಕಿರು ಹೊಳೆಯಲ್ಲ
ಭೋರ್ಗರೆವ ಮಹಾಲಿಂಗ ಭಾವಧಾರೆ
ಕೂಡಿದ್ದ ಗತಕಾಲ ಕಶ್ಮಲವ ಕೊಚ್ಚುತ್ತ
ತಿಳಿವು ತಿಳಿ ಹೊನಲಾಗಿ ಜೀವಧಾರೆ || ೫ ||

ಬರಡಾದ ಮಾನವತೆ ತಂಪು ಜಲವನು ಹೀರಿ
ಚಿಗುರೊಡೆದು ಆನಂದ ಪಲ್ಲವಿಸಿತು
ತಿಳಿಜಲದಿ ಮಿಂದು ಪರಿಶುದ್ಧ ಜೀವದ ರಾಶಿ
ಹಾಡು ಎದೆಯೊಳಗಿಂದ ಹೊಮ್ಮಿಸಿತು || ೬ ||

ಬಸವನೆಂದರೆ ಬೆಂಕಿ ಪಾಪಗಳನುರಿಸಿತ್ತು
ಜಾತಿ ಮತ ಭೇದಗಳ ಸುಟ್ಟು ಹಾಕಿ
ಮೌಢ್ಯ ಹುಸಿಗಳು ಬೂದಿ ಅಜ್ಞಾನ ನಶಿಸಿತ್ತು
ದುಷ್ಟ ದೌರ್ಜನ್ಯಗಳ ಮಟ್ಟ ಹಾಕಿ || ೭ ||

ವಿಷಮತೆಯ ಅವಲೋಹ ಸುಟ್ಟುರಿದು ಕರಕಾಗಿ
ಚೊಕ್ಕ ಚಿನ್ನದ ಸಮತೆ ನೆಲೆಗೊಂಡಿತು
ದೌರ್ಬಲ್ಯ ಹೇಡಿತನ ಆಲಸ್ಯ ಸಣ್ಣತನ
ಕೆಟ್ಟ ಹುಳುಗಳ ಬಳಗ ಕೆಟ್ಟೋಡಿತು || ೮ ||

ಬಸವನೆಂದರೆ ಬಯಲು ಕೊನೆಯಿಲ್ಲದಾಕಾಶ
ಮಾನವನ ಉತ್ತುಂಗ ಸಿದ್ದಿ ಕಳಶ |
ಭುವಿ ಬಾನುಗಳನೊಂದು ಮಾಡುತ್ತ ನಿಂತಂಥ
ಪಾರಮಾರ್ಥದ ಗುರಿಯು ತುರೀಯಾಶ || ೯ ||

ಕಾಯಕ್ಕೆ ಮಿತಿಯುಂಟು ಜೀವಕ್ಕೆ ಗತಿಯುಂಟು
ವಿಶ್ವವ್ಯಾಪೀ ಭಾವ ಬಯಲ ಬೆರಗು
ತಿಳಿದಂತೆ ಹೊಳೆ ಹೊಳೆದು ಅರಿವನ್ನು ಬೆಳೆಸುವುದು
ತಿಳಿಯುವುದು ಇನ್ನು ಇನ್ನೂ ಉಳಿವ ಕೊರಗು || ೧೦ ||

ಬಸವನೆಂದರೆ ಕಡಲು ಕರುಣೆ ಶಾಂತಿಯ ಒಡಲು
ಶರಣಗಣ ನದಿಗಳಿಗೆ ಗಮ್ಯ ತಾಣ
ಅಸಹಾಯ ನಿರ್ಗತಿಕ ನೊಂದ ಜೀವರಿಗೆಲ್ಲ
ಸಾಂತ್ವನದ ಅಭಿಮಾನ ಸೆಲೆ ಪೂರಣ || ೧೧ ||

ಬಸವನೆಂದರೆ ಪ್ರೀತಿ ಜಗದಗಲ ತಟ್ಟುವುದು
ಲೇಸು ದಾರಿಯು ಮಾತ್ರ ಅಚ್ಚುಮೆಚ್ಚು
ಬಸವನೆಂದರೆ ಕತ್ತಿ ಕೆಟ್ಟುದನು ಕೊಚ್ಚುವುದು
ವಜ್ರದಂತೆಯ ಕಠಿಣ ಅದರ ಕೆಚ್ಚು || ೧೨ ||

ಬಸವನೆಂದರೆ ಬೆಳಗು ಅರುಣೋದಯದ ಕಾಂತಿ
ನವ ಸಮಾಜವು ಕಣ್ಣು ತೆರೆಯಲಿಕ್ಕೆ
ಗಾಢ ನಿದ್ದಯನೊದ್ದು ಜನಮನವು ತಿಳಿದೇಳೆ
ಅಜ್ಞಾದಂಧತಮ ಹರಿಯಲಿಕ್ಕೆ || ೧೩ ||

ಬಸವನೆಂದರೆ ಚಂಡಮಾರುತವು ಕಸರಜಕೆ
ಜೊಳ್ಳನೆಲ್ಲವ ತೂರಿ ಶುಚಿ ಮಾಡಲು
ಬಸವನೆಂದರೆ ಮಂದ ಮಾರುತವು ದಣಿದವಗೆ
ನೊಂದ ಬೆಂದವರನ್ನು ಸಂತವಿಡಲು || ೧೪ ||

ಬಸವನೆಂದರೆ ಮಂತ್ರ ದಂಡವದು ಸಾಧನೆಗೆ
ಕಲ್ಪತರು ಅರ್ಥಿಯಿಂ ಬೇಡುವರಿಗೆ
ಬಸವ ನಂದಾದೀಪ ಎಂಥ ಬಿರುಗಾಳಿಯಲು
ನಸುನಗೆಯ ಹೊಂಬೆಳಕ ಕಾಂಬವರಿಗೆ || ೧೫ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಸಿಯಾ
Next post ಅಂತರ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys