Home / ಕವನ / ಕವಿತೆ / ಬಸವನೆಂದರೆ ಒಂದು ವ್ಯಕ್ತಿಯಲ್ಲ

ಬಸವನೆಂದರೆ ಒಂದು ವ್ಯಕ್ತಿಯಲ್ಲ

ಬಸವನೆಂದರೆ ಒಂದು ವ್ಯಕ್ತಿಯಲ್ಲ
ಯಾವುದಕು ಹೋಲಿಸಲು ಸಾಟಿಯಲ್ಲ || ಪ ||

ಯುಗಯುಗದ ತಪವೆಲ್ಲ ಸಿದ್ದಿಯಾಕೃತಿಯಾಗಿ
ಬಸವಣ್ಣನೆಂಬ ರೂಪವ ತಳೆಯಿತು
ಯುಗಯುಗಗಳನು ಮೀರಿ ನಿಂತಿರುವ ದರ್ಶನಕೆ
ಬಸವ ನಿನ್ನಯ ದ್ವನಿಯು ತಾ ಮೊಳಗಿತು ||ಅ.ಪ.||

ಬಸವನೆಂದರೆ ಬೆಳಕು ಬರಿಯ ಮಿಣುಬೆಳಕಲ್ಲ
ಕಣ್ಣು ಕೋರೈಸುವ ಮಿಂಚು ವಿದ್ಯುತ್ತು
ಹಿಂದೆ ಶತಮಾನಗಳ ಕತ್ತಲೆಯು ಕಳೆದಿತ್ತು
ಮುಂದೆ ಶತಮಾನಗಳ ತೊಳಗಿ ಬೆಳಗಿತ್ತು || ೧ ||

ಆ ಬೆಳಕಿನಲ್ಲಿ ಹೊಸ ಧರ್ಮವೆ ಉದಿಸಿತ್ತು
ಕಿರಿಯ ಮತ ಧರ್ಮಗಳು ಮರೆಯಾದವು
ಆ ಬೆಳಕಿನಲ್ಲಿಯೇ ಕವಿಯಾಗಿ ಶರಣ ಗಣ
ಹೊಸದು ಮನ್ವಂತರದ ಸಿರಿಯಾದವು || ೨ ||

ಬಸವನೆಂದರೆ ಬಳ್ಳಿ ಹಬ್ಬಿತ್ತು ನಾಡೆಲ್ಲ
ಕರುನಾಡ ತೋಟದಲಿ ತಾನೆ ತಾನು
ಕಳೆ ಕಸುವು ನಶಿಸಿದವು ಹೊಸ ಹೂವು ಅರಳಿದವು
ಸಿರಿಕಂಪು ಮಾಧುರ್ಯ ಎಂಥ ಜೇನು || ೩ ||

ಜಾನಪದ ಸೋಗಡನ್ನು ಮಣ್ಣಿನೊಳ ಕಸುವನ್ನು
ಹೀರಿ ಜನಮನವನದಿ ವ್ಯಾಪಿಸಿತ್ತು
ನಡೆನುಡಿಯ ಬಳಸಿತ್ತು ತಿದ್ದಿತ್ತು ಬೆಳೆಸಿತ್ತು
ತನಿಹಣ್ಣು ರಸವಾಗಿ ರೂಪಿಸಿತ್ತು || ೪ ||

ಬಸವನೆಂದರೆ ಹೊಳೆಯು ಬರಿಯ ಕಿರು ಹೊಳೆಯಲ್ಲ
ಭೋರ್ಗರೆವ ಮಹಾಲಿಂಗ ಭಾವಧಾರೆ
ಕೂಡಿದ್ದ ಗತಕಾಲ ಕಶ್ಮಲವ ಕೊಚ್ಚುತ್ತ
ತಿಳಿವು ತಿಳಿ ಹೊನಲಾಗಿ ಜೀವಧಾರೆ || ೫ ||

ಬರಡಾದ ಮಾನವತೆ ತಂಪು ಜಲವನು ಹೀರಿ
ಚಿಗುರೊಡೆದು ಆನಂದ ಪಲ್ಲವಿಸಿತು
ತಿಳಿಜಲದಿ ಮಿಂದು ಪರಿಶುದ್ಧ ಜೀವದ ರಾಶಿ
ಹಾಡು ಎದೆಯೊಳಗಿಂದ ಹೊಮ್ಮಿಸಿತು || ೬ ||

ಬಸವನೆಂದರೆ ಬೆಂಕಿ ಪಾಪಗಳನುರಿಸಿತ್ತು
ಜಾತಿ ಮತ ಭೇದಗಳ ಸುಟ್ಟು ಹಾಕಿ
ಮೌಢ್ಯ ಹುಸಿಗಳು ಬೂದಿ ಅಜ್ಞಾನ ನಶಿಸಿತ್ತು
ದುಷ್ಟ ದೌರ್ಜನ್ಯಗಳ ಮಟ್ಟ ಹಾಕಿ || ೭ ||

ವಿಷಮತೆಯ ಅವಲೋಹ ಸುಟ್ಟುರಿದು ಕರಕಾಗಿ
ಚೊಕ್ಕ ಚಿನ್ನದ ಸಮತೆ ನೆಲೆಗೊಂಡಿತು
ದೌರ್ಬಲ್ಯ ಹೇಡಿತನ ಆಲಸ್ಯ ಸಣ್ಣತನ
ಕೆಟ್ಟ ಹುಳುಗಳ ಬಳಗ ಕೆಟ್ಟೋಡಿತು || ೮ ||

ಬಸವನೆಂದರೆ ಬಯಲು ಕೊನೆಯಿಲ್ಲದಾಕಾಶ
ಮಾನವನ ಉತ್ತುಂಗ ಸಿದ್ದಿ ಕಳಶ |
ಭುವಿ ಬಾನುಗಳನೊಂದು ಮಾಡುತ್ತ ನಿಂತಂಥ
ಪಾರಮಾರ್ಥದ ಗುರಿಯು ತುರೀಯಾಶ || ೯ ||

ಕಾಯಕ್ಕೆ ಮಿತಿಯುಂಟು ಜೀವಕ್ಕೆ ಗತಿಯುಂಟು
ವಿಶ್ವವ್ಯಾಪೀ ಭಾವ ಬಯಲ ಬೆರಗು
ತಿಳಿದಂತೆ ಹೊಳೆ ಹೊಳೆದು ಅರಿವನ್ನು ಬೆಳೆಸುವುದು
ತಿಳಿಯುವುದು ಇನ್ನು ಇನ್ನೂ ಉಳಿವ ಕೊರಗು || ೧೦ ||

ಬಸವನೆಂದರೆ ಕಡಲು ಕರುಣೆ ಶಾಂತಿಯ ಒಡಲು
ಶರಣಗಣ ನದಿಗಳಿಗೆ ಗಮ್ಯ ತಾಣ
ಅಸಹಾಯ ನಿರ್ಗತಿಕ ನೊಂದ ಜೀವರಿಗೆಲ್ಲ
ಸಾಂತ್ವನದ ಅಭಿಮಾನ ಸೆಲೆ ಪೂರಣ || ೧೧ ||

ಬಸವನೆಂದರೆ ಪ್ರೀತಿ ಜಗದಗಲ ತಟ್ಟುವುದು
ಲೇಸು ದಾರಿಯು ಮಾತ್ರ ಅಚ್ಚುಮೆಚ್ಚು
ಬಸವನೆಂದರೆ ಕತ್ತಿ ಕೆಟ್ಟುದನು ಕೊಚ್ಚುವುದು
ವಜ್ರದಂತೆಯ ಕಠಿಣ ಅದರ ಕೆಚ್ಚು || ೧೨ ||

ಬಸವನೆಂದರೆ ಬೆಳಗು ಅರುಣೋದಯದ ಕಾಂತಿ
ನವ ಸಮಾಜವು ಕಣ್ಣು ತೆರೆಯಲಿಕ್ಕೆ
ಗಾಢ ನಿದ್ದಯನೊದ್ದು ಜನಮನವು ತಿಳಿದೇಳೆ
ಅಜ್ಞಾದಂಧತಮ ಹರಿಯಲಿಕ್ಕೆ || ೧೩ ||

ಬಸವನೆಂದರೆ ಚಂಡಮಾರುತವು ಕಸರಜಕೆ
ಜೊಳ್ಳನೆಲ್ಲವ ತೂರಿ ಶುಚಿ ಮಾಡಲು
ಬಸವನೆಂದರೆ ಮಂದ ಮಾರುತವು ದಣಿದವಗೆ
ನೊಂದ ಬೆಂದವರನ್ನು ಸಂತವಿಡಲು || ೧೪ ||

ಬಸವನೆಂದರೆ ಮಂತ್ರ ದಂಡವದು ಸಾಧನೆಗೆ
ಕಲ್ಪತರು ಅರ್ಥಿಯಿಂ ಬೇಡುವರಿಗೆ
ಬಸವ ನಂದಾದೀಪ ಎಂಥ ಬಿರುಗಾಳಿಯಲು
ನಸುನಗೆಯ ಹೊಂಬೆಳಕ ಕಾಂಬವರಿಗೆ || ೧೫ ||
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...