Home / ಕವನ / ಕವಿತೆ / ಬಸವನೆಂದರೆ ಒಂದು ವ್ಯಕ್ತಿಯಲ್ಲ

ಬಸವನೆಂದರೆ ಒಂದು ವ್ಯಕ್ತಿಯಲ್ಲ

ಬಸವನೆಂದರೆ ಒಂದು ವ್ಯಕ್ತಿಯಲ್ಲ
ಯಾವುದಕು ಹೋಲಿಸಲು ಸಾಟಿಯಲ್ಲ || ಪ ||

ಯುಗಯುಗದ ತಪವೆಲ್ಲ ಸಿದ್ದಿಯಾಕೃತಿಯಾಗಿ
ಬಸವಣ್ಣನೆಂಬ ರೂಪವ ತಳೆಯಿತು
ಯುಗಯುಗಗಳನು ಮೀರಿ ನಿಂತಿರುವ ದರ್ಶನಕೆ
ಬಸವ ನಿನ್ನಯ ದ್ವನಿಯು ತಾ ಮೊಳಗಿತು ||ಅ.ಪ.||

ಬಸವನೆಂದರೆ ಬೆಳಕು ಬರಿಯ ಮಿಣುಬೆಳಕಲ್ಲ
ಕಣ್ಣು ಕೋರೈಸುವ ಮಿಂಚು ವಿದ್ಯುತ್ತು
ಹಿಂದೆ ಶತಮಾನಗಳ ಕತ್ತಲೆಯು ಕಳೆದಿತ್ತು
ಮುಂದೆ ಶತಮಾನಗಳ ತೊಳಗಿ ಬೆಳಗಿತ್ತು || ೧ ||

ಆ ಬೆಳಕಿನಲ್ಲಿ ಹೊಸ ಧರ್ಮವೆ ಉದಿಸಿತ್ತು
ಕಿರಿಯ ಮತ ಧರ್ಮಗಳು ಮರೆಯಾದವು
ಆ ಬೆಳಕಿನಲ್ಲಿಯೇ ಕವಿಯಾಗಿ ಶರಣ ಗಣ
ಹೊಸದು ಮನ್ವಂತರದ ಸಿರಿಯಾದವು || ೨ ||

ಬಸವನೆಂದರೆ ಬಳ್ಳಿ ಹಬ್ಬಿತ್ತು ನಾಡೆಲ್ಲ
ಕರುನಾಡ ತೋಟದಲಿ ತಾನೆ ತಾನು
ಕಳೆ ಕಸುವು ನಶಿಸಿದವು ಹೊಸ ಹೂವು ಅರಳಿದವು
ಸಿರಿಕಂಪು ಮಾಧುರ್ಯ ಎಂಥ ಜೇನು || ೩ ||

ಜಾನಪದ ಸೋಗಡನ್ನು ಮಣ್ಣಿನೊಳ ಕಸುವನ್ನು
ಹೀರಿ ಜನಮನವನದಿ ವ್ಯಾಪಿಸಿತ್ತು
ನಡೆನುಡಿಯ ಬಳಸಿತ್ತು ತಿದ್ದಿತ್ತು ಬೆಳೆಸಿತ್ತು
ತನಿಹಣ್ಣು ರಸವಾಗಿ ರೂಪಿಸಿತ್ತು || ೪ ||

ಬಸವನೆಂದರೆ ಹೊಳೆಯು ಬರಿಯ ಕಿರು ಹೊಳೆಯಲ್ಲ
ಭೋರ್ಗರೆವ ಮಹಾಲಿಂಗ ಭಾವಧಾರೆ
ಕೂಡಿದ್ದ ಗತಕಾಲ ಕಶ್ಮಲವ ಕೊಚ್ಚುತ್ತ
ತಿಳಿವು ತಿಳಿ ಹೊನಲಾಗಿ ಜೀವಧಾರೆ || ೫ ||

ಬರಡಾದ ಮಾನವತೆ ತಂಪು ಜಲವನು ಹೀರಿ
ಚಿಗುರೊಡೆದು ಆನಂದ ಪಲ್ಲವಿಸಿತು
ತಿಳಿಜಲದಿ ಮಿಂದು ಪರಿಶುದ್ಧ ಜೀವದ ರಾಶಿ
ಹಾಡು ಎದೆಯೊಳಗಿಂದ ಹೊಮ್ಮಿಸಿತು || ೬ ||

ಬಸವನೆಂದರೆ ಬೆಂಕಿ ಪಾಪಗಳನುರಿಸಿತ್ತು
ಜಾತಿ ಮತ ಭೇದಗಳ ಸುಟ್ಟು ಹಾಕಿ
ಮೌಢ್ಯ ಹುಸಿಗಳು ಬೂದಿ ಅಜ್ಞಾನ ನಶಿಸಿತ್ತು
ದುಷ್ಟ ದೌರ್ಜನ್ಯಗಳ ಮಟ್ಟ ಹಾಕಿ || ೭ ||

ವಿಷಮತೆಯ ಅವಲೋಹ ಸುಟ್ಟುರಿದು ಕರಕಾಗಿ
ಚೊಕ್ಕ ಚಿನ್ನದ ಸಮತೆ ನೆಲೆಗೊಂಡಿತು
ದೌರ್ಬಲ್ಯ ಹೇಡಿತನ ಆಲಸ್ಯ ಸಣ್ಣತನ
ಕೆಟ್ಟ ಹುಳುಗಳ ಬಳಗ ಕೆಟ್ಟೋಡಿತು || ೮ ||

ಬಸವನೆಂದರೆ ಬಯಲು ಕೊನೆಯಿಲ್ಲದಾಕಾಶ
ಮಾನವನ ಉತ್ತುಂಗ ಸಿದ್ದಿ ಕಳಶ |
ಭುವಿ ಬಾನುಗಳನೊಂದು ಮಾಡುತ್ತ ನಿಂತಂಥ
ಪಾರಮಾರ್ಥದ ಗುರಿಯು ತುರೀಯಾಶ || ೯ ||

ಕಾಯಕ್ಕೆ ಮಿತಿಯುಂಟು ಜೀವಕ್ಕೆ ಗತಿಯುಂಟು
ವಿಶ್ವವ್ಯಾಪೀ ಭಾವ ಬಯಲ ಬೆರಗು
ತಿಳಿದಂತೆ ಹೊಳೆ ಹೊಳೆದು ಅರಿವನ್ನು ಬೆಳೆಸುವುದು
ತಿಳಿಯುವುದು ಇನ್ನು ಇನ್ನೂ ಉಳಿವ ಕೊರಗು || ೧೦ ||

ಬಸವನೆಂದರೆ ಕಡಲು ಕರುಣೆ ಶಾಂತಿಯ ಒಡಲು
ಶರಣಗಣ ನದಿಗಳಿಗೆ ಗಮ್ಯ ತಾಣ
ಅಸಹಾಯ ನಿರ್ಗತಿಕ ನೊಂದ ಜೀವರಿಗೆಲ್ಲ
ಸಾಂತ್ವನದ ಅಭಿಮಾನ ಸೆಲೆ ಪೂರಣ || ೧೧ ||

ಬಸವನೆಂದರೆ ಪ್ರೀತಿ ಜಗದಗಲ ತಟ್ಟುವುದು
ಲೇಸು ದಾರಿಯು ಮಾತ್ರ ಅಚ್ಚುಮೆಚ್ಚು
ಬಸವನೆಂದರೆ ಕತ್ತಿ ಕೆಟ್ಟುದನು ಕೊಚ್ಚುವುದು
ವಜ್ರದಂತೆಯ ಕಠಿಣ ಅದರ ಕೆಚ್ಚು || ೧೨ ||

ಬಸವನೆಂದರೆ ಬೆಳಗು ಅರುಣೋದಯದ ಕಾಂತಿ
ನವ ಸಮಾಜವು ಕಣ್ಣು ತೆರೆಯಲಿಕ್ಕೆ
ಗಾಢ ನಿದ್ದಯನೊದ್ದು ಜನಮನವು ತಿಳಿದೇಳೆ
ಅಜ್ಞಾದಂಧತಮ ಹರಿಯಲಿಕ್ಕೆ || ೧೩ ||

ಬಸವನೆಂದರೆ ಚಂಡಮಾರುತವು ಕಸರಜಕೆ
ಜೊಳ್ಳನೆಲ್ಲವ ತೂರಿ ಶುಚಿ ಮಾಡಲು
ಬಸವನೆಂದರೆ ಮಂದ ಮಾರುತವು ದಣಿದವಗೆ
ನೊಂದ ಬೆಂದವರನ್ನು ಸಂತವಿಡಲು || ೧೪ ||

ಬಸವನೆಂದರೆ ಮಂತ್ರ ದಂಡವದು ಸಾಧನೆಗೆ
ಕಲ್ಪತರು ಅರ್ಥಿಯಿಂ ಬೇಡುವರಿಗೆ
ಬಸವ ನಂದಾದೀಪ ಎಂಥ ಬಿರುಗಾಳಿಯಲು
ನಸುನಗೆಯ ಹೊಂಬೆಳಕ ಕಾಂಬವರಿಗೆ || ೧೫ ||
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...