Home / ಕವನ / ಕವಿತೆ / ಅಂತರ

ಅಂತರ

ಹುಡುಗನಾಗಿದ್ದ ದಿನಗಳ ನೆನಪು : ಆಗ
ನಮ್ಮೂರ ಹೊಳೆ ತುಂಗೆ ಶಾಂತನಿರ್ಮಲ ಅಂತರಂಗೆ;
ಹೊರಗಿನ ಬಿಸಿಲು
ಒಳಗೆ ಬಿಂಬಿಸಿ ತಳದ ತನಕ ನದಿಯ ಮನಸ್ಸು
ಸ್ವಚ್ಛ ಪ್ರತ್ಯಕ್ಷ ಸಂಪದ್ಯುಕ್ತ
ಜಲದ ರೇಸಿಮೆಹಾಳೆ ಸೀಳಿ ಹಾಯುವ, ಹಾಗೆ
ಹೀಗೆ ಹೇಗೋ ಹೊರಳಿ ಉರಿಯ ಚಿಮ್ಮುವ ಮೀನು,
ಕೆಳಗೆ ಥಳ ಥಳ ಮರಳು
ಬಾದಾಮಿ ದ್ರಾಕ್ಷಿ ಗೋಡಂಬಿ ಬಿಕ್ಕಿದ ಹಾಗೆ
ಹೊಳೆಯ ಮೂಕ ಸುಖಕ್ಕೆ ಮಾತು ದಕ್ಕಿದ ಹಾಗೆ
ಥರಾಥರಾವರಿ ಹರಳು.

ಇದೆಲ್ಲ ತಡಿಯಲ್ಲಿ.
ಆರಂಭದಿಂದ ಹತ್ತಾರು ಅಡಿಯಲ್ಲಿ
ಯಾರಿಗು ನಿರಾಳ, ಹೊಳೆ ಇಳಿದು ಹೋದಂತೆಲ್ಲ
ಒಳ‌ಒಳಗೆ ಕೆಳಕೆಳಗೆ
ಈಜುಗಲಿ ಸೀನ ಆಚಾರಿ ದತ್ತಣ್ಣನಿಗು
ತಳಸಿಗದ ಕಾಳಹಸುರಿನ ಆಳ ಆಭೀಳ,
ಯಾವ ಕಾಲದ್ದೊ
ಯಾರ್‍ಯಾರೆಲ್ಲ ಎಸೆದದ್ದೊ
ಗಂಗೆಯ ಹೆಸರು ಹೇಳಿ ಯಾರೆಲ್ಲ ಮುಡಿಸಿದ್ದೊ
ನೆರೆಮೊರೆದು ಕರೆಯೊಡೆದು ಜಾರಿ ಒಳಸೇರಿದ್ದೊ
‘ಮುಳುಗಿ ತರಬಲ್ಲೆಯೋ ಎಲ್ಲಿ ತಾ?’ ಎನ್ನುವ
ಸವಾಲಿನಲ್ಲಿ ಎಸೆದದ್ದೊ
ಆಣೆ ಪಾವಾಣೆ ರೂಪಾಯಿ ಚಿಲ್ಲರೆಯಿರಲಿ
ಪಾತ್ರೆ ಪಡಿ ಬೆಳ್ಳಿ ಬಂಗಾರ ನಡುಸಿಂಗಾರ ಕೂಡ ಇರುವ ವದಂತಿ
ಅರೆಕಂತಿ ನದಿ ನಡುವೆ ಕರೆಯುತ್ತ ನಿಂತಿರುವ
ಆನೆ ಬಂಡೆಯ ಬದಿಗೆ
* * *

ಕಲಿಯುಕ್ಕಿ ಆನೆಬಂಡೆಯ ಕಡೆಗೆ ಈಜಿರುವ
ಪಡ್ಡೆಹುಡುಗರ ದಂಡು.
ಹತ್ತಿ, ಬಂಡೆಯ ನೆತ್ತಿ ಕೂಗಿ ಹಾರುವ ದಿಟ್ಟ ಕಿಟ್ಟಡಿಗ.
ಹುಚ್ಚುಕೆಚ್ಚಿಗೆ ಕಟ್ಟುಬೆರಗಾಗಿ ನಿಂತ ಕಟ್ಟಾಳುಗಳ ಎದುರಲ್ಲಿ
ಹೊಸ ಹೊಸಾ ಕಸರತ್ತು.
ಐದಾರು ಆಳು ಆಳದ ಮರಳ ಮೈತಬ್ಬಿ ಬರುವ
ಬಿಟ್ಟಿ ಷರತ್ತು,
ಮುಳುಗಿದನೊ, ಉಸಿರು ಬಿಗಿಹಿಡಿದು, ದಿಟ್ಟಿಯ ನೆಟ್ಟು
ರಕ್ಷೆಕಾಯುವ ಗುಂಪು.
ಬರಲಿಲ್ಲ ಒಂದು ಕ್ಷಣ
ಎಲ್ಲ ಕಣ್ಣುಗಳಲ್ಲಿ ತವಕ ಅಶಂಕೆ ಕಳವಳ ಏನೊ ತಳಮಳ.
ಮರುಚಣ
ಬಂದ ಹೋ ಹೋ ಬಂದ ಎಂಬ ಕೇಕೆಯ ನಡುವೆ
ಛಂಗನೇ ಮೇಲೆದ್ದು ಮರಳ ಸಾಕ್ಷಿಯ ತೂರಿ
ಈಜಿ ಸಾಗುವ ಛಂದ,
ಈ ಸಾಹಸಕ್ಕೆಲ್ಲ ಬೆಲೆಯಿತ್ತು, ಮೆಚ್ಚಿಗೆ ಇತ್ತು, ಮೇಲು ನೆಲೆಯಿತ್ತು.
ಮೇಲಾಟ ಹೂಡಿ ಸೆಣಸುವ ಸರಿಸವಾಲುಗಳ
ರಣಧೀರ ಪಡೆಯಿತ್ತು.
* * *

ಈಗ
ನದಿಯಲ್ಲಿ ನೀರಿಲ್ಲ,
ಏಕೊ ಕಾಲನೆ ಬಲ್ಲ,
ಕಾಸಿ ಬರೆ ಎಳೆದಂತೆ ತಳದ ಮೈಯಲ್ಲೆಲ್ಲ
ಕಪ್ಪು ಹಸಿರಿನ ನೀಳ ಪಟ್ಟೆ
ಕೊಳೆಯುವ ಬಟ್ಟೆ :
ನಡುನಡುವೆ ನಡೆಗೊಂದು ನಾಯಿಕೊಡೆ ಪಾಚಿತೊಡೆ,
ಹೆಸರಿರದ ದೆಸೆಯಿರದ ಸಸ್ಯ
ಕುರುಚಲು ಜೊಂಡು;
ರಕ್ತಮಾಂಸವೆ ಇರದ ಅಸ್ಥಿಪಂಜರ ತೆರೆದ
ಒಡಲ ಭೀತಿ
ನದಿಯ ರೀತಿ.
ಹರಿಗೋಲು ದೋಣಿ ತಪ್ಪೋತ್ಸವಗಳಿರಲಿ
ಹೆಜ್ಜೆ ಮುಳುಗದ ಲಜ್ಜೆನಡಿಗೆ ನದಿಗೆ.
ಬಣ್ಣ ಬಾವುಟವಿರದ
ಬಿದಿರ ಗುಮ್ಮಟ ಮುರಿದ
ಪಾಳುಗುಡಿ ತೇರಿನ ಬೋಳುಮಂಡೆ
ಅಸಿಧಾರೆ ಬಿಸಿಲಲ್ಲಿ ಆನೆಬಂಡೆ.
ಬಟ್ಟೆ ಒಗೆಯುವ ಕಲ್ಲು
ಊರೊಳಗೆ ಬಂದು
ಮನೆ ಮೆಟ್ಟಿಲು,
ಲಾರಿಗಟ್ಟಲೆ ಮರಳು ತೋಡಿ ಮಾಡಿದ ಹೊಂಡ
ವಟರುಗಪ್ಪೆ ಕುಲಕ್ಕೆ
ತೊಟ್ಟಿಲು.
* * *

ಬೆತ್ತಲಾಗಸದಲ್ಲಿ ಮುಂದೆಂದೊ ಮತ್ತೆ
ಕರಿಮುಗಿಲ ಜಹಜುಗಳ ಸಾಲು;
ಸಾಗಿ ಬರಲಿವೆ ದಿಕ್ಕುದಿಕ್ಕಿಂದ, ಸುಳಿವಂತೆ
ಭಾಗೀರಥಿಯ ಹೆಜ್ಜೆಗಾಲು.
ಪುಟ್ಟ ಮಸಿಗುಡ್ಡೆಗಳು ಮೈಗೆ ಮೈ ತಾಗಿ
ಬೆಳೆದೀತು ಕಾರ್ಮುಗಿಲ ಬೆಟ್ಟ;
ಇಷ್ಟು ದಿನಗಳ ಹೊಟ್ಟೆಯುರಿಯೆ ನಡಿಗೆಗೆ ನುಗ್ಗಿ
ನಡುಗದೇ ಕುಣಿತಕ್ಕೆ ಅಟ್ಟ?
ಬತ್ತಿ ಕೊಳೆಯುವ ಹೊಳೆಯ ಬಸಿರಿಗನಸು
ಕೆತ್ತಿರುವ ನೆಲದೆದೆಗೆ ಹಸಿರಿನುಣಿಸು
ಸಂದಾಯವಾದೀತು ಎಂದಾದರೊಂದು ದಿನ
ಸಪ್ಪೆ ಬಾಳಿಗೆ ಉಪ್ಪು ನಿಂಬೆ ಮೆಣಸು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...