Home / ಕವನ / ಕವಿತೆ / ನಾಸಿಯಾ

ನಾಸಿಯಾ

ಕೆಫೇಟೇರಿಯಾದಲ್ಲಿ ಒಬ್ಬಳೇ ಇದ್ದಳು ಲಿಜಾ ಟೇಬಲ್ ಮುಂದೆ
ಕಾಫಿಗೆ ಹೇಳಿ ಸಿಗರೇಟು ಸೇದುತ್ತ
ಬಿಳಿಚಿದ ಕೈಬೆರಳುಗಳಿಂದ ಸನ್ನೆ ಮಾಡಿದಳು
ಹೋಗಿ ಅವಳ ಬಳಿ ಕುಳಿತೆ ನಕ್ಕಳು ಮೆಲ್ಲನೆ
ಸುಮ್ಮನೆ ಏನೇನೋ ಹೇಳಿದಳು ಈಗೀಗ
ಏಕೆ ದೂರಾ ಎಂದು ಕೇಳಿದ್ದಕ್ಕೆ ಕೆಲಸಾ ಅ೦ದೆ ಜೋಲುಮುಖ ಮಾಡಿ

ಮೂರು ತಿಂಗಳು ಎಂದಳು ಸಿಗರೇಟು ಹಚ್ಚಿ
ಹೂಂ ಎಂದೆ ತುಟಿಗಳೆಡೆಯಿಂದ
ಜಾಕಿಯ ಕೆಲಸ ಎಂದಳು ಹೊಗೆರಿಂಗು ಬಿಟ್ಟೆ
ಜಾಕಿಗೆ ಒಂದು ಬೇಬಿ ಬೇಕಂತೆ ಇಷ್ಟು ವರ್ಷದ ಮೇಲೆ
ಎಂದಳು ಮಜಾ ಅಂದೆ ಆಶ್ಚರ್ಯದಿಂದ ನೋಡಿದಳು
ಬೇರೇನೊ ನೆನಪಾಯ್ತು ಲಿಜಾ ಅಂದೆ

ಹೊರಗೆ ಮಳೆ ಬೀಳುತ್ತಿತ್ತು ಚಳಿಗಾಳಿ ಲಿಜಾಳ
ಸಣ್ಣಕೊಡೆಯಡಿಯಲ್ಲಿ ನಡೆದೆವು ಓಣಿದೀಪಗಳ ಕೆಳಗೆ
ಅವಳ ಸೊ೦ಟ ಬಳಸಿದೆ ಚಳಿ ಅಲ್ಲ ಎಂದಳು
ಅವಳ ಮೂರು ತಿಂಗಳ ಹೊಟ್ಟೆ ಮುಟ್ಟಿ ನೋಡಿದೆ
ಜಾಕಿಗೆ ಸೆನ್ಸ್‌ ಇಲ್ಲ ಎಂದಳು

ಲಿಜಾ ಬಾಗಿಲು ತೆರೆದು ಬಾತ್ ರೂಮಿಗೆ ಹೋಗಿ
ಸ್ಕರ್ಟ್‌ ಕಳಚಿ ನೈಟ್ ಗೌನು ಹಾಕಿ ಬಂದಳು
ಮಂಚದ ಮೇಲೆ ಕುಸಿದೆ ಪರಿಚಿತ ಹೆಣ್ಣ
ಪರಿಚಿತ ಹಾಸಿಗೆಯ ಪರಿಚಿತ ಬೆವರ ವಾಸನೆ ಈಗ
ಹೊಟ್ಟೆಯೊಳಗೆ ಕಪ್ಪೆಯ ಹಾಗೆ ನುಸುಳಿತು
ಆಕಳಿಸಿ ಮೈಮುರಿದು ಇದೀಗ ಎಲ್ಲಾ ಕಷ್ಟ
ಈ ಬೇಬಿಯ ಸಮಸ್ಯೆ ಎಂದಳು ಅಂಗಾತ ಮಲಗಿ
ಅಗ್ಗ ಪೌಡರಿನ ನಾಥ ಬುರುಗಿನ ನಾಧ ಡುಬ್ಬದ ಹಾಗೆ
ಬೆಳೆದಿತ್ತು ಈ ಬೇಸರ ಬೇರೆ ಗೊಣಗಿದೆ
ಹೂಂ ಎಂದು ಕೇಳಿದಳು ಕರಗಿಸು ಅಂದೆ
ಇಷ್ಟರ ಮೇಲೆ ಸ್ವಲ್ಪ ಕಷ್ಟ ಮೈಗೆ ತೊಂದರೆ ಎಂದಳು
ಈ ಚಕ್ರಬಿಂಬದ ಸುತ್ತ ಸುಳಿಯಲಾರೆ
ಇದನ್ನು ಭೇದಿಸಲಾರೆ
ನಿರ್ವೀರ್ಯ ನಾನು ಇದೆಲ್ಲಾ ಕೆಟ್ಟ ವಾಕರಿಕೆ
ಬೇಸರ ಬರಿಸುತ್ತದೆ ನನಗೆ-ಪ್ಲೀಸ್ ಗೌನು ಕೆಳಕ್ಕೆ ಸರಿಸು
ಇಲ್ಲಾ ಲೈಟು ಆರಿಸು ಲಿಜಾ ಅಂದೆ
ಏನೇನೊ ಕನವರಿಸುತ್ತೀರಿ ನಿದ್ದೆಯ ಮತ್ತು
ಸ್ವಲ್ಪ ಮಜಾ ಇರಲಿ ಎಂದು ನೆನೆದೆ ಸುಮ್ಮನೆ ಮಲಗಿ
ಈ ಚಳಿಗೆ ಎಂದು ನನ್ನ ಒಳಕ್ಕೆ ಸೆಳೆದು
ತಲೆತಡವಿ ಮಲಗಿದಳು-ಚಡಪಡಿಸಲಾರದೆ
ಬಿದ್ದೆ ಬೆಳಗಾಗುವುದನ್ನೆ ಕಾದು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...