Home / ಕವನ / ಕವಿತೆ / ನಾಸಿಯಾ

ನಾಸಿಯಾ

ಕೆಫೇಟೇರಿಯಾದಲ್ಲಿ ಒಬ್ಬಳೇ ಇದ್ದಳು ಲಿಜಾ ಟೇಬಲ್ ಮುಂದೆ
ಕಾಫಿಗೆ ಹೇಳಿ ಸಿಗರೇಟು ಸೇದುತ್ತ
ಬಿಳಿಚಿದ ಕೈಬೆರಳುಗಳಿಂದ ಸನ್ನೆ ಮಾಡಿದಳು
ಹೋಗಿ ಅವಳ ಬಳಿ ಕುಳಿತೆ ನಕ್ಕಳು ಮೆಲ್ಲನೆ
ಸುಮ್ಮನೆ ಏನೇನೋ ಹೇಳಿದಳು ಈಗೀಗ
ಏಕೆ ದೂರಾ ಎಂದು ಕೇಳಿದ್ದಕ್ಕೆ ಕೆಲಸಾ ಅ೦ದೆ ಜೋಲುಮುಖ ಮಾಡಿ

ಮೂರು ತಿಂಗಳು ಎಂದಳು ಸಿಗರೇಟು ಹಚ್ಚಿ
ಹೂಂ ಎಂದೆ ತುಟಿಗಳೆಡೆಯಿಂದ
ಜಾಕಿಯ ಕೆಲಸ ಎಂದಳು ಹೊಗೆರಿಂಗು ಬಿಟ್ಟೆ
ಜಾಕಿಗೆ ಒಂದು ಬೇಬಿ ಬೇಕಂತೆ ಇಷ್ಟು ವರ್ಷದ ಮೇಲೆ
ಎಂದಳು ಮಜಾ ಅಂದೆ ಆಶ್ಚರ್ಯದಿಂದ ನೋಡಿದಳು
ಬೇರೇನೊ ನೆನಪಾಯ್ತು ಲಿಜಾ ಅಂದೆ

ಹೊರಗೆ ಮಳೆ ಬೀಳುತ್ತಿತ್ತು ಚಳಿಗಾಳಿ ಲಿಜಾಳ
ಸಣ್ಣಕೊಡೆಯಡಿಯಲ್ಲಿ ನಡೆದೆವು ಓಣಿದೀಪಗಳ ಕೆಳಗೆ
ಅವಳ ಸೊ೦ಟ ಬಳಸಿದೆ ಚಳಿ ಅಲ್ಲ ಎಂದಳು
ಅವಳ ಮೂರು ತಿಂಗಳ ಹೊಟ್ಟೆ ಮುಟ್ಟಿ ನೋಡಿದೆ
ಜಾಕಿಗೆ ಸೆನ್ಸ್‌ ಇಲ್ಲ ಎಂದಳು

ಲಿಜಾ ಬಾಗಿಲು ತೆರೆದು ಬಾತ್ ರೂಮಿಗೆ ಹೋಗಿ
ಸ್ಕರ್ಟ್‌ ಕಳಚಿ ನೈಟ್ ಗೌನು ಹಾಕಿ ಬಂದಳು
ಮಂಚದ ಮೇಲೆ ಕುಸಿದೆ ಪರಿಚಿತ ಹೆಣ್ಣ
ಪರಿಚಿತ ಹಾಸಿಗೆಯ ಪರಿಚಿತ ಬೆವರ ವಾಸನೆ ಈಗ
ಹೊಟ್ಟೆಯೊಳಗೆ ಕಪ್ಪೆಯ ಹಾಗೆ ನುಸುಳಿತು
ಆಕಳಿಸಿ ಮೈಮುರಿದು ಇದೀಗ ಎಲ್ಲಾ ಕಷ್ಟ
ಈ ಬೇಬಿಯ ಸಮಸ್ಯೆ ಎಂದಳು ಅಂಗಾತ ಮಲಗಿ
ಅಗ್ಗ ಪೌಡರಿನ ನಾಥ ಬುರುಗಿನ ನಾಧ ಡುಬ್ಬದ ಹಾಗೆ
ಬೆಳೆದಿತ್ತು ಈ ಬೇಸರ ಬೇರೆ ಗೊಣಗಿದೆ
ಹೂಂ ಎಂದು ಕೇಳಿದಳು ಕರಗಿಸು ಅಂದೆ
ಇಷ್ಟರ ಮೇಲೆ ಸ್ವಲ್ಪ ಕಷ್ಟ ಮೈಗೆ ತೊಂದರೆ ಎಂದಳು
ಈ ಚಕ್ರಬಿಂಬದ ಸುತ್ತ ಸುಳಿಯಲಾರೆ
ಇದನ್ನು ಭೇದಿಸಲಾರೆ
ನಿರ್ವೀರ್ಯ ನಾನು ಇದೆಲ್ಲಾ ಕೆಟ್ಟ ವಾಕರಿಕೆ
ಬೇಸರ ಬರಿಸುತ್ತದೆ ನನಗೆ-ಪ್ಲೀಸ್ ಗೌನು ಕೆಳಕ್ಕೆ ಸರಿಸು
ಇಲ್ಲಾ ಲೈಟು ಆರಿಸು ಲಿಜಾ ಅಂದೆ
ಏನೇನೊ ಕನವರಿಸುತ್ತೀರಿ ನಿದ್ದೆಯ ಮತ್ತು
ಸ್ವಲ್ಪ ಮಜಾ ಇರಲಿ ಎಂದು ನೆನೆದೆ ಸುಮ್ಮನೆ ಮಲಗಿ
ಈ ಚಳಿಗೆ ಎಂದು ನನ್ನ ಒಳಕ್ಕೆ ಸೆಳೆದು
ತಲೆತಡವಿ ಮಲಗಿದಳು-ಚಡಪಡಿಸಲಾರದೆ
ಬಿದ್ದೆ ಬೆಳಗಾಗುವುದನ್ನೆ ಕಾದು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...