Home / ಕವನ / ಹನಿಗವನ / ಅನಾಮಿಕಗಳು

ಅನಾಮಿಕಗಳು

ಒಮ್ಮೊಮ್ಮೆ
ಎವೆಕಳಚಿ ಕೂರುತ್ತೇನೆ ಒಬ್ಬನೇ.
ನಿಧಾನ ಇಳಿಯುತ್ತೇನೆ :
ಅಪ್ಪನ ತಲೆ
ಅಜ್ಜನ ಎದೆ
ಮಾಸಿದ ಮುಖಗಳ ಕಟಿ ತೊಡೆ ನಡೆ
ಬಹಳ ಬೇಕಾಗಿಯೂ
ತಿಳಿಯದ ಹೆಡೆ ;
ಇಳಿ ಇಳಿಯುತ್ತ
ಸದ್ದಿಲ್ಲದೆ ಸುತ್ತ ಹುತ್ತ ಏಳುತ್ತ
ಬೆಳಕು ತೊದಲುತ್ತದೆ
ನೆನಪು ಮಾಸುತ್ತದೆ
ಕತ್ತಲ ರಾಡಿ
ಉಗ್ಗಿ ಹಾಯುತ್ತದೆ.
ಈಗ
ತೆವಳುವುದೆ ಸರಿ
ಮರವು ಮಂಪರಿನ
ತಳಕ್ಕೆ, ಅಲ್ಲ,
ಇನ್ನೂ ಕೆಳಕ್ಕೆ :
ದನಿ ಜಿಗಿಯದ ಪಿಸು ಉಸುರಿನ
ಹೊಲಕ್ಕೆ.

ಬರುತ್ತಿವೆ ಮೇಲೆ
ನಿಧಾನ ಉಬ್ಬುವ ದಿಬ್ಬಗಳು
ಮಬ್ಬಿನವು,
ಹಾಗೇ ಕೊರಗಿನಲ್ಲಿ
ಗಾತ್ರ ಸಮೆಸಮೆದು

ಅರರೇ
ಗಜ್ಜುಗ ಗಾತ್ರದ ಬೀಜಗಳು;
ಆಕಾರದ ಬಿಗಿತಕ್ಕೆ
ಇಂದ್ರಿಯ ಜಿಗಿತಕ್ಕೆ
ಒಗ್ಗದ ಬಗ್ಗದ
ಕಾಮರೂಪಿ ತಾಮಸ ಕುಡಿಗಳು ;
ದಟ್ಟ ಬೆಳಕನ್ನ ಬೇಡುವ
ಕರಿಗೋಡೆಗೆ ತಲೆ ತೀಡುವ
ಕಿರುಗತ್ತಲೆಗಳು
ಭಾಷೆ ಹೊದೆಯದ ಬೆತ್ತಲೆಗಳು;
ದರಿ ಪೊದೆಗಳ
ಒಡಲಿನಲ್ಲಿ ಪಿಸುಗುಟ್ಟುವ
ಹಸಿ ಬೆದೆಗಳು
ಹೊಸ ಕುದಿಗಳು.

ಇವು
ಮೆತ್ತಗೆ ಬಿಚ್ಚಿ ಸುತ್ತಿದ ಸಿಂಬಿ
ಸರಸರ ಪರಪರ
ಹುಸಿನಿಜಗಳ ನಂಬಿ
ಹುದುಗಿ ಸರಿಯುವ ಹಾವು ನೋವುಗಳು
ಕಾವುಗಳು
ಯಾವ ಏಟಿಗೆ ಎದ್ದವೋ
ಈ ಬಾವುಗಳು?

ಒಂದೆರಡನ್ನು ಹಿಡಿದು,
ಹಗಲಿಗೆ ಎದ್ದೆ
ಎನ್ನುವ ಮೊದಲೇ ಜಾರಿ
ಕೈಯಿಂದ ಬಿದ್ದುವು.
ಸಂದಿತನಕ ಬಂದಿದ್ದಾಗ
ನೋಡಿದೆನಲ್ಲ.
ರಾಡಿ ಬೆಳಕಲ್ಲಿ ಕೆಂಚು ಹಪ್ಪಳದಂತೆ
ಕೊಂಚ ತುದಿ ಕಂಡವು.

ಎಂಥದೋ ದೆವ್ವದ ಮರಿಗಳ?
ಎಂಥದೋ ದೈವ ಹೆತ್ತವ?
ಅರ್ಥವಾಗದು.
ಹುಟ್ಟದ ಕೂಸಿನ ಮೈ ಮುದ್ರೆ
ಗುರುತಿಸುವುದು ಹೇಗೆ?
ಮತ್ತೆ ಪುಳಕ್ಕನೆ ಮುಳುಗಿದವು
ತಳದಲ್ಲಿ,
ಕತ್ತಲ
ಕೊಳದಲ್ಲಿ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...