ಅನಾಮಿಕಗಳು

ಒಮ್ಮೊಮ್ಮೆ
ಎವೆಕಳಚಿ ಕೂರುತ್ತೇನೆ ಒಬ್ಬನೇ.
ನಿಧಾನ ಇಳಿಯುತ್ತೇನೆ :
ಅಪ್ಪನ ತಲೆ
ಅಜ್ಜನ ಎದೆ
ಮಾಸಿದ ಮುಖಗಳ ಕಟಿ ತೊಡೆ ನಡೆ
ಬಹಳ ಬೇಕಾಗಿಯೂ
ತಿಳಿಯದ ಹೆಡೆ ;
ಇಳಿ ಇಳಿಯುತ್ತ
ಸದ್ದಿಲ್ಲದೆ ಸುತ್ತ ಹುತ್ತ ಏಳುತ್ತ
ಬೆಳಕು ತೊದಲುತ್ತದೆ
ನೆನಪು ಮಾಸುತ್ತದೆ
ಕತ್ತಲ ರಾಡಿ
ಉಗ್ಗಿ ಹಾಯುತ್ತದೆ.
ಈಗ
ತೆವಳುವುದೆ ಸರಿ
ಮರವು ಮಂಪರಿನ
ತಳಕ್ಕೆ, ಅಲ್ಲ,
ಇನ್ನೂ ಕೆಳಕ್ಕೆ :
ದನಿ ಜಿಗಿಯದ ಪಿಸು ಉಸುರಿನ
ಹೊಲಕ್ಕೆ.

ಬರುತ್ತಿವೆ ಮೇಲೆ
ನಿಧಾನ ಉಬ್ಬುವ ದಿಬ್ಬಗಳು
ಮಬ್ಬಿನವು,
ಹಾಗೇ ಕೊರಗಿನಲ್ಲಿ
ಗಾತ್ರ ಸಮೆಸಮೆದು

ಅರರೇ
ಗಜ್ಜುಗ ಗಾತ್ರದ ಬೀಜಗಳು;
ಆಕಾರದ ಬಿಗಿತಕ್ಕೆ
ಇಂದ್ರಿಯ ಜಿಗಿತಕ್ಕೆ
ಒಗ್ಗದ ಬಗ್ಗದ
ಕಾಮರೂಪಿ ತಾಮಸ ಕುಡಿಗಳು ;
ದಟ್ಟ ಬೆಳಕನ್ನ ಬೇಡುವ
ಕರಿಗೋಡೆಗೆ ತಲೆ ತೀಡುವ
ಕಿರುಗತ್ತಲೆಗಳು
ಭಾಷೆ ಹೊದೆಯದ ಬೆತ್ತಲೆಗಳು;
ದರಿ ಪೊದೆಗಳ
ಒಡಲಿನಲ್ಲಿ ಪಿಸುಗುಟ್ಟುವ
ಹಸಿ ಬೆದೆಗಳು
ಹೊಸ ಕುದಿಗಳು.

ಇವು
ಮೆತ್ತಗೆ ಬಿಚ್ಚಿ ಸುತ್ತಿದ ಸಿಂಬಿ
ಸರಸರ ಪರಪರ
ಹುಸಿನಿಜಗಳ ನಂಬಿ
ಹುದುಗಿ ಸರಿಯುವ ಹಾವು ನೋವುಗಳು
ಕಾವುಗಳು
ಯಾವ ಏಟಿಗೆ ಎದ್ದವೋ
ಈ ಬಾವುಗಳು?

ಒಂದೆರಡನ್ನು ಹಿಡಿದು,
ಹಗಲಿಗೆ ಎದ್ದೆ
ಎನ್ನುವ ಮೊದಲೇ ಜಾರಿ
ಕೈಯಿಂದ ಬಿದ್ದುವು.
ಸಂದಿತನಕ ಬಂದಿದ್ದಾಗ
ನೋಡಿದೆನಲ್ಲ.
ರಾಡಿ ಬೆಳಕಲ್ಲಿ ಕೆಂಚು ಹಪ್ಪಳದಂತೆ
ಕೊಂಚ ತುದಿ ಕಂಡವು.

ಎಂಥದೋ ದೆವ್ವದ ಮರಿಗಳ?
ಎಂಥದೋ ದೈವ ಹೆತ್ತವ?
ಅರ್ಥವಾಗದು.
ಹುಟ್ಟದ ಕೂಸಿನ ಮೈ ಮುದ್ರೆ
ಗುರುತಿಸುವುದು ಹೇಗೆ?
ಮತ್ತೆ ಪುಳಕ್ಕನೆ ಮುಳುಗಿದವು
ತಳದಲ್ಲಿ,
ಕತ್ತಲ
ಕೊಳದಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಗಮ್ಮಾ ಆಡೋದು ಹೋಲಿ
Next post ಕವಿತೆ ಇದು

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…