Home / ಕವನ / ಹನಿಗವನ / ಅನಾಮಿಕಗಳು

ಅನಾಮಿಕಗಳು

ಒಮ್ಮೊಮ್ಮೆ
ಎವೆಕಳಚಿ ಕೂರುತ್ತೇನೆ ಒಬ್ಬನೇ.
ನಿಧಾನ ಇಳಿಯುತ್ತೇನೆ :
ಅಪ್ಪನ ತಲೆ
ಅಜ್ಜನ ಎದೆ
ಮಾಸಿದ ಮುಖಗಳ ಕಟಿ ತೊಡೆ ನಡೆ
ಬಹಳ ಬೇಕಾಗಿಯೂ
ತಿಳಿಯದ ಹೆಡೆ ;
ಇಳಿ ಇಳಿಯುತ್ತ
ಸದ್ದಿಲ್ಲದೆ ಸುತ್ತ ಹುತ್ತ ಏಳುತ್ತ
ಬೆಳಕು ತೊದಲುತ್ತದೆ
ನೆನಪು ಮಾಸುತ್ತದೆ
ಕತ್ತಲ ರಾಡಿ
ಉಗ್ಗಿ ಹಾಯುತ್ತದೆ.
ಈಗ
ತೆವಳುವುದೆ ಸರಿ
ಮರವು ಮಂಪರಿನ
ತಳಕ್ಕೆ, ಅಲ್ಲ,
ಇನ್ನೂ ಕೆಳಕ್ಕೆ :
ದನಿ ಜಿಗಿಯದ ಪಿಸು ಉಸುರಿನ
ಹೊಲಕ್ಕೆ.

ಬರುತ್ತಿವೆ ಮೇಲೆ
ನಿಧಾನ ಉಬ್ಬುವ ದಿಬ್ಬಗಳು
ಮಬ್ಬಿನವು,
ಹಾಗೇ ಕೊರಗಿನಲ್ಲಿ
ಗಾತ್ರ ಸಮೆಸಮೆದು

ಅರರೇ
ಗಜ್ಜುಗ ಗಾತ್ರದ ಬೀಜಗಳು;
ಆಕಾರದ ಬಿಗಿತಕ್ಕೆ
ಇಂದ್ರಿಯ ಜಿಗಿತಕ್ಕೆ
ಒಗ್ಗದ ಬಗ್ಗದ
ಕಾಮರೂಪಿ ತಾಮಸ ಕುಡಿಗಳು ;
ದಟ್ಟ ಬೆಳಕನ್ನ ಬೇಡುವ
ಕರಿಗೋಡೆಗೆ ತಲೆ ತೀಡುವ
ಕಿರುಗತ್ತಲೆಗಳು
ಭಾಷೆ ಹೊದೆಯದ ಬೆತ್ತಲೆಗಳು;
ದರಿ ಪೊದೆಗಳ
ಒಡಲಿನಲ್ಲಿ ಪಿಸುಗುಟ್ಟುವ
ಹಸಿ ಬೆದೆಗಳು
ಹೊಸ ಕುದಿಗಳು.

ಇವು
ಮೆತ್ತಗೆ ಬಿಚ್ಚಿ ಸುತ್ತಿದ ಸಿಂಬಿ
ಸರಸರ ಪರಪರ
ಹುಸಿನಿಜಗಳ ನಂಬಿ
ಹುದುಗಿ ಸರಿಯುವ ಹಾವು ನೋವುಗಳು
ಕಾವುಗಳು
ಯಾವ ಏಟಿಗೆ ಎದ್ದವೋ
ಈ ಬಾವುಗಳು?

ಒಂದೆರಡನ್ನು ಹಿಡಿದು,
ಹಗಲಿಗೆ ಎದ್ದೆ
ಎನ್ನುವ ಮೊದಲೇ ಜಾರಿ
ಕೈಯಿಂದ ಬಿದ್ದುವು.
ಸಂದಿತನಕ ಬಂದಿದ್ದಾಗ
ನೋಡಿದೆನಲ್ಲ.
ರಾಡಿ ಬೆಳಕಲ್ಲಿ ಕೆಂಚು ಹಪ್ಪಳದಂತೆ
ಕೊಂಚ ತುದಿ ಕಂಡವು.

ಎಂಥದೋ ದೆವ್ವದ ಮರಿಗಳ?
ಎಂಥದೋ ದೈವ ಹೆತ್ತವ?
ಅರ್ಥವಾಗದು.
ಹುಟ್ಟದ ಕೂಸಿನ ಮೈ ಮುದ್ರೆ
ಗುರುತಿಸುವುದು ಹೇಗೆ?
ಮತ್ತೆ ಪುಳಕ್ಕನೆ ಮುಳುಗಿದವು
ತಳದಲ್ಲಿ,
ಕತ್ತಲ
ಕೊಳದಲ್ಲಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...