Home / ಕವನ / ಕವಿತೆ / ಬೆಳಕು ಮೂಡಿದ ಬಂಗಾಳ

ಬೆಳಕು ಮೂಡಿದ ಬಂಗಾಳ

ಬಂಗಾಳಕ್ಕೆ ಬಾಲ್ಯದಿಂದ
ಬೆಳಕಿನ ಕನಸು,
ಎಳೆದ ಗೆರೆ, ಬರೆದ ಅಕ್ಷರ, ಹರಿದ ದನಿ
ಎಲ್ಲದರಲ್ಲಿ
ಅದನ್ನೇ ಅರಸುವ ಮನಸು,
ಆಕಾಶದಂಗಳದಲ್ಲಿ
ಬಿಕ್ಕಿದ ಅಕ್ಕಿಕಾಳನ್ನೆಲ್ಲ
ಹೆಕ್ಕಿ ತರುವ ಹಬ್ಬಯಕೆ
ಈ ಹಕ್ಕಿಗೆ,
ಹೀಗಿದ್ದೂ ಅದನ್ನು
ಸುತ್ತಿ ನಿಂತ ಪಂಜರ
ಬಿರುಸು.

ಆದರೆ
ಮಾಯದ ಬಯಕೆ ಸಾಯುವುದಿಲ್ಲ,
ಬಣ್ಣ ಬಣ್ಣದ
ರಾಗ ನೇಯುತ್ತದೆ;
ನೋವು ನರಳು
ಕೋಪ ಕೆರಳು
ಬಿಗಿಯುವ ಉರುಳು ಬೆರಳು ಎಲ್ಲ
ಪೀತಾಂಬರ ಪೇಟೆ ತೆರೆಯುತ್ತವೆ;
ಆಸೆ ನೆಲವಾಗುತ್ತದೆ
ಹಾಸಿ ಜಲವಾಗುತ್ತದೆ
ಬೀಸಿ ಎಲರಾಗುತ್ತದೆ
ಉಣ್ಣುವ ಅನ್ನದಲ್ಲಿ ಸೇರಿ
ನಾಡಿನ ಉಸಿರಾಗುತ್ತದೆ.
ಆಗ ಪ್ರಾಣಕ್ಕೆ ಕವಡೆ ಬೆಲೆ
ಭಯ ದೈನ್ಯ ಲೋಭದಿಂದ
ಹಠಾತ್ ಬಿಡುಗಡೆ
ಸಾವಿನ ಬಾವಿಗಂಟಲಿಗೆ ಸುರಿದು ಹೋಗುತ್ತದೆ
ಪ್ರಾಣದ ನಿರರ್ಗಳ ಅಮೃತಧಾರೆ.

ಮೊನ್ನೆ
ಋತು ಕೆರಳಿತು ಬಂಗಾಳದಲ್ಲಿ.
ಮಾಗಿಯ ಕೊರೆತದಲ್ಲಿ
ಎಲ್ಲ ಕಡೆ ಬೋಳುಮರ, ಬಂಗಾಳದಲ್ಲಿ ಚಿಗುರು
ಕರುಳಿರಿಯುವ ಚಳಿಗೆ
ಭೂಗೋಳ ರಗ್ಗು ಹೊದ್ದಿದ್ದಾಗ
ಬಂಗಾಳಿಯ ಮೈಯಲ್ಲಿ ಕೆಂಪು ಬೆವರು;
ಹುಡುಗರ ಬಾಳೆಮೈ
ಹೂ ಬಿಟ್ಟ ಮುತ್ತುಗ,
ಹೆಣ್ಣಿನ ಮಾನ ಮೈ
ಕೀಚಕ ಕ್ರೀಡೆಗೆ ಗಜ್ಜುಗ,
ಎಂದಿನದೋ ಕಿಡಿ ಕೆರಳಿ
ದಳ ದಳ ದಳ ದಳ ಅರಳಿ
ಮೊಹರಂ ಕುಂಡ
ಭಾರಿ ಹೊಗೆ ಹಬ್ಬಿ
ಜಗತ್ತನ್ನೇ ತಬ್ಬಿ
ಪಶ್ಚಿಮದಲ್ಲಿ ಕೊಂಚ ಗೊಂದಲ
ಬೆಳಿಗ್ಗೆ ಎಲ್ಲ ಎದ್ದು
ಕಣ್ಣುಜ್ಜಿ ನೋಡುವಾಗ
ನಗುತ್ತಿದೆ ಪೂರ್ವದಲ್ಲಿ
ಬೆಳಕು ಮುಡಿದ ಬಂಗಾಳ *
*****
* ಬಾಂಗ್ಲಾದೇಶ ಸ್ವತಂತ್ರವಾದ ದಿನ ಬರೆದದ್ದು

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...