Home / ಕವನ / ಕವಿತೆ / ಬೆಳಕು ಮೂಡಿದ ಬಂಗಾಳ

ಬೆಳಕು ಮೂಡಿದ ಬಂಗಾಳ

ಬಂಗಾಳಕ್ಕೆ ಬಾಲ್ಯದಿಂದ
ಬೆಳಕಿನ ಕನಸು,
ಎಳೆದ ಗೆರೆ, ಬರೆದ ಅಕ್ಷರ, ಹರಿದ ದನಿ
ಎಲ್ಲದರಲ್ಲಿ
ಅದನ್ನೇ ಅರಸುವ ಮನಸು,
ಆಕಾಶದಂಗಳದಲ್ಲಿ
ಬಿಕ್ಕಿದ ಅಕ್ಕಿಕಾಳನ್ನೆಲ್ಲ
ಹೆಕ್ಕಿ ತರುವ ಹಬ್ಬಯಕೆ
ಈ ಹಕ್ಕಿಗೆ,
ಹೀಗಿದ್ದೂ ಅದನ್ನು
ಸುತ್ತಿ ನಿಂತ ಪಂಜರ
ಬಿರುಸು.

ಆದರೆ
ಮಾಯದ ಬಯಕೆ ಸಾಯುವುದಿಲ್ಲ,
ಬಣ್ಣ ಬಣ್ಣದ
ರಾಗ ನೇಯುತ್ತದೆ;
ನೋವು ನರಳು
ಕೋಪ ಕೆರಳು
ಬಿಗಿಯುವ ಉರುಳು ಬೆರಳು ಎಲ್ಲ
ಪೀತಾಂಬರ ಪೇಟೆ ತೆರೆಯುತ್ತವೆ;
ಆಸೆ ನೆಲವಾಗುತ್ತದೆ
ಹಾಸಿ ಜಲವಾಗುತ್ತದೆ
ಬೀಸಿ ಎಲರಾಗುತ್ತದೆ
ಉಣ್ಣುವ ಅನ್ನದಲ್ಲಿ ಸೇರಿ
ನಾಡಿನ ಉಸಿರಾಗುತ್ತದೆ.
ಆಗ ಪ್ರಾಣಕ್ಕೆ ಕವಡೆ ಬೆಲೆ
ಭಯ ದೈನ್ಯ ಲೋಭದಿಂದ
ಹಠಾತ್ ಬಿಡುಗಡೆ
ಸಾವಿನ ಬಾವಿಗಂಟಲಿಗೆ ಸುರಿದು ಹೋಗುತ್ತದೆ
ಪ್ರಾಣದ ನಿರರ್ಗಳ ಅಮೃತಧಾರೆ.

ಮೊನ್ನೆ
ಋತು ಕೆರಳಿತು ಬಂಗಾಳದಲ್ಲಿ.
ಮಾಗಿಯ ಕೊರೆತದಲ್ಲಿ
ಎಲ್ಲ ಕಡೆ ಬೋಳುಮರ, ಬಂಗಾಳದಲ್ಲಿ ಚಿಗುರು
ಕರುಳಿರಿಯುವ ಚಳಿಗೆ
ಭೂಗೋಳ ರಗ್ಗು ಹೊದ್ದಿದ್ದಾಗ
ಬಂಗಾಳಿಯ ಮೈಯಲ್ಲಿ ಕೆಂಪು ಬೆವರು;
ಹುಡುಗರ ಬಾಳೆಮೈ
ಹೂ ಬಿಟ್ಟ ಮುತ್ತುಗ,
ಹೆಣ್ಣಿನ ಮಾನ ಮೈ
ಕೀಚಕ ಕ್ರೀಡೆಗೆ ಗಜ್ಜುಗ,
ಎಂದಿನದೋ ಕಿಡಿ ಕೆರಳಿ
ದಳ ದಳ ದಳ ದಳ ಅರಳಿ
ಮೊಹರಂ ಕುಂಡ
ಭಾರಿ ಹೊಗೆ ಹಬ್ಬಿ
ಜಗತ್ತನ್ನೇ ತಬ್ಬಿ
ಪಶ್ಚಿಮದಲ್ಲಿ ಕೊಂಚ ಗೊಂದಲ
ಬೆಳಿಗ್ಗೆ ಎಲ್ಲ ಎದ್ದು
ಕಣ್ಣುಜ್ಜಿ ನೋಡುವಾಗ
ನಗುತ್ತಿದೆ ಪೂರ್ವದಲ್ಲಿ
ಬೆಳಕು ಮುಡಿದ ಬಂಗಾಳ *
*****
* ಬಾಂಗ್ಲಾದೇಶ ಸ್ವತಂತ್ರವಾದ ದಿನ ಬರೆದದ್ದು

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...