ಗುಣಾಕಾರಿ

ಯಾವುದು ಇಲ್ಲವೆಂದು ನಾನು ಕೂಗಿದ್ದು?
ಪಬ್ಲಿಕ್ಕಾಗಿ ಕೂಗಿ, ರಣಾರಣ ರೇಗಿ
ಎಲ್ಲರೆದುರು ಬೀಗಿದ್ದು?
“ನನ್ನ ಬುದ್ಧಿ ನನ್ನ ಉತ್ತರ ಮುಖಿ,
ಅಳೆದ ಸತ್ಯ ದಡ ದೂರದ ಮುಳುಗು ತತ್ವವಾದರೂ ಸರಿ
ಅದರಲ್ಲೇ ಪೂರ್ತಿ ಸುಖಿ,
ನೋವಿಗೊಂದು ರಕ್ಷಯೆಂದು ನಂಬಿ ಬಾಳಲೇ” ಎಂದು
ಯಾಕಾಗಿ ನಂಬುವವರನ್ನು ಗುದ್ದಿ ಬಂದದ್ದು?
ತರ್ಕದಲ್ಲಿ ನೆಲ ಹೊರಳಿಸುತ್ತೇನೆ,
ಹೂವರಳಿಸುತ್ತೇನೆ
ನದಿ ಮರಳಿಸುತ್ತೇನೆ
ಏನು ಅಂಕೆ ತಪ್ಪಿತಾ ಎಲ್ಲ?” –
ಎಂದು ಅಬ್ಬರಿಸಿ ಮಲಗಿದ್ದು?

ನಡುರಾತ್ರಿ ಏನೋ ಮಂಪರ
ದೀಪಕಚ್ಚಿದ ರೂಮಿನಲ್ಲಿ ಕಿರಿಬೆಳಕಿನೆಚ್ಚರ;
ಸುತ್ತ ನೀರು
ನಡುಗಡ್ಡೆ ಮನೆ
ತಳಸೇರಿದ್ದ ದೆವ್ವಭೂತ ಏಣಿಹತ್ತುವ ಶಬ್ದ
ಕಿಲಕಿಲಲಹೋ ಕೇಕೆ
ಮೂಳೆ ಕೈ ಕಾಲುಗಳ ತಾಳಲಯದಲ್ಲಿ ತೂಗಿ
ಸದ್ಯಕ್ಕೇ ಬಂದುವು;
ಎದೆ ಕಲ್ಲುಮಾಡಿ
‘ಗೊತ್ತು ಹೋಗಿ ಪ್ರಾಚೀನಗಳೆ’ ಎಂದು ನಕ್ಕೆ
ಬಂದವರು
‘ಬಂದಿದ್ದೇವೆ ನಾವು
ಪಿತಾಮಹರು’ – ಎಂದರು.

ತಿಥಿ ಮಾಡಿದ್ದೇನೆ
ಜನಿವಾರ ಎಡಕ್ಕೆ ಹಾಕಿ ಸ್ತುತಿಮಾಡಿದ್ದೇನೆ. ಆದರೂ
ಮುಖದಲ್ಲಿ ನೀರೊಡೆಯುವ ದೈನ್ಯ
‘ಇಟ್ಟುಕೋ’ ಎಂದು ಕರುಳಬಳ್ಳಿಯಲ್ಲಿ ಬರೆದರು.
ತರ್ಕಶಾಸ್ತ್ರ ತೋರಿಸಿ
‘ಯಾಕೆ ಕಾಡುತ್ತೀರಿ ಹೀಗೆ? ಎಲ್ಲಿದೆ ಶ್ರದ್ದೆ?
ಗುಣಾಕಾರ ತಿಳಿಯದ? ಮನೆ ಬಿಡಿ’ ಎಂದು
ಅಟ್ಟಿ ಅಗುಳಿ ಹಾಕಿದೆ.
ಅಂತೂ ಸಾಲ ತೀರಿತೋ ಸದ್ಯಕ್ಕೆ?
ಈಗ ನಾನೇ ಪಾಯ
ನಾನೇ ಕಂಬ
ನಾನೇ ಶಿಖರ
ಸಾಗಲಿ ಎಂದೆನೋ-

ದೀಪದ ಕೊಚ್ಚೆಬೆಳಕು ಫಳಾರನೆ ಮಿಂಚಿ
ಎದುರಿನ ಕನ್ನಡಿಯಲ್ಲಿ ಚಿತ್ರ ಉರಿದವು.
ಸೃಷ್ಟಿ-ಪ್ರಳಯ
ಪ್ರಪಂಚದ ಮರಗಳೆಲ್ಲ ಮತ್ತೆ ಮತ್ತೆ ಒಣಗಿ ಚಿಗುರಿದವು
ಪಕ್ಷಿಲೋಕ ಹುಟ್ಟಿ ಸತ್ತು ಹುಟ್ಟಿ ಸತ್ತು ಹುಟ್ಟಿ
ಪ್ರಾಣಿಗಳೆಲ್ಲ ಒಡಲು ಮಗುಚಿದವು
ಎದ್ದು ಅರಚಿದವು.
ನಾಟಿ ಕೊಯಿಲು ಭೇಟಿಯಾಗಿ
ಕೈಕೈ ಹಿಡಿದು
ಕಣ್ಣು ಹೊಡೆದು
ನನ್ನ ಕಡೆ ತಿರುಗಿ ಕೇಳಿದವು
‘ಹೌದಾ, ಎಲ್ಲ ಗುಣಾಕಾರವಾ?’

ಸಮುದ್ರ ತರೆ ತರೆಗೂ ಬಾಯಿ ತೆರೆದು
ಒಡಲೊಳಗಿನ ಅಗಾಧಲೋಕ ಮೈ ಮುರಿದು
ಮಂದರದಂಥ ದನಿ ಮೇಲೆದ್ದು ಅಬ್ಬರಿಸಿತು
‘ಹೌದಾ, ಎಲ್ಲ ಗುಣಾಕಾರವಾ’?

ಗ್ರಹಗಳೆಲ್ಲ ಗತಿಗೆಟ್ಟು ಹಾಯುತ್ತ
ನಕ್ಷತ್ರ ಗಂಗೆಗಳು ಭೀಕರವಾಗಿ ತೂಗುತ್ತ
ಪರ್‍ವತ ಕಕ್ಕಿದ ಉರಿಹೊಳೆ ದಿಕ್ಕು ದಿಕ್ಕಿಂದ ಹರಿದು
ಕಾಲ ಬಳಿಗೆ ಬಂದು ಮೊರೆಯುವ ಮೊದಲೇ
ಚೀರಿ ಎದ್ದು ಓಡಿದೆ,
ಗೂಡೆಲ್ಲ ಕೆದಕಾಡಿ
ಹಾಳು ಸ್ಕೇಲನ್ನು ತಂದು
ನೀರೊಲೆಗೆ ಹಾಕಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತು
Next post ಚಿವೂ ಹಕ್ಕಿ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys