Home / ಕವನ / ಕವಿತೆ / ರಾಮನ ವಿರುದ್ಧ ದೆವ್ವದ ತರ್ಕ

ರಾಮನ ವಿರುದ್ಧ ದೆವ್ವದ ತರ್ಕ

ರಾಮಾಯಣ ಪಾರಾಯಣ
ಮಾಡಿ ಮುಗಿಸಿದ್ದೆ,
ರಾಮನವಮಿಯ ರಾತ್ರಿ.
ರಾಮಚಂದ್ರನ ದಿವ್ಯಬದುಕ ಸ್ಮರಿಸುತ್ತ,
ಅಂಥ ಬಾಳಿನ ಕನಸು ಕೂಡ ಕಾಣದ್ದಕ್ಕೆ
ನನ್ನಂಥ ಪಾಪಿಗಳ ಶಪಿಸಿಕೊಳ್ಳುತ್ತ,
ಒಬ್ಬನೇ ಒಳಕೋಣೆಯಲ್ಲಿ ಕೂತಿದ್ದೆ.
ತೆರೆದ ಕಿಟಿಕಿಯ ಹಾದು ಗಾಳಿ ಬಂದಂತೆ
ತೂರಿ ಬಂದಿತು ಏನೋ ;
ಕೊಳೆತ ಇಲಿವಾಸನೆ ಒಳಗೆ ಹಬ್ಬುತ್ತಿತ್ತು.
ನಿಮಿಷಾರ್ಧದಲ್ಲಿ ನನ್ನೆದುರು ಕುರ್ಚಿಯ ಮೇಲೆ
ನಗುತ್ತ ಕೂತಿತ್ತೊಂದು ನೀಳ ಎಲುಬಿನ ದೆವ್ವ!
“ಮತ್ತೆ ಬಂತಲ್ಲಪ್ಪ, ಕರೆಯದೇ ಕೇಳದೇ
ಹಾಳು ಪ್ರಾರಬ್ಧ!
ಆಡುವಂತಿಲ್ಲ ಅನುಭವಿಸುವಂತಿಲ್ಲ;
ಎಲ್ಲ ತಿಳಿಯುತ್ತದೆ ದರಿದ್ರ ಮುಚ್ಚಿಡುವಂತೇ ಇಲ್ಲ.
ಒದ್ದು ಹೊರ ಹಾಕಿದ್ದರೂ,
ಮರ್ಯಾದೆ ಇದ್ದರೆ ತಾನೆ?
ಮತ್ತೆ ಬಂದಿದೆ, ಶುದ್ಧ ತರಲೆ” ಎನ್ನಿಸಿತು.

“ಯಾಕೆ ನಗುತ್ತೀ” ಎಂದೆ,
ನಾನೂ ನಗುಮುಖ ಮಾಡಿ.
“ನಿನ್ನ ಪೆದ್ದುತನಕ್ಕೆ,
ತೆಗಳಬೇಕಾದವನ ಹಾಡಿ, ಹೊಗಳಿ, ಕುಣಿದು
ಪ್ರಸಾದ ನುಂಗಿದ್ದಕ್ಕೆ,
ತರ್ಕದ ತಕ್ಕಡಿ ಒದ್ದು, ಶ್ರದ್ಧೆಗೆ ಟೋಪಿ ಬಿದ್ದು
ತಿಳಿದರೂ ತಿರುತಿರುಗಿ
ಮೋಸ ಹೋಗುವುದಕ್ಕೆ.
ಮನುಷ್ಯ ಮುಟ್ಠಾಳ ನಿಜ,

ನಿಮ್ಮ ಹೆಸರೆತ್ತಿದರೆ ಸಾಕು ದೆವ್ವಗಳೆಲ್ಲ
ಘೊಳ್ಳೆನ್ನುತ್ತವೆ” ಅಂತ ಖೊಕ್ ಎಂದು ನಕ್ಕಿತು.
“ಮುಚ್ಚು ಬಾಯಿ, ಸಾಕು. ಹೇಗೆ? ಬೊಗಳು” ಅಂತ
ಸಿಟ್ಟಾಗಿ ಕೇಳಿದೆ.
ಅಪ್ಪ ಕೊಟ್ಟಿದ್ದ ಒಂದು ತಪ್ಪು ಮಾತನ್ನೇ ಹಿಡಿದು
ರಾಜ್ಯ ನಡೆಸುವ ಹೊಣೆಯ ಬಿಡುವವನು ಗಂಡ?
ಮೆಚ್ಚಿರುವೆ ಮದುವೆಯಾಗೋ ಎಂದ ಹೆಣ್ಣಿನ
ಮೂಗು ಕಿವಿ ಕೊಯಿಸಿದವ ನಿಜವಾಗಿ ಪುಂಡ!
ಅಣ್ಣನ್ನ ಬಿಟ್ಟು ಒಂದ ಸುಳ್ಳು ತಮ್ಮನ್ನ
ತಬ್ಬಿ ಬಾ ಎನ್ನುವವ ಯಾವನಿಗೆ ಅಣ್ಣ?
ಕಿಚ್ಚಲ್ಲಿ ಒಮ್ಮೆ ಬಿದ್ದೆದ್ದರೂ ಶಂಕಿಸಿ
ಕಾಡಿಗಟ್ಟಿದನಲ್ಲ ಬಸಿರಿ ಹೆಣ್ಣನ್ನ ?
ಯಾರ ರಾಜ್ಯದ ಮಾತೊ ಯಾಕಪ್ಪ ಅವನಿಗೆ ?
ಬೆಂಕಿಗೆ ತುಪ್ಪ ಸುರಿವ ದಡ್ಡ ಬೈರಾಗಿಗಳ
ಪರ ಹಿಡಿದು ಯಾರನ್ನೋ ತದುಕುವುದು ಯಾಕೆ ?
ಸೀಕರಣೆ ಪಾನಕ ಸಿದ್ದೋಟಿ ಹೋಳುಗಳ
ಚಪಲ ನಿಮಗೆ.
ತಿನ್ನಬಾರದೆ ಅದನ್ನು ಹಾಗೆಯೇ? ಅಷ್ಟಕ್ಕೆ
ಆ ರಾಮ ಯಾತಕ್ಕೆ ?
ಚಿನ್ನದಂಥ ಮನುಷ್ಯ ರಾವಣ, ಅವನನ್ನ
ತೆಗಳುವುಮ ಬೇಕಿತ್ತೆ ?”

ಎಲಾ ಎನಿಸಿತು. ಪೂರಾ ತಬ್ಬಿಬ್ಬಾಗಿ ಹೋದೆ !
ಏನು ವಾದ! ಅದೆಷ್ಟು ತರ್ಕಶುದ್ಧ, ಪ್ರಬುದ್ಧ
ಎಂಥ ಶೀರ್ಷಾಸನ !
“ಅರೇ, ಆ ರಾವಣ ಯೋಗ್ಯಮನುಷ್ಯ ಹೇಗೆ ?
ಯಾರ ಹೆಣ್ಣನ್ನೊ ಮರೆಯಲಿ ಕದ್ದೊಯ್ದದ್ದು
ಸರಿಯೇನು?” ಎಂದೆ.
“ಮರೆಯಿಂದ ವಾಲಿಯನ್ನು ಬಡಿದದ್ದು ಗೊತ್ತ ?
ದ್ವೇಷವೇ ಇಲ್ಲದೆ ಕೊಲ್ಲಬಹುದೆಂದರೆ
ಆಸೆಯಾದವಳನ್ನು ಕದ್ದರೇನಂತೆ ?
ಒಪ್ಪಿಗೆ ಇರದೆ ಪಾಪ, ಮುಟ್ಟಲಿಲ್ಲ ಕೂಡ !”
ಎಂದದ್ದೆ ಭೂತ ಬೇರೆ ಏನೋ ನೆನಪಿಸಿಕೊಂಡು
ಹಠಾತ್ತನೆ ಎದ್ದಿತು.

“ಕೆಲಸವಿದೆ ನನಗೂ, ರಾವಣನ ಜಯಂತಿ ಇವತ್ತು
ನಿಮಗೆ ಸೀಕರಣೆ ಪಾನಕ; ನಮಗೆ ಹಸಿಹೆಣದ
ರಸಗವಳ; ಕಾಯುತ್ತ ಇರುತ್ತಾರೆ” ಎನ್ನುತ್ತ
ಹಾರಿಹೋಯಿತು ಭೂತ ಕಣ್ಣು ಹೊಡೆದು ನಗುತ್ತ
“ಟಾ ಟಾ” ಎನ್ನುತ್ತ!
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್