ರಾಮನ ವಿರುದ್ಧ ದೆವ್ವದ ತರ್ಕ

ರಾಮಾಯಣ ಪಾರಾಯಣ
ಮಾಡಿ ಮುಗಿಸಿದ್ದೆ,
ರಾಮನವಮಿಯ ರಾತ್ರಿ.
ರಾಮಚಂದ್ರನ ದಿವ್ಯಬದುಕ ಸ್ಮರಿಸುತ್ತ,
ಅಂಥ ಬಾಳಿನ ಕನಸು ಕೂಡ ಕಾಣದ್ದಕ್ಕೆ
ನನ್ನಂಥ ಪಾಪಿಗಳ ಶಪಿಸಿಕೊಳ್ಳುತ್ತ,
ಒಬ್ಬನೇ ಒಳಕೋಣೆಯಲ್ಲಿ ಕೂತಿದ್ದೆ.
ತೆರೆದ ಕಿಟಿಕಿಯ ಹಾದು ಗಾಳಿ ಬಂದಂತೆ
ತೂರಿ ಬಂದಿತು ಏನೋ ;
ಕೊಳೆತ ಇಲಿವಾಸನೆ ಒಳಗೆ ಹಬ್ಬುತ್ತಿತ್ತು.
ನಿಮಿಷಾರ್ಧದಲ್ಲಿ ನನ್ನೆದುರು ಕುರ್ಚಿಯ ಮೇಲೆ
ನಗುತ್ತ ಕೂತಿತ್ತೊಂದು ನೀಳ ಎಲುಬಿನ ದೆವ್ವ!
“ಮತ್ತೆ ಬಂತಲ್ಲಪ್ಪ, ಕರೆಯದೇ ಕೇಳದೇ
ಹಾಳು ಪ್ರಾರಬ್ಧ!
ಆಡುವಂತಿಲ್ಲ ಅನುಭವಿಸುವಂತಿಲ್ಲ;
ಎಲ್ಲ ತಿಳಿಯುತ್ತದೆ ದರಿದ್ರ ಮುಚ್ಚಿಡುವಂತೇ ಇಲ್ಲ.
ಒದ್ದು ಹೊರ ಹಾಕಿದ್ದರೂ,
ಮರ್ಯಾದೆ ಇದ್ದರೆ ತಾನೆ?
ಮತ್ತೆ ಬಂದಿದೆ, ಶುದ್ಧ ತರಲೆ” ಎನ್ನಿಸಿತು.

“ಯಾಕೆ ನಗುತ್ತೀ” ಎಂದೆ,
ನಾನೂ ನಗುಮುಖ ಮಾಡಿ.
“ನಿನ್ನ ಪೆದ್ದುತನಕ್ಕೆ,
ತೆಗಳಬೇಕಾದವನ ಹಾಡಿ, ಹೊಗಳಿ, ಕುಣಿದು
ಪ್ರಸಾದ ನುಂಗಿದ್ದಕ್ಕೆ,
ತರ್ಕದ ತಕ್ಕಡಿ ಒದ್ದು, ಶ್ರದ್ಧೆಗೆ ಟೋಪಿ ಬಿದ್ದು
ತಿಳಿದರೂ ತಿರುತಿರುಗಿ
ಮೋಸ ಹೋಗುವುದಕ್ಕೆ.
ಮನುಷ್ಯ ಮುಟ್ಠಾಳ ನಿಜ,

ನಿಮ್ಮ ಹೆಸರೆತ್ತಿದರೆ ಸಾಕು ದೆವ್ವಗಳೆಲ್ಲ
ಘೊಳ್ಳೆನ್ನುತ್ತವೆ” ಅಂತ ಖೊಕ್ ಎಂದು ನಕ್ಕಿತು.
“ಮುಚ್ಚು ಬಾಯಿ, ಸಾಕು. ಹೇಗೆ? ಬೊಗಳು” ಅಂತ
ಸಿಟ್ಟಾಗಿ ಕೇಳಿದೆ.
ಅಪ್ಪ ಕೊಟ್ಟಿದ್ದ ಒಂದು ತಪ್ಪು ಮಾತನ್ನೇ ಹಿಡಿದು
ರಾಜ್ಯ ನಡೆಸುವ ಹೊಣೆಯ ಬಿಡುವವನು ಗಂಡ?
ಮೆಚ್ಚಿರುವೆ ಮದುವೆಯಾಗೋ ಎಂದ ಹೆಣ್ಣಿನ
ಮೂಗು ಕಿವಿ ಕೊಯಿಸಿದವ ನಿಜವಾಗಿ ಪುಂಡ!
ಅಣ್ಣನ್ನ ಬಿಟ್ಟು ಒಂದ ಸುಳ್ಳು ತಮ್ಮನ್ನ
ತಬ್ಬಿ ಬಾ ಎನ್ನುವವ ಯಾವನಿಗೆ ಅಣ್ಣ?
ಕಿಚ್ಚಲ್ಲಿ ಒಮ್ಮೆ ಬಿದ್ದೆದ್ದರೂ ಶಂಕಿಸಿ
ಕಾಡಿಗಟ್ಟಿದನಲ್ಲ ಬಸಿರಿ ಹೆಣ್ಣನ್ನ ?
ಯಾರ ರಾಜ್ಯದ ಮಾತೊ ಯಾಕಪ್ಪ ಅವನಿಗೆ ?
ಬೆಂಕಿಗೆ ತುಪ್ಪ ಸುರಿವ ದಡ್ಡ ಬೈರಾಗಿಗಳ
ಪರ ಹಿಡಿದು ಯಾರನ್ನೋ ತದುಕುವುದು ಯಾಕೆ ?
ಸೀಕರಣೆ ಪಾನಕ ಸಿದ್ದೋಟಿ ಹೋಳುಗಳ
ಚಪಲ ನಿಮಗೆ.
ತಿನ್ನಬಾರದೆ ಅದನ್ನು ಹಾಗೆಯೇ? ಅಷ್ಟಕ್ಕೆ
ಆ ರಾಮ ಯಾತಕ್ಕೆ ?
ಚಿನ್ನದಂಥ ಮನುಷ್ಯ ರಾವಣ, ಅವನನ್ನ
ತೆಗಳುವುಮ ಬೇಕಿತ್ತೆ ?”

ಎಲಾ ಎನಿಸಿತು. ಪೂರಾ ತಬ್ಬಿಬ್ಬಾಗಿ ಹೋದೆ !
ಏನು ವಾದ! ಅದೆಷ್ಟು ತರ್ಕಶುದ್ಧ, ಪ್ರಬುದ್ಧ
ಎಂಥ ಶೀರ್ಷಾಸನ !
“ಅರೇ, ಆ ರಾವಣ ಯೋಗ್ಯಮನುಷ್ಯ ಹೇಗೆ ?
ಯಾರ ಹೆಣ್ಣನ್ನೊ ಮರೆಯಲಿ ಕದ್ದೊಯ್ದದ್ದು
ಸರಿಯೇನು?” ಎಂದೆ.
“ಮರೆಯಿಂದ ವಾಲಿಯನ್ನು ಬಡಿದದ್ದು ಗೊತ್ತ ?
ದ್ವೇಷವೇ ಇಲ್ಲದೆ ಕೊಲ್ಲಬಹುದೆಂದರೆ
ಆಸೆಯಾದವಳನ್ನು ಕದ್ದರೇನಂತೆ ?
ಒಪ್ಪಿಗೆ ಇರದೆ ಪಾಪ, ಮುಟ್ಟಲಿಲ್ಲ ಕೂಡ !”
ಎಂದದ್ದೆ ಭೂತ ಬೇರೆ ಏನೋ ನೆನಪಿಸಿಕೊಂಡು
ಹಠಾತ್ತನೆ ಎದ್ದಿತು.

“ಕೆಲಸವಿದೆ ನನಗೂ, ರಾವಣನ ಜಯಂತಿ ಇವತ್ತು
ನಿಮಗೆ ಸೀಕರಣೆ ಪಾನಕ; ನಮಗೆ ಹಸಿಹೆಣದ
ರಸಗವಳ; ಕಾಯುತ್ತ ಇರುತ್ತಾರೆ” ಎನ್ನುತ್ತ
ಹಾರಿಹೋಯಿತು ಭೂತ ಕಣ್ಣು ಹೊಡೆದು ನಗುತ್ತ
“ಟಾ ಟಾ” ಎನ್ನುತ್ತ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗು
Next post ಬಣ್ಣ ಬಣ್ಣ ನೂರೆಂಟು

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…