ಆಹಾ ದೆವ್ವ ನೀ ಎಂಥ ಸುಖ – ನಿನ್ನ
ಬೆಚ್ಚನೆ ತೆಕ್ಕಯೊಳೆಂಥ ಸುಖ,
ಊರ ಹೊರಗಿನ ಕೆರೆಯ ಆಳಕ್ಕೆ,
ಇಳಿಸಿ ಈಜಿಸಿದೆ ತಡಿತನಕ
ಬಿಯರಿನ ಕಹಿಯಲಿ ಏನು ಮಜ,
ವಿಸ್ಕಿಯ ಒಗರೇ ಅಮೃತ ನಿಜ !
‘ಸಿಗರೇಟಿನ ಹೊಗೆ ವರ್ತುಳ ವರ್ತುಳ’
ಇಸ್ಟೀಟಿಗೆ ಬೇಕಿಲ್ಲ ರಜ!
ಇಟ್ಟೆ ಪಾದದಲಿ ತಲೆಯನ್ನು- ಬಲಿ
ಬಿಟ್ಟೆನು ಬರೆಯುವ ಬೆರಳನ್ನು,
ಪಂಚೇಂದ್ರಿಯಗಳ ಮೀಸಲು ಮಾಡಿ
ಹೀರಿದೆ ಪಂಚಾಮೃತವನ್ನು.
ಯಾಕೆ ಹೊಸಿಲಾಚೆ ನಿಂತಿರುವೆ – ಈ
ಮನೆಯೊಳಗೇ ನೀ ಬಂದುಬಿಡು,
ಖಾಲಿ ಮಾಡಿಸುವೆ ದೇವರ ಮನೆಯ
ಅಲ್ಲೆ ಇನ್ನು ನೀನಿದ್ದು ಬಿಡು.
ಆಹಾ ದೆವ್ವ! ಶರಣಾದೆ ಗುರು – ನೀ
ಗಸ್ತು ಕಾಯುತ್ತ ಜೊತಗೆ ಇರು,
ಕೆಚ್ಚಲ ಉಣಿಸಿ ಲೋಕ ತೋರಿಸಿದೆ
ಕಾಮಧೇನು ನಾ ನಿನ್ನ ಕರು.
*****