Home / ಕವನ / ಕವಿತೆ / ಯಾಕೆ ಹಾಗೆ ನಿಂತೆಯೊ ದಿಗ್ಭ್ರಾಂತ?

ಯಾಕೆ ಹಾಗೆ ನಿಂತೆಯೊ ದಿಗ್ಭ್ರಾಂತ?

ಯಾಕೆ ಹಾಗೆ ನಿಂತಯೊ ದಿಗ್ಭ್ರಾಂತ?
ಯಾಕೆ ಕಂಬನಿ ಕಣ್ಣಿನಲಿ?
ನೆಚ್ಚಿದ ಜೀವಗಳೆಲ್ಲವು ಕಡೆಗೆ
ಮುಚ್ಚಿ ಹೋದುವೇ ಮಣ್ಣಿನಲಿ?

ಇದ್ದರು ಹಿಂದೆ ಬೆಟ್ಟದ ಮೇಲೇ
ಸದಾ ನೆಲೆಸಿದ್ದ ಗಟ್ಟಿಗರು,
ಹೊನ್ನು ಮಣ್ಣು ಏನು ಕರೆದರೂ
ಬೆಟ್ಟವನಿಳಿಯದ ಜಟ್ಟಿಗಳು.

ಹಳೆಯ ಮಾತಿರಲಿ ತೀರ ಈಚೆಗೂ
ಮುಗಿಲೊಳಗೆಷ್ಟೋ ಗರುಡಗಳು,
ಆಡುತ್ತಿದ್ದವು ಹಾಡುತ್ತಿದ್ದವು
ಅಕ್ಷರತತ್ವನಿಗೂಢಗಳು.

ಇದ್ದಕಿದ್ದಂತೆ ಬಾನೇ ಖಾಲಿ
ನಡುರಾತ್ರಿಯ ಜಿ.ಸಿ.ರೋಡು!
ಹೆಮ್ಮೆ ಕವಿಸಿದ್ದ ಪಕ್ಷಿರಾಜಗಳು
ಥಟ್ಟನೆಲ್ಲಿ ಹೋದುವು ಹೇಳು?

ಬಾನೊಳು ಈಜಿದ ಗರುಡ ಕೆಳಗೆ
ಹಾವಿನ ಹೆಣಕ್ಕೆ ಎರಗಿದವೆ ?
ಬಣ್ಣದ ಪಟಗಳ ಸೂತ್ರವೆ ಕಡಿದು
ಮಣ್ಣ ಹೊಂಡಕ್ಕೆ ಉರುಳಿದುವೆ ?

ಆಕೆಡೆಮಿ ಪೀಠ, ಕುಲಪತಿ ಪೇಟ
ದೇಶವಿದೇಶಕೆ ಹಾರಾಟ,
ನುಂಗಿಬಿಟ್ಟವೆ ದಿಟ್ಟರೆಲ್ಲರ
ಕುರ್ಚಿ, ಕಾಸು ಮನೆ, ಮಠ ತೋಟ ?

ಪುಸ್ತಕ ಪೆನ್ನು ಹೊಸ ಹೊಸ ಬರಹ
ಹಿಂದಿದ್ದವು ತೋಳ್ಚೀಲದಲಿ
ಈಗಲೊ ಪ್ರಶಸ್ತಿ, ವಿಮಾನ ಟಿಕೆಟ್ಟು
ನೋಟ ಕಟ್ಟು ಸೂಟ್‌ಕೇಸಿನಲಿ!

ಪೀತ ಪತ್ರಿಕೆ ಪಿಶಾಚಿ ಬಾಯಿ
ಎತ್ತುವ ಕುಕ್ಕುವ ತಂತ್ರಗಳು,
ಸತ್ಯದ ಕಳಕಳಿ ಬೆಳಗದ ಹಾದಿ
ದಿನನಿತ್ಯವು ಅಪಘಾತಗಳು

ಎಲ್ಲ ಚಿಕ್ಕೆ ಅಳಿದಿಲ್ಲ, ಆಳದಲಿ
ಹೊಳೆದಿವೆ ಧ್ರುವ ಸಪ್ತರ್ಷಿ ಕುಲ,
ಗಗನದಕ್ಷತೆ ದೀಕ್ಷೆ ತೊಟ್ಟವರ
ಆಶೀರ್ವದಿಸಿದೆ ಎಲ್ಲ ಸಲ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...